Ananthara
By K.T. Gatti
()
About this ebook
M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
Read more from K.T. Gatti
Nanna Premada Hudugi Rating: 4 out of 5 stars4/5Punarapi Jananam Rating: 4 out of 5 stars4/5Mane Rating: 2 out of 5 stars2/5Parakaya Pravesha Rating: 0 out of 5 stars0 ratingsNiranthara Rating: 0 out of 5 stars0 ratingsKurudu Kaanchaana Rating: 0 out of 5 stars0 ratingsKoopa Rating: 0 out of 5 stars0 ratingsTheera Rating: 0 out of 5 stars0 ratingsHei Kaapurusha Rating: 0 out of 5 stars0 ratingsKempu Kalave Rating: 0 out of 5 stars0 ratingsAbhramana Rating: 0 out of 5 stars0 ratingsKaarmugilu Rating: 0 out of 5 stars0 ratingsParidhi Rating: 0 out of 5 stars0 ratingsMrityorma Amritam Gamaya Rating: 0 out of 5 stars0 ratingsSwarnamrugha Rating: 0 out of 5 stars0 ratingsKarmanye Vadhikaraste Rating: 0 out of 5 stars0 ratingsMooru Naatakagalu Rating: 0 out of 5 stars0 ratingsKumbarana Pitilu Rating: 0 out of 5 stars0 ratingsIthihaasada Mogasaaleyalli Rating: 5 out of 5 stars5/5
Related to Ananthara
Related ebooks
Kempu Kalave Rating: 0 out of 5 stars0 ratingsInchara Bandalu Inchara Rating: 0 out of 5 stars0 ratingsKaarmugilu Rating: 0 out of 5 stars0 ratingsHanigavithegalu Rating: 0 out of 5 stars0 ratingsSankole Rating: 0 out of 5 stars0 ratingsThushara Rating: 0 out of 5 stars0 ratingsHongeya Neralu Rating: 4 out of 5 stars4/5Grimm Brothers Rating: 0 out of 5 stars0 ratingsTamasoma Jyothirgamaya Rating: 0 out of 5 stars0 ratingsThe Diary of Mrs.Sharada Rating: 5 out of 5 stars5/5Vaarasudhara Rating: 0 out of 5 stars0 ratingsSandarbha Sammandha Rating: 0 out of 5 stars0 ratingsSwarnamrugha Rating: 0 out of 5 stars0 ratingsBuddha Matthu Parampare Rating: 4 out of 5 stars4/5Vishwam Shubham Mangalam Rating: 0 out of 5 stars0 ratingsMooru Naatakagalu Rating: 0 out of 5 stars0 ratingsIdannu Bayasiralilla (Best of UG) Rating: 0 out of 5 stars0 ratingsIthihaasada Mogasaaleyalli Rating: 5 out of 5 stars5/5ಗಡಿಯಾರಕರ್ತೃ (The Watchmaker) Kannada Language Rating: 5 out of 5 stars5/5Samadhana Bhaaga 1 Rating: 0 out of 5 stars0 ratingsBottom Item Rating: 5 out of 5 stars5/5Koopa Rating: 0 out of 5 stars0 ratingsTunturu Maleyalli Aralidha May Pushpagalu Rating: 0 out of 5 stars0 ratingsParidhi Rating: 0 out of 5 stars0 ratingsPutta Puttige Putta Hanate Rating: 0 out of 5 stars0 ratingsBest of Lovelavike Rating: 5 out of 5 stars5/5Karala Garbha Rating: 0 out of 5 stars0 ratingsTappu Maadona Banni! Rating: 4 out of 5 stars4/5Suruli - Manadi Suttida Kathegalu Rating: 0 out of 5 stars0 ratingsHiranya Garbha Rating: 0 out of 5 stars0 ratings
Reviews for Ananthara
0 ratings0 reviews
Book preview
Ananthara - K.T. Gatti
http://www.pustaka.co.in
ಆನಂತರ
Ananthara
Author :
ಕೆ. ಟಿ. ಗಟ್ಟಿ
K T Gatti
For more books :
http://www.pustaka.co.in/home/author/kt-gatti
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಪ್ರವೇಶ
ಬೆಟ್ಟದ ತುದಿಯಿಂದ ನೋಡಿದರೆ ಪ್ರಶ್ನಾರ್ಥಕ ಚಿಹ್ನೆಯಂತೆ ಕಾಣುವ ಕಣಿವೆ. ಹೆಬ್ಬಾವಿನಂತೆ ಮಲಗಿದ ಬಳಸು ಹಾದಿ. ಸುತ್ತಲೂ ದಟ್ಟವಾದ ಕಾಡು. ಕಣಿವೆಯ ಮೇಲ್ತುದಿಯಲ್ಲೊಂದು ಹಳೆಯ ಕಾಲದ ದೊಡ್ಡ ಮನೆ. ರಾತ್ರಿ ಹನ್ನೊಂದು ಗಂಟೆ ದಾಟಿದೆ. ನನ್ನ ಮೇಜಿನ ಮೇಲಿರುವ ಕಂದೀಲು ನಂದಿದರೆ ಭೂಮಿಗೆ ಕತ್ತಲು ಕವಿದಂತಾಗುತ್ತದೆ. ಆದರೆ ಈ ಕಂದೀಲನ್ನು ನಾನು ಸೂರ್ಯೋದಯದವರೆಗೂ ನಂದಿಸಲಾರೆ. ಭಯವೆಂದಲ್ಲ. ಬೆಳಕಾದರೇನು ಕತ್ತಲಾದರೇನು? ಅದೇ ಮಣ್ಣು, ಅದೇ ಹಸಿರು, ಅದೇ ಆಕಾಶ. ಆದರೂ ಬೆಳಕು ಬೇಕು. ಬೆಳಕಿದ್ದರೆ ಧೈರ್ಯ, ಬೆಳಕಿಲ್ಲದಿದ್ದರೆ ಅಧೈರ್ಯ; ವಿನಾ ಕಾರಣ. ಬೆಳಕಿಗೂ ಧೈರ್ಯಕ್ಕೂ ಏನು ಸಂಬಂಧ? ಕತ್ತಲೆಗೂ ಭಯಕ್ಕೂ ಏನು ಸಂಬಂಧ?
ಸಂಬಂಧವಿರಲಿ, ಇಲ್ಲದಿರಲಿ ಈ ರಾತ್ರಿ ಕಂದೀಲನ್ನನು ಉರಿಸಿಯೇ ಇರಿಸಲು ಕಾರಣವಿದೆ. ಧೋ ಧೋ ಮಳೆ ಸುರಿಯುತ್ತಿದೆ. ಇದು ಮುಂಗಾರ ಮೊದಲ ಮಳೆ. ಹೆದರಬೇಡ. ಎರಡು ತಲೆಮಾರುಗಳು ಇಲ್ಲಿ ಕಳೆದಿವೆ. ನಾನು ಮೂರನೇ ತಲೆಮಾರಿನವನು. ಯಾರೋ ಹಾವು ಕಚ್ಚಿ ಸತ್ತಿರಬಹುದು. ಯಾರೋ ನೇಣು ಹಾಕಿ ಸತ್ತಿರಬಹುದು. ಆದರೆ ನನಗೆ ತಿಳಿದಂತೆ ಯಾರೂ ಇಲ್ಲಿ. ಆ ರೀತಿ ಸತ್ತಿಲ್ಲ. ಆದರೂ ಜಾಗರೂಕನಾಗಿರು. ಮೊದಲ ಮಳೆಗೆ ಹಾವುಗಳು ಒಳನುಗ್ಗುತ್ತವೆ
ಎಂದಿದ್ದ ಮಿತ್ರ. ಬಾಗಿಲುಗಳ ಕಿಟಕಿಗಳ ಸಂದಿನಲ್ಲಿ ಬಿರುಕುಗಳಿವೆ. ಕೆಲವೆಡೆ ಹರಕು ಗೋಣಿಗಳನ್ನು ತಳ್ಳಲಾಗಿದೆ. ಆದರೂ ಹಾವಿಗೆ ಬರಲೆಷ್ಟು ಎಡೆಬೇಕು? ಹಾವು ಬರುವುದೇ ಎಡೆಯಲ್ಲಿ, ಸಂದಿನಲ್ಲಿ, ಬಿರುಕಿನಲ್ಲಿ. ಹಾವು ಹೆಬ್ಬಾಗಿಲನ್ನು ಹುಡುಕಿಕೊಂಡು ಹೋಗುವುದಿಲ್ಲ.
