Devarakaadu
()
About this ebook
ದೇವರ ಕಾಡು ಬಗ್ಗೆ:
ಐದು ಕಥೆಗಳಿರುವ ಕಥಾ ಸಂಕಲನ. ದೇವರ ಕಾಡು ಮತ್ತು ಮಿಂಚಿನ ಬಳ್ಳಿ ಎರಡು ನೀಳ್ಗತೆಗಳು. ದೇವರ ಕಾಡು ವಿನಲ್ಲಿ ಸಿದ್ದಾರ್ಥ ಮತ್ತು ಸುನೀಲ್ ಪ್ಯಾರಾ ಗ್ಲೈಡಿಂಗ್ ಹಾರಾಟವನ್ನು ಪಶ್ಚಿಮ ಘಟ್ಟಗಳಲ್ಲಿ ನಡೆಸಲು ಯೋಜನೆ ರೂಪಿಸುತ್ತಾರೆ. ಸಿದ್ದಾರ್ಥ ಏರುಗಾಳಿಯ ಹೊಡೆತಕ್ಕೆ ಸಿಕ್ಕಿ ದಟ್ಟ ಅರಣ್ಯದ ಒಳಗೆ ಬೀಳುತ್ತಾನೆ. ಅಲ್ಲಿ ಬುಡಕಟ್ಟು ಹಳ್ಳಿಯ ಜನರ ಒಡನಾಟ, ಅವರನ್ನು ಒಕ್ಕಲೆಬ್ಬಿಸುವ ಪಟ್ಟಭದ್ರ ಹಿತಾಶಕ್ತಿ ಗಳ ವಿರುದ್ಧ ಹೋರಾಟ, ಕಾಡು ಕಡಿಯಲು ಹೊರಟವರು ಕಾಡು ತೋಳಗಳಿಗೆ ಬಲಿಯಾಗುವ ಕಥೆ ಅನೇಕ ತಿರುವು ಪಡೆಯುತ್ತಾ ಹೋಗುತ್ತದೆ..
"ಮಿಂಚಿನ ಬಳ್ಳಿ", genetically mutated ತಳಿಗಳ ಹೊಸ ಸಂಶೋಧನೆ ಹೇಗೆ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದರ ರೋಚಕ ಚಿತ್ರಣ. ಉಳಿದ ಕಥೆಗಳಲ್ಲಿ, ಗುರು ಸೂರ್ಯನಾಗುವ ಕಥೆ "ಅನಂತ" ದಲ್ಲಿ, ಸಾಫ್ಟವೆರ್ ಇಂಜಿನಿಯರ್ ಹಳ್ಳಿ ಬೆಳಸುವ ಕಥೆ "ಹೊನ್ನಗಿಂಡಿ" ಯಲ್ಲಿ ಬಂದರೆ, "ಡಾಲರ್ ಸಿಕ್ಕಿದ ಕತೆ" ಯಲ್ಲಿ ನೆಮ್ಮದಿ ಸಿಗುವ ಬಗೆಯನ್ನು ಸಾಂಕೇತಿಕವಾಗಿ ಹೇಳಿದೆ.
Read more from Gurupaada Beluru
Agarta Rating: 0 out of 5 stars0 ratings4D Rating: 0 out of 5 stars0 ratings
Related to Devarakaadu
Related ebooks
ಯಶೋಃಗೀತ Rating: 0 out of 5 stars0 ratingsBaduku Chithra Chittara Rating: 0 out of 5 stars0 ratingsTappu Maadona Banni! Rating: 4 out of 5 stars4/5EVEREST IN MIND (KANNADA) Rating: 0 out of 5 stars0 ratingsKempu Kalave Rating: 0 out of 5 stars0 ratingsTaalikoteya Kadanadalli Rating: 0 out of 5 stars0 ratingsVaarasudhara Rating: 0 out of 5 stars0 ratingsNataka Dange Rating: 0 out of 5 stars0 ratingsPreetiya Belaku Rating: 0 out of 5 stars0 ratingsDoctor Sukanya Rating: 0 out of 5 stars0 ratingsBottom Item Rating: 5 out of 5 stars5/5Mrityorma Amritam Gamaya Rating: 0 out of 5 stars0 ratingsParidhi Rating: 0 out of 5 stars0 ratingsParimidita Rating: 0 out of 5 stars0 ratingsPunarapi Jananam Rating: 4 out of 5 stars4/5Geethantharanga Darshanam Rating: 0 out of 5 stars0 ratingsBest of Lovelavike Rating: 5 out of 5 stars5/5Kanamareyada Kathegalu Bhaaga 1 Rating: 0 out of 5 stars0 ratingsHaddina Rekke