Hiranya Garbha
By Naveen B.S
()
About this ebook
ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು, ಸಕಾಲ ಸಹಕಾರ ಸಿಗುವುದು ಎಲ್ಲವೂ ಅದ್ಭುತ ಎನಿಸೋ ಅಪರೂಪದ ಪ್ರಯತ್ನ ,ನವ ಲೇಖಕ ನವೀನ್ ಶಾಂಡಿಲ್ಯ ಅವರ 'ಹಿರಣ್ಯ ಗರ್ಭ'. ಆಡಿಯೋ ಪುಸ್ತಕ
Related to Hiranya Garbha
Related ebooks
Vyuha Rating: 0 out of 5 stars0 ratingsKai Hididhu Nadesennanu Rating: 0 out of 5 stars0 ratingsTamasoma Jyothirgamaya Rating: 0 out of 5 stars0 ratingsNakshatra Jaaridaaga Rating: 0 out of 5 stars0 ratingsನನ್ನವಳು: ಪ್ರೇಮಲೋಕದ ಪಯಣಿಗರು Rating: 0 out of 5 stars0 ratingsAdarshave Bennu hatti Rating: 5 out of 5 stars5/5Kshameyirali Taayi Tunge... Rating: 0 out of 5 stars0 ratingsHongeya Neralu Rating: 4 out of 5 stars4/5Atruptatmagala Aakrandana Rating: 0 out of 5 stars0 ratingsಸಮಗ್ರ ಕಥೆ Rating: 0 out of 5 stars0 ratingsJeevana Maadhurya Rating: 5 out of 5 stars5/5Suruli - Manadi Suttida Kathegalu Rating: 0 out of 5 stars0 ratingsPutta Puttige Putta Hanate Rating: 0 out of 5 stars0 ratingsBhutagala University Rating: 0 out of 5 stars0 ratingsTunturu Maleyalli Aralidha May Pushpagalu Rating: 0 out of 5 stars0 ratingsSamadhana Bhaaga 1 Rating: 0 out of 5 stars0 ratingsKaredare Baare..! Rating: 0 out of 5 stars0 ratingsJothe Jotheyali Rating: 4 out of 5 stars4/5Karala Garbha Rating: 0 out of 5 stars0 ratingsRaktachandana Rating: 5 out of 5 stars5/5Manasina Alegalu Rating: 0 out of 5 stars0 ratingsAaradirali Belaku Rating: 0 out of 5 stars0 ratingsRushi Rating: 0 out of 5 stars0 ratingsBeladingala Godavari Rating: 0 out of 5 stars0 ratingsKurudu Thiruvu Rating: 0 out of 5 stars0 ratingsThe Diary of Mrs.Sharada Rating: 5 out of 5 stars5/5Ananthara Rating: 0 out of 5 stars0 ratingsHasta Bali Rating: 0 out of 5 stars0 ratingsAnoohya Rating: 0 out of 5 stars0 ratingsSecond Innings Rating: 0 out of 5 stars0 ratings
Related categories
Reviews for Hiranya Garbha
0 ratings0 reviews
Book preview
Hiranya Garbha - Naveen B.S
https://www.pustaka.co.in
ಹಿರಣ್ಯಗರ್ಭ
Hiranya Garbha
Author:
ನವೀನ್ ಬಿ ಎಸ್
Naveen B.S
For more books
http://www.pustaka.co.in/home/author//naveen-bs
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಪರಿವಿಡಿ
ಅಧ್ಯಾಯ 1
ಅಧ್ಯಾಯ 2
ಅಧ್ಯಾಯ-3
ಅಧ್ಯಾಯ – 4
ಅಧ್ಯಾಯ-5
ಅಧ್ಯಾಯ - 6
ಅಧ್ಯಾಯ-7
ಅಧ್ಯಾಯ-8
ಅಧ್ಯಾಯ-9
ಅಧ್ಯಾಯ 10
ಅಧ್ಯಾಯ -11
ಅಧ್ಯಾಯ-12
ಅಧ್ಯಾಯ - 13
ಅಧ್ಯಾಯ-14
ಅಧ್ಯಾಯ -15
ಅಧ್ಯಾಯ -16
ಅಧ್ಯಾಯ- 17
ಅಧ್ಯಾಯ 18
ಅಧ್ಯಾಯ - 19
ಅಧ್ಯಾಯ 20
ಅಧ್ಯಾಯ-21
ಅಧ್ಯಾಯ 22
ಅಧ್ಯಾಯ 23
ಅಧ್ಯಾಯ-24
ಅಧ್ಯಾಯ 25
ಅಧ್ಯಾಯ 26
ಅಧ್ಯಾಯ 27
ಅಧ್ಯಾಯ-28
ಅಧ್ಯಾಯ 29
ಅಧ್ಯಾಯ 30
ಅಧ್ಯಾಯ 31
ಅಧ್ಯಾಯ 32
ಅಧ್ಯಾಯ 33
a
http://www.chakranews.com/wp-content/uploads/2016/05/The-Vedas-are-Vedic-Hindu-Scriptures-and-Among-the-Oldest-Living-Texts-in-the-World.jpgPhoto Credit:
https://www.thehinduportal.com/2014/06/vedic-shastras-scriptures.html
ಅಧ್ಯಾಯ 1
ಮೊದಲ ಬಾರಿಗೆ ಈ ಹೊತ್ತಿನಲ್ಲಿ ನಾನು ಈ ರೂಟಿನಲ್ಲಿ ಡ್ರೈವ್ ಮಾಡ್ತಾ ಇದ್ದೇನೆ. ಈಗ ಸಮಯ ರಾತ್ರಿ ಹನ್ನೊಂದು ನಲವತ್ತು. ಬಾಲಾಜಿ, ಹರಿ ಇಷ್ಟೊತ್ತಿಗೆ ಮನೆ ಸೇರಿರಬಹುದು. ಬೆಂಗಳೂರು ಈ ಸಮಯದಲ್ಲಿ ನಾನಂದು ಕೊಂಡಷ್ಟು ನೀರವವಾಗಿಲ್ಲ. ಹಲವಾರು ಗಾಡಿಗಳು ಓಡಾಡುತ್ತಲೇ ಇದ್ದವು. ಈಗಷ್ಟೇ ನಿಮ್ಹಾನ್ಸ್ ಆಸ್ಪತ್ರೆ ದಾಟಿದೆ. ಒಂದು ಬಗೆಯ ವಿಚಿತ್ರ ಅನುಭವ. ಬೆಂಗಳೂರಿನ ಹಳೆಯ ಆಸ್ಪತ್ರೆಗಳಲ್ಲಿ ಇದೂ ಒಂದು. ಎಷ್ಟು ಜನರನ್ನು ಮಾನಸಿಕ ಅಸ್ವಸ್ಥತೆಯಿಂದ ಗುಣಪಡಿಸಿದೆಯೋ, ಎಷ್ಟು ಸಾವುಗಳನ್ನು ನೋಡಿದೆಯೋ: ಮುಕ್ಕಾಲು ಭಾಗ ತಲೆಗೆ ಪೆಟ್ಟುಬಿದ್ದ ಆಕ್ಸಿಡೆಂಟ್ ಕೇಸ್ ಗಳನ್ನು ಇಲ್ಲಿಗೇ ಕರೆತರುವುದು. ಇಲ್ಲೇ ಪಕ್ಕದ ಲಕ್ಕಸಂದ್ರದಲ್ಲಿರುವ ನಮ್ಮ ಮಾವ ಹೇಳಿದ ಮಾತು ನೆನಪಾಗ್ತಿದೆ. ಈ ಹಾಳು ರಸ್ತೆಯಲ್ಲಿ ಎಷ್ಟೋ ಬಾರಿ ತಲೆ ಕೂದಲು ಇಳೀ ಬಿಟ್ಟುಕೊಂಡು, ಜೋತು ಬಟ್ಟೆಯ ಆಕೃತಿಗಳು ಕಾಣಿಸುತ್ತೆ ಗೊತ್ತಾ. ಹಾಳಾದವು ದೆವ್ವಗಳೋ ಅಥವಾ ಮೆಂಟಲ್ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಹುಚ್ ನನ್ ಮಕ್ಕಳೋ ಗೊತ್ತಾಗಲ್ಲ. ಎರಡೂ ಭಯ ಹುಟ್ಟಿಸುತ್ತೆ ಅಲ್ವಾ
. ಅವರ ಮಾತು ನೆನಪಾಗಿ ನಗು ಬಂತು. ನನಗೂ ಹಾಗೆ ಕಾಣಿಸಬಹುದಾ ಎಂದೆನ್ನುಕೊಳ್ಳುವಷ್ಟರಲ್ಲಿ ನಾನಾಗಲೇ ಲಾಲ್ ಬಾಗ್ ತಲುಪಿದ್ದೆ. ದೊಡ್ಡದೊಂದು ಆಕಳಿಕೆ ಬಂತು, ಅಬ್ಬಬ್ಬಾ ನಾನು ನಿದ್ದೆ ಮಾಡಿ ಮೂರು ರಾತ್ರಿಗಳೇ ಕಳೆದುಹೋದ್ವಲ್ವ. ಎಷ್ಟು ಕೆಲಸ, ಅಂತೂ ಮುಗೀತು. ನೆನ್ನೆ 3:00 ಬೆಳಗ್ಗೆ ಜಾವಕ್ಕೆ; ನನ್ನ ಹೆಂಡತಿಗೆ ಕೊಟ್ಟ ಭಾಷೆ ಉಳಿಸಿಕೊಳ್ಳಲು ನೆನ್ನೆ ಪ್ರಾಜೆಕ್ಟ್ ಸೈಟ್ನಲ್ಲೇ ಕುಳಿತು RTO ವೆಬ್ಸೈಟ್ ಸಾರಥಿ-4 ನಲ್ಲಿ ಆನ್ಲೈನ್ ಅಪ್ಲಿಕೇಶನ್ ತುಂಬಿಸಿ, ದಾಖಲೆಗಳನ್ನ ಅಪ್ಲೋಡ್ ಮಾಡಿ, ಇಂದಿಗೆ LL ಟೆಸ್ಟ್ ತೆಗೆದುಕೊಳ್ಳಲು ಸ್ಲಾಟ್ ಕೂಡ ಬುಕ್ ಮಾಡಿದ್ದೆ. ನೋಡಿದರೆ ಮನೆ ತಲುಪುವಷ್ಟರೊಳಗೆ ನಾಲ್ಕಾಗಿತ್ತು. ಮುಂಬರುವ ಪ್ರಾಜೆಕ್ಟ್ ಬಗ್ಗೆ ಯೋಚಿಸುತ್ತಾ ಇದ್ದವನಿಗೆ ನಿದ್ದೆ ಬಂದಾಗ ಗಂಟೆ ಆರಾಗಿತ್ತು.