ಕಾಡಿನೊಳಗಿನ ಭೂತ ಬಂಗಲೆಯಲ್ಲಿ ಕುಳಿತು ಹಾವಿನ ದರ್ಶನ ಮಾಡಲು ಬಂದವನಲ್ಲ ನಾನು. ಒಂದು ತಿಂಗಳು ಮಿತ್ರನ ಮನೆಯಲ್ಲಿ ಕುಳಿತು ಒಂದು ಕಾದಂಬರಿ ಬರೆಯಬೇಕೆಂದು ಬಂದಿದ್ದೇನೆ. ಆದರೆ ಮಿತ್ರನ ತಾಯಿಗೆ ಕಾಯಿಲೆ. ತಾಯಿಯನ್ನು ಮತ್ತು ತಂಗಿಯನ್ನು ಕರೆದುಕೊಂಡು ಪಟ್ಟಣಕ್ಕೆ ಹೋಗಿದ್ದಾನೆ. ನಾಳೆ ಬರ್ತೀನಿ. ಹೇಗಾದರೂ ಸುಧಾರಿಸಿಕೊ
ಅಂದಿದ್ದಾನೆ. ಹೌದು, ಅದನ್ನೇ ನಾನೀಗ ಮಾಡ್ತಿರೋದು. ಸುಧಾರಿಸಿಕೊಳ್ಳೋದು. ಹಾವಿನ ಭಯದಿಂದ ನಿದ್ದೆ ಬರ್ತಾ ಇಲ್ಲ. ಸರಿ, ಏನು ಮಾಡೋಣ? ಕಾದಂಬರಿ ಆರಂಭಿಸಿಬಿಟ್ಟರೆ ಹೇಗೆ? ಅದೇ ಸರಿ. ವಸ್ತು ತಲೆಯಲ್ಲಿದೆ, ಕಾಗದಕ್ಕೆ ಇಳಿಸಬೇಕು.
ಕಾಗದ ಮತ್ತು ಪೆನ್ನು ಅಣಿಗೊಳಿಸಿ ಕುಳಿತೆ. ಎಷ್ಟು ಯೋಚಿಸಿದರೂ ಹೇಗೆ ಆರಂಭಿಸಬೇಕು ಎಂದು ತಿಳಿಯುತ್ತಿಲ್ಲ. ಮೊದಲ ವಾಕ್ಯ ಬರಲೊಲ್ಲದು. ಒಂದು, ಎರಡು, ಮೂರು, ವಾಕ್ಯಗಳು ಬಂದುಬಿಟ್ಟರೆ ಸರಿ. ಮತ್ತೆ ಕಾದಂಬರಿ ನಿಲ್ಲುವುದಿಲ್ಲ. ಹಾವು, ಮಳೆ, ಕತ್ತಲೆ, ಕಾಡು ಯಾವುದರ ಪರಿವೆಯೂ ಇಲ್ಲದೆ ಮುಂದುವರಿಯುವುದು. ಆದರೆ ಕಂದೀಲು ಖಂಡಿತ ಅಗತ್ಯ.
ಎಷ್ಟು ಪ್ರಯತ್ನಸಿದರೂ ಮೊದಲ ಮಾತು ಹುಟ್ಟಲೊಲ್ಲದು. ಛೆ, ಇದೆಂಥಾ ಕಷ್ಟ! ಇದೇ ಕಾದಂಬರಿಯ ವಸ್ತು ಒಂದು ಚೆಂಡಿನಂತೆ ತಲೆÀಯೊಳಗೆ ತುಂಬಿನಿಂತಿದೆ. ಅದನ್ನು ಕಾಗದಕ್ಕೆ ಉರುಳಿಸುವುದಷ್ಟೇ ಆಗಬೇಕಾಗಿರುವ ಕೆಲಸ. ಎಲ್ಲಿಂದ ಆರಂಭಿಸಲಿ? ಎಲ್ಲಿ ಇದರ ಆರಂಭ? ಹೇಗೆ?
ಇನ್ನಷ್ಟು ಯೋಚನೆ ಅಗತ್ಯ ಅನಿಸಿತು. ಕಂದೀಲಿನ ಬೆಳಕನ್ನು ಕಿರಿದುಗೊಳಿಸಿದೆ. ಆರಾಮ ಕುರ್ಚಿಯಲ್ಲಿ ಹಿಂದಕ್ಕೊರಗಿಕೊಂಡು ಕಾಲುಗಳನ್ನು ಮೇಜಿನ ಮೇಲಿರಿಸಿದೆ. ಯೋಚಿಸುತ್ತಾ ಕುಳಿತೆ, ಕಣ್ಣು ಮುಚ್ಚಿದೆ.
ಐದು ನಿಮಿಷಗಳು ಕಳೆದಿರಬಹುದು. ಯಾರೋ ನಕ್ಕಂತೆ ಅನಿಸಿತು. ಶಬ್ದರಹಿತವಾಗ ನಗು. ಆದರೂ ಅದು ನನಗೆ ಕೇಳಿಸಿದೆ! ಆಶ್ಚರ್ಯ! ಕಣ್ಣು ತೆರೆದೆ. ಮೇಜಿನ ಮುಂದುಗಡೆ ಸ್ವಲ್ಪ ದೂರದಲ್ಲಿರುವ ಕುರ್ಚಿಯಲ್ಲಿ ಒಬ್ಬ ಮನುಷ್ಯ ಕುಳಿತಿದ್ದಾನೆ!
ಅವನನ್ನು ಕಂಡುದೇ ನನ್ನ ಮೈಮೇಲೆ ಸಾವಿರಾರು ಹಾವುಗಳು ಹರಿದಾಡಿದಂತಾಯಿತು. ಬಾಗಿಲು ಹಾಕಿದ್ದೆ. ಅಗಳಿ ಹಾಕಿದ್ದೆ. ಯಾರೊಬ್ಬರೂ ಒಳಬರುವಂತಿರಲಿಲ್ಲ. ಹಾವುಗಳು ಬರಬಹುದಾದ ಬಿರುಕಿನಲ್ಲಿ ಮನುಷ್ಯ ಬರಲಾರ. ನಾನು ನಡುಗಿದೆ. ಅದೊಂದು ಅಸಂಭವ ರೂಪವಾಗಿತ್ತು. ಹಸಿರು ಮುಖ, ಹಸಿರು ಕೂದಲು, ಹಸಿರು ಕೈಗಳು, ಹಸಿರು ಮೈ, ಎಲ್ಲಾ ಹಸಿರು. ಕಣ್ಣುಗಳು ಮಾತ್ರವೇ ಕಪ್ಪು.
ಭೂತ ಪ್ರೇತಗಳು ಇರುವಿಕೆಯಲ್ಲಿ ನನಗೆ ನಂಬಿಕೆಯಿಲ್ಲ. ಒಂದು ವೇಳೆ ಅಂಥದೊಂದಿದೆಯೆಂದಾದರೆ ಕೂಡ ನನಗದರ ಬಗ್ಗೆ ಭಯವಿಲ್ಲ; ಅದರೊಡನೆ ನಾನು ಸ್ನೇಹದಿಂದ ನಡೆದುಕೊಳ್ಳಲಿಚ್ಛಿಸುತ್ತೇನೆ. ಅದು ಕೈಕುಲುಕಲಿಚ್ಛಿಸುವುದಾದರೆ ಕೈಕುಲುಕುತ್ತೇನೆ. ಮಾತಾಡುವುದಾದರೆ ಮಾತಾಡಲಿಚ್ಛಿಸುತ್ತೇನೆ. ಅದು ಪಿಸ್ತೂಲಿನಿಂದ ಗುಂಡು ಹಾರಿಸದು, ಚೂರಿಯಿಂದ ಇರಿಯದು, ಸುಳ್ಳು ಹೇಳದು, ಮೋಸ ಮಾಡದು ಎಂದು ನನಗೆ ಸ್ಪಷ್ಟವಿದೆ ಗೊತ್ತಿದೆ. ಯಾವುದೋ ಕೃತ್ರಿಮ, ವಂಚನೆಯ ಅಗತ್ಯ ಅದಕ್ಕೆ ಇರಲಾರದು. ಯಾಕೆಂದರೆ, ಅದಕ್ಕೆ ಮದುವೆಯಾಗಲಿಕ್ಕೆ ಇಲ್ಲ, ಮನೆಕಟ್ಟಲಿಕ್ಕೆ ಇಲ್ಲ, ಭೂಮಿ ಖರೀದಿಸಲಿಕ್ಕೆ ಇಲ್ಲ.
ಅವೆಲ್ಲ ನನ್ನ ಹಳೆಯ ಯೋಚನೆಗಳೇ. ಭೂತ ಪ್ರೇತ ಇಲ್ಲ ಎಂಬ ನಂಬಿಕೆಯ ಧೈರ್ಯದಲ್ಲಿ ಹುಟ್ಟಿದ ಯೋಚನೆಗಳು. ಆದರೆ ಈಗ ನನ್ನ ಮುಂದೆ ಕುಳಿತಿರುವ ಹಸಿರು ಮನುಷ್ಯನನ್ನು ನೋಡಿ ಯಾರೋ ನನ್ನ ನೆತ್ತಿಯ ಮೇಲೆ ಮಂಜು ಗಡ್ಡೆಯಿರಿಸಿದಂತಾದುದು ನಿಜ.