Saadu Rating: 5 out of 5 stars5/5Sathsanchaya Rating: 0 out of 5 stars0 ratingsKengulabi Rating: 0 out of 5 stars0 ratingsManasina Alegalu Rating: 0 out of 5 stars0 ratingsGodegala Naduve Rating: 0 out of 5 stars0 ratingsVishwam Shubham Mangalam Rating: 0 out of 5 stars0 ratingsHei Kaapurusha Rating: 0 out of 5 stars0 ratingsSamadhana Bhaaga 1 Rating: 0 out of 5 stars0 ratingsTamasoma Jyothirgamaya Rating: 0 out of 5 stars0 ratingsOdinaramane: ಓದಿನರಮನೆ Rating: 0 out of 5 stars0 ratingsYashassina Rahasyagalu Rating: 3 out of 5 stars3/5Karala Garbha Rating: 0 out of 5 stars0 ratings
Reviews for Devarakaadu
0 ratings0 reviews
Book preview
Devarakaadu - Gurupaada Beluru
http://www.pustaka.co.in
ದೇವರಕಾಡು
Devarakaadu
Author:
ಗುರುಪಾದ ಬೇಲೂರು
Gurupaada Beluru
For more books
http://www.pustaka.co.in/home/author/gurupaada-beluru
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಪರಿವಿಡಿ
ದೇವರ ಕಾಡು
ಕಾಡು ಸೇರುವ ಮುನ್ನ
ಎರಡನೇ ಮುದ್ರಣಕ್ಕೆ
ಮುನ್ನುಡಿ
ದೇವರ ಕಾಡು
ಅಧ್ಯಾಯ 1
ಅಧ್ಯಾಯ 2
ಅಧ್ಯಾಯ 3
ಅಧ್ಯಾಯ 4
ಅಧ್ಯಾಯ 5
ಅಧ್ಯಾಯ 6
ಅಧ್ಯಾಯ 7
ಅಧ್ಯಾಯ 8
ಅಧ್ಯಾಯ 9
ಡಾಲರ್ ಸಿಕ್ಕಿದ ಕಥೆ
ಅನಂತ
ಹೊನ್ನ ಗಿಂಡಿ
ಮಿಂಚಿನ ಬಳ್ಳಿ
1. ತೋಟದಲ್ಲಿ ಚೀತ್ಕಾರ
2. ಕಣ್ಣಿಗೆ ಬೀಳದ ಚಿರತೆ
3. ಜಡೆಮುನಿ!
4. ಮೂರನೇ ಆಘಾತ
5. ವಿದ್ಯುಲ್ಲತಾ
6. ಕುಲಾಂತರಿ
7. ಪ್ರೀತಿಯೋ, ಸಂಶೋಧನೆಯೋ
8. ಪ್ರಕೃತಿ ಪುರುಷ
ಉಪ ಸಂಹಾರ
ಗುರುಪಾದ ಬೇಲೂರು
1961 ರಲ್ಲಿ ಹಾಸನ ಜಿಲ್ಲೆ ಬೇಲೂರಿನ ಶ್ರೀ ಗುರಪ್ಪ ಮತ್ತು ಗೌರಮ್ಮ ದಂಪತಿಗಳಿಗೆ ಹಿರಿಯ ಮಗನಾಗಿ ಜನಿಸಿದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಇ. ಪದವಿ ಪಡೆದು, ಕೆ.ಇ.ಎಸ್. ಮೂಲಕ ಆಯ್ಕೆಯಾಗಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ಪತ್ನಿ ಮಂಜುಳಾ, ಮಕ್ಕಳಾದ ರಚಿತಾ, ರಶ್ಮಿ ಇವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
`ದೇವರ ಕಾಡು’ ಇವರ ಮೊದಲ ಕಥಾ ಸಂಕಲನ.
*****
ದೇವರ ಕಾಡು
ಗುರುಪಾದ ಬೇಲೂರು
DEVARA KAADU
(A Collection of short stories)
Written by
Gurupada Belur
*****
ಕಾಡು ಸೇರುವ ಮುನ್ನ
(ಮೊದಲ ಮುದ್ರಣಕ್ಕೆ)
ಅರವತ್ತಾದ ನಂತರ ಸಾಮಾನ್ಯವಾಗಿ ಹೇಳುವ ಮಾತು `ಅಯ್ಯೋ, ಬಿಡಪ್ಪಾ, ನಮ್ಮದೇನಿದೆ? ಊರು ಹೋಗು ಅಂತಾ ಇದೆ, ಕಾಡು ಬಾ ಅಂತ ಇದೆ!’
