Punarapi Jananam
By K.T. Gatti
4/5
()
About this ebook
M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
Read more from K.T. Gatti
Nanna Premada Hudugi Rating: 4 out of 5 stars4/5Niranthara Rating: 0 out of 5 stars0 ratingsAnanthara Rating: 0 out of 5 stars0 ratingsParakaya Pravesha Rating: 0 out of 5 stars0 ratingsKaarmugilu Rating: 0 out of 5 stars0 ratingsMane Rating: 2 out of 5 stars2/5Swarnamrugha Rating: 0 out of 5 stars0 ratingsKoopa Rating: 0 out of 5 stars0 ratingsParidhi Rating: 0 out of 5 stars0 ratingsMrityorma Amritam Gamaya Rating: 0 out of 5 stars0 ratingsIthihaasada Mogasaaleyalli Rating: 5 out of 5 stars5/5Theera Rating: 0 out of 5 stars0 ratingsKurudu Kaanchaana Rating: 0 out of 5 stars0 ratingsHei Kaapurusha Rating: 0 out of 5 stars0 ratingsKarmanye Vadhikaraste Rating: 0 out of 5 stars0 ratingsAbhramana Rating: 0 out of 5 stars0 ratingsKempu Kalave Rating: 0 out of 5 stars0 ratingsKumbarana Pitilu Rating: 0 out of 5 stars0 ratingsMooru Naatakagalu Rating: 0 out of 5 stars0 ratings
Related to Punarapi Jananam
Related ebooks
Samadhana Bhaaga 1 Rating: 0 out of 5 stars0 ratingsVishwam Shubham Mangalam Rating: 0 out of 5 stars0 ratingsYashassina Rahasyagalu Rating: 3 out of 5 stars3/5The Gift Rating: 3 out of 5 stars3/5Best of Lovelavike Rating: 5 out of 5 stars5/5Vaarasudhara Rating: 0 out of 5 stars0 ratingsBottom Item Rating: 5 out of 5 stars5/5O Henne Neeneshtu Olleyavalu Rating: 0 out of 5 stars0 ratingsTamasoma Jyothirgamaya Rating: 0 out of 5 stars0 ratingsIthihaasada Mogasaaleyalli Rating: 5 out of 5 stars5/5Kengulabi Rating: 0 out of 5 stars0 ratingsTappu Maadona Banni! Rating: 4 out of 5 stars4/5Nimmannu Neevu Gellaballiri Rating: 0 out of 5 stars0 ratingsPriyathama Rating: 0 out of 5 stars0 ratingsKempu Kalave Rating: 0 out of 5 stars0 ratingsHaddina Rekke Saadu Rating: 5 out of 5 stars5/5Mane Rating: 2 out of 5 stars2/5Hanigavithegalu Rating: 0 out of 5 stars0 ratingsGrimm Brothers Rating: 0 out of 5 stars0 ratingsIdannu Bayasiralilla (Best of UG) Rating: 0 out of 5 stars0 ratingsNakshatra Jaaridaaga Rating: 0 out of 5 stars0 ratingsಗಡಿಯಾರಕರ್ತೃ (The Watchmaker) Kannada Language Rating: 5 out of 5 stars5/5Thushara Rating: 0 out of 5 stars0 ratingsMooru Naatakagalu Rating: 0 out of 5 stars0 ratingsSuccess Through Positive Thinking(Kannada): It is half empty or half full….is the way you look at it Rating: 4 out of 5 stars4/5Kanamareyada Kathegalu Bhaaga 1 Rating: 0 out of 5 stars0 ratingsSolu Geluvina Hadiyalli Rating: 0 out of 5 stars0 ratingsBuddha Matthu Parampare Rating: 4 out of 5 stars4/5Hongeya Neralu Rating: 4 out of 5 stars4/5Hudugiyarige Maathra Rating: 3 out of 5 stars3/5
Reviews for Punarapi Jananam
1 rating0 reviews
Book preview
Punarapi Jananam - K.T. Gatti
http://www.pustaka.co.in
ಪುನರಪಿ ಜನನಂ
Punarpi Jananam
Author :
ಕೆ. ಟಿ. ಗಟ್ಟಿ
K T Gatti
For more books
http://www.pustaka.co.in/home/author/kt-gatti
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಕೆ. ಟಿ. ಗಟ್ಟಿ
ಪುನರಪಿ ಜನನಂ
1957ರಲ್ಲಿ `ಮುಂಗಾರ ಮುಗಿಲು' ಎಂಬ ಒಂದು ಚಿಕ್ಕ ಕತೆಯ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಕೆ. ಟಿ. ಗಟ್ಟಿ ಸೃಜನಶೀಲತೆ ಮತ್ತು ವೈಚಾರಿಕತೆ ಒಂದು ಇನ್ನೊಂದರ ಪ್ರತಿಸ್ಪರ್ಧಿ ಅಲ್ಲ, ಒಂದರ ಬೇರು ಇನ್ನೊಂದರಲ್ಲಿ ಎನ್ನುವ ಸಾಹಿತ್ಯ ಧೋರಣೆಯನ್ನು ತನ್ನ ಮೊದಲ ಕಾದಂಬರಿ `ಶಬ್ದಗಳು'(1973)ವಿನಿಂದ ಇತ್ತೀಚೆಗಿನ ಅವರ 45ನೇ ಕಾದಂಬರಿ `ನಿನ್ನೆ ಇಂದು ನಾಳೆ'(2008)ಯ ವರೆಗೆ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕಾದಂಬರಿ ಬರವಣಿಗೆಯಲ್ಲದೆ, ಸಣ್ಣ ಕತೆ, ಕಾವ್ಯ, ಪ್ರಬಂಧ, ನಾಟಕ, ಬಾನುಲಿ ನಾಟಕ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಅನುವಾದ, ಭಾಷಾ ಶಾಸ್ತ್ರ, ಶಿಕ್ಷಣ ಮುಂತಾದ ವಿವಿಧ ಪ್ರಕಾರಗಳಲ್ಲಿ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಮತ್ತು ತುಳುಭಾಷೆಯಲ್ಲಿ ಗಟ್ಟಿಯವರ ತೊಂಬತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಆತ್ಮ ಕಥೆ `ತೀರ' ಪ್ರಕಟವಾಗಿದೆ.
ಪುನರಪಿ ಜನನಂ
ಮಾನವ ಜಗತ್ತಿನಲ್ಲಿ ಮೊಟ್ಟ ಮೊದಲಿದ್ದುದು ಮಾನವ ಜೀವನಧರ್ಮ ಮಾತ್ರ. ಅದು ಆಗ ಇದ್ದಂತೆ ಈಗ ಇಲ್ಲ. ಯಾಕೆಂದರೆ, ಜೀವನಧರ್ಮ ಮತಧರ್ಮದÀಂತೆ ಸ್ಥಾವರವಲ್ಲ. ಜೀವನಧರ್ಮ ಜಂಗಮ, ಚಲನಶೀಲ. ಕಾಲದ ಜೊತೆಯಲ್ಲಿ ಬದಲಾಗುತ್ತಿರುವಂಥದು.