ಎಂಥ ವಿಚಿತ್ರ! ಹಸಿರು ಮನುಷ್ಯ! ತೀರಾ ತೀರಾ ಅಸಂಭವನೀಯ ವಿಚಾರ! ನಾವು ಇಷ್ಟೊಂದು ಹಸಿರನ್ನು ತಿನ್ನುತ್ತೇವೆ. ಹಸಿರಿಲ್ಲವೆಂದಾದರೆ ನಮಗೆ ಉಸಿರೇ ಇಲ್ಲ. ನಾವು ಎಲ್ಲಾ ಬಣ್ಣದವರಿದ್ದೇವೆ. ಬಿಳಿ, ಹಳದಿ, ಬೂದು, ಕಪ್ಪು, ಕೆಂಪು. ಆದರೆ ಹಸಿರಿಲ್ಲ. ಇಷ್ಟು ಹಸಿರು ತಿಂದರೂ ನಾವು ಹಸಿರಾಗಲಾರೆವು. ಇವನು ಹಸಿರು ಹೇಗಾದ?
ನಿನ್ನ ಯೋಚನೆಗಳನ್ನು ನಾನು ಕಂಡುಕೊಂಡೆ ಎಂಬಂತೆ ಅವನು ನಕ್ಕ. ಹಲ್ಲುಗಳು ಬೆಳ್ಳಗೆ, ನಕ್ಷತ್ರಗಳಂತೆ ಫಳಕ್ ಎಂದುವು. ನಾಲಿಗೆ ತುದಿ ಕೂಡಾ ಕೆಂಪಾಗಿದೆ. ಮನುಷ್ಯನ ಆಕಾರವಿದೆ. ಮನುಷ್ಯನಂತೆ ನಗುತ್ತಾನೆ.
ಆದರೆ ಶಬ್ದವಿಲ್ಲದೆಯೇ ಶಬ್ದವಿದೆ ಅನಿಸುವ ಆ ನಗು! ಮತ್ತು ಆ ಅಂಸಂಭವ್ಯ ವರ್ಣ!
ಅವನು ನಕ್ಕುದರಿಂದ ಅವನ ಬಣ್ಣದ ಬಗ್ಗೆ ನಾನು ಚಿಂತಿಸುವುದನ್ನು ನಿಲ್ಲಿಸಿದೆ. ಮೈಯ ಬಣ್ಣ ಏನೇ ಇರಲಿ. ನಗುವಿಗೆ ಒಂದೇ ಬಣ್ಣ, ಬೆಳ್ಳಗೆ, ಸತ್ಯದಂತೆ, ಬೆಳ್ಳಗೆ.
ಅವನು ತಟ್ಟನೆ ಕೇಳಿದ, "ಜೀವಿಸುವುದರ ಉದ್ದೇಶ ಏನೆಂದುಕೊಂಡಿರುವೆ?
ಮನುಷ್ಯ ಪ್ರಶ್ನೆ! ಪ್ರೇತವೇ ಇರಬಹುದು. ಭೂತವೇ ಇರಬಹುದು. ಆದರೆ ಪ್ರಶ್ನೆ ಮನುಷ್ಯನದು, ಮಾತ್ರವಲ್ಲ, ಹೊಸ ಪ್ರಶ್ನೆ ಕೂಡಾ ಅಲ್ಲ. ಧೈರ್ಯ ಬಂತು ನನಗೆ. ನಾನು ಮಾತಾಡಲು ನಿರ್ಧರಿಸಿದೆ. ಆದರೆ ಮಾತು ಹೊರಡಲಿಲ್ಲ. ನನ್ನನ್ನೇ ನಾನು ಹುರಿದುಂಬಿಸಲಿಕ್ಕೋಸ್ಕರ ಮುಗುಳ್ನಕ್ಕ.
ನಗಬೇಡ ಉತ್ತರಿಸು
ಅದು ಆಜ್ಞೆಯಂತಿತ್ತು. ಸ್ವರ ಕಠಿಣವಾಗಿತ್ತು. ತೀಕ್ಷ್ಣವಾಗಿತ್ತು ಅದು ನಿಂತಾಗ, ಅದು ಕೇಳಿಸಿದ್ದರ ಬಗ್ಗೆ ಸಂದೇಹವುಂಟಾಯಿತು. ಶಬ್ದವಿರಲಿ, ಇಲ್ಲದಿರಲಿ ಮಾತು ಕೇಳಿಸಿದ್ದಂತೂ ಖಂಡಿತ ಅನಿಸಿತು.
ನನ್ನ ಎಲ್ಲಾ ಸಂದೇಹಗಳನ್ನು ತೊಡೆದುಹಾಕಲೋಸುಗವೆಂಬಂತೆ ಅವನು ಮರಳಿ ಕೇಳಿದ ಹೇಳು, ಬದುಕಿನ ಉದ್ದೇಶ ಏನು?
ನನಗೆ ತಿಳಿಯದು
ನಾನೆಂದೆ.
ಅವನು ಗಹಗಹಿಸಿ ನಕ್ಕ. ನಿಶ್ಯಬ್ದವಾಗಿ. ಮತ್ತು ಹೇಳಿದ, ಆದ್ದರಿಂದಲೇ ನೀನು ಬದುಕಿರುವೆ
ಪ್ರತಿಭಟಿಸಬೇಕೆನಿಸಿತು ನನಗೆ. ಆದರೆ ಹೇಗೆಂದು ತಿಳಿಯಲಿಲ್ಲ. ‘ಬದುಕಿನ ಉದ್ದೇಶವೇನೆಂದು ಅರಿಯದಿರುವ ಕಾರಣದಿಂದಲೇ ಬದುಕಿರುವೆ’ ಎಂಬ ಅವನ ತರ್ಕ ಎಷ್ಟು ಸಮಂಜಸ? ಬದುಕಿನ ಉದ್ದೇಶವೇನೆಂದು ಅರಿಯದಿರುವ ಕಾರಣದಿಂದ ಕೊಂದು ಕೊಂಡವರಿಲ್ಲವೆÉ? ಅಲ್ಲ
ನಾನೆಂದೆ.
ಮತ್ತೆ?
ಅವನ ದಟ್ಟನೆಯ ಹಸಿರು ಹುಬ್ಬುಗಳು ಮೇಲಕ್ಕೆ ಹೋದುವು.
"ಸುಮ್ಮನೆ ಬದುಕಿದ್ದೇನೆ. ಹುಲ್ಲು ಬದುಕಿರುವಂತೆ. ಕಲ್ಲು ಬದುಕಿರುವಂತೆ. ಯಾವುದೋ ಮೃಗದಂತೆ. ಯಾವುದೋ ಪಕ್ಷಿ, ಪತಂಗ, ಅಣು, ರೇಣು, ಈ ಮಣ್ಣು, ಈ ಭೂಮಿ, ಈ ಆಕಾಶದಂತೆ. ಬದುಕಿದ್ದೇನೆ ಎನ್ನುವುದಕ್ಕಿಂತಲೂ ಸುಮ್ಮನೆ ಇದ್ದೇನೆ ಎನ್ನುವುದು ಹೆಚ್ಚು ಸಮಂಜಸ.
ಹೂಂ ಹೂಂ ತಿಳಿಯಿತು. ಎಲ್ಲಾ ಇದೆ. ನೀನೂ ಇರುವೆ. ನೀನು ಇರುವುದರಿಂದ ಇದೆಲ್ಲಾ ನಿನಗೆ ಇದೆ. ನೀನು ಇಲ್ಲದಿದ್ದರೆ ಇದೆಲ್ಲ ನಿನಗೆ ಇಲ್ಲ. ಇದು ನಿನ್ನ ದೃಷ್ಟಿ ಅದರ ದೃಷ್ಟಿಯಿಂದ ನೋಡು. ಅದಕ್ಕೆ ನೀನು ಇದ್ದರೂ ಇರುವಿ. ಇಲ್ಲದಿದ್ದರೂ ಇರುವಿ.
ಅವನ ಹಲ್ಲುಗಳು ಮತ್ತೊಮ್ಮೆ ಫಳಕ್ಕೆಂದುವು.
ಅದು ಎಂದರೆ ಏನು?
ನಾನು ಕೇಳಿದೆ.
ನಿನ್ನ ಹೊರತಾಗಿ ಉಳಿದುದೆಲ್ಲ
ನಾನೂ ಅದರ ಒಂದು ಭಾಗವಲ್ಲವೆ?