ಜೀವನದಲ್ಲಿ ಇಲ್ಲಿಯವರೆಗೆ ಹೋರಾಡಿದ್ದೆಲ್ಲಾ ಬರೀ ಗೋಳು, ಹೊಡೆದಾಡಿದ್ದೆಲ್ಲಾ ಬರೀ ಗೀಳು, ಜೀವನವೇ ದೊಡ್ಡ ಓಳು! ಅನ್ನುವ ಜ್ಞಾನೋದಯವಾಗಿ ಬರುವ ಮಾತು ಅದು. ಆದರೆ ನನಗೆ ಐವತ್ತರ ಅಂಚಿನಲ್ಲಿ ಬರೆಯುವ ಆಸೆ ಬಂದಿದ್ದು, ಅದು ಕಥಾರೂಪದಲ್ಲಿ ಮೈದಳೆಯುವಂತಾಗಿದ್ದು, ಸಹೃದಯಿ ಮಿತ್ರರು ಅದನ್ನು ಓದಿ ನಾಲ್ಕು ಒಳ್ಳೆಯ ಮಾತನಾಡಿದ್ದು, ಕೊನೆಗೆ ಅದು ಪುಸ್ತಕ ರೂಪದಲ್ಲಿ ಸಾಕಾರಗೊಳ್ಳುತ್ತಿರುವುದು ನನ್ನಲ್ಲಿ ಉತ್ಸಾಹ ತುಂಬಿ ಕಾಡು ಸೇರುವುದನ್ನು ಇನ್ನೂ ಇಪ್ಪತ್ತು ವರ್ಷ ಮುಂದೂಡಬಹುದೇನೋ ಅನ್ನಿಸುತ್ತಿದೆ!
ಹಾಗಂತ ಬರವಣಿಗೆಯ ತುಡಿತ ಒಮ್ಮೆಲೇ ಬಂದಿದ್ದೇನೂ ಅಲ್ಲ. ಕಾಲೇಜು ದಿನಗಳಲ್ಲಿ ಮಾಸಪತ್ರಿಕೆಗಳಲ್ಲಿ ನನ್ನ ಕವನಗಳು, ಸಣ್ಣಪುಟ್ಟ ಲೇಖನಗಳು ಬರುತ್ತಿದ್ದವು, ಆದರೆ ಅವೆಲ್ಲವೂ ವೈಯಕ್ತಿಕ ಮನಸ್ಸಿನ ತುಡಿತಗಳಾಗಿದ್ದವೇ ಹೊರತೂ ಸಮಾಜಮುಖಿ ಅಭಿವ್ಯಕ್ತಿಗಳಾಗಿರಲಿಲ್ಲ. ಬರೆಯುವವರೆಲ್ಲಾ ಸಮಾಜದ ಉದ್ಧಾರದ ಸಂದೇಶವನ್ನಿಟ್ಟುಕೊಂಡೇ ಕಥೆ ಬರೆಯಬೇಕೆಂದೇನೂ ಇಲ್ಲ ಬಿಡಿ. ತಾನು ಬದುಕುತ್ತಿರುವ ಸಮಾಜದಲ್ಲಿನ ಆಗು ಹೋಗುಗಳನ್ನು ನೆಟ್ಟ ಕಣ್ಣು, ಬಿಟ್ಟ ಬಾಯಿಯಿಂದ ನೋಡುವ ಬೆರಗು ಅವನಲ್ಲಿದ್ದರೆ ಅಷ್ಟೇ ಸಾಕು. ಆ ಬೆರಗೇ ಅವನ ಬರವಣಿಗೆಯಾಗುತ್ತದೆ. ಅದರಲ್ಲಿ ಸುರಿಸುವ ಬರಹಗಾರನ ಮನದಿಂಗಿತವೇ ಸಂದೇಶವಾಗುತ್ತದೆ ಎಂಬುದು ನನ್ನ ಭಾವನೆ.
ಈಗಿನ ಮಾಹಿತಿ ಯುಗದಲ್ಲಿ, ನಮ್ಮ ಕಲ್ಪನಾ ಸಾಮರ್ಥ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಮಾಜಿಕ ಜೀವನದ ಬದಲಾವಣೆಗಳಾಗುತ್ತಿವೆ. ಈ ವೇಗ ಎಷ್ಟಿದೆ ಎಂದರೆ, ಒಂದು ಸಣ್ಣ ಅಪಘಾತವಾದರೂ ಇಡೀ ಸಾಮಾಜಿಕ ನೆಲೆಗಟ್ಟು, ಮತ್ತೆ ಚೇತರಿಸಿಕೊಳ್ಳಲಾಗದಂತೆ ನಾಶವಾಗುವ ವೇಗ. ಈ ವೇಗಕ್ಕೆ ಕಡಿವಾಣ ಹಾಕುವ ಮಾತನಾಡಿದರೆ, ಪ್ರಗತಿ ವಿರೋಧಿ ಎನಿಸಿಕೊಳ್ಳಬೇಕಾಗುತ್ತದೆಯೋ ಏನೋ. ಎಲ್ಲೋ ಒಂದು ಕಡೆ ನಮ್ಮ ಸಾಂಸ್ಕøತಿಕ ಹಿನ್ನೆಲೆಯನ್ನೂ ಬಿಡದೆ, ಪ್ರಗತಿಯನ್ನೂ ತಿರಸ್ಕರಿಸದೆ, ಎಚ್ಚರಿಕೆಯಿಂದ ಸಮಾಜವನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಇದೆ ಅನ್ನಿಸುತ್ತದೆ. ಅಂತಹ ಉದ್ದೇಶ ಈ ಕಥೆಗಳಲ್ಲಿ ಕಂಡುಬಂದಲ್ಲಿ ಅದು ಸಹೃದಯ ಓದುಗರ ಸ್ಪಂದನೆಯೆಂದೇ ಭಾವಿಸುತ್ತೇನೆ.