ಹುಟ್ಟಿನಲ್ಲಿ ಯಾರೂ ಏನೂ ಆಗಿರುವುದಿಲ್ಲ. ಬುದ್ಧ, ಮಹಾವೀರ, ಯೇಸು, ಮಹಮ್ಮದ ಪೈಗಂಬರ್, ನಾನಕ ಎಲ್ಲರೂ ಹುಟ್ಟಿದ್ದು ಕೇವಲ ಮನುಷ್ಯರಾಗಿ. ಮತ ಹುಟ್ಟಿದ್ದು ಬಹಳ ಕಾಲದ ಮೇಲೆ. ಮತ ಬೆಳೆದದ್ದು ಮತದ ಹುಟ್ಟಿಗೆ ಕಾರಣವಾದವನು ಕಾಲವಾದ ಬಳಿಕ. ಹಾಗೆಯೇ ಯಾವ ಮನುಷ್ಯನಿಗೂ ಹುಟ್ಟಿನಲ್ಲಿಯೇ ಜಾತಿ, ಮತ ಎನ್ನುವುದಿರುವುದಿಲ್ಲ. ಬದುಕಿನಲ್ಲಿ ಅಂಥ ಯಾವ ಗುರುತಿಸುವಿಕೆಯೂ ಸತ್-ಜೀವನಧರ್ಮಕ್ಕೆ, ಸಜ್ಜನಿಕೆಗೆ, ಸನ್ಮಾರ್ಗಕ್ಕೆ ಅನಿವಾರ್ಯವಲ್ಲ. ಅಷ್ಟೇ ಏಕೆ, ಯಾರು ಯಾರ ಮಗ ಅಥವಾ ಮಗಳು ಎನ್ನುವುದು ಕೂಡ ಮುಖ್ಯವಾಗುವುದಿಲ್ಲ. ವ್ಯಕ್ತಿ ಯಾವುದೇ ಮತ ಅಥವಾ ಪಂಥದ ಸೊತ್ತಲ್ಲ. ಅವನು ಒಂದು ಸ್ವತಂತ್ರ ಘಟಕ. ಮನುಷ್ಯನನ್ನು ಗುರುತಿಸಬೇಕಾದ್ದು ಅವನ ಮಾನವೀಯತೆಯ ಮೂಲಕ ಮಾತ್ರ, ಮತ್ತು ಇದನ್ನು ಗುರುತಿಸುವ ಸಾಧನ ಕೂಡ ಮಾನವೀಯತೆಯೇ.
ಎರಡೂವರೆ ದಶಕಗಳ ಹಿಂದೆ ಈ ಚಿಂತನೆಗಳ ನೆಲೆಗಟ್ಟಿನಲ್ಲಿ ಬರೆಯಲಾದ ಈ ಕಾದಂಬರಿಯ ವಸ್ತು ಇವತ್ತಿಗೂ ಪ್ರಸ್ತುತ. ಪಾತ್ರಗಳು ಕೂಡ ಅಷ್ಟೇ ಜೀವಂತ.
ಎರಡನೆಯ ಮುದ್ರಣಕ್ಕೆ ಒಂದು ಮಾತು
23 ವರ್ಷಗಳ ನಂತರ ಎರಡನೆಯ ಮುದ್ರಣಕ್ಕೆ ಹೋಗುತ್ತಿರುವ ಈ ಕಾದಂಬರಿಗೆ 1985ರಲ್ಲಿ ನಾನು ಬರೆದ ಮುನ್ನುಡಿಯನ್ನು ಉಳಿಸಿಕೊಳ್ಳುತ್ತಾ ನಾಲ್ಕು ವಾಕ್ಯ ಸೇರಿಸುತ್ತಿದ್ದೇನೆ. ಆ ಮುನ್ನುಡಿಯನ್ನು ಬರೆದ ಸಾಮಾಜಿಕ ಸಂದರ್ಭಕ್ಕೆ ಇವತ್ತಿನ ಸಾಮಾಜಿಕ ಸಂದರ್ಭವನ್ನು ಹೋಲಿಸುವಾಗ ಸಾಮಾಜಿಕರ ಚಿಂತನೆ ಮತ್ತು ಕ್ರಿಯೆಯಲ್ಲಿ ಅಂದಿನಿಂದ ಇಂದಿಗೆ ಆಗಿರುವ ಸಾಮಾಜಿಕ ವಿಕಾಸ ಏನು ಎನ್ನುವುದು ಈ ಹೊತ್ತು ನನ್ನ ಮುಂದೆ ಇರುವ ಪ್ರಶ್ನೆ. ವಿಕಾಸ ಎನ್ನುವ ಪದವನ್ನು ನಾವು ಬಳಸುವುದು ಯಾವಾಗಲೂ ಸಕಾರಾತ್ಮಕ ಬದಲಾವಣೆ ಎಂಬುದಾಗಿಯೇ ಹೊರತು ನಕಾರಾತ್ಮಕ ಬದಲಾವಣೆ ಎಂಬುದಾಗಿ ಅಲ್ಲ. ಈ ದೃಷ್ಟಿಯಿಂದ ನೋಡಿದಾಗ, ಆಗಿರುವ ಸಕಾರಾತ್ಮಕ ಸಾಮಾಜಿಕ ವಿಕಾಸವೇನೂ ಎದ್ದು ತೋರುತ್ತಿಲ್ಲ. ಬದಲಾವಣೆ ಲೋಕ ನಿಯಮ. ಆದ್ದರಿಂದ ಹೊರಗೆ ಕಾಣಿಸದಿದ್ದರೂ ಸಮಾಜದ ಒಳಗೆ ಬದಲಾವಣೆ ಆಗಿಯೇ ಆಗಿರುತ್ತದೆ ಮತ್ತು ಈ ಬದಲಾವಣೆ ಆರ್ಥಿಕ, ಸಾಂಸ್ಕತಿಕ ಮುಂತಾದ ಆಯಾಮಗಳಲ್ಲಿ ಆಗಿರುವ ಬದಲಾವಣೆಗಳೊಂದಿಗೇ ಆಗಿರುತ್ತದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಮುಖ್ಯ ವಿಷಯ ಅದು ಎಷ್ಟು ಎನ್ನುವುದು ಮತ್ತು ಎಷ್ಟಾಗಿದ್ದರೆ ಚೆನ್ನಾಗಿತ್ತು, ಅಷ್ಟು ಯಾಕಾಗಲಿಲ್ಲ ಎನ್ನುವುದು. ಎರಡು ದಶಕಗಳಲ್ಲಿ ಬಹಳ ವಿಕಾಸ ಆಗಬಹುದಿತ್ತು. ಆಗದಿರಲು ಏನು ಕಾರಣ ಎನ್ನುವ ಯೋಚನೆ ಮಾಡಿದಾಗ ಸಿಗುವ ಕಾರಣಗಳು ಹೆಚ್ಚು ವಿಷಾದ ಉಂಟುಮಾಡುತ್ತವೆ. ಕಳೆದ ಎರಡು ದಶಕಗಳಲ್ಲಿ ವಿದ್ಯಾವಂತರ ಸಂಖ್ಯೆ ಹಲವು ಪಟ್ಟು ಜಾಸ್ತಿಯಾಗಿದೆ ಆದರೆ ವಿಚಾರವಂತಿಕೆ ಮತ್ತು ಸ್ವಂತಿಕೆ ಕಡಿಮೆಯಾಗಿದೆ. ಮೂಢನಂಬಿಕೆಯ ಜನರ ಸಂಖ್ಯೆಯಲ್ಲಿ ಕಡಿಮೆಯಾದಂತೆ ತೋರುತ್ತದೆ. ಆದರೆ ವಿಚಾರ ಮಾಡುವ ಗುಣ ಬೆಳೆಯದ್ದರಿಂದ ಕಂದಾಚಾರಗಳು ಮುಂದರಿದಿವೆ. ಮಾತ್ರವಲ್ಲ. ಹೊಸ ಹೊಸ ಕಂದಾಚಾರಗಳು ಹುಟ್ಟಿಕೊಂಡಿವೆ. ಕಂದಾಚಾರಗಳ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಜೀವನ ಮಟ್ಟ ಏರುವುದರ ಜೊತೆಗೆ ಹಣ ಖರ್ಚು ಮಾಡಲು ಅವಕಾಶ ಕಲ್ಪಿಸುವ ಹೊಸ ಹೊಸ ಆಚಾರಗಳು