ಹೌದು, ಒಂದು ಭಾಗ. ಆದರೆ ಅದಲ್ಲ, ಒಂದು ಭಾಗ, ಒಂದು ಅಣು. ನೀನು ‘ಇದ್ದೇನೆ’ ಎನ್ನುವುದು ‘ಇಲ್ಲ’ ಎಂದು ಪರಿಭಾವಿಸುವುದು ನೀನು ‘ಬದುಕು’ ಎಂದು ಯಾವುದನ್ನು ಕರೆಯುತ್ತೀಯೊ ಅದಕ್ಕೆ ಸಂಬಂಧಿಸಿದ ವಿಚಾರ. ‘ಇದ್ದೇನೆ’ ಎನ್ನ ಬಲ್ಲೆ ನೀನು. ‘ಇಲ್ಲ’ ಎನ್ನಲಾರೆ. ಅದನ್ನು ಇತರ ಬದುಕುಗಳು ಹೇಳಬೇಕು. ಆದ್ದರಿಂದ ಇದೆಯೆನ್ನುವುದೂ ಸಮರ್ಪಕವಲ್ಲ. ಇಲ್ಲವೆನ್ನುವುದೂ ಸಮರ್ಪಕವಲ್ಲ."
ಹಾಗಾದರೆ ಎನೆನ್ನಬೇಕು?
ಗೊಂದಲದಲ್ಲಿ ಕೇಳಿದೆ.
ಯಾವುದಕ್ಕೆ?
ಅವನು ನಕ್ಕ.
ಹೌದು, ಯಾವುದಕ್ಕೆ? ‘ಇದೆ’ ಗೆ? ‘ಇಲ್ಲ’ ಕೈ? ಉಹುಂ. ಯಾವುದಕ್ಕೆ? ಒಂದೂ ಹೊಳೆಯಲಿಲ್ಲ. ಗಲಿಬಿಲಿಗೊಂಡೆ. ಅದರಿಂದ ಹೊರಬರಲು ಚಡಪಡಿಸುತ್ತಾ ಹೇಳಿದೆ ಬದುಕಿಗೆ.
ಏನೂ ಹೇಳಬೇಡ. ಸುಮ್ಮನೆ ಇರು.
ಅದನ್ನೇ ನಾನು ಹೇಳಿದ್ದು. ಸುಮ್ಮನೆ ಇದ್ದೇನೆ ಅಂತ;
ಆತ್ಮವಿಶ್ವಾಸ ಮರಳಿಬಂತು. ಧೈರ್ಯ ಕೂಡಿಕೊಂಡಿತು.
ಸರಿ ಸರಿ. ನೀನು ಮಾಡುತ್ತಿರುವುದೇನು?
ಬರೆಯುವುದು
ಯಾಕೆ?
ಇದು ಕೂಡಾ ಬದುಕು. ಯಾಕೆ ಎಂಬ ಪ್ರಶ್ನೆ ಅಸಂಗತ
ನನ್ನಲ್ಲಿ ಧೈರ್ಯದ ಮೊತ್ತ ಅಧಿಕವಾಯಿತು.
ಅಹ, ಚೆನ್ನಾಗಿದೆ ಇದೂ ಕೂಡಾ ಬದುಕು! ಯಾಕೆ ಈ ಬಗೆಯಾಗಿಸಿಕೊಂಡೆ ಬದುಕನ್ನು?
ನೀನು ಮೊತ್ತಮೊದಲು ಕೇಳಿದ ಪ್ರಶ್ನೆಯಿದೆಯಲ್ಲ ‘ಜೀವಿಸುವ ಉದ್ದೇಶ ಏನು’ ಅಂತ? ಎಲ್ಲರೂ ಆ ಪ್ರಶ್ನೆಯನ್ನು ಕೇಳುವಂತೆ ಮಾಡಬೇಕೆಂದು
ಯಾಕೆ?
ನಾನು ಮಾಡುವುದುರ ಉದ್ದೇಶ ಏನು? ನಾನು ಬದುಕಿರುವುದು ಯಾಕೆ?
ಮುಂತಾದ ಪ್ರಶ್ನೆಗಳು ಯಾವಾಗೆಲ್ಲ ಮನುಷ್ಯನ ಮನಸ್ಸಿನಲ್ಲಿ ಏಳುತ್ತವೆಯೊ ಆಗ ಅವರು ಮನುಷ್ಯನಾಗಿರ್ತಾನೆ"
ಅದು ಸರಿ. ಆದರೆ ಮನುಷ್ಯ ಯಾಕೆ ನೀನು ಹೇಳುವ ಬಗೆಯ ಮನುಷ್ಯನಾಗಿರ್ಬೇಕು?
ಬದುಕಲು, ಎಲ್ಲಾ ಮನುಷ್ಯರಂತೆ ಬದುಕಲು ಬರೀ ಬದುಕುವಿಕೆ ಅಥವಾ ಇರುವಿಕೆಗಾಗಿಯಲ್ಲ. ಸಂತೋಷವಾಗಿ ಬದುಕಲು, ಸಂತೋಷವಾಗಿ ಇರಲು.
ಸಂತೋಷ ಅಂದರೆ ಏನು? ಅದರ ಅನುಭವ ಆಗುವುದು ಎಲ್ಲಿ?
ಸಂತೋಷ ಅಂದರೆ ಇರುವಿಕೆ. ಅದರ ಅನುಭವ ಇರುವಿಕೆಯಲ್ಲಿ. ನಾನು ಇದ್ದೇನೆ ಎಂಬ ಸತ್ಯ ನನ್ನ ಸಂತೋಷವಾಗಿರುವಿಕೆಯಲ್ಲಿ ಇದೆ. ಸಂತೋಷವೆಂಬುದಿಲ್ಲವಾದರೆ ನನ್ನ ಇರುವಿಕೆಯು ಇರುವಿಕೆಯಲ್ಲ. ಇರಬೇಕೆನಿಸುವುದು ಸಂತೋಷವಿದ್ದರೆ ಮಾತ್ರ. ಅದೇ ಬದುಕು. ಅದಿಲ್ಲದಿರುವುದೇ ಸಾವು.
ಸಾವನ್ನು ದುಃಖವೆಂದು ಕರೆಯುತ್ತೀಯ ನೀನು?
ಇಲ್ಲ. ದುಃಖವನ್ನು ಸಾವೆಂದು ಕರೆಯುತ್ತೇನೆ. ನಿಜವಾದ, ಅಂದರ ಭೌತಿಕವಾದ ದೇಹದ, ಸಾವನ್ನ ನಿರ್ಧೇಹಿಯಾಗುವಿಕೆ ಎಂದು ಕರೆಯುತ್ತೇನೆ. ನಾನು ಬದುಕಿನ ಆದಿ ಮತ್ತು ಅಂತ್ಯದ ನಡುವೆ ಮನುಷ್ಯನಿಗೆ ಸಂಭವಿಸುವ ದುಃಖಗಳು ಅರ್ಥಾತ್ ಸಾವುಗಳ ಬಗ್ಗೆ ಹೇಳಿದೆ. ಈ ಸಾವುಗಳನ್ನು ಇಲ್ಲವಾಗಿಸಬೇಕು. ಬದುಕು ಸಂತೋಷದಿಂದ ಮಾತ್ರ ತುಂಬಿರಬೇಕು. ಇರುವಿಕೆಯೆಂದರೆ ಸಂತೋಷ. ಸಂತೋಷವೆಂದರೆ ಇರುವಿಕೆ ಆಗಬೇಕು.
ಹೇಗೆ?
"ಎಲ್ಲಾ ಬಗೆಯ ನರಳಿಕೆ ಇಲ್ಲವಾಗಬೇಕು. ಎಲ್ಲಾ ಬಗೆಯ ಇಂಧನ ಇಲ್ಲವಾಗಬೇಕು. ನಿರ್ದೇಹಿಯಾಗುವಿಕೆ ಒಂದು ನಿಸರ್ಗ ಸಹಜ ಸಂಗತಿಯಾಗಿರುವುದರಿಂದ ಅದು ಕೂಡಾ ದುಃಖಮಯವಾಗಿರಕೂಡದು. ಒಪ್ಪಿಕೊಳ್ಳುವಂತಿರಬೇಕು.
ನಿನ್ನ ಬರವಣಿಗೆಯಿಂದ ಇದೆಲ್ಲ ಸಾಧ್ಯವಾಗುತ್ತದೆಯೆ?
ಆತ ನಕ್ಕ. ಹಲ್ಲುಗಳ ಬಿಳುಪು ಕಣ್ಣು ಕೋರೈಸುವಂತಿತ್ತು.
ಇದೊಂದರಿಂದಲೇ ಎಲ್ಲ ಸಾಧ್ಯವಾಗದು. ಸಾಧ್ಯವಾಗಿರುವ ಸಾಧನಗಳಲ್ಲಿ ಇದೂ ಒಂದು.
ಇರಲಿ. ಇದರಿಂದ ನೀನಾದರೂ ಸಂತೋಷವಾಗಿದ್ದೀಯ?
ಹೌದು.
ಇದೊಂದರಿಂದ ಮಾತ್ರವೇ ಇಷ್ಟು ಸಂತೋಷವಾಗಿರಲು ಸಾಧ್ಯ ಅಂತೀಯ?