ವಿವೇಕವಿಲ್ಲದ ಜ್ಞಾನ ದುಃಖವನ್ನು ತರುತ್ತದೆ, ಹಾಗೆಯೇ ವೇದಾಂತವಿಲ್ಲದ ವಿಜ್ಞಾನ ವಿನಾಶವನ್ನು ತರುತ್ತದೆ. ಇಂತಹ ವಿಜ್ಞಾನದ ಬಳಕೆ ಇಂದು ಅತಿಯಾದ ಕಾರಣದಿಂದಾಗಿ, ಸಮಾಜದಲ್ಲಿ ಭೌತಿಕ ಸಂಪತ್ತಿನ ಮೋಹವೂ, ಪಾರಮಾರ್ಥಿಕ ವಿಷಯಗಳ ಬಗ್ಗೆ ಅತೀವ ನಿರ್ಲಕ್ಷ್ಯವೂ ಕಂಡುಬರುತ್ತಿದೆ. ಮನುಷ್ಯನ ಹೊರಗಿನ ಚಟುವಟಿಕೆಗಳನ್ನು ವಿಜ್ಞಾನ ವಿಮರ್ಶೆ ಮಾಡುತ್ತದೆ. ಆದರೆ ಮನುಷ್ಯನ ಒಳಗಿನ ಚಟುವಟಿಕೆಗಳ ಬಗ್ಗೆ ಅದು ಸಂಬಂಧ ಇಟ್ಟುಕೊಂಡಿಲ್ಲ. ಹೀಗಾಗಿ ಮನುಷ್ಯ ಕೂಡ ಒಂದು ಭೌತವಸ್ತುವಾಗಿ ಮಾರ್ಪಾಟಾಗಿದ್ದಾನೆ. ವೈಜ್ಞಾನಿಕ ಮನೋಭಾವವೆಂದರೆ ಬರೀ ಕಾರಣಗಳನ್ನು ಹುಡುಕುವುದಲ್ಲ. ಅದು ಪ್ರತಿಯೊಂದರಲ್ಲೂ ದೈವವನ್ನು ಅನ್ವೇಷಿಸುವ ಸ್ವಭಾವ. ಅದೇ ಸತ್ಯಾನ್ವೇಷಣೆಯೆಂದು ಹಿರಿಯರು ಹೇಳುತ್ತಾರೆ. ಈ ಬಾಹ್ಯ ಪ್ರಕೃತಿ ಹಾಗೂ ಆಂತರಿಕ ಪ್ರಕೃತಿಯ ಸಮ್ಮಿಳನವನ್ನು ಈ ಕಥೆಗಳಲ್ಲಿ ಅಡಗಿಸಿಡುವ ಸಣ್ಣ ಪ್ರಾಮಾಣಿಕ ಪ್ರಯತ್ನ ನನ್ನದು.
ಯಾವುದಕ್ಕೂ ಸಮಯ ಸಿಗದ ಇಂದಿನ ಜೀವನ ಶೈಲಿಯ ನಡುವೆ ಓದಲು ಸಮಯ ಮೀಸಲಿಡುವ, ಅಕ್ಷರಾಭಿಮಾನಿಗಳಿಗೆ ಎಷ್ಟು ಅಭಿನಂದನೆಗಳನ್ನು ಹೇಳಿದರೂ ಸಾಲದು. ಎರಡು-ಮೂರು ಪುಟಗಳ ಚುಟುಕು ಕಥೆಗಳಾದರೆ ಕಣ್ಣಾಡಿಸಿಬಿಡಬಹುದು. ಆದರೆ ನೀಳ್ಗತೆ, ಕಾದಂಬರಿಗಳು ಓದುಗರ ಹೆಚ್ಚಿನ ಸಮಯ ಬೇಡುತ್ತವೆ. ಹಾಗಾಗಿ ಕಥೆಯ ನಿರೂಪಣೆಯು ಬರೆದವನ ಭಾವನೆಗಳನ್ನು ಓದುಗರ ಮನದಲ್ಲಿಯೂ ಮೂಡಿಸಿದರೆ ಆ ಬರವಣಿಗೆ ಸಾರ್ಥಕವೆಂದು ಎನಿಸಿಕೊಳ್ಳುತ್ತದೆ.