ಹುಟ್ಟಿಕೊಳ್ಳುವುದು ಮತ್ತು ಹಳೆಯ ಆಚಾರಗಳು ಹೊಸ ಆಯಾಮಕ್ಕೆ ವಿಸ್ತಾರಗೊಳ್ಳುವುದು ನಮ್ಮ ದೇಶದ ಸಾಮಾಜಿಕ ಅವಲಕ್ಷಣ ಎನ್ನದೆ ವಿಧಿಯಿಲ್ಲ. ಯಾಕೆಂದರೆ, ಇದರಿಂದ ಯಾವುದೇ ಸಕಾರಾತ್ಮಕ ಬೆಳವಣಿಗೆಯಾಗಲಿ, `ವಿಕಾಸ' ಎನ್ನುವುದಾಗಲಿ ಉಂಟಾಗುವುದಿಲ್ಲ. ಹೊಸದಾಗಿ ಗಳಿಸಿದ ಸಿರಿವಂತಿಕೆಯ ಪ್ರದರ್ಶನದ ಪಕ್ಕದಲ್ಲೇ ಹಳೆಯ ದಾರಿದ್ರ್ಯ ಮುಂದರಿಯುತ್ತದೆ. ಸಾಮಾಜಿಕ ಬದುಕಿನಲ್ಲಿ ಜಾತೀಯ ಭಾವನೆ ಕಡಿಮೆ ಕಡಿಮೆಯಾಗಿದೆ. ಆದರೆ ಹೊಸ ಹೊಸ ಜಾತಿ ಸಂಘಗಳು ಹುಟ್ಟಿಕೊಳ್ಳುತ್ತಿವೆ. ಜಾತಿ ಮತಗಳ ಮೂಲಕ, ಲಾಂಛನಗಳ ಮೂಲಕ ಗುರುತಿಸಿಕೊಳ್ಳುವಿಕೆಗೆ ಹೆಚ್ಚು ಉತ್ತೇಜನ ನೀಡಲಾಗುತ್ತದೆ. ಇದರ ಹಿಂದೆ ಕೆಲಸ ಮಾಡುವುದು ಹಣ ಮತ್ತು ಹಣವನ್ನು ಉಪಯೋಗಿಸಿಕೊಂಡು ಮೆರೆಯಬೇಕೆಂಬ ಒಂದು ಸಣ್ಣ ಸಂಖ್ಯೆಯ ಮಂದಿಯ ಅವೈಚಾರಿಕ ದಾಹ. ಇದಕ್ಕೆ ಬಲಿಯಾಗುವುದು ಬಡವರು. ಆದರೆ ಈ ಅವೈಚಾರಿಕ ಸಾಂಘಿಕ ಬೆಳವಣಿಗೆ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಹುದು. `ಶ್ರೇಷ್ಠ' ಎಂದು ವ್ಯಕ್ತಿಗಳನ್ನು ಅವರ ಜಾತಿ ಮತದ ಮೂಲಕ ಗುರುತಿಸಿ `ನಮ್ಮವನು' ಎಂದು ಸನ್ಮಾನಿಸುವ `ಆಚಾರಗಳು' ಈಗ ಅಧಿಕವಾಗಿವೆ. `ಶ್ರೇಷ್ಠ' ಎಂದು ಗುರುತಿಸಿ ವಿಜ್ಞಾನಿಗಳು, ಲೇಖಕರು, ಕಲಾವಿದರು, ಸಮಾಜ ಸೇವಕರು ಮುಂತಾದವರನ್ನು `ನಮ್ಮವನು' ಎಂದು ಗುರುತಿಸಿ ಸನ್ಮಾನಿಸುವುದು ಬಹಳ ಕೆಟ್ಟದು. ಈ ರೀತಿ ಅಧಿಕಾರಿಗಳನ್ನು, ಆಡಳಿತಗಾರರÀÀನ್ನು, ರಾಜಕಾರಣಿಗಳನ್ನು ಸನ್ಮಾನಿಸುವುದು ಇನ್ನೂ ಕೆಟ್ಟದು. ಇದು ಸೆಕ್ಯೂಲರ್ ವಿರೋಧಿ ಮಾತ್ರವಲ್ಲ, ಪ್ರಜಾತಂತ್ರ ವಿರೋಧಿ.
ಜೀವನ ಮಟ್ಟ ಮೇಲಕ್ಕೇರಿ, ಹೆಚ್ಚು ಹಣ ಗಳಿಕೆಯಾಗುತ್ತಿರುವುದೇನೋ ನಿಜ. ಆದರೆ ಅದರ ಸದ್ಬಳಕೆಯ ಬಗ್ಗೆ ಅರಿವು ಕಡಿಮೆ. ಆದ್ದರಿಂದಲೇ ಹೊಸ ಹೊಸ ಸಮಾರಂಭಗಳು, ಪೂಜೆಗಳು ಸೃಷ್ಟಿಯಾಗಿರುವುದು; ಮ್ಯಾರೇಜ್ ಇಂಡಸ್ಟ್ರಿ ಎಂಬ ಒಂದು ಉದ್ಯಮ ಉಂಟಾಗಿರುವುದು. ಶಿಕ್ಷಣ ಎಂದೋ ಇಂಡಸ್ಟ್ರಿ ಆಗಿಯಾಗಿದೆ. ಸಾಮಾಜಿಕರಲ್ಲಿ ಹಣದ ಸದ್ಬಳಕೆಯ ಬಗ್ಗೆ ಅರಿವು ಮೂಡದಿದ್ದರೆ ಇನ್ನೂ ಹಲವು ಹೊಸ ಇಂಡಸ್ಟ್ರಿಗಳು ಹುಟ್ಟಿಕೊಳ್ಳುತ್ತವೆ.
ಜೀವನ ಮಟ್ಟ ಏರಿದಂತೆಲ್ಲ, ಮನುಷ್ಯ ತನ್ನ ಬಗ್ಗೆ ಮಾತ್ರ, ತನ್ನ ಏಳಿಗೆಯ ಬಗ್ಗೆ ಮಾತ್ರ, ಯೋಚಿಸುವುದು ಅಧಿಕವಾಗುತ್ತಾ ನಡೆದಿದೆ. ಇತರರರ ಸ್ಥಿತಿಯ ಬಗ್ಗೆ ಯೋಚನೆ ಇಲ್ಲ. ವಿದ್ಯೆ ಮತ್ತು ಜ್ಞಾನ ಧೈರ್ಯವನ್ನು ನೀಡಬೇಕು ಆದರೆ ಅದು ನೀಡುತ್ತಿರುವುದು ಭಯ. ಗಳಿಸಿದ್ದು ಎಲ್ಲಿ ಕಳೆದುಹೋಗುವುದೋ ಎನ್ನುವ ಭಯ. ಅದನ್ನು ಉಳಿಸಿಕೊಳ್ಳಲು ದೇವರಿಗೆ ವಿವಿಧ ರೀತಿಯಲ್ಲಿ ಮೊರೆ.
ಪವಾಡಗಳಲ್ಲಿ ಜನರಿಗೆ ನಂಬಿಕೆಯಿಲ್ಲ. ಅದು ಮ್ಯಾಜಿಕ್ ಮೋಸ ಅಂತ ಎಲ್ಲರಿಗೂ ಗೊತ್ತಾಗಿದೆ. `ಆದರೆ ಒಂದು ಶಕ್ತಿ ಇದೆ’ ಎಂದು, ಅದು ತನಗೆ ಮಾತ್ರ ಗೊತ್ತಿರುವುದು ಎಂದು ಪ್ರತಿಯೊಬ್ಬರೂ ಹೇಳುವುದು ದೊಡ್ಡ ತಮಾಷೆ! `ವಿಜ್ಞಾನ ಎಲ್ಲವನ್ನೂ ಕಾಣದು' ಎಂದು ವಿಜ್ಞಾನ ಎಂದರೆ ಏನು ಎಂದು ತಿಳಿಯದ ಮಂದಿ ಕೂಡ ಹೇಳುವುದು ಇನ್ನೊಂದು ತಮಾಷೆ! ಆಸ್ತಿಕರು ಮತ್ತು ನಾಸ್ತಿಕರ ಬದುಕಿನ ರೀತಿಯಲ್ಲಿ ವ್ಯತ್ಯಾಸ ಇಲ್ಲ. ಆದರೆ ಯಾಕೆಂದು ತಿಳಿಯದೆ, ತಮ್ಮ ನಂಬಿಕೆಗಳನ್ನು ಇತರರು ನಂಬಬೇಕೆಂದು ಹಟ ಹಿಡಿಯುವುದು ಮತ್ತೊಂದು ತಮಾಷೆ!