ಹೆಂಡತಿಗೆ ಸರ್ಪ್ರೈಸ್ ಕೊಡೋಣವೆಂದು LL ಟೆಸ್ಟ್ ಬಗ್ಗೆ ಹೇಳಿರಲಿಲ್ಲ. ಕಣ್ಬಿಟ್ಟಾಗ ಸಮಯ ಎಂಟು ಮುಕ್ಕಾಲು. ಅಯ್ಯೋ ದೇವರೇ ಹತ್ತು ಗಂಟೆಗೆ RTOಲಿ ರಿಪೋರ್ಟ ಮಾಡಬೇಕು. ತಿಂಡಿ ತಿನ್ನದೇ ಕಾರ್ ಹತ್ತಿ ಎದ್ನೋ ಬಿದ್ನೋ ಅಂತ ಡ್ರೈವ್ ಮಾಡಿದೆ. LL ಇಲ್ಲದವನು ಗಾಡಿ ಓಡಿಸ್ತಾ ನ ಅಂದುಕೊಂಡರೆ, ಅಂತ ಎಷ್ಟೋ ಮಹಾರಥಿಗಳಲ್ಲಿ ನಾನು ಒಬ್ಬ. ಸರಿಯಾಗಿ ಹತ್ತು ಗಂಟೆಗೆ ತಲುಪಿದ ನನಗೆ ಅಲ್ಲಿದ್ದ ಅಧಿಕಾರಿಗಳು ಶಾಕ್ ಕೊಟ್ರು. ಇವತ್ತು ಟೇಸ್ಟ್ ಇಲ್ಲ ಹೋಗ್ರಿ. ಪೇಪರ್ ನೋಡ್ಲಿಲ್ವಾ. ಅಪ್ಲಿಕೇಶನ್ ಫೀಸ್ 150 ಮಾಡಿದ್ದಾರೆ. ಅದು ನಮ್ಮ ಸಿಸ್ಟಮ್ ಅಲ್ಲಿ ಅಪ್ಡೇಟ್ ಆಗಿಲ್ಲ. ಆಗೋವರ್ಗು ಟೆಸ್ಟ್ ಇಲ್ಲ
. ಇವತ್ತು ಟೆಸ್ಟ್ ಇಲ್ಲ ಅಂತ ಸ್ಕೂಲಲ್ಲಿ ಹೇಳಿದ್ರೆ ಎಷ್ಟು ಖುಷಿ ಆಗ್ತಿತ್ತೊ ಇಂದು ಅದಾಗಲಿಲ್ಲ. ಹಾಳಾದವರು ಆನ್ಲೈನ್ ನಲ್ಲಿ ಸ್ಲಾಟ್ ಯಾಕೆ ಬುಕ್ ಮಾಡಿಸಿಕೊಂಡರು ಅಂತ ಬೈಕೊಂಡು ಪ್ರಾಜೆಕ್ಟ್ ದಾರಿ ಹಿಡಿದೆ, ಅಷ್ಟರೊಳಗೆ ಬಾಲಾಜಿ ಫೋನ್ ಮಾಡಿದ್ದ. ಮಗನೇ ನೆನ್ನೆ ನೈಟ್ ಶೋಗೆ ಬಾರೋ ಅಂದ್ರೆ, ಬರ್ತೀನಿ ಅಂತ ಕೈಕೊಟ್ಟೆ.
ಕಿರಿಕ್ ಪಾರ್ಟಿ ಸೂಪರಾಗಿತ್ತು. ಇವತ್ತು ಒಂದು ಒಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಗೆ ಹೋಗೋಣ ಬಾ. ತಮಿಳು. ನಾವೇ ಟ್ರಾನ್ಸ್ಲೇಟ್ ಮಾಡ್ತೀವಿ ಬಾ, ಅರ್ಥ ಆಗ್ಲಿಲ್ಲ ಅಂದ್ರೆ
ಅಂದಿದ್ರು. ಅರ್ಥ ಏನೋ ಆಯ್ತು ತಕ್ಕಮಟ್ಟಿಗೆ. ಎಷ್ಟು ಚಂದದ ಮೂವಿ ಗೊತ್ತಾ. ಈ ತಮಿಳ್ ಅವರು ಎಷ್ಟು ಚೆನ್ನಾಗಿ ಚಿತ್ರ ಮಾಡ್ತಾರಪ್ಪ. ಸಕ್ಕತ್ ಸಸ್ಪೆನ್ಸು. ನಾನು ಅವನೇ ಕೊಲೆಗಾರ ಅಂತ ಗೆಸ್ ಮಾಡಿರಲಿಲ್ಲ. ಆದ್ರೂ ಅವನ್ದೇನು ತಪ್ಪಿತ್ತು. ಪರಿಸ್ಥಿತಿ ಅವನ್ನು ಕೊಲೆಗಾರನನ್ನಾಗಿ ಮಾಡ್ಸಿತ್ತು. ಆಆಆಆ
ಇನ್ನೊಂದು ಆಕಳಿಕೆ. ಏನು ದರಿದ್ರ ನಿದ್ದೇನೋ. ಥಿಯೇಟರ್ನಲ್ಲಿ ನಾನು ಮಲಗಿಲ್ಲದೆ ಇದ್ದದ್ದೇ ಆಶ್ಚರ್ಯ. ಎಲ್ಲಾ ನಿದ್ದೆ ಈಗ ಬಂದು ವಕ್ಕರಿಸಿಕೊಳ್ಳುತ್ತಿದೆ ಹಾಳಾದ್ದು. ಯೋಚನೆ ಮಾಡ್ತಾ ಮಾಡ್ತಾ ಮೆಜೆಸ್ಟಿಕ್ ಬಂದದ್ದೆ ಗೊತ್ತಾಗ್ಲಿಲ್ಲ.
ಥೂ...ನನ್ನ ನಿದ್ದೆಗೊಂದಿಷ್ಟು. ನಾನು ಮೆಜೆಸ್ಟಿಕ್ಗೆ ಯಾಕೆ ಬಂದ್ನಪ್ಪಾ. ಅಲ್ಲೇ ಮೈಸೂರ್ ಬ್ಯಾಂಕ್ ಹತ್ರ ಬಲಕ್ಕೆ ತಿರುಗಿ ಚಾಲುಕ್ಯಗೆ ಹೋಗಬಹುದಿತ್ತು. ಹೀಗೇ ನಿದ್ದೆ ಮಾಡ್ತಿದ್ದರೆ ಯಾರ್ಗಾದ್ರು ಗುದ್ದಿ ಬಿಡ್ತೀನಿ ಅಷ್ಟೇ. ಇಲ್ಲೇ ಎಡಕ್ಕೆ ಹಾಕಿ, ಪಾರ್ಕಿಂಗ್ ಲೈಟ್ ಹಾಕಿ, ಒಂದರ್ಧ ಗಂಟೆ ನಿದ್ದೆ ಮಾಡಿ ಹೋಗ್ಲಾ. ಹೀಗೆ ಅಲ್ವಾ ಇರೋದು ರೂಲ್ಸ್. ಹಾಳಾದ್ದು ಈ ಟೆಸ್ಟ್ ಗೋಸ್ಕರ ಎಷ್ಟೆಲ್ಲ ಪ್ರಿಪೇರ್ ಆಗಿದ್ದೆ. 450 ಪ್ರಶ್ನೆಗಳ ಕ್ವೆಶ್ಚನ್ ಬ್ಯಾಂಕ್ ತಿರುವಿ ಹಾಕಿದ್ದೆ. ಒಳ್ಳೇದೇ ಆಯ್ತು ಅಂತಿಟ್ಟುಕೊಳ್ಳಿ. ಅಲ್ಲಾ ಅದೆಷ್ಟು ಟ್ರಾಫಿಕ್ ಸಿಗ್ನಲ್ಸ್ ಇದೆ ನನ್ಮಗಂದು. ಹಾಸ್ಪಿಟಲ್ ಗೊಂದು, ಫಸ್ಟ್ ಏಡ್ಗೊಂದು, ಶಾಲೆಗೊಂದು, ಅಕ್ಕಕ್ಕೊಂದು, ಪಕ್ಕಕ್ಕೊಂದು, Compulsory left, compulsory right... ಅಗೋಳಪ್ಪಾ compulsary left sign ಬೋರ್ಡು. ಗೂಬೆ ನನ್ ಮಕ್ಕಳು ನೂರಡಿ ರಸ್ತೆ ಮುಂದೆ ಇದೆ, compulsory left ಯಾಕೆ ಹಾಕಿದ್ದಾರೋ. ಅಯ್ಯಪ್ಪ... ಇದೆಂಥಾ ರೋಡ್ ಹಂಪು.. ಥೂ ಇವನ ಈ ಹಂಪಿಗೆ ಆಕ್ಸೆಲ್ ಕಟ್ ಆಗ್ಬಿಡುತ್ತೆ. ಇದಕ್ಕೆ ಯಾವ ಬೋರ್ಡು ಇಲ್ಲ. ಅಥವಾ ನಿದ್ದೆಗಣ್ಣಲ್ಲಿ ನಾನು ನೋಡ್ಲಿಲ್ವಾ..ನಿಲ್ಸ್ ಬಿಡ್ಲಾ.. ಯಾವ ಏರಿಯಾ ಇದು.. ಮಲ್ಲೇಶ್ವರಂ ಟೆಂತ್ ಕ್ರಾಸ್. ಇನ್ನೊಂದು ಹತ್ತು ನಿಮಿಷ ತಮ್ಮನ ಮನೆ ಸೇರಿ ಬಿಡ್ತೀನಿ. ಅವನಿರೋದು ವಿದ್ಯಾರಣ್ಯಪುರದಲ್ಲಿ. ಅಮ್ಮನ ನೋಡಿ ತುಂಬಾ ದಿನ ಆಗಿತ್ತು. ನೋಡೋಣ ಅಂತ ಹೊರಟಿದ್ದೀನಿ. ಕಣ್ಣು ಅಗಲಿಸಿ ಮುಂದೆ ಹೋಗೋಣ ನಿಧಾನವಾಗಿ..ಆಕ್ಸಿಡೆಂಟ್ ಆಗ್ಬಾರ್ದು ನೋಡಿ..