ನನ್ನ ಈ ಪ್ರಯತ್ನಕ್ಕೆ ನೀರೆರೆದು ಪೋಷಿಸಿದವರು ಹಿರಿಯರಾದ ಶ್ರೀ ಬಿ.ವಿ. ವೀರಭದ್ರಪ್ಪನವರು. ಕಥೆಗಳನ್ನು ಬರೆದಂತೆ ಕಂತುಕಂತಾಗಿ ಕಳಿಸಿದಾಗ, ತಮ್ಮ ವೈಚಾರಿಕ ಚಿಂತನೆಯ ನೆಲೆಗಟ್ಟಿನ ಹಿನ್ನೆಲೆಯಲ್ಲಿಯೂ, ನನ್ನ ಕಲ್ಪನೆಗಳಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದವರು. ಪ್ರಕೃತಿಯನ್ನು ಬದಲಾಯಿಸದೆ, ಒಂದಾಗಿ ಹೋಗಬೇಕು ಅನ್ನುವ ವಾದಕ್ಕೆ, ಬದಲಾವಣೆಯು ಪ್ರಗತಿಯಲ್ಲವೇ, ಬದಲಾವಣೆಯೊಂದೇ ಶಾಶ್ವತವಲ್ಲವೇ ಎಂದು ಮೆದುಳನ್ನು ಕೆಣಕಿದವರು. ಈ ಬದಲಾವಣೆಯು ನೈಸರ್ಗಿಕವಾಗಿರಲಿ ಎಂದು ಹೇಳಲು ಈ ಕಥೆಗಳಲ್ಲಿ ಪ್ರಯತ್ನಪಟ್ಟಿದ್ದೇನೆ. ಮಾರ್ಗದರ್ಶಕರಾದ ಶ್ರೀಯುತರಿಗೆ ನನ್ನ ಧನ್ಯವಾದಗಳು.
ಈ ಸಂಕಲನದಲ್ಲಿರುವ ಕಥೆಗಳನ್ನು ಕರಡು ರೂಪದಲ್ಲಿದ್ದಾಗಲೆ ಓದಿ, ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲಾ ಗೆಳೆಯ, ಗೆಳತಿಯರಿಗೆ ನನ್ನ ಕೃತಜ್ಞತೆಗಳು. ಈ ಕಥಾ ಸಂಕಲನವು ಪುಸ್ತಕ ರೂಪು ಒಡೆಯಬೇಕೆಂದು ಆಶಿಸಿ, ನನ್ನ ಬೆನ್ನಿಗೆ ನಿಂತ ನನ್ನ ಸ್ನೇಹಿತ ಶ್ರೀ ಚಂದ್ರಮೌಳಿಯವರನ್ನು ಹಾಗೂ ಶ್ರೀ ಕುಂ. ವೀ. ಯವರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಪರಿಚಯವಾಗಿ, ಅತಿ ಕಡಿಮೆ ಅವಧಿಯಲ್ಲಿ ಅತೀ ಆಪ್ತರಾದ ಈಗಾಗಲೇ ಕನ್ನಡ ಕಥಾ ಲೋಕಕ್ಕೆ ಪರಿಚಿತರಾದ ಸಾಹಿತಿ ಶ್ರೀ ಕಂನಾಡಿಗಾ ನಾರಾಯಣರವರನ್ನು ನಾನು ಆತ್ಮೀಯವಾಗಿ ಸ್ಮರಿಸಿಕೊಳ್ಳುತ್ತೇನೆ. ಈ ಕಥೆಗಳನ್ನು ಕುಂ.ವೀ. ಯವರ ಮುಂದೆ ಇಟ್ಟಾಗ, ಕಥಾ ಲೋಕದ ಸಾಮ್ರಾಟರಾದ ಶ್ರೀ ಕುಂ.ವೀರಭದ್ರಪ್ಪನವರು ನಿರೀಕ್ಷೆಗೂ ಮೀರಿ ನನ್ನಂತಹ ಹೊಸಬನನ್ನು ಹುರಿದುಂಬಿಸಿದರು. ಬರೆಯುವುದನ್ನು ಎಂದಿಗೂ ನಿಲ್ಲಿಸಬಾರದೆಂದು ತಿಳಿಸಿದ್ದಲ್ಲದೆ, ಬೆನ್ನುಡಿಯ ಮೂಲಕ ಹರಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು. ಮುಖಪುಟವನ್ನು ಅಂದವಾಗಿ ರಚಿಸಿದ ಶ್ರೀ ಮುರಳಿಧರ ರಾಠೋಡ್ರವರಿಗೆ ಧನ್ಯವಾದಗಳು. ಈ ಚೊಚ್ಚಲ ಕೃತಿಯನ್ನು ಪ್ರಕಟಿಸಲು ಮುಂದೆ ಬಂದ ಸಿವಿಜಿ ಪ್ರಕಾಶನದ ಶ್ರೀ ಚಂದ್ರು ಅವರಿಗೆ ನನ್ನ ಅಭಿನಂದನೆಗಳು.