ಇಲ್ಲ. ಹಾಗೇನಿಲ್ಲ ಸಂತೋಷದಾಯಕವಾದ ಯಾವ ಕ್ರಿಯೆಯಿಂದಲೂ ಸಂತೋಷವಾಗಿರಬಹುದು. ಇನ್ನೊಂದು ಬದುಕಿನ ಸಂತೋಷವನ್ನು ಕಸಿಯುವುದರ ಹೊರತು ಏನೇ ಮಾಡುವುದರಲ್ಲೂ ಸಂತೋಷ ಸಿಗಬಹುದು. ಸಂತೋಷ ಸುಳ್ಳು ಹೇಳಿ, ಕಸಿದು, ಕೊಳ್ಳೆ ಹೊಡೆದು, ಕೊಲೆಗೈದು ಸಂಪಾದಿಸಲಾಗುವಂಥದಲ್ಲ. ನಾನು ಪಡುತ್ತಿರುವ ಸಂತೋಷ ಇನ್ನೊಬ್ಬನ ದುಃಖದ ಮೇಲೆ ಹುಟ್ಟಿದಂಥದ್ದಾದರೆ ಅದು ಸಂತೋಷವಲ್ಲ. ಸಂತೋಷ ಕೊಡುವುದರಲ್ಲಿ ಸಿಗುವಂಥದು. ಹೆಚ್ಚು ಹೆಚ್ಚು ಕೊಟ್ಟಷ್ಟೂ ಹೆಚ್ಚು ಹೆಚ್ಚು ಸಿಗುವಂಥದು. ಈ ಸಂತೋಷ ಏನು ಎಂಥದು ಎಂದು ಅರ್ಥ ಮಾಡಿಕೊಳ್ಳಲು, ಅನುಭವಿಸಲು.....
ತಿಳಿಯಿತು, ತಿಳಿಯಿತು. ಮನುಷ್ಯ ಆ ಪ್ರಶ್ನೆಯನ್ನು, ‘ಜೀವಿಸುವ ಉದ್ದೇಶ ಏನು’ ಎಂಬ ಪ್ರಶ್ನೆಯನ್ನು ಕೇಳಬೇಕು.
ಹೌದು, ಆ ಪ್ರಶ್ನೆ ಪ್ರತಿಯೊಂದು ಬದುಕಿನಲ್ಲೂ ಹುಟ್ಟಬೇಕು.
ಅದು ಈ ಕಾಗದ ಮತ್ತು ಲೇಖನಿಯಿಂದ ಮಾತ್ರ ಸಾಧ್ಯ ಎಂದು ನಂಬಿರುವೆ ನೀನು!
ನೀರವವಾದ ನಗು.
ಅಲ್ಲ. ಬೇರೆ ರೀತಿಯಿಂದಲೂ ಅದು ಸಾಧ್ಯವಿರಬಹುದು. ಆದರೆ ಅದನ್ನೆಲ್ಲ ತಿಳಿದುಕೊಳ್ಳುವಂಥ ದಿವ್ಯಜ್ಞಾನ ನನಗಿಲ್ಲ. ಬುದ್ಧನಿಂದ ವಿವೇಕಾನಂದರವರೆಗೆ, ರಾಮಾಯಣದ ರಾಮನಿಂದ ಕಾರ್ಲ್ ಮಾಕ್ರ್ಸ್ವರೆಗೆ. ಮಹಾಭಾರತದ ಅರ್ಜುನನಿಂದ ಅಬ್ರಹಾಮ್ ಲಿಂಕನ್ವರೆಗೆ ಬಹಳ ಮಂದಿ ಅದನ್ನು ಮಾಡಿದ್ದಾರೆ. ಒಬ್ಬ ಪ್ರಾಮಾಣಿಕ ತಹಸೀಲ್ದಾರನೂ ಅದನ್ನು ಮಾಡಬಹುದು. ನಾನು ನಂಬಿರುವುದು ಈ ಕೆಲಸದಿಂದಲೂ ಅದು ಸಾಧ್ಯ ಅಂತ.
ಹಾಗಾದರೆ ನಿನಗೆ ಧರ್ಮ ದೇವರು ಇತ್ಯಾದಿ ಇಲ್ಲವೆ?
ಧರ್ಮವೆಂಬುದು ನೂರಾರು ಪೂರ್ವಾಗ್ರಹಗಳ ಒಂದು ಕಗ್ಗಂಟು ತಾನೆ? ಇಲ್ಲ. ಅದು ನನಗಿಲ್ಲ. ದೇವರು ಯಾರು? ಯಾವುದು ದೇವರು?
ಎಲ್ಲವನ್ನು ಸೃಷ್ಟಿಸಿದವನು. ಎಲ್ಲದರ ಹಿಂದಿರುವ ಶಕ್ತಿ.
ಸರಿ. ಅವನ ಬಗ್ಗೆ ಏನು ನಂಬಿಕೊಳ್ಳಬೇಕು ನಾನು? ಅವನು ಈ ಸೂರ್ಯನನ್ನು ನಿರ್ಮಿಸಿದ. ಈ ಭೂಮಿಯನ್ನು ನಿರ್ಮಿಸಿದ ಈ ಮನುಷ್ಯನನ್ನು ನಿರ್ಮಿಸಿದ ಅಂತಲೆ? ನಾನದನ್ನ ನಂಬಿದರೇನು, ಬಿಟ್ಟರೇನು? ಸೂರ್ಯನಂಥ ಸುಮಾರು ನೂರು ಬಿಲಿಯ ನಕ್ಷತ್ರಗಳಿರುವ ನಮ್ಮ ಈ ಗ್ಯಾಲಕ್ಸಿಯನ್ನು ಅವನು ಸುಮಾರು ಐದು ಸಾವಿರ ಮಿಲಿಯ ವರ್ಷಗಳ ಹಿಂದೆ ನಿರ್ಮಿಸಿದ ಎಂದರೆ ಸರಿಯೆ? ಹಾಗಾದರೆ ಅವನು ಇತರ ಗ್ಯಾಲಕ್ಸಿಗಳನ್ನು. ಅಸಂಖ್ಯ ಗ್ಯಾಲಕ್ಸಿಗಳನ್ನು ಅದರ ಹಿಂದೆಯೂ ಸೃಷ್ಟಿಸಿರಬೇಕಲ್ಲವೆ? ಅದರ ಮೊದಲು ಏನು ಮಾಡಿದ? ಅದಕ್ಕೆ ಮೊದಲು ಏನು ಮಾಡಿದ?..... ಹೀಗೆ ಅನಂತವಾಗುತ್ತಾ ಹೋಗುವ ಪ್ರಶ್ನೆಯ ಸರಣಿಗೆ ಧರ್ಮದಲ್ಲಿ ಉತ್ತರವಿದೆಯೆ? ಆ ದೇವರ ಸೃಷ್ಟಿ ಹೇಗಾಯ್ತು, ಅದಕ್ಕೆ ಮೊದಲು ಏನಿತ್ತು ಎಂವುದಕ್ಕೆ ಉತ್ತರವಿದೆಯೆ? ನಮ್ಮ ಈ ಗ್ಯಾಲಕ್ಸಿಯನ್ನು ಅಥವಾ ನಮ್ಮ ಈ ಭೂಗ್ರಹವನ್ನು ಮಾಡಿಯಾದ ಮೇಲೆ ದೇವರು ಸೃಷ್ಟಿ ಕಾರ್ಯವನ್ನು ನಿಲ್ಲಿಸಿದನೆ? ಮುಂದುವರಿಸಿದನೆ? ಈಗ ಅವನು ಏನು ಮಾಡುತ್ತಿದ್ದಾನೆ? ಈಯೆಲ್ಲ ಪ್ರಶ್ನೆಗೆ ಉತ್ತರಗಳಿಲ್ಲದಿರುವುದರಿಂದ ನಂಬುವುದೂ ಒಂದೇ, ನಂಬದಿರುವುದೂ ಒಂದೇ.
ದೇವರನ್ನು ಕಂಡೆವೆಂದವರು, ದೇವರ ಮಾತುಗಳನ್ನು ಕೇಳಿದೆವೆಂದವರು ಸುಳ್ಳರು ಎನ್ನುತ್ತೀಯ?