ಮನೆಗೆ ಬಂದವನನ್ನ ಅಮ್ಮ ಕೇಳಿದಳು, ಊಟ ಆಯ್ತೇನೋ
, ಮಗು ಹೇಗಿದೆ
, ರೇಖಾ ಹುಷಾರ್ ಆಗಿದ್ದಾಳಾ
,... ನಾನು ಏನು ಮಾತಾಡದೆ ಕಾರಿನ ಕೀ ಅವಳ ಕೈಲಿರಿಸಿ, ಬೆಳಿಗ್ಗೆ ಸೋಮಣ್ಣನ ಕೈಲಿ ಕಾರ್ ವಾಷ್ ಮಾಡಿಸಿಬಿಡು, ತುಂಬಾ ಗಲೀಜಾಗಿದೆ
ಅಂತಂದವನೇ ಹಾಸಿದ ಹಾಸಿಗೆ ಮೇಲೆ ಜೀನ್ಸ್ ಪ್ಯಾಂಟ್ ನಲ್ಲೆ ಮಲಗಿ ಗೊರಕೆ ಹೊಡೆದೆ... ನಿದ್ದೆಗೆ ಜಾರುವ ಮುನ್ನ ಕಾಡುತ್ತಿದ್ದದ್ದು ಬರೀ ಆ ತಮಿಳು ಸಿನಿಮಾನೇ...ಹಾಗೆ 'ಬಾ ನಲ್ಲೆ ಮಧುಚಂದ್ರಕೆ' ಚಿತ್ರದ ಹಾಡು..ಈಗ ನೆನಪಿಗೆ ಬಂತು ಅ ಹಂಪ್ ಎಗರಿಸಿದಾಗ FM ನಲ್ಲಿ ಬರುತ್ತಿದ್ದ ಹಾಡು... ಓಹೋ ಹಿಮಾಲಯಾ
ಏನಾಶ್ಚರ್ಯ ಅದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೇ..ಆಮೇಲೆ ಬಂದ ಹಾಡು ಯಾವುದು,, ಏನೋ ಮಾಡಲು ಹೋಗಿ ಏನು ಮಾಡಿದೆ ನೀನು
ಹಹಹಹ ಅದು ಸಸ್ಪೆನ್ಸ್ ಮೂವೀನೇ... ಎಂತಹ ಕಾಕತಾಳಿಯವಲ್ಲವೇ... ಅಂತ ನಕ್ಕಿದ್ದು ಅಷ್ಟೇ ಜ್ಞಾಪಕ, ಬೆಳಿಗ್ಗೆ ಕಣ್ಣುಬಿಟ್ಟಾಗ ಮುಂದೆ ಪ್ರತ್ಯಕ್ಷವಾಗಿದ್ದು ನನ್ನ ಮುದ್ದು ಅನರ್ಘ್ಯ. ದೊಡ್ಡಪ್ಪ
ಅಂತ ಹೊಟ್ಟೆ ಮೇಲೆ ಕುಳಿತು ಮುಖದ ಮೇಲೆ ತಾಳ ಹಾಕುತ್ತಿದ್ದಳು. ಅಯ್ಯೋ ಅವನನ್ ಯಾಕೆ ಎಬ್ಬಿಸಿದೆ. ಮಲಗಿರಲಿ ಬಿಡು
ಅಂದ್ರು ಅಮ್ಮ. The damage was already done. ನನಗೆ ಎಚ್ಚರವಾಗಿತ್ತು. ಬೆಳಿಗ್ಗೆ ಎಂಟೂ ಹತ್ತು. ಅವಳನ್ನು ಎತ್ತಿಕೊಂಡು ಆಚೆ ವರಾಂಡಾಗೆ ಬಂದೆ. ಆಚೆ ಸೋಮಣ್ಣ ಕಾರ್ ತೊಳೆಯುತ್ತಿದ್ದ..
ಬೆಳಕಾಯಿತಾ ಸಾರ್...ಎಷ್ಟು ದಿನ ಆಯ್ತು ನೋಡಿ...ಎಷ್ಟು ಗಲೀಜು ಮಾಡಿಕೊಂಡಿದ್ದೀರಿ ಸರ್ ಕಾರನ್ನ...ಕೆಂಪಗಾಗಿ ಬಿಟ್ಟಿದೆ ನೋಡಿ
. ಶುರುವಾಯಿತು ಸೋಮಣ್ಣನ ಕಂಪ್ಲೇಂಟ್. ಸೋಮಣ್ಣ...ಆ ಕಾರ್ ಕಲರ್ರೇ ಕೆಂಪು
ನಕ್ಕು ಹೇಳಿದೆ. ಹೌದು ಹೌದು ಬಿಡಿ...ಈ ಪಾಟಿ ಗಲೀಜು ತೆಗೆದಿದ್ದಕ್ಕೆ ನನಗೆ ನೀವು extra tips ಕೊಡಬೇಕು
ದಬಾಯಿಸಿದ ಸೋಮಣ್ಣ.
Debit card accept ಮಾಡ್ತೀರಾ.... no cash ಸೋಮಣ್ಣ
ಕಿಚಾಯಿಸಿದೆ ನಾನು...
Paytm ಮಾಡ್ಬಿಡಿ
ಸೋಮಣ್ಣನ ತಿರುಗುಬಾಣ.
ಅಲ್ಲ ಸಾರ್ ಯಾವ ನಾಯಿ ಮೇಲೆ ಗಾಡಿ ಹೊಡಿದ್ರಿ ಅಂತ ಆ ಪಾಟಿ ರಕ್ತ
ಅಂದ್ರು ಸೋಮಣ್ಣ.
ರಕ್ತ!!!
ಮೂರು ದಿನದ ನಿದ್ದೆಯೆಲ್ಲ ಹಾರಿಹೋಗಿ ಬೆನ್ನಹುರಿಯಲ್ಲಿ ಮಿಂಚು ಸಂಚಾರವಾಯಿತು. ಮಗುವನ್ನು ಕೆಳಗಿಳಿಸಿ ಅದೇನಂತ ಪರೀಕ್ಷಿಸಲು ಕಾರ್ ಬಳಿ ಹೋದೆ.
ಈ ಪಾಟಿ ನೋಡಿದ್ರೆ ನಾಯಿಯಲ್ಲ...ಹಂದೀನೇ ಇರಬೇಕು
.
ಏನೋ ಗೊತ್ತಾಗ್ತಿಲ್ಲ..ಯಾವುದರ ಮೇಲೂ ಹತ್ತಿದ್ದ ನೆನಪೇ ಬರ್ತಾ ಇಲ್ಲ
. ಆ ಹಂಪು... ಬಹುಶಃ ಅದು ಹಂಪಾಗಿರಲಿಲ್ಲ, ಹಂದಿಯೇ ಇರಬೇಕು... ಪಾಪ ಹಂದಿ... ಅಂತಂದುಕೊಂಡು ಇನ್ನೇನು ಮನೆ ಕಡೆ ಹೊರಡಬೇಕು ಎಂದು ತಿರುಗಿದಾಗ ಹಿಂದಿನ ಚಕ್ರಕ್ಕೆ ಏನೋ ಸಿಕ್ಕಿಹಾಕಿಕೊಂಡಿದೆ ಎಂದು ಅನ್ನಿಸುತ್ತಿತ್ತು.... ಮಂಡಿಯೂರಿ ಕೆಳಗೆ ಕುಳಿತು ಬಗ್ಗಿ ನೋಡಿದೆ.... ಒಂದು ಕೈ.... ಮನುಷ್ಯನ ಕೈಯಿ!!!!
ಅಧ್ಯಾಯ 2
ರಕ್ತಸಿಕ್ತವಾದ ಕೈ ತಣ್ಣಗೆ ಕೊರೆಯುತ್ತಿದ್ದಿತು. ಸುಮಾರು ಚಪ್ಪಟೆಯಾಗಿಯೇ ಬಿಟ್ಟಿತ್ತು. ಗಟ್ಟಿಯಾಗಿ ಹೆಪ್ಪುಗಟ್ಟಿದ ರಕ್ತ ಕಾರು ತೊಳೆಯುವ ನೀರಿನಿಂದ ಮತ್ತೆ ಒದ್ದೆಯಾಗಿ ಗಂಟು ಗಂಟಾಗಿ ಚೆಲ್ಲಾಡಿ ಹೋಗಿತ್ತು. ವಾಸನೆಯೇನೂ ಬರುತ್ತಿರಲಿಲ್ಲ. ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ನ್ಯೂಸ್ ಪೇಪರ್ ನಲ್ಲಿ ಎತ್ತಿ ಅದೇ ಪೇಪರ್ ನಲ್ಲಿ ಸುತ್ತಿ ಡಿಕ್ಕಿಯಲ್ಲಿ ಹಾಕಿ ಬಿಟ್ಟಿದ್ದೆ. ನನ್ನ ಕೈ ಎಷ್ಟು ತೊಳೆದರೂ ರಕ್ತದ ಕಲೆಗಳು ಹೋಗೇ ಇರಲಿಲ್ಲ.... ಕಾಫಿ ಲೋಟ ಇಡುವ ನೆಪದಲ್ಲಿ ಮತ್ತೆ ಸಿಂಕ್ ಬಳಿ ಹೋಗಿ ಮತ್ತೆ ವಿಮ್ ಬಾರ್ ಹಚ್ಚಿಕೊಂಡು ಗಟ್ಟಿಯಾಗಿ ಒತ್ತಿ, ಒತ್ತಿ, ತಿದ್ದಿ-ತೀಡಿ ತೊಳೆದೆ. ಮ್ ಹೂ.... ಹೋಗುತ್ತಲೇ ಇಲ್ಲ. ಹಿಂದೆಯಿಂದ ಒಂದು ಭಾರವಾದ ಕೈ ಭುಜದ ಮೇಲೆ ಬಿತ್ತು. ಗಾಬರಿಯಿಂದ ತಿರುಗಿದೆ. ನನ್ನ ತಮ್ಮ...
ಏನೋ ಇಷ್ಟು ತೊಳ್ಕೊಂಡಿದೀಯಾ ತೊಳ್ಕೋತಿದ್ಯಾ ಕೈಯನ್ನಾ ..ಮೋರೀಲಿ ಕೈಹಾಕಿದ್ಯಾ
ಛೇಡಿಸಿದ ನನ್ನ....
ಕೈ ಮೇಲೆ... ಏನಾದ್ರೂ ಕೆಂಪು... ಕೆಂಪಾಗಿ ಇದ್ಯಾ ನೋಡು
ತಡವರಿಸುತ್ತಾ ಕೇಳಿದೆ ನಾನು.
ಏನೋ ಮೆಹಂದೀ ಹಾಕೊಂಡಿದ್ಯಾ... ಮ್ ಮ್... ಯಾವ ಕೆಂಪೂ ಇಲ್ಲ, ಮಣ್ಣು ಇಲ್ಲ
.
ನಿಜವಾಗಿ
ಕೇಳಿದೆ ನಾನು.