ದೇಶದಲ್ಲಿ ನಡೆಯುತ್ತಲೇ ಇರುವ ಎಲ್ಲಕ್ಕಿಂತ ದೊಡ್ಡ ತಮಾಷೆಯೆಂದರೆ, ನೂರು ಮಂದಿ ಬುದ್ಧಿವಂತರು ಒಂದು ಕೋಟಿ ಜನರ ಸಮಸ್ಯೆಯ ಕುರಿತು ಶಬ್ದಗಳ ಸಮರ ನಡೆಸುತ್ತಾರೆ. ಈ ಸಮರದಲ್ಲಿ ಒಂದಷ್ಟು ಗದ್ಯ, ಒಂದಿಷ್ಟು ಪದ್ಯ. ಆ ಒಂದು ಕೋಟಿ ಜನರಿಗೆ ಈ ಸಮರದ ವಿಚಾರವೇ ತಿಳಿಯದು. ಅವರನ್ನು ಈ ಬುದ್ಧಿವಂತರು ಕಂಡೇ ಇರುವುದಿಲ್ಲ. ಈ ಸಮರದ ಯಾವುದೇ ಫಲ ಅವರನ್ನು ಮುಟ್ಟವುದೂ ಇಲ್ಲ. ಈ ಸಮರ ರಿಟೈರ್ಮೆಂಟ್ ಇಲ್ಲದ ಒಂದು ಉದ್ಯೋಗದಂತೆ ನಡೆಯುತ್ತಾ ಇರುತ್ತದೆ. ವಾಸ್ತವದಲ್ಲಿ, ಬಹಳ ಸಲ, ಯಾವ ಸಮಸ್ಯೆಯ ಬಗ್ಗೆ ಶಬ್ದ ಸಮರ ನಡೆಯುತ್ತದೋ, ಆ ಸಮಸ್ಯೆಯೇ ಅಲ್ಲಿರುವುದಿಲ್ಲ. ಇದ್ದರೂ ಸಮರ ಕೊನೆಗೊಳ್ಳುವ ಮೊದಲೇ ಅದು ತನ್ನಿಂತಾನೇ ಪರಿಹಾರಗೊಂಡಿರುತ್ತದೆ!
* ಕೆ. ಟಿ. ಗಟ್ಟಿ
ಮುನ್ನುಡಿ (1985)
`ಪುನರಪಿ ಜನನಂ’ 1884ರಲ್ಲಿ `ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು.
`ಪುನರಪಿ ಜನನಂ’ ಧಾರಾವಾಹಿಗೆ ಪ್ರತಿಕ್ರಿಯೆಯಾಗಿ ಬಂದ ಕೆಲವು ಪತ್ರಗಳಿಂದಾಗಿ ಈ ಮುನ್ನುಡಿ ಬರೆಯುತ್ತಿದ್ದೇನೆ. ಪ್ರಚಲಿತ ಧಾರ್ಮಿಕ ಸಂಪ್ರದಾಯಗಳ ಯುಕ್ತಾಯುಕ್ತತೆಯನ್ನು ಪ್ರಶ್ನಿಸಿದೊಡನೆ ಪ್ರಶ್ನಿಸಿದಾತನು ಮತಾಂಧರ ದೃಷ್ಟಿಯಲ್ಲಿ ನಾಸ್ತಿಕನಾಗಿಬಿಡುತ್ತಾನೆ. ಕುರುಡು ಆಚಾರಗಳ, ಮೂಢನಂಬಿಕೆಗಳ, ಅಂಧವಿಶ್ವಾಸಗಳ ವಿರುದ್ಧ ದನಿಯೆತ್ತಿದಾತನು ಮತಾಂಧರ ದೃಷ್ಟಿಯಲ್ಲಿ ಧರ್ಮವಿರೋಧಿ ಎನಿಸಿಕೊಳ್ಳುತ್ತಾನೆ. ಧರ್ಮ ನಿಯಮಾವಳಿಗಳ ಮರುಪರಿಶೀಲನೆಗಾಗಿ, ಆಚಾರ ವಿಚಾರಗಳ ಪರಿಷ್ಕಾರಕ್ಕಾಗಿ ಒತ್ತಾಯಿಸುವವನು ಮತಾಂಧರ ದೃಷ್ಟಿಯಲ್ಲಿ ಕಾಫರನಾಗುತ್ತಾನೆ,
ಯಾವುದನ್ನೂ ಪ್ರಶ್ನಿಸದೆ ಇದ್ದಕ್ಕಿದ್ದಂತೆ ಸ್ವೀಕರಿಸಬೇಕು ಎಂದು ಮತಾಂಧರು ವಾದಿಸುತ್ತಾರೆ, ಹಟ ಹಿಡಿಯುತ್ತಾರೆ. ಅದು ಗಾಯತ್ರಿಯ ಅದ್ಭುತ ಮಹಿಮೆಯ ಕುರಿತು ಅಥವಾ ಜನಿವಾರವೆಂಬ ನೂಲಿನ ಮಹತ್ವದ ಕುರಿತು ಅಥವಾ ಕಲ್ಲುನಾಗರನಿಗೆ ಹಾಲೆರೆಯುವ ಔಚಿತ್ಯದ ಕುರಿತು ಅಥವಾ ಬುರ್ಖಾ ಅಥವಾ ಬುರ್ಕಾ ಧರಿಸುವ ರೂಢಿಯ ಕುರಿತು ಅಥವಾ ಏಸುಕ್ರಿಸ್ತನ ರಕ್ತವೆಂದು ಹೇಳಿ ದ್ರಾಕ್ಷಾರಸವನ್ನು ಕುಡಿಯುವುದು ಇತ್ಯಾದಿಯಾಗಿ ಯಾವುದರ ಕುರಿತೂ ಆಗಿರಬಹುದು. ಮತಗ್ರಂಥಗಳಲ್ಲಿ ಹೇಳಿದಂಥ ಶತಮಾನಗಳ ಹಿಂದಿನ ಆಚಾರಗಳು ಇಪ್ಪತೊಂದನೆಯ ಶತಮಾನದಲ್ಲಿ ಹೇಗೆ ಮತದ ನೀತಿ ಸಂಹಿತೆಗಳನ್ನು ಮೀರಿವೆ ಎಂದು ಬೊಟ್ಟು ಮಾಡಿ ಪಟ್ಟಿ ಮಾಡಿ ತೋರಿಸಿದರೆ, ಅದು ಮತಗ್ರಂಥಕ್ಕೆ ಅಪಚಾರ ಅವಮಾನ ಎನ್ನುವ ಶುದ್ಧಾಂಗ ಅಂಧರು ಇನ್ನೂ ಶತಮಾನಗಳ ಕಾಲ ಇರಬಹುದು. ಆದರೆ ಅವರ ಸಂಖ್ಯೆ ಕಡಿಮೆಯಾಗಬೇಕಾದ್ದು ಮಾನವ ಸಮಾಜಕ್ಕೆ ಅಗತ್ಯ.
ಪ್ರಶ್ನಿಸುವುದು ಮಾನವನ ಸಹಜ ಧರ್ಮ. ಮನುಷ್ಯ ನಾಗರಿಕನಾದುದು, ಅವನ ಮನಸ್ಸು ವಿಕಾಸ ಹೊಂದಿದ್ದು, ಮಾನವತೆ ಬೆಳೆದುದು ಮನುಷ್ಯನ ಪ್ರಶ್ನಿಸುವ ಗುಣದಿಂದಾಗಿಯೇ. ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದರಿಂದ ಜ್ಞಾನದ ವಿಜ್ಞಾನದ ಸೀಮೆಯು ವಿಸ್ತಾರಗೊಳ್ಳುತ್ತದೆ, ಮನುಷ್ಯನ ಸಮಾಜ ಜೀವನವು ಸುಖಕರವಾಗುತ್ತದೆ, ಬದುಕಿಗೊಂದು ಅರ್ಥ ಬರುತ್ತದೆ, ಬದುಕು ಸಹ್ಯವಾಗುತ್ತದೆ, ಸುಂದರವಾಗುತ್ತದೆ, ಪ್ರಶ್ನೆಗಳನ್ನು ಅದುಮಿ ಹಿಡಿಯುವವರು ಭಯಗ್ರಸ್ತರು, ಮನುಷ್ಯರಾಗಲಾಗದವರು, ಅವರೇ ನಿಜವಾದ ಪಾಷಂಡಿಗಳು. ನಾಸ್ತಿಕರು.
ಮತಧರ್ಮಗ್ರಂಥಗಳನ್ನು ಪಠಿಸಿದರೇನೇ ಮತಪ್ರವಚನವನ್ನು ಕಿವಿಯಿಂದ ಕೇಳಿದರೇನೇ ಒಳ್ಳೆಯವನಾಗಿ ಜೀವಿಸಲು ಸಾಧ್ಯ ಎಂದೇನೂ ಹೇಳುವಂತಿಲ್ಲ. ಮತಧರ್ಮಗ್ರಂಥಗಳ ಕುರಿತಾದ ಯಾವ ಜ್ಞಾನವೂ ಇಲ್ಲದ ಕೋಟಿಗಟ್ಟಲೆ ಜನರು ಒಳ್ಳೆಯವರಾಗಿ ಜೀವಿಸುತ್ತಿಲ್ಲವೆ? ಮತಗ್ರಂಥಗಳನ್ನು ತಪ್ಪದೆ ಪಠಿಸುವ ಪಾತಕಿಗಳಿಲ್ಲವೆ?
ಕಾದಂಬರಿ ಓದಿದವರಿಂದ ಬಂದ ಕೆಲವು ಪ್ರತಿಕ್ರಿಯೆಗಳನ್ನು ಓದಿದಾಗ ಕೆಲವೊಂದು ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡವು:
ಮುಸ್ಲಿಮನು ಹಿಂದುವನ್ನು ಹಿಂದುವು ಮುಸ್ಲಿಮನನ್ನು ದ್ವೇಷಿಸಲೇಬೇಕೆ? ದ್ವೇಷಿಸಲೇಬೇಕೆಂದಾದರೆ, ಯಾಕೆ?
ಹಿಂದುವು ಮುಸ್ಲಿಮನನ್ನು ಅವನು ಮುಸ್ಲಿಮನೆಂಬ ಕಾರಣದಿಂದ, ಮುಸ್ಲಿಮನು ಹಿಂದುವನ್ನು ಅವನು ಹಿಂದು ಎಂಬ ಕಾರಣದಿಂದ ದ್ವೇಷಿಸುವುದು ಅಥವಾ ಸೌಹಾರ್ದ ದೃಷ್ಟಿಯಿಂದ ನೋಡದಿರುವುದು ನಮ್ಮ ಒಂದು ಸಾಮಾಜಿಕ ದುಷ್ಟ ಪರಂಪರೆಯಾಗಿದೆ. ಈ ಪರಂಪರೆ ನಮ್ಮ ದೇಶದ ಸಾಮಾಜಿಕ ವ್ಯಾಧಿಗಳಲ್ಲೊಂದು. ಮಾತ್ರವಲ್ಲ, ಸಾಮಾಜಿಕ ವ್ಯಾಧಿಗಳ ಪೈಕಿ ಅಗ್ರಗಣ್ಯವಾದುದು. ಮನುಷ್ಯ ಮನುಷ್ಯನಿಗೆ ಮತ್ತು ತನ್ನ ಪರಿಸರಕ್ಕೆ ವಿಮುಖನಾಗಿ ನಿಂತು, ಮಾನವತೆಯನ್ನು ಗುರುತಿಸುವ ಕಣ್ಣುಗಳನ್ನು ಮುಚ್ಚಿ ಪುರಾಣಗಳಲ್ಲಿ, ಧರ್ಮಗ್ರಂಥಗಳಲ್ಲಿ ಇರುವ ಯಾರೂ, ಯಾರೂ ಕಾಣದ ಕಾಲ್ಪನಿಕ ಅಥವಾ ಅರೆ ಐತಿಹಾಸಿಕ ಕಥಾಪುರುಷನಾದ ಪರಮಾತ್ಮನನ್ನು ಆರಾಧಿಸುವುದರಲ್ಲಿ ಮೈಮರೆಯುವುದೇ ಈ ಸ್ಥಿತಿಗೆ ಕಾರಣ.
`ಯಾವ ಕಾಲದ ಶಾಸ್ತ್ರವೇನು ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂದೊಂದು ಕವಿ ವಾಣಿಯಿದೆ. ಇದು ಅನುಸರಣೀಯ ಜೀವನ ತತ್ವ ಆಗಲಾರದೆ? ಹಲವು ಶತಮಾನಗಳ ಹಿಂದೆ ನಮ್ಮಂಥ ಮನುಷ್ಯರೇ ಬರೆದಿರಿಸಿದ ಪುಸ್ತಕಗಳಲ್ಲಿ ಇಂಥಿಂಥ ಮಾತುಗಳಿವೆ ಅದರಂತೆ ನಾವು ನಡೆದುಕೊಳ್ಳುವವರು ಎಂದು ಸ್ವಂತ ಬುದ್ಧಿಯೆಂಬುದಿಲ್ಲದ, ವಿಚಾರಶಕ್ತಿಯಿಲ್ಲದ ಒಂದು ಗುಂಪು ಧರ್ಮದ ಹೆಸರಿನಲ್ಲಿ, `ನೀವು ಕೂಡ ಅದನ್ನು ಅನುಸರಿಸಬೇಕು' ಎಂದು ತಮ್ಮ ನಂಬಿಕೆಯನ್ನು ಇತರ ಮತದವರ ಮೇಲೆ ಮಾತ್ರವಲ್ಲ, ತಮ್ಮ ಮತದವರ ಮೇಲೆ ಕೂಡ ಹೇರಿ ದಾಳಿ ದಬ್ಬಾಳಿಕೆ ನಡೆಸುವುದು ಹೇಗೆ ಧರ್ಮಾಚರಣೆ ಎನಿಸಿಕೊಂಡೀತು? ಈ ಮೂರ್ಖರಿಗೆ ಎದೆಯಲ್ಲಿ ದನಿಯಂತಿರಲಿ, ತಲೆಯಲ್ಲಿಯೂ ದನಿಯಿಲ್ಲ ಎಂದೆನಿಸುವುದಿಲ್ಲವೆ?
ಈ ಅಂಧಾನುಷ್ಟಾನವನ್ನು ಪೋಷಿಸಿಕೊಂಡು ಹೋಗುವವರು ಒಂದು ವಿಚಾರವನ್ನು ಗಮನಿಸಿಕೊಳ್ಳಬೇಕು. ಏನೆಂದರೆ, ಇದು ತುಂಬಾ ಕಾಲ ನಡೆಯುವುದಿಲ್ಲ. ಒಂದು ದಿನ ಈ ಪರಿಸ್ಥಿತಿ ಖಂಡಿತ ಸ್ಫೋಟಗೊಳ್ಳುತ್ತದೆ. ಈ ಭೂಮಿಯ ಮೇಲೆ ಪ್ರಜ್ಞಾವಂತಿಕೆಯೆಂಬುದು ಕ್ಷಯಿಸುತ್ತಿಲ್ಲ. ಬೆಳೆಯುತ್ತಿದೆ. ವೈಚಾರಿಕತೆ ಮೈಕೊಡವಿ ನಿಂತಿರುವ ಹೊತ್ತು ಇದು. ಮೂರ್ಖರ ಹೃದಯ ಹೀನರ ಸಂಖ್ಯೆ ಬಹಳ ಸಣ್ಣದಿದೆ. ಬುದ್ಧಿವಂತರ, ಹೃದಯವುಳ್ಳವರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ನಮಗೆ ಸ್ಫೋಟ ಬೇಡ, ಪರಿವರ್ತನೆ ಬೇಕು. ರಾಮ, ಕೃಷ್ಣ, ಬುದ್ಧ, ಏಸು, ಮಹಮ್ಮದ ಎಲ್ಲರೂ ಮನುಷ್ಯರೇ. ಯಾರೂ ದೇವರಲ್ಲ. ಯಾರೂ ದೇವದೂತರಲ್ಲ. ನಾವು ಅವರನ್ನು ಪೂಜಿಸುತ್ತಾ, ಅಕ್ಕಪಕ್ಕದಲ್ಲಿ ನಿಂತ ನಮ್ಮ ಸಹೋದರ ಸಹೋದರಿಯರನ್ನು ಒದೆಯುವುದನ್ನು ನಿಲ್ಲಿಸಿ, ಎಲ್ಲರಲ್ಲೂ ರಾಮ, ಕೃಷ್ಣ, ಬುದ್ಧ, ಏಸು, ಮಹಮ್ಮದರನ್ನು ಕಾಣಬೇಕು. ಸೀತೆ, ಫಾತಿಮ, ಮೇರಿಯರನ್ನು ಕಾಣಬೇಕು. ಅದರ ಜೊತೆಯಲ್ಲೇ ನಮ್ಮಲ್ಲೇ ನಮ್ಮನ್ನು ಕಾಣಬೇಕು. ಹೇಗೆ? ಬೇರೆ ಬೇರೆಯಾಗಿಯಲ್ಲ. ಒಬ್ಬನಲ್ಲೇ ಎಲ್ಲರನ್ನೂ ಕಾಣಬೇಕು. ಎಲ್ಲರಲ್ಲೂ ಒಬ್ಬನನ್ನು ಕಾಣಬೇಕು. ಹನ್ನೆರಡು ಕೋಟಿ ಮುಸ್ಲಿಮರನ್ನು ಹಿಂದುಗಳು ಮುಗಿಸಿಬಿಡಲು ಸಾಧ್ಯವಿಲ್ಲ. ತೊಂಬತ್ತೈದು ಕೋಟಿ ಹಿಂದುಗಳನ್ನು ಮುಗಿಸಿ ಭಾರತವನ್ನು ಇಸ್ಲಾಮ್ ದೇಶ ಮಾಡಲೂ ಸಾಧ್ಯವಿಲ್ಲ. ನಾವು ಒಟ್ಟಿಗೆ ಜೀವಿಸಲೇಬೇಕು. ಒಂದಾಗಿ ಜೀವಿಸಲೇಬೇಕು.