ಮತ್ತೆ ಬರೆಸಬಲ್ಲ ಶಕ್ತಿಯನ್ನು ನಿಮ್ಮ ಅನಿಸಿಕೆ, ಅಭಿಪ್ರಾಯಗಳ ಮೂಲಕ ನೀವು ಕೊಡಬಲ್ಲಿರಿ ಮತ್ತು ಕೊಡುವಿರೆಂದು ಆಶಿಸುತ್ತೇನೆ.
ಗುರುಪಾದ ಬೇಲೂರು
ಇ-ಮೇಲ್: gurupadaswamybg@gmail.com
# 137, 6ನೇ ಕ್ರಾಸ್, ಬಾಪೂಜಿ ಬಡಾವಣೆ
ವಿಜಯನಗರ 2ನೇ ಹಂತ
ಬೆಂಗಳೂರು-560040 ದೂ: 94480 42464
*****
ಎರಡನೇ ಮುದ್ರಣಕ್ಕೆ
‘ದೇವರ ಕಾಡು’ ಎರಡನೇ ಮುದ್ರಣದ ಪ್ರತಿ ನಿಮ್ಮ ಕೈಯಲ್ಲಿಡಲು ಹರ್ಷವಾಗುತ್ತಿದೆ. ಬರವಣಿಗೆಗೆ ಹೊಸಬನಾಗಿದ್ದರಿಂದ ಮೊದಲ ಕಥಾ ಸಂಕಲನವನ್ನು ಓದುಗರು ಹೇಗೆ ಸ್ವೀಕರಿಸುತ್ತಾರೋ ಎಂಬ ಅಳುಕು ಕಾಡುತ್ತಿತ್ತು. ಸಹೃದಯ ಈ ಓದುಗರು, ಈ ಹೊಸಬನನ್ನು ಪ್ರೋತ್ಸಾಹಿಸಿದಷ್ಟೇ ಅಲ್ಲ, ಪುಸ್ತಕದ ಮರು ಮುದ್ರಣಕ್ಕೂ ಕಾರಣರಾಗಿರುತ್ತಾರೆ. ಹೊಸ ರೀತಿಯ ಕನ್ನಡದ ಕಥೆಗಳು ಹೆಚ್ಚು ಹೆಚ್ಚು ಜನರಿಗೆ ತಲುಪಬೇಕೆಂದು ಆಸ್ಥೆ ವಹಿಸಿ, ಬೆನ್ನು ತಟ್ಟಿ ಹುರಿದುಂಬಿಸಿದ ಎಲ್ಲಾ ಪುಸ್ತಕ ಪ್ರೇಮಿಗಳಿಗೂ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ.
ಈ ಪುಸ್ತಕದ ಮರುಮುದ್ರಣಕ್ಕೆ ಕಾರಣಕರ್ತರಾದ, ನಲ್ಮೆಯ ಸ್ನೇಹಿತ ಶ್ರೀ ಕಂನಾಡಿಗಾ ನಾರಾಯಣ್ರವರಿಗೆ ನನ್ನ ಕೃತಜ್ಞತೆಗಳು. ಪುಸ್ತಕ ಪ್ರಕಾಶಕರಾದ ಮೆ|| ಎಂ.ಆರ್.ಗಿರಿರಾಜುರವರಿಗೆ ಅಭಿನಂದನೆಗಳು. ರಕ್ಷಾಪುಟವನ್ನು ಅಂದವಾಗಿ ರೂಪಿಸಿಕೊಟ್ಟ ಕಲಾವಿದರಾದ ಶ್ರೀ ನಾಗರಾಜ ನಾಯ್ಕರವರಿಗೆ ಧನ್ಯವಾದಗಳು. ನನ್ನ ಈ ಅಲ್ಪ ಸ್ವಲ್ಪ ಸಾಹಿತ್ಯ ಕೃಷಿಯ ಹಾದಿಯಲ್ಲಿ ಹೆಜ್ಜೆ ಇಡಲು ಸಹಕಾರ ನೀಡುತ್ತಿರುವ ಸ್ನೇಹಿತ ಶ್ರೀ ಚಂದ್ರಮೌಳಿಯವರನ್ನು, ನನ್ನ ಮಡದಿ ಶ್ರೀಮತಿ ಮಂಜುಳಾರವರನ್ನು ಸ್ಮರಿಸುತ್ತೇನೆ.
ತಮ್ಮಗಳ ಪ್ರೋತ್ಸಾಹ ಹೀಗೇ ಇರಲಿ ಎಂದು ಆಶಿಸುತ್ತೇನೆ.