ನನ್ನ ತಲೆ ಮೇಲೆ ಕೈಯಿಟ್ಟು, ನಿನ್ನಾಣೆ
ಅಂದವನೆ, ಎರಡೂ ಕೈ ಜೋಡಿಸಿ ರೂಮ್ ಕಡೆ ನಡೆದ. ನನಗೆ ಒಂದು ಕ್ಷಣ, ಷೇಕ್ಸ್ಪಿಯರ್ ನ ಮ್ಯಾಕ್ಬೆತ್ ನೆನಪಾಗಿ ಬಿಟ್ಟ. ತನ್ನ ಧಣಿಯನ್ನೇ ಕೊಂದ ಮ್ಯಾಕ್ಬೆತ್ ಮತ್ತವನ ಹೆಂಡತಿ ಹೀಗೆ ತಮ್ಮ ಕೈಗೆ ರಕ್ತ ಅಂಟಿದೆ ಎಂದು ತೊಳೆಯುತ್ತಲೇ ಇರುತ್ತಾರೆ. ಆದರೆ ನಾನು.... ನಾನು.... ಕೊಲೆ ಮಾಡಿದ್ದೇನೆ.... ಅಯ್ಯೋ ದೇವರೇ....ನಾನು ನನ್ನ ಹೆಂಡತಿಗೆ ಹೇಗೆ ಮುಖ ತೋರಿಸಲಿ.... ಎಷ್ಟೊಂದು ಸಾಲ ಮಾಡಿದ್ದೇನಲ್ಲ.... ಅದನ್ನು ಹೇಗೆ ತೀರಿಸಲಿ... ನನ್ನ ಮಗನ ಪಾಡೇನು..... ಯೋಚಿಸಿದಾಗ ಒಮ್ಮೆ ಮೈಯೆಲ್ಲಾ ಹಿಂಡಿದಂತಾಗಿ ಕಣ್ಣಲ್ಲಿ ನೀರು ಬಂತು. ಕಿವಿಯೆಲ್ಲಾ ಬಿಸಿಯಾಗ ತೊಡಗಿತು. ನಾಲಿಗೆ ಒಣಗ ತೊಡಗಿತು. ಸಣ್ಣದಾಗಿ ತಲೆ ತಿರುಗಿದ ಅನುಭವ.... ಸ್ಟ್ರೆಸ್ಸಿಗೆ ಹೃದಯದಿಂದ ಮೆದುಳಿಗೆ ರಕ್ತ ತಲುಪದ ಕಾರಣ ಮೆದುಳಿಗೆ ಆಕ್ಸಿಜನ್ ಕಡಿಮೆಯಾಗಿ ತಲೆಸುತ್ತು ಬರುತ್ತದೆ. ನನಗೆ ಮೊದಲೇ ಲೋ ಬಿ.ಪಿ... ಹತ್ತಿರದಲ್ಲೇ ಇದ್ದ ಉಪ್ಪಿನಕಾಯಿ ಡಬ್ಬದಿಂದ ಒಂದು ಹೋಳು ತೆಗೆದುಕೊಂಡು ಬಾಯಿಗೆ ಹಾಕಿಕೊಂಡು, ನಿಧಾನವಾಗಿ ಹೋಗಿ ಸೋಫಾದ ಮೇಲೆ ಕುಳಿತೆ.
ತಮ್ಮ ಶೇವಿಂಗ್ ಮಾಡಿಕೊಳ್ಳುತ್ತಿದ್ದಾನೆ, ನಾದಿನಿ ಮಗುವಿಗೆ ಸ್ನಾನ ಮಾಡಿಸುತ್ತಾಳೆ, ಮಗು ಬಕೆಟ್ ಒಳಗೆ ಸೋಪಿನ ಕೈ ಅದ್ದಿ ಆಟವಾಡುತ್ತಿದೆ. ಅಮ್ಮರೊಟ್ಟಿ ತಟ್ಟುತ್ತಿದ್ದಾರೆ, ಕೆಲಸದವಳು ಮನೆ ಒರೆಸುತ್ತಿದ್ದಾಳೆ. ಇಡೀ ಜಗತ್ತೇ ತನ್ನಲ್ಲಿ ತಾನೇ ತೊಡಗಿಸಿಕೊಂಡು ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ನಡೆಯುತ್ತಿದೆ. ಇಲ್ಲಿ ಇದಕ್ಕೆ ಹೊಂದಿಕೆ ಇಲ್ಲದಂತೆ ತೊಳಲುತ್ತಿರುವುದು ಮೂರೇ ಆತ್ಮಗಳು. ಒಂದು ನಾನೇಕೆ ಅವನಿಗೆ ಗುದ್ದಿದೆ ಎಂಬ ಜಿಜ್ಞಾಸೆಯಲ್ಲಿರುವ ನನ್ನ ಈ ಜೀವಾತ್ಮ. ಎರಡು ನನ್ನನ್ನು ಗುದ್ದಿದವನಿಗೂ ನನಗೂ ಏನು ದ್ವೇಷ ಎಂದು ಪ್ರಶ್ನಿಸಿಕೊಂಡು ತೊಳಲುತ್ತಿರುವ ಆ ಪ್ರೇತಾತ್ಮ. ಇವೆರಡರ ತೊಳಲಾಟವನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿರುವ ಆ ಪರಮಾತ್ಮ. ಇಲ್ಲ, ಹೀಗೆ ಯೋಚಿಸುತ್ತಿದ್ದರೆ ನನಗೆ ತಿಕ್ಕಲು ಹಿಡಿದು ಬಿಡುತ್ತೆ. ಒಂದು, ನಾನಿದನ್ನೆಲ್ಲ ಮರೆತು ದೇವರ ಮೇಲೆ ಭಾರ ಹಾಕಿ ಆಗಿದ್ದಾಗಲಿ ಅಂತ ಜೀವನ ನಡೆಸುವುದು ಅಥವಾ ಇದರ ಹಿನ್ನೆಲೆಯನ್ನು ಹುಡುಕಿ ನನ್ನ ತಪ್ಪಿಲ್ಲ ಎಂದು ಸ್ಪಷ್ಟೀಕರಿಸಿಕೊಂಡು ನೆಮ್ಮದಿಯಾಗಿ ಇದ್ದು ಬಿಡೋದು
, ಮತ್ತದೇ ಒಳಗಿನ ಧ್ವನಿ ಮಾತನಾಡಿತು. ನನಗ್ಯಾಕೋ ಮೊದಲನೆಯದು ಅಸಹನೀಯವೆನಿಸಿತು. ಹಾಗೆ ಇರಲು ಸಾಧ್ಯವೇ, ಸಾವನ್ನು ಅಷ್ಟು ಆರಾಮವಾಗಿ ಪರಿಗಣಿಸಬೇಕಾದರೆ ಒಂದು ನೀವು ವಿಕ್ಟೋರಿಯಾ ಆಸ್ಪತ್ರೆಯ ಡಾಕ್ಟರಾಗಿರಬೇಕು ಇಲ್ಲ ರಾಮ್ ಗೋಪಾಲ್ ವರ್ಮಾ ಆಗಿರಬೇಕು. ಎರಡನೆಯದೇ ಸರಿ. ನಾನು ಮಲ್ಲೇಶ್ವರಂಗೆ ಹೋಗಿ ಏನಾಗಿದೆಯೆಂದು ಪರಿಶೀಲಿಸಬೇಕು...ಹೌದು ಅದೇ ಸರಿ, ಅದೇ ಸರಿ
ದನಿಗೂಡಿಸಿತು ಒಳದನಿ.
ತಿಂಡಿ ಅವಸರವಸರವಾಗಿ ತಿಂದು, ಸ್ನಾನವನ್ನೂ ಮಾಡದೇ ದಡಬಡಾಯಿಸಿ ಕಾರ್ ಬಳಿ ಬಂದೆ. ಯಾಕೋ ಎದೆ ನಡುಗಿತು. ಬೇಡಪ್ಪ.... ಲೈಸೆನ್ಸ್ ಬೇರೆ ಇಲ್ಲ. ಯಾರೋ ನೋಡಿ ಇದೇ ಕಾರೇ ಡಿಕ್ಕಿ ಹೊಡೆದದ್ದು ಸಾರ್... ಡಿಕ್ಕಿ ಹೊಡೆದಾಗ ಪ್ರಾಣ ಹೋಗಿರ್ಲಿಲ್ಲ ಸಾರ್....ಈ ಯಪ್ಪ ಆಸ್ಪತ್ರೆಗೆ ಕರ್ಕೊಂಡು ಹೋಗಿದ್ರೆ ಬದುಕುತ್ತಿದ್ರು.... ಯಾವುದೋ ಹಂಪ್ ಹತ್ತಿಸಿದವನಂತೆ, ಹತ್ತಿಸಿ ಹೊರಟೇ ಹೋದಾ ಸಾರ್...ಕೇಡಿ ನನ್ ಮಗ.... ಹಿಟ್-ಅಂಡ್-ರನ್ನು...ಸಾರ್
ಆಕ್ಸಿಡೆಂಟ್ ಚಿತ್ರದ ನಾಗಾಭರಣರು ಕಣ್ಣು ಮುಂದೆ ಬಂದು ಇಷ್ಟೆಲ್ಲಾ ಡೈಲಾಗ್ ಹೊಡೆದಂತೆ ಭಾಸವಾಯಿತು....