ಹಾಗೆ ಹೇಳುವುದು ಬಹಳ ಸುಲಭ, ಯಾರೂ ಅದನ್ನು ಹೇಳಬಹುದು. ಈಗಲೂ ಹಾಗೆ ಹೇಳುವವರು ಜಗತ್ತಿನುದ್ದಗಲಕ್ಕೆ ಸಾವಿರಾರು ಮಂದಿ ಇದ್ದಾರೆ. ಅಷ್ಟೇ ಏಕೆ, ‘ನಾನೇ ದೇವರು’ ಎನ್ನುವವರೂ ಇದ್ದಾರೆ. ಭ್ರಮಾಧೀನವಾದ ಮನುಷ್ಯ ಏನನ್ನೂ ಹೇಳಬಹುದು. ನಾನು ಮಾಡುತ್ತೇನೆ ಎಂಬುದನ್ನೇ ನನ್ನ ಮೂಲಕ ದೇವರು ಮಾಡುತ್ತಾನೆ ಎನ್ನಲೇನಡ್ಡಿ? ಇದು ನನ್ನ ಮಾತು ಎನ್ನುವ ಬದಲು ಇದು ದೇವರ ಮಾತು ಎನ್ನಲೇನಡ್ಡಿ? ಯೇಸು ಮಹಮ್ಮದರಂಥ ಮೇಧಾವಿಗಳು ಮಹಾಬುದ್ಧಿವಂತರು ಹೀಗೆ ಹೇಳಿದಾಗ ಒಂದು ಹೊಸ ಪಂಥ ಹುಟ್ಟಿಕೊಳ್ಳುತ್ತದೆ. ಒಬ್ಬ ಹೆಡ್ಡ ಮೂರ್ಖ ಹೀಗೆ ಹೇಳಿದರೆ ಹೊಡೆತ ತಿನ್ನುತ್ತಾನೆ.
ಹಾಗಾದರೆ ದೇವರು ತನ್ನ ಇರುವಿಕೆಯನ್ನು ಮನುಷ್ಯರ ಮೂಲಕ ಪ್ರಕಟಪಡಿಸಿಕೊಳ್ಳುವುದಿಲ್ಲ ಎನ್ನಬಹುದು. ಆದರೆ ಅಂಥ ಒಂದು ಮಹಾಶಕ್ತಿ ಇರಲೇಬೇಕಲ್ಲ?
ನಿಜ ಮಹಾಶಕ್ತಿ ಇದೆ. ಎಲ್ಲದರಿಂದ ಬೇರೆಯಾಗಿ, ಎಲ್ಲವನ್ನೂ ನಿರ್ಮಿಸಿದ ಹೊರಗಿನ ಶಕ್ತಿಯಾಗಿ ಅಲ್ಲ. ಎಲ್ಲದರೊಳಗಿರುವುದೇ ಆಗಿ, ಅದನ್ನು ಇದೆ ಎಂದು ಘೋಷಿಸಬೇಕಾದ್ದೇ ಇಲ್ಲ. ಎಲ್ಲದರೊಳಗೂ ಅದು ಇದೆ. ಎಲ್ಲವೂ ಅದೇ ಆಗಿದೆ. ಆದರೆ ಮನುಷ್ಯ ಅದಕ್ಕೆ ಮನುಷ್ಯ ರೂಪ ಕೊಟ್ಟದ್ದು. ಅದಕ್ಕೆ ಲಿಂಗಕೊಟ್ಟದ್ದು, ಗುಣಗಳನ್ನು ತಿಂಬಿದ್ದು ಎಲ್ಲಾ ಪ್ಯೂರ್ ಪಿಕ್ಶನ್! ಭ್ರಮೆ, ಸ್ವಾರ್ಥ ಅಥವಾ ಶುದ್ದ ಹುಂಬತನ! ಆದಿ ಅಂತ್ಯ ಎಂಬುದಿಲ್ಲದ ಅದನ್ನು ಹೇಗೆ ಪೂಜಾವಿಧಿಗಳಿಂದ ಬಂಧಿಸಿದ? ಹೇಗೆ ಆರಾಧನೆಗೆ ಸ್ತುತಿಗೆ ಸ್ತೋತ್ರಕ್ಕೆ ಅಧೀನವಾಗಿಸಿದ? ಅಂಥ ಕ್ರಮಗಳಿಂದ ಅದಕ್ಕೆ ಖುಷಿಯಾಗುತ್ತದೆ ಎಂದು ನಂಬಿ ಅವುಗಳ ಒಟ್ಟು ಮೊತ್ತಕ್ಕೆ ಧರ್ಮ ಎಂದು ಕರೆದ. ಅದರ ಆಧಾರದಲ್ಲಿ ಧರ್ಮ ಅಧರ್ಮ ಎಂಬ ವಿಂಗಡನೆ ಮಾಡಿದ. ಈ ಭೂಗ್ರಹದ ಒಂದು ಭಾಗದಲ್ಲಿ ಯಾವುದು ಧರ್ಮವೊ ಅದು ಇನ್ನೊಂದು ಭಾಗದಲ್ಲಿ ಅಧರ್ಮವೆನಿಸಲ್ಪಡುತ್ತದೆ. ಒಂದು ಭಾಗದಲ್ಲಿ ಯಾವುದು ಅಧರ್ಮವೊ ಅದು ಇನ್ನೊಂದು ಭಾಗದಲ್ಲಿ ಧರ್ಮವೆನಿಸಲ್ಪಡುತ್ತದೆ. ಒಂದೇ ದೇವರ ಮಾತಿನಿಂದ ಹುಟ್ಟಿದ ಧರ್ಮದೊಳಗೂ ನೂರಾರು ಗುಂಪುಗಳಾಗಿವೆ. ಅವರ ನಡುವೆ ಘರ್ಷಣೆ, ಕಲಹ, ರಕ್ತಪಾತ ನಡೆಯುತ್ತದೆ. ಆದರೂ ದೇವರು ದಯಾಮಯ, ಕರುಣಾಕರ, ಜಗದ್ರಕ್ಷಕ ಎಂದು ಹೇಳಲಾಗುತ್ತದೆ. ಹಾಗೆಂದು ನಂಬಲು ಒತ್ತಾಯ ಹೇರಲಾಗುತ್ತದೆ. ಎಲ್ಲದಕ್ಕೂ ‘ಮೂರ್ಖ ಬುದ್ಧಿವಂತ’ ವಿವರಗಳನ್ನು ನೀಡಲಾಗುತ್ತದೆ. ಸೃಷ್ಟಿಸಿದವನು ಈ ಜಗದ್ರಕ್ಷಕನೂ, ದಯಾಮಯನೂ, ಸರ್ವಗುಣ ಸಂಪನ್ನನೂ ಆದ ಒಬ್ಬ ದೇವರು ಹೌದೆಂದಾರೆ ಎಲ್ಲಾ ‘ಸರಿ’ಯಿರುವಂತೆಯೇ ಸೃಷ್ಟಿಸಬಹುದಿತ್ತು. ಆಮೇಲೆ ಆವತಾರಗಳ ಮೂಲಕ, ಸಂತರ ಮೂಲಕ, ಸಂದೇಶಗಳ ಮೂಲಕ ‘ಸರಿ’ ಮಾಡಬೇಕಾಗಿರಲಿಲ್ಲ. ಮಾಡಿದ್ದೆಲ್ಲ ಅವನೇ ಎಂದಾದರೆ ಸನ್ಮಾನಿಸುವುದೂ ಅರ್ಥಹೀನ, ಶಿಕ್ಷಿಸುವುದೂ ಅರ್ಥಹೀನ. ಇದೆಲ್ಲ ದೇವರ ಇಚ್ಛೆ, ಅವನು ಬಯಸಿದ್ದೇ ಹೀಗೆ. ಎಲ್ಲವೂ ಅವನ ಪ್ರೋಗ್ರಾಮಿನಂತೆಯೇ ಎಂದು ಬುದ್ಧಿವಂತ ಮೂರ್ಖರು ಮತ್ತು ಮೂರ್ಖ ಬುದ್ಧಿವಂತರು ಬುರುಡೆ ಬಿಡುವುದು ಅವರೇ ಕಂಡುಕೊಂಡ ಸ್ವಂತ ಸತ್ಯ. ಒಂದು ವೇಖೆ ಈ ದುಃಖ, ಸಾವು ನೋವು ಮನುಷ್ಯಾನುಭವಕ್ಕೆ ಮಾತ್ರ, ಇದೆಲ್ಲ ಮಾಯೆ. ದೇವರಿಗೆ ಇಎಲ್ಲ ಏನೂ ಅಲ್ಲ ಎಂದಾದರೆ ಅವತಾರ ಏಕೆ, ಸಂದೇಶ ಏಕೆ? ರಕ್ಷೇಗೇನರ್ಥ, ಶಿಕ್ಷೆಗೇನರ್ಥ? ತಾನೇ ಗಿಡವನ್ನು ತಲೆಕೆಳಗಾಗಿ ನೆಟ್ಟು ಅದು ಬದುಕಲಿಲ್ಲವೆಂದು ಅದನ್ನು ದೂರಿದಂತೆ ಅಥವಾ ತನಗೇತಾನೇ ಹೊಡೆದುಕೊಂಡಂತೆ! ಒಟ್ಟಿನಲ್ಲಿ ‘ನಂಬುವವರು’ ದೇವರು ಎಂದು ಏನನ್ನು ಸೃಷ್ಟಿಸಿದ್ದಾರೊ ಅದರ ಬಗ್ಗೆ ಇಷ್ಟು ಹೇಳಬಹುದು. ಅದು ಮನುಷ್ಯನ ಪ್ರತಿರೂಪವಾಗಿದ್ದು. ಅವನ ಸುಗುಣಗಳು ದುರ್ಗುಣಗಳು ಎಲ್ಲಾ ಅದಕ್ಕಿದೆ. ಅದಕ್ಕೆ ಹಸಿವಿದೆ, ಕಾಮವಿದೆ, ಸ್ವಾರ್ಥವಿದೆ. ಅದು ಪ್ರೀತಿಸುತ್ತದೆ, ದ್ವೇಷಿಸುತ್ತದೆ. ಅದಕ್ಕೂ ಮನೆ ಬೇಕು, ಆರಾಮಬೇಕು. ಅದು ಮನುಷ್ಯನಂತೆಯೇ ಸ್ತುತಿ ಸನ್ಮಾನಗಳಿಗೆ ಮಣಿಯುತ್ತದೆ, ನಿಂದೆ ಅವಮಾನಗಳಿಗೆ ರೇಗುತ್ತದೆ, ಅದು ‘ನಂಬಿದವರನ್ನು’ ಅನುಗ್ರಹಿಸುತ್ತದೆ, ‘ನಂಬದವರನ್ನು’ ನಿಗ್ರಹಿಸುತ್ತದೆ. ವಾಸ್ತವದಲ್ಲಿ ಈ ವಿಶಿಷ್ಟ ಭ್ರಮಾಸೃಷ್ಟಿ ಮನುಷ್ಯನೇ ಆಗಿದೆ. ಅದನ್ನು ನಂಬುವುದರಿಂದ, ಪೂಜಿಸುವುದರಿಂದ ಮನುಷ್ಯ ಇರುವಂತೆ ಇರುತ್ತಾನೆ. ಅಂದರೆ, ತನ್ನ ಇರುವಿಕೆಯ ಸಾಂಕೇತಿಕ ರೂಪವನ್ನೇ ಅವನು ಪೂಜಿಸುವುದು! ಇದರ ಮೂಲಕ, ಈ ಪೂಜೆ-ಜಾತ್ರೆಯ ಮೂಲಕ ದುಃಖಗಳನ್ನು, ಬದುಕಿನೊಳಗಿನ ಸಾವುಗಳನ್ನು ಗೆಲ್ಲಲಾಗುವುದಿಲ್ಲ. ಸಂತೋಷವಾಗಿರಲಾಗುವುದಿಲ್ಲ. ಸಂತೋಷವಾಗಿರಬೇಕಾದರೆ ಋಣಾತ್ಮಕವಾದುದನ್ನೆಲ್ಲ ಬಿಟ್ಟು ಧನಾತ್ಮಕವಾದುದನ್ನು ಮಾತ್ರ ‘ಕ್ರಿಯಾಪೂಜೆ’ಗೊಳಗಾಗಿಸಬೇಕು.
ದೇವರು ಎಂಬ ಶಬ್ದವನ್ನು ಉಪುಯೋಗಿಸುವುದಕ್ಕೆ ನಿನ್ನ ಆಕ್ಷೇಪವೆ?
ಹಾಗೇನಿಲ್ಲ. ಉಪಯೋಗಿಸದಿರಲಾಗುವುದಿಲ್ಲವೆಂದಾದರೆ ಧನಾತ್ಮಕವಾದ ಕ್ರಿಯೆಯನ್ನು ದೇವರೆಂದು ಕರೆಯಬಹುದು. ಆ ಕ್ರಿಯೆಯನ್ನೇ ಪೂಜೆಯೆಂದು ತಿಳಿಯಬಹುದು.
ಸಂಧ್ಯಾವಂದನೆ, ಮಾಸ್, ನಮಾಜು, ಭಜನೆ, ಗ್ರಂಥಪಠನ...
ಪುಟ್ಟಮಗು ಗೊಂಬೆ ತೊಟ್ಟಿಲಿನಲ್ಲಿ ಗೊಂಬೆ ಮಗುವನ್ನಿರಿಸಿ ತೂಗುವುದಷ್ಟೇ ಅರ್ಥಪೂರ್ಣ......
ಪುಟ್ಟ ಮಗುವಿಗೆ ಅದರಂದ ಅಪೂರ್ವ ಸಮಾಧಾನ ಸಿಗುತ್ತದೆ.
ನಿಜ ಮಗುವಿಗೆ. ಪ್ರಬುದ್ಧನಿಗಲ್ಲ.
ಮಕ್ಕಳು ಇದ್ದೇ ಇರುತ್ತಾರೆ
ಅವನು ಕಪ್ಪು ಕಣ್ಮಣಿಗಳನ್ನು ಮಿಟುಕಿಸಿ ನಕ್ಕ,
ನಿಜ. ಗೊಂಬೆಯನ್ನು ಅಥವಾ ತೊಟ್ಟಿಲನ್ನು ಮುಟ್ಟಹೋದರೆ ಅರಚುತ್ತಾರೆ.
ನಾನೂ ನಕ್ಕೆ.
ಮಕ್ಕಳು ಮುಗ್ಧರು, ಅವರು ‘ದೇವರನ್ನು’ ಕಂಡಿರುವುದಿಲ್ಲ. ಅವರು ದೇವರನ್ನು ಸೃಷ್ಟೊಸಿರುವುದೂ ಇಲ್ಲ. ಅವರು ಆಡುವ ಆಟವೇ ಅವರಿಗೆ ‘ದೇವರು’
ಅವನು ಮತ್ತಷ್ಟು ನಕ್ಕ.
ಆದುದರಿಂದ ಏನು ಮಾಡಬೇಕೆನ್ನುತ್ತಿ?
ನಾನು ಕೇಳಿದೆ.
ಗೊಂಬೆಯನ್ನು ಮತ್ತು ತೊಟ್ಟಿಲನ್ನು ಮಕ್ಕಳಿಗೆ ಬಿಡು!
ಧನಾತ್ಮಕ ಕ್ರಿಯೆಯೇ ಗೊಂಬೆ ಮತ್ತು ತೊಟ್ಟಿಲು ಯಾಕಾಗಬಾರದು?
ನಾನು ಗಂಭೀರವಾಗಿ ಕೇಳಿದೆ.
ನಾನು ಮಕ್ಕಳ ವಿಚಾರವಾಗಿ ಹೇಳುತ್ತಿದ್ದೇನೆ. ಅವರಿಗೆ ಗೊಂಬೆ ಮತ್ತು ತೊಟ್ಟಿಲು ಬೇಕು!
ಅವನ ಸ್ವರ ಏರಿತು. ಗಂಭೀರವಾಗಿ ಅನುರಣಿಸಿತು.
ಅದೊಂದು ಜೈವಿಕ ಅಗತ್ಯವೇ ಆಗಿರಬಹುದೆಂದುಕೊಳ್ಳೋಣ. ಆದರೆ ಅದು ಸಂತೋಷವಾದ ಸ್ಪಂದನ, ಧನಾತ್ಮಕ ಅನುರಣನ ಹೌದೆಂದಾದರೆ...
ಆ ಚರ್ಚೆ ಪುನಃ ಬೇಡ. ಗೊಂಬೆಯನ್ನು ಮತ್ತು ತೊಟ್ಟಿಲನ್ನು ಮಕ್ಕಳಿಗೆ ಬಿಡು!
ಅವನು ಆಜ್ಞಾಪಿಸಿದ.
ನಾನೇನೂ ಹೇಳಲಿಲ್ಲ. ನಾನು ಮುಗುಳ್ನಕ್ಕೆ. ಅದು ನನಗೆ ತೀರಾ ಪರಿಚಿತವಾದ ದನಿಯಂತೆ ತೋರಿತು.
ಅವನು ನನ್ನನ್ನೇ ದಿಟ್ಟಿಸುತ್ತಾ ಕುಳಿತಿದ್ದ. ನಾನು ಅವನನ್ನು ದಿಟ್ಟಿಸುತ್ತಿದ್ದೆ. ನೋಡನೋಡುತ್ತಿದ್ದಂತೆಯೇ ಅವನ ಮುಖದ ಬಣ್ಣ ಬದಲಾದಂತೆ ತೋರಿತು. ಕ್ಷಣದಲ್ಲಿ ಅದು ಬಿಳಿ ಹಳದಿ ಬಣ್ಣಕ್ಕೆ ತಿರುಗಿತು. ಅದರ ಮೇಲೆ ಎರಡು ಕಪ್ಪು ಚುಕ್ಕಿಗಳು. ಕಣ್ಣುಗಳು, ಚಂದ್ರನನ್ನು ಹೋಲುವ ಆಕಾರ. ಹಸಿರು ಮರದಲ್ಲಿ ಬಿಳಿ ಹಳದಿ ಹೂ. ಬಿಳಿಹಳದಿ ಬಣ್ಣ ಗಾಢವಾಗುತ್ತಾ ಉರಿಯುವ ಬೆಂಕಿಯಂತೆ ತೋರಿತು. ಕಣ್ಣು ಕೋರೈಸುವ ಬೆಳಕು. ಕಣ್ಣು ತಿಕ್ಕಿಕೊಂಡೆ.