ಈ ಭೇದಗಳು ಬೇಕಾಗಿರುವುದು ಯಾರಿಗೆ?
ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಮತ ಯಾಚಿಸುವ ಅಧಿಕಾರ ದಾಹದ-ದ್ರವ್ಯದಾಹದ-ಹೆಸರಿನ ದಾಹದ ರಾಜಕಾರಣಿಗಳಿಗೆ ಮತ ಭೇದ ಜಾತಿ ಭೇದದ ಅಗತ್ಯವಿದೆ. ಇವರು ಮತಗಳ ನಡುವೆ ಮಾತ್ರವಲ್ಲ, ಜಾತಿ-ಜಾತಿಗಳ ನಡುವೆಯೂ ಭೇದವನ್ನು ಸೃಷ್ಟಿಸುತ್ತಾರೆ. ಇವರು ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಜಾತಿ ಸಮ್ಮೇಳನಗಳಲ್ಲಿ ಭಾಷಣಮಾಡಿ `ನಮ್ಮ ಜಾತಿಗೆ ಅನ್ಯಾಯವಾಗಿದೆ. ನಾವು ತಲೆಯೆತ್ತಿ ನಿಲ್ಲಬೇಕು’ ಎಂದು ಕೂಗುತ್ತಾರೆ. ಆದ್ದರಿಂದಲೇ ಜಾತಿ ಸಂಘಗಳು ಹುಟ್ಟಿಕೊಳ್ಳುತ್ತವೆ. ಇವರು ರಾಜ್ಯಮಟ್ಟದಲ್ಲಿ ಬ್ರಾಹ್ಮಣ ಸಮ್ಮೇಳನ, ಶೂದ್ರ ಸಮ್ಮೇಳನ ಮುಸ್ಲಿಮ್ ಸಮ್ಮೇಳನಗಳನ್ನು ನಡೆಸುತ್ತಾರೆ. ಅಲ್ಲೇ ರಾಜಕಾರಣಿಯ ಚುನಾವಣಾ ಪ್ರಣಾಳಿಕೆ ಸಹ ಹೊರಬರುತ್ತದೆ. ಜಾತಿ ಪಂಗಡಗಳೆಲ್ಲ, `ಪುರೋಹಿತ ಶಾಹಿಯಿಂದ ದಬ್ಬಾಳಿಕೆ, ಶೋಷಣೆ, ಅವಗಣನೆಗೊಳಗಾಗಿರುವ ನಾವು ನಮ್ಮ ಜಾತಿಯ ಹೆಸರಿನಲ್ಲಿ ಒಂದುಗೂಡದಿದ್ದರೆ ಉಳಿಗಾಲವಿಲ್ಲ' ಎಂದುಕೊಂಡು ಸಂಘಗಳನ್ನು ಕಟ್ಟುತ್ತಾರೆ, ಸಮ್ಮೇಳನಗಳನ್ನು ಜರಗಿಸುತ್ತಾರೆ. ಇದರಿಂದ ರಾಜಕೀಯ ಪುಢಾರಿಗಳಿಗೆ ಮತ್ತಷ್ಟು ಅನುಕೂಲವಾಗುತ್ತದೆ. `ನೀವು ನಮ್ಮಲ್ಲೊಬ್ಬರಲ್ಲವೆ?' ಎನ್ನುವ ಪ್ರಶ್ನೆಯನ್ನು ಮತದಾರರು ಕೇಳದೆ, ಆತ ದೇವರಿಂದ ನೇಮಿಸಲ್ಪಟ್ಟವನು ಎಂಬಂತೆ ನಡೆದುಕೊಳ್ಳುತ್ತಿರುವುದರಿಂದಾಗಿಯೇ ಜನತೆಗೆ, ದೇಶಕ್ಕೆ ಇಷ್ಟೊಂದು ಕೆಟ್ಟದಾಗುತ್ತಿರುವುದು!
ಧರ್ಮದ ಹೆಸರಿನಲ್ಲಿ ಜೀವಿಸುವ, ಪೂಜಿಸಿಕೊಳ್ಳುವ, ಹಣ ಸಂಗ್ರಹಿಸುವ, ಮಠದ ಸ್ವಾಮಿಗಳಿಗೆ, ಮತಗುರುಗಳಿಗೆ ಈ ಭೇದ ಬೇಕು. ಧರ್ಮಗಳು ಒಂದಾದರೆ, ಇವರು ತಮ್ಮ ಜೀವನಕ್ಕೆ ಬೇರೆ ದಾರಿಗಳನ್ನು, ದಂಧೆಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಇವರು ಹಣಗಳಿಸುವ ದಾರಿಗಳು ಮುಚ್ಚಿಹೋಗುತ್ತವೆ. ಯಾರು ಯಾರನ್ನೇ ದ್ವೇಷಿಸಲಿ ಒಂದು ವಿಷಯ ಮಾತ್ರ ಸತ್ಯ. ಹಿಂದುವು ಹಿಂದುವನ್ನೇ ಶೋಷಿಸುತ್ತಾನೆ, ಮುಸ್ಲಿಮನು ಮುಸ್ಲಿಮನನ್ನೇ ಶೋಷಿಸುತ್ತಾನೆ. ಎರಡೂ ಆಗಿರುವವನನ್ನು ಅಥವಾ ಎರಡೂ ಅಲ್ಲದವನನ್ನು ಹಿಂದುವಿನಿಂದಲೂ ಶೋಷಿಸಲಾಗುವುದಿಲ್ಲ, ಮುಸ್ಲಿಮನಿಂದಲೂ ಶೋಷಿಸಲಾಗುವುದಿಲ್ಲ. ಆದ್ದರಿಂದಲೇ ಎಲ್ಲಾ ಮತಗುರುಗಳು, ಮತಪಂಥಿಯರು `ಧರ್ಮ’ವನ್ನು ಉಳಿಸುವುದಕ್ಕೋಸ್ಕರ ಹೋರಾಡುವವರಾಗಿರುವುದು! `ಜನರು ಧರ್ಮವನ್ನು ಪರಿಪಾಲಿಸಬೇಕು, ಆಸ್ತಿಕರಾಗಿರಬೇಕು’ ಎಂದು ಕರೆ ನೀಡುವುದು! `ಸನ್ಮಾರ್ಗವೆ ನನ್ನ ಧರ್ಮ, ದೇವರಿರುವುದು ಮನುಷ್ಯರಲ್ಲೇ, ಬೇರೆ ದೇವರಿಲ್ಲ’ ಎಂದು ಅವನ ಪಾಡಿಗಿರುವವನು ನಾಸ್ತಿಕನೆನಿಸಿಕೊಳ್ಳುತ್ತಾನೆ. ಆಸ್ತಿಕನೆನಿಸಿಕೊಂಡವನು ಮೈಕು, ಮೂರ್ತಿ, ಕತ್ತಿ, ದೊಣ್ಣೆ ಹಿಡಿದುಕೊಂಡು ತಮ್ಮ ಧರ್ಮದ ರಕ್ಷಣೆಗೆ, ತನ್ನ ದೇವರ ರಕ್ಷಣೆಗೆ ಹೊರಡುತ್ತಾನೆ.