ಮತ್ತೆ ಕಾರನ್ನು ಮುಟ್ಟುವುದಿಲ್ಲಪ್ಪ. ಈ ಕಥೆ ಎಲ್ಲಿಗೆ ಹೋಗಿ ಸೇರುವುದೋ ಗೊತ್ತಿಲ್ಲ. ಕಾರನ್ನು ಮಾರೇ ಬಿಡಬೇಕು. ಇದರ ಸಹವಾಸವೇ ಬೇಡ. ಛೇ... ಪಾಪ ಕಾರೇನು ಮಾಡಿತ್ತು. ಓಡಿಸುತ್ತಿದ್ದವನು ನಾನು. ಪಾಪ ಕಾರು, ನನ್ನ ಮಗ ಹುಟ್ಟೋಕೆ 1 ತಿಂಗಳ ಹಿಂದೆ ಕೊಂಡ ಕಾರಿದು. ನನ್ನ ಮಗನನ್ನು ಆಸ್ಪತ್ರೆಯಿಂದ ಕರೆದುಕೊಂಡು ಮನೆಗೆ ಬಂದಂಥ ಕಾರಿದು. ನನ್ನ ಗೆಲುವು, ಸೋಲು ಎರಡರಲ್ಲೂ ಭಾಗಿಯಾಗಿ ಸಾಂತ್ವನ ನೀಡಿದ ಕಾರಿದು. ಸರಿ ಸುಮಾರು ಒಂದೂವರೆ ಲಕ್ಷ ಕಿಲೋಮೀಟರ್ ದಾಟಿದರೂ ಎಂದೂ ಕೈ ಕೊಡದೆ ಮಾನ ಕಾಪಾಡಿದ ಕಾರಿದು. ಇಂದು ನನ್ನ ತಪ್ಪಿಂದ ಆದ ಅವಘಡಕ್ಕೆ ಈ ನನ್ನ ಮುದ್ದಿನ ಕಾರನ್ನ್ಯಾಕೆ ದೂಷಿಸಬೇಕು. ಛೇ...ಹೋಗೋಣ ಎಂದು ಕಾರ ಒಳಗೆ ಕೂತೆ. ಆದರೂ ಬೇಡ...ಯಾಕೋ ಒಂದು ಬಗೆಯ ನೆಗೆಟಿವ್ ಫೀಲಿಂಗ್ ಬರ್ತಾ ಇದೆ. ಇವತ್ತು ಕಾರು ಬೇಡ ಎಂದು ನಿರ್ಧರಿಸಿ ತಮ್ಮನ ಬೈಕ್ ಏರಿದೆ. ಆ ಹಂಪ್ ನನಗೆ ಸಿಕ್ಕಿದ್ದೆಲ್ಲಿ...ಮಲ್ಲೇಶ್ವರಂ... ಎಷ್ಟನೇ ಕ್ರಾಸ್.... 8ನೇ ಕ್ರಾಸ್... ಇಲ್ಲ....ಆ... 10ನೇ ಕ್ರಾಸ್.... ಆಲ್ಮೋಸ್ಟ್ ಮಲ್ಲೇಶ್ವರಂ ಮಾರ್ಕೆಟ್ ಬಂದಿತ್ತು... ವ್ಯಾಪಾರವಾಗದೇ ಬಿಸಾಡಿದ್ದ ಸೇವಂತಿಗೆ, ಮರುಗದ ಘಾಟು ಹೊಡೆಯುತ್ತಿದ್ದ ನೆನಪು.. ಶವದ ಮೇಲೆ ಹೊದ್ದಿಸುವ, ಶವದ ದುರ್ವಾಸನೆ ಬಾರದಿರಲು ಹಾಕುವ ಮರುಗದ ಘಾಟು.... ಅಯ್ಯೋ ಎಲ್ಲಾ ಹೊಂದುಕೊಂಡು ಬಂದಂತಿದೆಯಲ್ಲಾ... ಅಥವಾ ನನಗೆ ಕಾಣಿಸುತ್ತಿರುವುದೆಲ್ಲ, ಕೇಳಿಸುತ್ತಿರುವುದೆಲ್ಲವನ್ನ ನನ್ನ ದುರ್ಬಲ ಮೆದುಳು ನಕಾರಾತ್ಮಕವಾಗಿ ಪೋಣಿಸುತ್ತಿದೆಯೇ .... ಮಲ್ಲೇಶ್ವರಂ ಮಾರ್ಕೆಟ್.... ನನ್ನ ಶಾಲೆಯ, ಕಾಲೇಜಿನ ದಿನಗಳೆಲ್ಲಾ ಓಡಾಡಿದ ಜಾಗವಲ್ಲವೇ. ಅದು ಸಂಪಿಗೆ ರಸ್ತೆಯಿಂದ ಬೇವಿನಮರದ ರಸ್ತೆಗೆ ಬರಲು ಇದ್ದ ಒಂದೇ ಜಾಗ ಮಲ್ಲೇಶ್ವರಂ ಮಾರ್ಕೆಟ್. 8ನೇ ಕ್ರಾಸ್ ನಿಂದ ಹಿಡಿದು ಹದಿಮೂರನೇ ಕ್ರಾಸಿನ ತನಕ ಮೈಚಾಚಿ ಮಲಗಿತ್ತು ಒಂದು ಕಾಲದಲ್ಲಿ..... ಈಗ ಚಿಕ್ಕದಾಗಿದೆ, ಮನುಷ್ಯನ ಆಯಸ್ಸಿನಂತೆ. ಸತ್ತವನಿಗೆ ಎಷ್ಟು ವಯಸ್ಸಿರಬಹುದು....ಛೇ.... ಯೋಚಿಸಬೇಡ ನವೀನ... ಮುಂದೆ ನೋಡಿ ಗಾಡಿ ಓಡ್ಸು
ಎಚ್ಚರಿಸಿತ್ತು ಒಳದನಿ. ಬೇವಿನ ಮರದ ರಸ್ತೆ ಒನ್ವೇ.... ಹಾಗಾಗಿ ಸಂಪಿಗೆ ಮರದ ರಸ್ತೆಯಿಂದ ಕೆಳಗಿಳಿದು ಸೇರಬೇಕು. ಬೇವಿನ ಮರದ ರಸ್ತೆ.... ಹೆಸರಂತೆಯೇ ಇದರ ಅನುಭವಗಳೂ ಕಹಿಯೇ ಆಗಬೇಕೇ.... ಹಾಗೆಯೇ ಯೋಚಿಸುತ್ತಾ ಬೇವಿನ ಮರದ ರಸ್ತೆಯ 7ನೇ ಕ್ರಾಸ್ ಗೆ ಬೈಕ್ ತಿರುಗಿಸಿದೆ... ಫುಲ್ ಡೌನ್....ಕಾಲೇಜಿನ ದಿನಗಳಲ್ಲಿ ಡೌನ್ ಸಿಕ್ಕರೆ ಅದೆಷ್ಟು ಖುಷಿಯೋ ನಮಗೆ, ಕೈ ಬಿಟ್ಟು, ಹಿಂದಕ್ಕೆ ಬಾಗಿ ಝುಯ್ ಎಂದು ಇಳಿದು ಬಿಡುತ್ತಿದ್ದೆವು... ಅಪ್ ಹತ್ತುವಾಗಲಲ್ಲವೇ ಪ್ರಾಣ ಹೋಗುತ್ತಿದ್ದದ್ದು.. ಅಂತದ್ದೇ ಒಂದು ಕೆಟ್ಟ ಅಪ್ ಇದ್ದದ್ದು ಮಾರ್ಕೆಟ್ ಬಳಿ, ಪ್ರಾಣ ಹೋದದ್ದು ಅಲ್ಲಿಯೇ. ಮಾರ್ಕೆಟ್ ಮುಗಿಯುತ್ತಿದ್ದಂತೆಯೇ ಶುರುವಾಗುತ್ತಿದ್ದ ಅಪ್ಪು ಕಾಡುಮಲ್ಲೇಶ್ವರ ದೇವಸ್ಥಾನದ ಹಿಂದಿನ ಭಾಗದ ಬಾಗಿಲ ಬಳಿ ನಿಲ್ಲುತ್ತಿತ್ತು. ಸೈಕಲ್ ಹೊಡೆಯುವಷ್ಟರಲ್ಲಿ ಏದುಸಿರು ಒಂದು ಸೈಕಲ್ ಸ್ಟ್ಯಾಂಡ್ ಹಾಕಿ ಅಲ್ಲೇ ಇದ್ದ BWSSB ಆಫೀಸ್ ನಲ್ಲಿಯಲ್ಲಿ ನೀರು ಕುಡಿದು ಹೋಗುತ್ತಿದ್ದದ್ದು ವಾಡಿಕೆಯಾಗಿತ್ತು. ಅಂತಹ ಅಪ್ ನಲ್ಲಿ ನನ್ನ ಕಾರು ಏರುವುದೇ ಕಷ್ಟ. ಎರಡನೇ, ಕೆಲವು ಸಾರಿ ಒಂದನೆ ಗೇರ್ ಹಾಕಿಕೊಂಡು ಹೋಗಬೇಕಾಗಿತ್ತು. ಎರಡನೇ ಗೇರ್ನಲ್ಲಿ ಒಬ್ಬ ವ್ಯಕ್ತಿಗೆ ಗುದ್ದಿ, ಅವನು ಬಿದ್ದು, ಅವನ ಮೇಲೆ ಕಾಲು ಹತ್ತಿಸಿಕೊಂಡು ಸಾಯಿಸಲು ಸಾಧ್ಯವೇ... ಈ ಆಂಗಲ್ ನಿಂದ ಯೋಚನೆ ಮಾಡಿ ಒಮ್ಮೆ ರೋಮಾಂಚನವಾಯಿತು. ನಿಜವೇ.. ಎರಡನೇ ಗೇರಿನಲ್ಲಿ ಅಪ್ಪಿನಲ್ಲಿ ಒಬ್ಬ ವ್ಯಕ್ತಿಗೆ ಗುದ್ದಬಹುದು ಆದರೆ ಸಾಯಿಸುವುದು ಕಷ್ಟ... ಮೊದಲೇ ಯಾರದೋ ಗಾಡಿಗೆ ಗುದ್ದಿಸಿಕೊಂಡು ಸತ್ತ ಶವದ ಮೇಲೆ ನಾನು ಗಾಡಿ ಹತ್ತಿಸಿದೆನೇ... ಯೋಚನೆ ಮಾಡುತ್ತಿದ್ದವನು ಮೂಗಿಗೆ ಬಡಿಯಿತು ಮರುಗದ ಘಾಟು. ಗಕ್ಕನೆ ಬ್ರೇಕ್ ಹಾಕಿದೆ. ನಿಧಾನವಾಗಿ ಬಲಕ್ಕೆ ತಿರುಗಿಸಿ, ಪಾರ್ಕಿಂಗ್ ಲಾಟ್ ನಲ್ಲಿ ಪಾರ್ಕ್ ಮಾಡಿ, ಕನ್ನಡಿಗೆ ಹೆಲ್ಮೆಟ್ ಸಿಗಿಸಿ, ನಿಧಾನವಾಗಿ ಆ ಸ್ಥಳಕ್ಕೆ ಹೆಜ್ಜೆ ಹಾಕಿದೆ. ಎದೆ ಡವಡವ ಹೊಡೆದುಕೊಳ್ಳುತ್ತಿತ್ತು... ಆ ಸ್ಥಳಕ್ಕೆ ಹತ್ತಿರ ನಿಂತೆ.. ಸುಮಾರು 12 ಅಡಿಗಳಿಗೂ ಚೆಲ್ಲಿತ್ತು ರಕ್ತ. ಕನ್ನಡಕದ ಚೂರುಗಳು, ಕೆಲ ಪೇಪರ್ ಕಟಿಂಗ್ ಗಳು, ದೇಹದ ಅಂಗಗಳ ಚೂರುಗಳು, ಅಂಗಿ ಗುಂಡಿಗಳು, ಮಂಕಿಕ್ಯಾಪ್ ಮತ್ತು ರಿಸ್ಟ್ ವಾಚಿನ ಚೈನು. ಆ ರಿಸ್ಟ್ ವಾಚಿನ ವಾರಸುದಾರ ಕೈ ನನ್ನ ಕಾರಿನ ಡಿಕ್ಕಿಯಲ್ಲಿದೆ. ಒಮ್ಮೆ ಆ ದೃಶ್ಯವನ್ನು ನೋಡಿ ಹೊಟ್ಟೆ ತೊಳೆಸಿ ಬಂದಂತಾಯಿತು. ಟ್ರಾಫಿಕ್ ಸಾಮಾನ್ಯವಾಗಿ ಓಡುತ್ತಿತ್ತು ಏನು ಆಗಿಲ್ಲ ಅನ್ನುವ ಹಾಗೆ. ವೈರಾಗಿಯ ಹಾಗೆ ನಡೆದುಕೊಳ್ಳುತ್ತಿತ್ತು ರಸ್ತೆ ಮತ್ತದರ ಜನ. ಕರೆಂಟ್ ಹೊಡೆದು ಸತ್ತ ಕಾಗೆಗೂ, ನಮಗೂ ಏನೂ ವ್ಯತ್ಯಾಸವೇ ಇಲ್ಲವೆಂದು ತಿಳಿದಾಗ ಮನಸ್ಸು ಭಾರವಾಯಿತು. ನಾನು ಎಣಿಸಿದಂತೆಯೇ ರಸ್ತೆಯ ಏರು ಶುರುವಾಗುತ್ತಿದ್ದಂತೆಯೇ ಆಗಿತ್ತು ಅಪಘಾತ. ಹಾಗಾದರೆ ಭಾಗಶಃ ನನ್ನ ಕಾರಿಗೆ ಸಿಕ್ಕಿ ಆದಂತಹ ಘಟನೆ ಅಲ್ಲವೆಂದು ಅನಿಸುತ್ತಿತ್ತು. ಆದರೂ ಏನು ಹೇಳುವುದಕ್ಕಾಗುವುದಿಲ್ಲ.