ಗುರುಪಾದ ಬೇಲೂರು
ಬೆಂಗಳೂರು
03.08.2015
*****
ಮುನ್ನುಡಿ
ಕಥಾ ಸಾಹಿತ್ಯ ಪ್ರಕಾರವು ಕನ್ನಡದಲ್ಲಿ ಸದಾ ಜೀವಂತವಾಗಿ, ವಿಸ್ತಾರವಾಗಿ ಬೆಳೆಯುತ್ತಿದೆ. ಕಥೆಯ ವಸ್ತು, ತಾಂತ್ರಿಕತೆ ಮತ್ತು ಸಂದೇಶಗಳು ಕಥೆಗಾರನಿಂದ ಕಥೆಗಾರನಿಗೆ, ಕಾಲದಿಂದ ಕಾಲಕ್ಕೆ ಭಿನ್ನವಾಗಿರುವುದು ಸಹಜ.
ಈ ಕೃತಿಯ ಲೇಖಕರಾದ ಶ್ರೀ ಗುರುಪಾದ ಬೇಲೂರು ಅವರು ವೃತ್ತಿಯಿಂದ ಇಂಜಿನಿಯರ್. ಆದರೆ ಅವರ ಆಸಕ್ತಿ ಮತ್ತು ಅಧ್ಯಯನಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಯ ವಿವಿಧ ವಲಯಗಳಲ್ಲಿ ವ್ಯಾಪಿಸಿಕೊಂಡಿವೆ. ಈ ಕೃತಿಯಲ್ಲಿ ಅವರಿಂದ ಮೊಟ್ಟಮೊದಲ ಬಾರಿಗೆ ರಚನೆಯಾದ ಐದು ಕಥೆಗಳು ಸೇರಿವೆ. ಅವುಗಳ ವಸ್ತು, ವಿನ್ಯಾಸಗಳು ವೈವಿಧ್ಯದಿಂದ ಕೂಡಿವೆ. ಮತ್ತು ಓದುಗರನ್ನು ಗಾಢವಾಗಿ ತಮ್ಮತ್ತ ಸೆಳೆದುಕೊಳ್ಳುತ್ತದೆ. ಅವರ ಮೊಟ್ಟಮೊದಲ ಕಥೆಯಾದ `ಡಾಲರ್ ಸಿಕ್ಕಿದ ಕಥೆ’ ಮೇಲು ನೋಟಕ್ಕೆ ಒಂದು ಪವಾಡದಂತೆ ಕಂಡರೂ ಅದರಲ್ಲಿ ಆಧುನಿಕ ಜೀವನದ ಒತ್ತಡಗಳಲ್ಲಿ ನರಳುತ್ತಿರುವ ಮಾನವನ ಮುಖದಲ್ಲಿಯೂ ಮುಗುಳು ನಗೆ ಮೂಡುವ, ಆ ಮುಖವು ತನಗೆ ಎದುರಾದವರ ಮುಖಗಳನ್ನು ಅರಳಿಸಿ ಅವರನ್ನು ಪರಿವರ್ತನೆ ಮಾಡುವ ಶಕ್ತಿಯನ್ನು ಹೊಂದಿರುತ್ತದೆ ಎಂಬುದು ನಿರೂಪಿತವಾಗಿದೆ. ಒಬ್ಬ ಮಾನವನ ಮುಖದಲ್ಲಿ ಮೂಡುವ ಮಂದಹಾಸ ತನ್ನ ಸಂಪರ್ಕಕ್ಕೆ ಬಂದವರಲ್ಲಿಯೂ ಅದೇ ಮಂದಹಾಸವನ್ನು ಮೂಡಿಸುತ್ತದೆ. ಅಷ್ಟೇ ಅಲ್ಲ, ಅವರ ಮುಖಗಳೂ ತಮ್ಮನ್ನು ಸಂಧಿಸಿದವರ ಮುಖಗಳನ್ನು ಅರಳಿಸುತ್ತವೆ. ಹೀಗೆ ಜೀವನೋಲ್ಲಾಸ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬೆಳೆಯುತ್ತಾ ಹೋಗುತ್ತದೆ ಎಂಬುದು ಈ ಕಥೆಯು ಬಿಂಬಿಸುವ ಧ್ವನಿಯಾಗಿದೆ. ಶಾಂತಿ, ನೆಮ್ಮದಿ, ಮಂದಹಾಸಗಳು ನನಗೆ ಬೇಕು ಎಂಬ ಮನೋಭಾವದಿಂದ ಬರುವುದಿಲ್ಲ. ನನ್ನಲ್ಲಿರುವುದು ಇಷ್ಟು ಸಾಕು, ಕೇಳಿದವರಿಗೆ ತನ್ನಲ್ಲಿರುವುದನ್ನು ಕೊಡಬೇಕು ಎನಿಸಿದವರಿಗೆ ಆ ಶಾಂತಿ ಸಮಾಧಾನಗಳು ಹೆಚ್ಚುತ್ತಾ ಹೋಗುತ್ತವೆ ಎಂಬುದು ಈ ಕಥೆಯ ಸಂದೇಶವಾಗಿದೆ.