ವ್ಯಾಪಾರಿ ವರ್ಗದವರಲ್ಲಿ ಕೂಡ ಬಹುಮಂದಿಗೆ ಈ ಭೇದ ಬೇಕು. ಧರ್ಮಾನುಷ್ಠಾನಕ್ಕೆ ಸಂಬಂಧಿಸಿದ ನೂರಾರು ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಜನರ ಅಂಧಶ್ರದ್ಧೆ, ಮೂಢನಂಬಿಕೆ, ಪೂಜೆ, ಆರಾಧನೆ, ಹರಕೆ ಹೋಮಗಳಿಂದ ಒಳ್ಳೆಯ ವ್ಯಾಪಾರ ಆಗುತ್ತದೆ. ಈ ವಸ್ತುಗಳ ಮಾರಾಟದ ಮೂಲಕ ಮೂಢರನ್ನು ಸುಲಿಯುವಷ್ಟು ಸುಲಭದಲ್ಲಿ ಬೇರೆ ಯಾವ ವ್ಯಾಪಾರದಲ್ಲೂ ಸುಲಿಯಲು ಸಾಧ್ಯವಿಲ್ಲ. ಆದ್ದರಿಂದಲೇ ಅತಿ ಕೆಟ್ಟ ರೀತಿಯ ಸುಲಿಗೆಯನ್ನು ನಾವು ಕಾಶಿ, ತಿರುಪತಿ, ಮಂತ್ರಾಲಯ, ಪಂಡರಾಪುರ ಮುಂತಾದ ಸಾವಿರಾರು ಕ್ಷೇತ್ರಗಳಲ್ಲಿ ಕಾಣಬಹುದು. ಅಜ್ಮೀರ್ ದರ್ಗಾಹ್ನಂಥ ನೂರಾರು ಮುಸ್ಲಿಮ್ ಪವಿತ್ರ ಕ್ಷೇತ್ರಗಳಲ್ಲಿ ಇಂಥ ಸುಲಿಗೆ ನಡೆದೇ ಇದೆ. ಹಿಂದೂ ಶೈಲಿಯ ಪೂಜೆ ಹರಕೆಗಳು ಅರ್ಪಿಸಲ್ಪಡುವ ಆಂಧ್ರಪ್ರದೇಶ, ತಮಿಳ್ನಾಡು ಮತ್ತು ಕೇರಳದ ಹಲವು ಕ್ರೈಸ್ತ ದೇವಾಲಯಗಳಲ್ಲಿ ಪರೋಕ್ಷವಾದ ಸುಲಿಗೆ ನಡೆಯುತ್ತದೆ. ಈ ಬಗೆಯ ಸುಲಿಗೆಯಿಂದ ಜೀವಿಸುವ ಜನರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ನಮ್ಮ ದೇಶದ ನಗರಗಳಲ್ಲಿ ದೇವಾಲಯ, ಗುಡಿ, ನಾಗನಕಲ್ಲು, ಸಂತನ ಸಮಾಧಿ ಇತ್ಯಾದಿ ಇಲ್ಲದ ಬೀದಿಯೇ ಇರಲಾರದು. ಪ್ರತಿ ವರ್ಷ ನಗರದ ಫುಟ್ಪಾತುಗಳಲ್ಲಿ ಹೊಸ ಹೊಸ ಗುಡಿಗಳು ಕಟ್ಟಲ್ಪಡುತ್ತವೆ. ಹೊಸ ಹೊಸ ದೇವಾಲಯಗಳ ಸೃಷ್ಟಿಯಾಗುತ್ತಿರುತ್ತದೆ. ಇಲ್ಲಿ ಚಪ್ಪಲಿ ಕಳಚಿ ತಲೆಬಾಗಿ ನಿಲ್ಲುವವರು ಯಾರು? ಲಕ್ಷಗಟ್ಟಲೆ, ಕೋಟಿಗಟ್ಟಲೆ ಸಂಪಾದಿಸುವ ವ್ಯಾಪಾರಿಗಳು, ಉದ್ಯಮಿಗಳು ಅಲ್ಲ. ಬಡ ಕೂಲಿಕಾರರು, ರಿಕ್ಷಾ ಓಡಿಸುವವರು, ಹೊರೆ ಹೊರುವವರು, ಕೊಳೆಗೇರಿಯವರು, ದೀನರು ದಲಿತರು, ಮೂಢ ನಿರಕ್ಷರಿಗಳು, ಇವರಿಂದ ಹೀರಲ್ಪಡುವ ನಾಣ್ಯ ರೂಪದ ನೆತ್ತರಿನ ಮೇಲೆ ನಿಂತಿವೆ ಈ ದೇವರುಗಳು, ಈ ಧರ್ಮ!
ಆರ್ಥಿಕವಾಗಿ ಅತ್ಯಂತ ಮೇಲಿನ ಸ್ತರದಲ್ಲಿರುವವರಿಗೆಲ್ಲಾ ಒಂದೇ ಧರ್ಮ, ಹಣದ ರಾಶಿಯ ಮೇಲೆ ನಿಂತಿರುವ ಧರ್ಮ! ಅವರ ನಡುವೆ ಜಾತಿಭೇದ, ಮತಭೇದದ ಗೋಡೆಗಳು ಇರುವುದಿಲ್ಲ. ಹಣ ಮಾಡುವ ಕಾಯಕದಲ್ಲಿ ಅವರೆಲ್ಲ ಸಮಾನರು, ಒಂದೇ ಧರ್ಮದವರು ಆಗಿರುತ್ತಾರೆ. ಅವರ ನಡುವೆ ಆರ್ಥಿಕ ಸೋದರತೆ ವಿರಾಜಿಸುತ್ತಿರುತ್ತದೆ. ಅವರು ಬೇಕಾದಾಗ ತಮಗೆ ಸರಿ ಕಂಡಂತೆ ಮಾಡುವವರು. ಅವರು ಕತ್ತಿ ದೊಣ್ಣೆ ಹಿಡಕೊಂಡು ಬೀದಿಗಿಳಿಯುವುದಿಲ್ಲ. ಯಾವ ಟೀಕೆ, ನಿಂದೆ, ಅವಹೇಳನ, ಗಾಸಿಪ್ ಕೂಡ ಅವರನ್ನು ಬಂಧಿಸುವುದಿಲ್ಲ. ಅವರು ತಮ್ಮ ಹಣದ ಕೋಟೆಯಲ್ಲಿ ಹಾಯಾಗಿರುತ್ತಾರೆ. ಅವರಿಗೆ ಜನಿವಾರ ಇಲ್ಲದಿದ್ದರೂ ಆಗ್ತದೆ. ಬುರ್ಖಾ ಇಲ್ಲದಿದ್ರೂ ಆಗ್ತದೆ. ಅವರನ್ನು ಪುರೋಹಿತರು ಮುಲ್ಲಾಗಳು ಪ್ರಶ್ನಿಸಲಾರರು. ಅಂಥವರಿಗೆ ಧರ್ಮದ ಮತದ ಚಿಹ್ನೆಗಳು ಬೇಕಾಗುವುದಿಲ್ಲ. ಜಾತಿ ಭೇದ ಕೂಡ ಅಷ್ಟು ಮುಖ್ಯವಲ್ಲ. ಜಾತಿ ಜಾತಿಗಳನ್ನು ಬೆಸೆಯುವ ಅಂಟು ಹಣ. ಕೆಳಗಿನ ಸ್ತರದಲ್ಲಿರುವವರ ಬಳಿ ಈ ಅಂಟು ಇರುವುದಿಲ್ಲ. ಆದರೆ ಅವರೂ ಹಣ ಬಂದೊಡನೆ ಬದಲಾಗ್ತಾರೆ. ವಿದೇಶಕ್ಕೆ ಹೋಗಿ ಲಕ್ಷಗಟ್ಟಲೆ ತಂದರೆ, ಲಾಟರಿಯಲ್ಲಿ ಅರ್ಧಕೋಟಿ ಬಂದರೆ, ಯಾವುದೋ ದಂಧೆಯಲ್ಲಿ ಲಕ್ಷಗಟ್ಟಲೆ ಕುದುರಿದರೆ ಅವರು ಕತ್ತಿದೊಣ್ಣೆ ಎಲ್ಲಾ ಬಿಸುಟು ತಮ್ಮ ಸ್ವಂತಕೋಟೆ ಕಟ್ಟಿಕೊಳ್ತಾರೆ. ಅವರ ಜನಿವಾರವೂ ಮಾಯವಾಗ್ತದೆ, ಬುರ್ಖವೂ ಮಾಯವಾಗ್ತದೆ. ಆಮೇಲೆ ಅವರು ಧಾರ್ಮಿಕ ಸೈನ್ಯದಲ್ಲಿ ಸೇರಿ ಹೋರಾಡುವ ಯೋಧರಲ್ಲ, ಹೋರಾಟಕ್ಕೆ ಹಣ ನೀಡಿ, ಕೋಟೆಯ ಮೇಲೆ ನಿಂತು ವೀಕ್ಷಿಸುವವರು. ಸಿರಿವಂತ ದೇಶಗಳಲ್ಲಿ ಜನರು ಧರ್ಮಗಳಿಗಾಗಿ ಹೊಡೆದಾಡುವುದಿಲ್ಲ. ಬಡ ದೇಶದಲ್ಲಿ ಬಡತನ, ಹತಾಶೆ, ಮತ್ಸರ, ದ್ವೇಷಾಸೂಯೆಗಳು ತಾಂಡವವಾಡುತ್ತವೆ. ಎಲ್ಲಾ ಹೊಡೆದಾಟಗಳು ಗಲ್ಲಿಗಳಲ್ಲಿ, ದೀನದಲಿತರ ಮನೆಗಳಿರುವಲ್ಲಿ ಕೊಳೆಗೇರಿಗಳಲ್ಲಿ ನಡೆಯುತ್ತವೆ; ಸಿರಿವಂತ ಭವನಗಳಿರುವಲ್ಲಿ ಅಲ್ಲ, ಯಾವ ಶ್ರೀಮಂತನೂ ಬೀದಿ ಕಾಳಗಕ್ಕೆ ಇಳಿಯುವುದಿಲ್ಲ. ಬೀದಿಕಾಳಗಕ್ಕೆ ಇಳಿಯುವವರು ವರ್ತಮಾನ ಮತ್ತು ಭವಿಷ್ಯತ್ತಿನ ಬಗ್ಗೆ ಯಾವ ಆಸೆಯನ್ನೂ ಇಟ್ಟುಕೊಳ್ಳದವರು, ಅಥವಾ ಭ್ರಾಮಕ ಆಸೆಗಳನ್ನಿರಿಸಿಕೊಂಡವರು, ಆತ್ಮದಲ್ಲಿ ದನಿಯೆಂಬುದಿಲ್ಲದವರು, ವಾದದಲ್ಲಿ ಸೋತಾಗ ವಾದಮಾಡಲಾರದಿದ್ದಾಗ ಕೈಯೆತ್ತುವವರು ಯಾರು? ಒಂದೋ ಮಕ್ಕಳು ಅಥವಾ ವೈಚಾರಿಕ ಶಕ್ತಿ ಇಲ್ಲದವರು. ತಮ್ಮ ಹಿತಾಸಕ್ತಿಗಳಿಗೆ, ಪೂರ್ವಗ್ರಹಗಳಿಗೆ ವೈಚಾರಿಕತೆಯ ಹೊಡೆತ ಬಿದ್ದಾಗ ತತ್ತರಿಸುವ ಜನರು ಯೋಚಿಸುವ ಬದಲು ಮುಷ್ಟಿ ಬಿಗಿ ಮಾಡುತ್ತಾರೆ. ಅದು ಭೀತಿಯ ಲಕ್ಷಣ, ಧೈರ್ಯದ ಲಕ್ಷಣವಲ್ಲ ಎಂದು ಅವರಿಗೆ ತಿಳಿದಿರುವುದಿಲ್ಲ.
ಮತಭ್ರಷ್ಟನಾಗುವುದೆಂದರೇನು?
ಹಿಂದುವು ಇತರ ಮತದ ವ್ಯಕ್ತಿಯೊಡನೆ ವಿವಾಹ ಸಂಬಂಧ ಬೆಳೆಸಿದಾಗ ಮಾತ್ರ ಮತಭ್ರಷ್ಟನಾದ ಎಂದು ತಿಳಿಯಲಾಗುತ್ತದೆ. ಅದರ ಹೊರತು ಅವನು ಏನು ಮಾಡಿದರೂ ಮತಭ್ರಷ್ಟನಾಗಲಾರ. ವಾಸ್ತವದಲ್ಲಿ ಅವನಿಗೆ ಮತವೆಂಬುದು ಇಲ್ಲ. ಬಹಳ ಅಸ್ಫುಟವಾದ ಧರ್ಮವೆಂಬುದು ಮಾತ್ರ ಇದೆ. ಅವನಿಗೆ ಮುಖ್ಯವಾದುದು ಜಾತಿ. ಜಾತಿಯ ಕಟ್ಟು ಕಟ್ಟಳೆಗಳಿಗೆ ಸರಿಯಾಗಿ ನಡೆದುಕೊಳ್ಳದಿದ್ದಾಗ ಅವನು ಜಾತಿ ಭ್ರಷ್ಟನಾಗುತ್ತಾನೆ. ಘಂಟಾಘೋಷವಾಗಿ ಮೀನು ತಿಂದ ಬ್ರಾಹ್ಮಣನ ಜಾತಿಹೋಗಬಹುದು. ಆದರೆ ಅವನು ಹಿಂದುವಾಗಿಯೇ ಉಳಿಯುತ್ತಾನೆ. ಜನಿವಾರ ಕಿತ್ತೆಸೆದರೂ ಅವನ ಹಿಂದುತ್ವಕ್ಕೇನೂ ಧಕ್ಕೆ ಬರುವುದಿಲ್ಲ. ಆದರೆ ಇಸ್ಲಾಮಿನಲ್ಲಿ ಹಾಗಲ್ಲ. ಮತ ಸಂಬಂಧವಾದ ಸಾವಿರಾರು ನಿಯಮಗಳಲ್ಲಿ ಅವನು ಒಂದನ್ನು ಪಾಲಿಸದಿದ್ದರೂ ಸರಿ, ಅವನು ಧರ್ಮಭ್ರಷ್ಟ, ಕಾಫಿರ ಎನಿಸಿಕೊಳ್ಳುತ್ತಾನೆ. ವಾಸ್ತವದಲ್ಲಿ, ಈ ನಿಯಮಗಳ ಪ್ರಕಾರ ಎಷ್ಟು ಮಂದಿ `ನಿಜವಾದ ಮುಸ್ಲಿಮರು’ ಇರಬಹುದು?
ಬುರ್ಖಾಧಾರಣೆಗೆ ಮತ್ತು ಇಸ್ಲಾಮ್ ಮತಕ್ಕೆ ಏನು ಸಂಬಂಧ? ಕೇರಳದಲ್ಲಿ ಮಲಬಾರಿನಿಂದ ದಕ್ಷಿಣಕ್ಕೆ ಬುರ್ಖಾಧಾರಣೆ ಇಲ್ಲ. ಮಲಬಾರಿನಲ್ಲೇ ಕಣ್ಣಾನ್ನೂರಿನಿಂದ ದಕ್ಷಿಣಕ್ಕೆ ಬುರ್ಖಾ ಧರಿಸುವವರ ಸಂಖ್ಯೆ ಬಹಳ ಸಣ್ಣದು. ಸಾವಿರಾರು ಮುಸ್ಲಿಂ ಸ್ತ್ರೀಯರು ಅಧ್ಯಾಪಕಿಯರಾಗಿ ದಾದಿಯರಾಗಿ, ಡಾಕ್ಟರುಗಳಾಗಿ ಕೆಲಸ ಮಾಡುತ್ತಾರೆ. ಅವರು ಬುರ್ಖಾ ಧರಿಸುವುದಿಲ್ಲ. ಉತ್ತರ ಭಾರತದಲ್ಲಿ ಬುರ್ಖಾಧಾರಣೆಯಿಲ್ಲ. ಇದ್ದಲ್ಲೂ ಬಹಳ ಕಡೆ ಅದೃಶ್ಶವಾಗಿದೆ. ಹಿಂದೂ ಸ್ತ್ರೀಯಂತೆ ಮುಸ್ಲಿಮ್ ಸ್ತ್ರೀಯೂ ಶಾಲೆ ಕಾಲೇಜುಗಳಿಗೆ ಹೋಗಿ ನಾನಾ ಉದ್ಯೋಗ