ನಿಮಗೆ ಗೊತ್ತಿರೋರ
ಹಿಂದೆಯಿಂದ ಬಂತು ಒಂದು ಗಡುಸಾದ, ಆಳವಾದ, ಆಥಾರಿಟೇಟಿವ್ ವಾಯ್ಸ್. ನಾನು ತಬ್ಬಿಬ್ಬಾದೆ!!!
ಅಧ್ಯಾಯ-3
ನಿಮ್ಮವರಿಗೇನ್ರೀ ಆಕ್ಸಿಡೆಂಟ್ ಆಗಿದ್ದು
ಮತ್ತೆ ಗುಡುಗಿತು ಆ ಧ್ವನಿ.
ಹೌದು
ಎಂದರೆ ಮಾಹಿತಿ ದೊರಕೀತು, ಆದರೆ ಸಂಶಯವೂ ಬರದೇ ಇರದು. ಇಲ್ಲ
ಎಂದರೆ ಏನೂ ಮಾಹಿತಿ ಸಿಗದು. ಆದರೆ ಕೇಳುತ್ತಿರೋರು ಯಾರು ಪೊಲೀಸಾ??? ನಿಧಾನವಾಗಿ, ನಡುಗುತ್ತಾ ಹಿಂದೆ ತಿರುಗುತ್ತಾ ಇಲ್ಲ... ಹೌದು... ಅದು ಇಲ್ಲ
ಎಂದು ತಡಬಡಿಸಿದೆ.
ಏನ್ರೀ ಅದು ಹೌದು... ಇಲ್ಲ... ಅಂದ್ಕೊಂಡು, ಸತ್ತವನೂ ನಿಮ್ಮಂಗೆ ಪಂಚೆ ಉಟ್ಟಿದ್ದ. ಅದಕ್ಕೆ ವಿಚಾರಿಸ್ದೆ
ಲುಂಗಿ ಉಟ್ಟಿದ್ದ, ಹಳೇ ಅಂಗಿ ತೊಟ್ಟು ಪುಟ್ಟ ಟವಲ್ ನಂಥ ಚೌಕ ಹೊದ್ದು ಗಡ್ಡ ಕೆರಕೋತ ಕೇಳ್ತಿದ್ದ ಒಬ್ಬ ಧಡೂತಿ ಆಸಾಮಿ.
ಇಲ್ಲ... ತುಂಬಾ ರಕ್ತ ಇದ್ದದ್ದು ನೋಡಿ, ನಿಲ್ಲಿಸ್ದೆ ಅಷ್ಟೆ
ಹಲ್ಲು ಕಿರಿದು ಉತ್ತರ ಕೊಟ್ಟೆ.
ಬೆಳ್ ಬೆಳಗ್ಗೇನೆ ಸಿಕ್ಕಾಪಟ್ಟೆ ಜನ ಬಂದಿದ್ರು. ಮಸ್ತಾಗಿ ಹೊಡೆದಿದ್ದ ಹೈವಾನ್ ನನ್ ಮಗ. ಮುಖ ಜಜ್ಜಿ ಬಜ್ಜಿಯಾಗ್ಬಿಟ್ಟಿತ್ತು. ಮೈಯೆಲ್ಲಾ ಚಿಂದಿ, ಚಿಂದಿ ಎಷ್ಟು ಗಾಡಿ ಹತ್ತಿಕೊಂಡು ಹೋಗಿತ್ತೋ ಏನೋ ಪಾಪ ಅನಾಥ ಶವವಾಗಿ ಹೋದ
. ಲೊಚಗುಟ್ಟಿದ ಆ ಮಾಂಸ ಪರ್ವತ
ನೀವೂ??
ಕೇಳಿದೆ ನಾನು.
ಆ.... ನಾನು ಆ ಹಣ್ಣಂಗಡಿ ಲತಿಫ, ಯಾಕೆ
ಗದರಿಸಿದ.
ಸುಮ್ನೆ ಹಂಗೇ ಕೇಳಿದೆ
, ಅಲ್ಲಾ ಪಂಚೆ ಉಟ್ಟೋರು ಅಂದ್ರೆ ಇಲ್ಲೇ ಲೋಕಲ್ ನವ್ರು ಅನ್ಸುತ್ತೆ, ನಿಮಗೇನಾದ್ರೂ ಪರಿಚಯ ಇದ್ಯೇನೋ ಅಂತಾ
ಆಂ...ಇಲ್ಲಿ ರೂಪಾಯಲ್ಲಿ 80 ಪೈಸೆ ಪಂಚೇನೇ ಉಡೋದು, ನೋಡಿ ನಾನು ಉಟ್ಕೊಂಡಿಲ್ವಾ, ನೀವು ಉಟ್ಕೊಂಡಿದ್ದೀರಾ
. ಅವಸರದಲ್ಲಿ ಪ್ಯಾಂಟ್ ಹಾಕೋದೇ ಮರೆತು ಓಡಿಬಂದದ್ದು ಗೊತ್ತಾದದ್ದು ಅವಾಗಲೆ.
ನೀವು ಉಟ್ಕೊಂಡಿರೋದೂ ಲುಂಗಿ ಸಾಹೇಬ್ರೇ, ಅಲ್ಲಾ ಸತ್ತವರು ಪಂಚೆ ಎಡಕ್ಕೆ ಉಟ್ಕೊಂಡಿದ್ರಾ, ಬಲಕ್ಕೆ ಉಟ್ಕೊಂಡಿದ್ರಾ....
ತೆಹಕೀಕಾತ್ ಮಾಡೋಕೆ ಶುರುವಿಟ್ಟೆ.
ಯೋವ್.... ಮೆದುಳು ಮನೇಲಿಟ್ಟು ಬಂದಿದ್ದೀರಾ? ಬಜ್ಜಿಯಾಗಿದ್ದ ತಲೇನೇ ಮುಂದಿತ್ತಾ, ಹಿಂದಿತ್ತಾ ಅಂತಾ ಗೊತ್ತಾಗ್ದೇ ಫೋಟೋಗ್ರಾಫರ್ ಒದ್ದಾಡ್ತಿದ್ರೆ, ನಿಂಗೆ ಪಂಚೆ ಯಾವ ಕಡೆ ಉಟ್ಟಿದ್ದಾ ಅಂತ ಯೋಚ್ನೆನಲ್ಲ
ಗುಡುಗಿದ ಮತ್ತೆ.
ತಪ್ಪು ತಿಳೀ ಬೇಡಿ... ಸತ್ತೋರು ಯಾವ ಜನ ಅಂತ ತಿಳ್ಕೊಳೋಣ, ಅಂತ
ಹಲ್ಕಿರಿದೆ ನಾನು.
ಮನುಷ್ಯನೇನ್ರೀ ನೀವು. ಸತ್ತೋದ ಮೇಲೆ ಯಾವ ಜಾತೀರಿ... ಮನುಷ್ಯ ಜಾತಿಯಿಂದಲೇ ಟಿಕೆಟ್ ತಗೊಂಡಮೇಲೆ...
ಗೀತೋಪದೇಶವಾಯಿತು ಭಗವಾನ್ ಲತೀಫರಿಂದ. ನೀವು ಕೇಳಿದ್ರೀ ಅಂತ ಹೇಳ್ತೀನಿ... ಬ್ರಾಹ್ಮಣರೇ ಇರಬೇಕು... ಜನಿವಾರ, ಉಡದಾರ ಎಲ್ಲಾ ಇತ್ತು
. ಮುಂದುವರೆಸಿ ತೀರ್ಪುಕೊಟ್ಟ. ಇಲ್ಲೆ ಐನೋರ ಮಠ ಐತಲ್ರಿ. ಹುಡುಗ್ರು ಪಾಠ ಹೇಳಿಸಿಕೊಳ್ಳಕ್ಕೆ ಬರುತ್ತವೆ. ಆದ್ರೇ ರಾತ್ರಿ ಹೊತ್ತು ಪಂಚೆ ಉಟ್ಕೊಂಡು ಯಾಕೆ ರಸ್ತೆ ಮಧ್ಯೆ ಓಡಾಡ್ತಿದ್ರೋ ಕಾಣೆ
ಅಂತ ವರದಿ ಒಪ್ಪಿಸಿದ ಸಾಹೇಬ.
ರಾತ್ರಿ ಅಂತಾನೆ ನಿಮ್ಗೆ ಹೇಗೆ ಗೊತ್ತು
ಸತ್ಯಕಾಮಿಯಾಗಿದ್ದೆ ನಾನು.
ಹನ್ನೊಂದು ಗಂಟೆ ತನಕ ಹಣ್ಣು ಲಾರಿಯಿಂದ ಹಣ್ಣು ಇಳಿಸ್ತಾ ಇದ್ದೆ ನಾನು. ಏನೂ ಇರ್ಲಿಲ್ಲ. ಬೆಳಗ್ಗೆ ನಾಲ್ಕು ಗಂಟೆಗೆ ಪೇಪರ್ ಇಳಿಸ್ಕೊಳಕ್ಕೆ ಬಂದಿದ್ದ ನಮ್ಮ ಮುಸ್ತಫಾನೇ ಮೊದಲು ನೋಡಿದ್ದು ಶವಾನ....ಅವ್ನೆ ಪೊಲೀಸ್ರಿಗೆ ಫೋನ್ ಮಾಡಿದ್ದು. ಅಂದ್ಮೇಲೆ ರಾತ್ರೀಲೆ ತಾನೇ ಆಗಿದ್ದು
ಅಂದ.
ಹೌದು ಅದು ಸರೀನೇ. ನೀವು ಸಿಕ್ಕಿದ್ದು ಸಂತೋಷವಾಯಿತು
ಎಂದು ನಕ್ಕು ಅವರ ಕೈ ಕುಲುಕಿದೆ.
ಥೂ ನಿಮ್ಮ, ಯಾರಾದ್ರೂ ಸತ್ರೆ ನಿಮ್ಗೆ ಸಂತೋಷ ಆಗ್ತದೇನ್ರೀ
ಕೈ ಬಿಡಿಸಿಕೊಂಡು ಶಾಪ ಹಾಕಿದ ಲತಿಫ. ನನಗೂ ನನ್ನ ವರ್ತನೆ ಸ್ವಲ್ಪ ಅತಿಯೇ ಎನಿಸಿತು. ಇಷ್ಟರೊಳಗೆ ನನ್ನಲ್ಲಿದ್ದ ಅಪರಾಧಿ ಭಾವನೆ ದೂರವಾಗಿತ್ತು, ಮನಸ್ಸು ಹಗುರಾಗಿತ್ತು. ಆದರೆ ಪಾಪ ಯಾರೋ ಏನೋ....ಅವನ ಮೇಲೇರಿದ್ದ ಮೊದಲನೇ ಚಕ್ರ ನನ್ನ ಕಾರಿನದಾಗಿಲ್ಲದಿದ್ರೂ, ನನಗೂ ಒಂದು ಪರ್ಸೆಂಟು ಪಾಪ ತಗಲಿರುತ್ತಲ್ವಾ. ಇದೇ ಲಾಜಿಕ್ ಹೇಳೀ ತಾನೆ ಕುಕ್ಕೆ ಸುಬ್ರಹ್ಮಣ್ಯದಲ್ಲೊಂದು ಸಾರಿ, ಘಾಟಿ ಸುಬ್ರಹ್ಮಣ್ಯದಲ್ಲೊಂದು ಸಾರಿ ಸರ್ಪ ಸಂಸ್ಕಾರ ಮಾಡಿಸಿದ್ದು ನಮ್ಮ ಐತಾಳರು. ಯಾಕೋ ಗೊತ್ತಿಲ್ಲ, ಅವನು ಯಾರು, ರಾತ್ರಿಯಲ್ಲಿ ಒಬ್ಬ ಪಂಚೆ ಉಟ್ಟ ಯುವಕ ದಾರಿ ಮಧ್ಯದಲ್ಲಿ ಏನು ಮಾಡುತ್ತಿದ್ದ, ಅವರ ಮನೆಯವ್ರಿಗೆ ಸುದ್ದಿ ಗೊತ್ತಿರುತ್ತಾ? ಹೆಂಡತಿ ಮಕ್ಕಳು ಇದ್ರಾ ಎಂಬೆಲ್ಲಾ ಪ್ರಶ್ನೆಗಳು ನನ್ನನ್ನು ಯಾಕೋ ಕಾಡುತ್ತಿದ್ದವು. ನನಗೇ ಗೊತ್ತಿಲ್ಲದೆಯೇ ನಾನು ಒಂಬತ್ತನೇ ಕ್ರಾಸಿನ ಯತಿರಾಜ ಮಠದ ಮುಂದೆ ನಿಂತಿದ್ದೆ. ಒಳಗೆ ಹೋಗಲೋ ಬೇಡವೋ ಎಂದು ಪರಿತಪಿಸುತ್ತಿದ್ದಾಗ, ಅಲ್ಲೇ ನಿಂತಿದ್ದ ದೊಡ್ಡದಾಗಿ ಕೆಂಪುನಾಮ ಹಾಕಿಕೊಂಡು ಶ್ಲೋಕ ಹೇಳಿಕೊಳ್ಳುತ್ತಿದ್ದ ಒಬ್ಬ ಹಿರಿಯರು ಉಳ್ಳ ವಾಂಗೊ
ಎಂದರು. ಪಂಚೆ ಉಟ್ಟಿದ್ದ ಕಾರಣ ನನಗೆ ಆ ಸ್ವಾಗತವೆಂದು ಅರಿಯಲು ನನಗೆ ಹೊತ್ತು ಹಿಡಿಯಲಿಲ್ಲ. ನಾನು ಸ್ನಾನ ಮಾಡದೇ ಇದ್ದ ನನ್ನ ಮುಸುರೇ ಮೂತಿಯನ್ನು ಮರೆ ಮಾಚುತ್ತ ಅವರಿಗೆ ಕೈ ಮುಗಿದೆ.
ಯಾರ್ ನಿಂಗೆ, ಎನ್ನ ವೇಣುಂ
ಎಂದು ತಮಿಳಿನಲ್ಲಿ ವಿಚಾರಿಸಿದರು. ಅಯ್ಯಂಗಾರರಲ್ಲಿ ಅದೊಂದು ಪಾಸ್ವರ್ಡ್ ಟೆಸ್ಟ್. ತಮಿಳು ಬಾರದ ನಾನು,
ನಾನು ನವೀನ್ ಅಂತ, ನಮ್ಮದೂ ನಾಮವೇ, ಆದರೇ ಅಂಗಾರ, ಅಕ್ಷತೇನು ಇಟ್ಕೋತೀವಿ
ಬೇರೆಯದೇ ಪಾಸ್ವರ್ಡ್ ಪ್ರಯೋಗಿಸಿದೆ.
ಓಹೋ.... ಮಾಧ್ವರಾ
? ಎಂದರು. ಪಾಸ್ವರ್ಡ್ ವರ್ಕ್ ಆಯ್ತು.
ಏನ್ ಸಮಾಚಾರ, ಯಾವ್ದಾದ್ರೂ ವಿಳಾಸ ಬೇಕಿತ್ತೆ
ವಿಚಾರಿಸಿದರು ಐಗಳು.
ಹಾಗೇನೂ ಇಲ್ಲ. ಇಲ್ಲೇ, ನಿನ್ನೆ ರಾತ್ರಿ ಒಂದು ಕೆಟ್ಟ ಆಕ್ಸಿಡೆಂಟ್ ಆಗಿದೆ. ನಿಮಗೆ ಗೊತ್ತಿದೆ ಅಂತ ಭಾವಿಸ್ತೀನಿ. ಶವದ ಮೇಲೆ ಪಂಚೆ, ಜನಿವಾರ ಸಿಕ್ತಂತೆ. ಅದಕ್ಕೆ ಸತ್ತವರು ನಿಮ್ಮೋರಾ ಅಥವಾ ನಮ್ಮವರಾ ಅಂತ ತಿಳಿಯೋ ಕುತೂಹಲ ಇತ್ತು. ನಮ್ಮ ಮಠನೂ ಇಲ್ಲಿಂದ ದೂರ ಇಲ್ಲ ನೋಡಿ
. ಅವರಿಗೆ ರುಚಿಸುವ ಲಾಜಿಕ್ ಉಪಯೋಗಿಸಿದರೆ ಮಾಹಿತಿ ಸಂಗ್ರಹಣೆ ಸುಲಭ ಎಂದುಕೊಂಡು ಒಂದು ಪ್ರಯತ್ನ ಪಟ್ಟೆ.
ಹೌದೇ? ಪಂಚೆ, ಜನಿವಾರ ಸಿಕ್ಕಿದೆಯೇ....ಒಂದು ನಿಮಿಷ ಇರಿ,
ಎಂದು ತಡೆದು ಶಡಗೋಪಾ...ಕಣ್ಣಾ ಶಡಗೋಪಾ
ಎಂದು ಪ್ರೀತಿಯಿಂದ ಯಾರನ್ನೋ ಕರೆದರು. ಒಳಗಿನಿಂದ ಒಬ್ಬ ಪಂಚೇದಾರಿ ಹದಿನೆಂಟು ಹತ್ತೊಂಬತ್ತರ ಯುವಕ ‘ತಿರುಪ್ಪಾವೈ' ಪುಸ್ತಕ ಹಿಡಿದು ತಮಿಳಿನಲ್ಲಿ ಹಾಡಿನ ರೀತಿಯ ಶ್ಲೋಕವನ್ನು ಗುನುಗುತ್ತಲೇ ಬಂದ. ಹಿರಿಯರು ಅವನ ಕಿವಿಯಲ್ಲಿ ಏನೋ ಕೇಳಿದರು. ಅವನೂ ಗಾಬರಿಗೊಂಡಂತಾಗಿ ಒಳಗೆ ಹೋಗಿ ಇನ್ನೊಂದಿಷ್ಟು ಜನರನ್ನು ಕರೆತಂದ. ಹಾಗೇ ತನ್ನ ಹಳೆಯ ಮೊಬೈಲ್ ಹ್ಯಾಂಡ್ಸೆಟ್ನಿಂದ ಯಾರಿಗೋ ಕಾಲ್ ಮಾಡಿ ಹಿರಿಯರಿಗೆ ಕೊಟ್ಟ, ಅವರು ಯಾರ ಬಳಿಯೋ ಏನೋ ತಮಿಳಿನಲ್ಲಿ ಮಾತನಾಡುತ್ತಿದ್ದರು... ಅದರಲ್ಲಿ ನನಗೆ ಹೀಗೆ ಅರ್ಥವಾಯಿತು. ನಮಸ್ಕಾರ... ಕಾಫಿ ಆಯಿತೇ... ರಾಮಾನುಜ ಇದ್ದಾನ್ಯೋ... ಏನು ಇಲ್ಲಿಗಾ?? ಇನ್ನೂ ಬಂದಿಲ್ಲಾ... ಹೊರಟು ಎಷ್ಟು ಹೊತ್ತಾಯಿತ್ತು... ಹೌದಾ... ನೀವು ಏಳುವುದರೊಳಗೇ ಎದ್ದು ಹೊರಟಿದ್ದನೇ? ಏ...ಏನಿಲ್ಲಾ... ದಿನಾ ಬರುತ್ತಿದ್ದವನು...ಇನ್ನೂ ಇವತ್ತು ಬಂದಿಲ್ಲ... ಕೇಳಿ ನೋಡ್ತೀನಿ....ಇಲ್ಲೇ ಎಲ್ಲಾದ್ರೂ ಇರ್ತಾನೆ.... ಏನೂ ಇಲ್ಲಪ್ಪಾ... ನೀವು ಧೈರ್ಯದಿಂದಿರಿ.... ನಾನೇ ಫೋನ್ ಮಾಡ್ತೀನಿ... ನೀವು ಎಷ್ಟು ಗಂಟೆಗೆ ಬರ್ತೀರಾ... ಹಾಂ... ಸರಿ ಬನ್ನಿ...
ಎಂದು ಫೋನ್ ಹಿಂದಿರುಗಿಸಿದರು. ನನ್ನ ಕಡೆ ಒಮ್ಮೆ ನೋಡಿ ಎಲ್ಲಿ ಆಗಿರೋದು
ಎಂದರು... ನಾನು ಇಲ್ಲೇ ಮಾರ್ಕೆಟ್ ಪಕ್ಕ
ಎಂದೆ. ತೋರಿಸ್ತೀರಾ
ಎಂದರು...ಬನ್ನಿ
ಎಂದೆ. ಚಪ್ಪಲಿಯನ್ನೂ ಹಾಕಿಕೊಳ್ಳದೇ ಹೊರಟುನಿಂತರು.