ಕಂದೀಲು ದೊಂದಿಯಂತೆ ಉರಿಯುತ್ತಿದೆ! ಬತ್ತಿಯನ್ನು ಕಿರಿದುಗೊಳಿಸಿದ್ದೆ! ಬೆಳಕು ಹೇಗೆ ಹಿಗ್ಗಿತು? ಎಣ್ಣೆ ಆರುತ್ತಿದೆಯೆ? ಪತಂಗ ಭಿತ್ತೆ? ಹಸಿರು ಮನುಷ್ಯನ ಕೆಲಸವೇ? ಗಾಜಿನ ಬುರುಡೆಯೊಳಗಿಂದ ಬೆಂಕಿಯ ನಾಲಗೆಗಳು ಹೊರ ಚಾಚತೊಡಗಿದವು. ದೀಪವನ್ನು ಕಿರಿದುಗೊಳಿಸಲು ತಿರುಗಣೆಯನ್ನು ತಿರುಗಿಸಿದೆ. ತಿರುಗುತ್ತಿಲ್ಲ. ಕಂದೀಲನ್ನು ಎತ್ತಿ ನೋಡಿದೆ. ಎಣ್ಣೆ ಖಾಲಿಯಾಗಿದೆ. ಓಡಿಹೋಗಿ ಎಣ್ಣೆ ತಂದು ತುಂಬಿದೆ.
ಬೆಳಕು ಶಾಂತವಾಯಿತು. ಬತ್ತಿಯನ್ನು ಅತ್ತಲೂ ತಿರುಗಿಸದೆ ಇತ್ತಲೂ ತಿರುಗಿಸದೆ, ಬೆಳಕು ನಿರುದ್ವಿಗ್ನತೆಯಿಂದ ಉರಿಯತೊಡಗಿತು.
ಮೇಜಿನ ಮೇಲೆ ಕಾಗದ ಮತ್ತು ಲೇಖನಿ ಕಾಣಿಸಿತು.
1
ಮಾನಸಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ, ಭೌತಶಾಸ್ತ್ರದ ಪ್ರಾಧ್ಯಾಪಕನಾಗಿರುವ ಡಾಕ್ಟರ್ ಗಿರಿಧರನಿಗೆ ಭೌತಶಾಸ್ತ್ರದಲ್ಲಿ ಮಾತ್ರವಲ್ಲ, ಜೀವವಿಜ್ಞಾನ ಮತ್ತು ರಸಾಯನಶಾಸ್ತ್ರಗಳಲ್ಲಿ ಕೂಡ ಅದ್ಭುತವಾದ ಪಾಂಡಿತ್ಯವಿದೆ. ಈ ಮೂರು ವಿಜ್ಞಾನಗಳಲ್ಲಿ ಅವನಿಗೆ ತಿಳಿಯದ ವಿಷಯವೇ ಇಲ್ಲ ಎಂದು ಅವನ ವಿದ್ಯಾರ್ಥಿಗಳು ಆಡಿಕೊಳ್ಳುತ್ತಾರೆ. ಈ ಮೂರು ವಿಜ್ಞಾನಕ್ಷೇತ್ರ. ವಿಷಯಗಳ ಕುರಿತು ಏನೇ ಸಂದೇಹವುಂಟಾಗಲಿ, ಅದನ್ನು ಪರಿಹರಿಸಿಕೊಳ್ಳಲು ಅವನ ಸಹೋದ್ಯೋಗಿಗಳು ಕೂಡಾ ಅವನ ಬಳಿ ಹೋಗುತ್ತಾರೆ. ಅವನ ಪ್ರಗಲ್ಬವಚನಕ್ಕೆ ಮಾರುಹೋಗದವರೇ ಇರಲಿಲ್ಲ. ಎಷ್ಟು ಜಟಿಲವಾದ ಸಮಸ್ಯೆಯೇ ಇರಲಿ, ಅದನ್ನು ಅತ್ಯಂತ ಸರಳವಾದ ರೀತಿಯಲ್ಲಿ ನಿರೂಪಿಸುವ ಜಾಣ್ಮೆಯಲ್ಲೂ ಅವನನನ್ನು ಸರಿಗಟ್ಟುವವರು ಇಡೀ ವಿಶ್ವವಿದ್ಯಾಲಯದಲ್ಲಿ ಇನ್ನೊಬ್ಬರಿರಲಿಲ್ಲ. ಆದರೂ ಜ್ಞಾನಕ್ಕೆ ಸೀಮೆಯೆಂಬುದಿದೆಯೆ? ಜ್ಞಾನದಾಹಕ್ಕೆ ತೃಪ್ತಿಯೆಂಬುದಿದೆಯೆ? ಡಾಕ್ಟರ್ ಗಿರಿಧರ ದಿನದಲ್ಲಿ ಏಳೆಂಟು ಗಂಟೆಗಳನ್ನು ಓದಿನಲ್ಲಿ, ಸಂಶೋಧನೆಯಲ್ಲಿ ಕಳೆಯುತ್ತಿದ್ದ.
ತನ್ನ ಇಪ್ಪತ್ತಾರನೇ ವರ್ಷ ವಯಸ್ಸಿನಲ್ಲಿ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಮುಗಿಸಿ ಪ್ರಾಧ್ಯಪಕನಾಗಿ ಕೆಲಸ ಆರಂಭಿಸಿದ ಡಾಕ್ಟರ್ ಗಿರಿಧರ ಹದಿನೈದು ವರ್ಷಗಳಿಂದ ಭೌತಶಾಸ್ತ್ರದಲ್ಲಿ ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದಾನೆ. ಆದರೆ ಅವನ ಪ್ರಯೋಗದ ವಿಷಯವು ನಿಖರವಾಗಿ ಏನು, ಅವನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವುದು ಏನನ್ನು ಎಂಬುದು ಯಾರಿಗೂ ಸ್ಪಷ್ಟವಾಗಿ ತಿಳಿದಿರಲಿಲ್ಲ. ಅವನು ‘ಈ ಸೂಕ್ಷ್ಮದರ್ಶಗಳಿಂದೇನೂ ಉಪಯೋಗವಿಲ್ಲ. ಇದಕ್ಕಿಂತ ಹೆಚ್ಚು ಶಕ್ತಿಶಾಲಿಯಾದ ಸೂಕ್ಷ್ಮದರ್ಶಕವನ್ನು ಕಂಡುಹಿಡಿಯಬೇಕು’ ಎಂದು ಆಗಾಗ ಹೇಳುತ್ತಿದ್ದ. ಆದುದರಿಂದ, ಅವನ ನಡೆಸಿರುವುದು ಸೂಕ್ಷ್ಮದರ್ಶಕವನ್ನುಪಯೋಗಿಸಿ ಏನನ್ನಾದರೂ ಕಂಡುಹಿಡಿಯುವ ಯತ್ನವೆ ಅಥವಾ ಹೊಸದೊಂದು ಸೂಕ್ಷ್ಮದರ್ಶವನ್ನೇ ಸಂಶೋಧಿಸುವ ಯತ್ನವೆ ಎಂದು ಅವನ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ಊಹಾಪೋಹ ಮಾಡುತ್ತಿದ್ದರು. ಆಂತೂ ಅವನು ಅಣುವಿಭಜನೆಗಾಗಿ ಮೈಕ್ರೋಸ್ಕೋಪನ್ನು ಉಪಯೋಗಿಸುತ್ತಿದ್ದಾನೆ. ಅವನು ಕಂಡುಹಿಡಿಯಲು ಯತ್ನಿಸುತ್ತಿರುವುದೇನೊ ಅದನ್ನು ಕಾಣಿಸಲು ಆ ಮೈಕ್ರೋಸ್ಕೋಪು ಆಶಕ್ತವಾಗಿದೆ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರು.
ಅದು ವಾಸ್ತವವೂ ಆಗಿತ್ತು. ಅವನ ಸಂಶೋಧನೆಯಲ್ಲಿ ಮೈಕ್ರೋಸ್ಕೋಪು ಆಗಾಗ ಸೋಲುತ್ತಿತ್ತು. ಆಗ ಅವನು ತನ್ನ ಗಣಿತ ವೈಜ್ಞಾನಿಕ ಸೂತ್ರಗಳ ಆಧಾರದಿಂದ ಆ ವಸ್ತುವನ್ನು ಕಾಣಲು ಪ್ರಯತ್ನಿಸುತ್ತಿದ್ದ. ಅದಕ್ಕೆ ರೀಮುಗಟ್ಟಲೆ