ಅವರನ್ನು ಹಿಂಬಾಲಿಸುತ್ತಿದ್ದ ಶಡಗೋಪನನ್ನು ತಡೆದು ಹೇಳಿದರು....ನೀನು ಇಳ್ಳಂಗೋವನನ್ನು ಕರೆದುಕೊಂಡು ಪೋಲೀಸ್ ಸ್ಟೇಷನ್ನಲ್ಲಿ ವಿಚಾರಿಸು
. ಅವನು ಗಾಬರಿಯಿಂದ ತಲೆಯಲ್ಲಾಡಿಸಿ ಇನ್ನೊಬ್ಬ ಮಧ್ಯ ವಯಸ್ಕರನ್ನು ಒಂದು ಟಿ.ವಿ.ಎಸ್ ಎಕ್ಸೆಲ್ ನಲ್ಲಿ ಕುಳ್ಳರಿಸಿಕೊಂಡು ಹೊರಟ. ನಾನು ಆ ಹಿರಿಯರನ್ನು ಮತ್ತೊಂದಷ್ಟು ಜನ ವಿದ್ಯಾರ್ಥಿಗಳನ್ನು ಕರೆದುಕೊಂಡು ಸ್ಥಳಕ್ಕೆ ನಡೆದೆ.
ಇತ್ತೀಚೆಗೆ ಅವನ ಧ್ಯಾನವೆಲ್ಲೋ ಇರ್ತಿತ್ತು. ಸುಮಾರು ಹೊತ್ತು ಪುಸ್ತಕಗಳಲ್ಲೇ ಮುಳುಗಿರುತ್ತಿದ್ದ. ಹೊಸ ಪಾಠಗಳ ಕಡೆ ಒಲವು ಕಡಿಮೆಯಾಗಿತ್ತು. ಏನೋ ಗೀಚುತ್ತಿದ್ದ. ಸುಮಾರು ರಾತ್ರಿಯಾದರೂ ಮನೆಗೇ ಹೋಗುತ್ತಿರಲಿಲ್ಲ. ತುಂಬಾ ಒಳ್ಳೇ ಹುಡುಗ. ಇವತ್ತು ಎಲ್ಲಾರೂ ಪಾಠಕ್ಕೆ ಬಂದಿದ್ದಾರೆ. ಅವನೊಬ್ಬನೇ ಇಲ್ಲ. ಶಡಗೋಪನ ಜೊತೆ ರಾತ್ರಿ 11:00 ಗಂಟೆಯ ತನಕ ಮಾತನಾಡಿ ಹೊರಟನಂತೆ, ಮನೆಗೂ ಹೋಗಿಲ್ಲ. ಹಾಗಾಗಿ ನನಗೆ ಅನುಮಾನ. ಭಗವಂತ..ಅವನಲ್ಲದಿದ್ರೆ ಸಾಕು
ನಾನು ಕೇಳದಿದ್ದರೂ ಹೇಳಿಕೊಂಡು ಹೊರಟರು ಹಿರಿಯರು. ನಾನು ಹಾಗೇ ಅಂದುಕೊಂಡೆ.... ಅವನಲ್ಲದಿದ್ರೆ ಸಾಕಪ್ಪ ದೇವರೇ.... ಅಯ್ಯೋ... ಅವನಲ್ಲದಿದ್ರೆ ಏನಾಯ್ತು, ಯಾರೋ ಒಬ್ರು ಸತ್ತಿದ್ದಾರೆ ಅಲ್ವಾ, ಅವರಿಗೂ ಮನೆ, ಮಠ, ಸ್ನೇಹಿತರು, ಸಂಬಂಧಿಕರೂ ಇರ್ತಾರಲ್ವಾ. ಯಾರೂ ಸಾಯಬಾರ್ದು... ಎಷ್ಟು ಕಷ್ಟವಲ್ಲವೇ ಸಾವಿನ ಪರಿಸ್ಥಿತಿಯನ್ನು ಎದುರಿಸುವುದು. ನನ್ನ ಹೆಜ್ಜೆಗಳು ನಿಧಾನಿಸಿ, ಕೊನೆಗೆ ನಿಂತಿತು. ಇಲ್ಲೇ
ಎಂದೆ. ಕನ್ನಡಕ ತೆಗೆದು ಆಚೀಚೆ ನೋಡ ತೊಡಗಿದರು ಹಿರಿಯರು. ಏನೋ ಹುಡುಕ ತೊಡಗಿದರು ಬೇರೆ ಶಿಷ್ಯರು....
ಭಗವಂತ.... ಎಷ್ಟು ಘೋರವಾಗಿದೆ ದೃಶ್ಯ... ಏನೂ ಉಳಿದಿಲ್ಲವಲ್ಲಪ್ಪಾ
ತುಂಬಿದ ಕಣ್ಣುಗಳಿಂದ ನುಡಿದರು ಹಿರಿಯರು. ಒಬ್ಬ ಯುವ ಶಿಷ್ಯ ಅವರ ಕಿವಿಯಲ್ಲಿ ಬಂದು ಏನೋ ಉಸುರಿದ. ಆ... ಹೌದೇ...ಆದ್ರೇ ಅದೇ ತರಹ ಮಂಕಿಕ್ಯಾಪ್ ಬೇರೆಯವರ ಬಳಿಯೂ ಇರಬಹುದಲ್ವಾ
ಯಾಕೋ ಎಲ್ಲರ ಗಮನವೂ ಆ ಮಂಕೀ ಕ್ಯಾಪಿನ ಮೇಲೆ ಬಿತ್ತು... ಹಿರಿಯರು ಮಂಕಿಕ್ಯಾಪ್ ನ ಹತ್ತಿರ ಬಂದು ಕನ್ನಡಕ ಧರಿಸಿ... ದಿಟ್ಟಿಸಿ ನೋಡಿದರು... ಒಮ್ಮೆಲೆ ಅಯ್ಯೋ... ಕಡವಳೇ... ರಾಮಾನುಜಾ.. ಕಣ್ಣಾ...
ಎಂದು ಕುಸಿದು ಕೂತರು.... ಶಿಷ್ಯರೆಲ್ಲಾ ಧಾವಿಸಿ ಅವರನ್ನು ಎತ್ತಿ ಫುಟ್ಪಾತ್ ಮೇಲೆ ಕೂಡಿಸಿದರು. ನಾನೂ ಮಂಕೀ ಕ್ಯಾಪನ್ನು ದಿಟ್ಟಿಸಿ ನೋಡಿದೆ. ಅದರ ಮೇಲೆ ಶ್ರೀರಾಮ ಜಯಂ
ಎಂದು ಕನ್ನಡದಲ್ಲಿ ಕಸೂತಿ ಮಾಡಲಾಗಿತ್ತು.... ಅಯ್ಯೋ ದೈವವೇ.... ಎಂತಹಾ ದುರ್ಗತಿ... ಎಂಥಹ ದುರ್ದಿನ ಇವತ್ತು.... ಅಷ್ಟರೊಳಗೆ ಲತೀಫಾ ಒಂದು ಚೇರನ್ನು, ನೀರನ್ನು ಹಿಡಿದು ತಂದು ಹಿರಿಯರಿಗೆ ಕೊಡಲು ಹೇಳಿ ನೀರು ಕೊಟ್ಟ. ಒಂದು ಗುಟುಕು ಕುಡಿದು, ಮಿಕ್ಕಿದ ನೀರನ್ನು ಮುಖಕ್ಕೆ ಎರಚಿ ಹಣೆಯ ಮೇಲೆ ರಾರಾಜಿಸುತ್ತಿದ್ದ ದೊಡ್ಡ ನಾಮವನ್ನು ತೊಳೆದುಕೊಂಡು ದೊಡ್ಡ ನಿಟ್ಟುಸಿರು ಬಿಟ್ಟರು. ಒಂದು ದಿವ್ಯ ವೈರಾಗ್ಯ ಅವರ ಮುಖದ ಮೇಲೆ ಬಂದಿತ್ತು. ಹಿರಿಯರ ಸಮಯಪ್ರಜ್ಞೆ ಹಾಗು ಕರ್ತವ್ಯಪ್ರಜ್ಞೆ ಎಂದರೆ ಇದೇ ಅಲ್ಲವೇ. ಆಗಿರುವ ದುರಂತವನ್ನು ಪಕ್ಕಕ್ಕಿಟ್ಟು, ಮುಂದಿನ ಕರ್ತವ್ಯದ ಮೇಲೆ ಗಮನ ಹರಿಸಬೇಕು ಅಲ್ಲವೇ.... ಅಷ್ಟರೊಳಗೆ ಲತಿಫ ನನ್ನ ಪಕ್ಕ ಬಂದು ಮೆಲ್ಲಗೆ ಇವರ ಮಗನಾ?
ಎಂದ.
ಇಲ್ಲಾ ಇವರ ಶಿಷ್ಯ
ಎಂದೆ. ತಥ್ ತಥ್ ತಥ್ ತಥ್
ಎಂದು ಲೊಚಗುಟ್ಟುತಾ, ಎರಡು ಕೈಗಳನ್ನೂ ಬಟ್ಟಲು ಮಾಡಿ, ಕಣ್ಣು ಮುಚ್ಚಿ ಸತ್ತವನ ಆತ್ಮ ತಣ್ಣಗಿರಲಿ ಎಂದು ಅಲ್ಲಾಹುವಿನಲ್ಲಿ ಬೇಡಿದ ಲತಿಫ.
ಶಡಗೋಪನಿಗೆ ಫೋನ್ ಮಾಡಿ ಅಲ್ಲೇ ಇರಕ್ಕೆ ಹೇಳಿ. ನಾನೇ ಬರ್ತೀನಿ ಅಂತ ಹೇಳಿ, ಹಾಗೆ ಇವನ ಮನೆಯವರಿಗೆ ಏನೂ ಹೇಳಬೇಡಿ, ನಾನೇ ಹೇಳ್ತೀನಿ
ಎಂದು ಮೇಲೆದ್ದು ನನಗೆ ನಮಸ್ಕರಿಸಿ ಹೊರಟರು.
ನನಗೂ ಏನೋ ಕಳವಳ, ಏನೋ ತಳಮಳ. ಭಾರದ ಹೆಜ್ಜೆಗಳನ್ನಿಡುತ್ತಾ ಬೈಕೇರಿ ಮನೆ ಸೇರಿದೆ.
ಎಲ್ಲಿಗ್ ಹೋಗಿದ್ಯೋ ಸ್ನಾನಾನೂ ಮಾಡದೆ
ವಿಚಾರಿಸಿದರು ಅಮ್ಮ. ಉತ್ತರಕೊಡೋ ಪ್ರಮೇಯಕ್ಕೆ ಬೀಳದೆ, ಹಾಲಿನಲ್ಲಿ