ಎರಡನೆ ಕಥೆ `ಹೊನ್ನಗಿಂಡಿ,’ ಪುಟ್ಟರಾಜ ಗೌಡನ ಜೀವನ ಚಿತ್ರಣ. ಅದು ನಮ್ಮ ಸಮಷ್ಟಿ ಜೀವನದ ಮೇಲೆ ಆಗುತ್ತಿರುವ ಏರು ಪೇರುಗಳ ಒಂದು ಜಾಗತಿಕ ನೋಟವೂ ಆಗಿದೆ. ವ್ಯಾಪಾರ ವಹಿವಾಟಿನಲ್ಲಾದ ಜಾಗತೀಕರಣ, ಭಾರತೀಯ ಗ್ರಾಮಾಂತರ ಜೀವನದ ಗುಡಿ ಗುಂಡಾರಗಳನ್ನು ಮಣ್ಣು ಮುಕ್ಕಿಸಿ ನಗರದ ವೈಭವೋಪೇತ ಹೈಟೆಕ್ ಜೀವನಕ್ಕೆ ಮನ್ನಣೆ ನೀಡುತ್ತಾ ಹೋಯಿತು. ಒಂದು ಕಡೆ ಹಳ್ಳಿಯ ಜನ ನಗರಗಳತ್ತ ವಲಸೆ ಹೋಗುತ್ತಿದ್ದರೆ ಇನ್ನೊಂಡು ಕಡೆ ಜಾಗತಿಕ ಹಿನ್ನಡೆ (Global Recession) ಪ್ರಾರಂಭವಾಯಿತು. ನಗರ ಜೀವನದ ಆಕರ್ಷಣೆಯಿಂದ ಗ್ರಾಮೀಣ ಬದುಕು ಕುಸಿದು ಹಾಳು ಬಿದ್ದಿರುವುದನ್ನು ಕಂಡ ಪುಟ್ಟರಾಜು ತನ್ನ ಬೌದ್ಧಿಕ ಜ್ಞಾನ ಮತ್ತು ತಾಂತ್ರಿಕ ಅನುಭವದಿಂದ ಆಳವಾಗಿ ವಿಶ್ಲೇಷಣೆ ಮಾಡಿ, ಅದಕ್ಕೆ ಒಂದು ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾನೆ. ಅದನ್ನು ತನ್ನ ಗ್ರಾಮೀಣ ಬಂಧು ಬಾಂಧವರ ಮುಂದೆ ಇಡುತ್ತಾನೆ. ಕೆರೆ ತುಂಬಿಸುವ ಯೋಜನೆ, ಸರ್ಕಾರವು ಗ್ರಾಮೀಣ ಅಭಿವೃದ್ಧಿಗೆ ಕೊಡಮಾಡುವ ಸಹಾಯ ಧನದ ಸದ್ವಿನಿಯೋಗ, ಹಳ್ಳಿಯ ಜನರ ಸಾಮೂಹಿಕ ವ್ಯವಸಾಯ (Community FarmingÀ), ತೋಟಗಾರಿಕೆ ಬೆಳೆ, Drip Irrigation, Sprinkler ಬಳಕೆ, ಭೂಮಿ ಉಳುವುದಕ್ಕೆ, ಕೊಯಿಲಿಗೆ, ಒಕ್ಕಣಿಗೆಗೆ ಹೊಸ ಪದ್ಧತಿಯ ಅಳವಡಿಕೆ ಹೀಗೆ ಊರ ಸಮಸ್ಯೆಯ ನಿವಾರಣೆಗೆ ಪುಟ್ಟರಾಜ ಹೇಳ ಹೊರಡುವ ವಿಧಾನಗಳಲ್ಲಿ ಹೊಸದೇನೂ ಇಲ್ಲದಿದ್ದರೂ ಕಥೆಗಾರರು ಮಾದರಿ ಸಮಾಜದ ಕಲ್ಪನೆಯನ್ನು ಬಿಂಬಿಸಲು ಪ್ರಯತ್ನ ಪಟ್ಟಿರುವುದು ಕಂಡು ಬರುತ್ತದೆ.
`ಅನಂತ’ ಎಂಬುದು ಇನ್ನೊಂದು ರೋಮಾಂಚಕವಾದ ಇಡೀ ಬ್ರಹ್ಮಾಂಡದ ಕಥೆ. ಅದರ ವಸ್ತು ಖಗೋಳ ವಿಜ್ಞಾನಕ್ಕೆ ಸೇರಿದ್ದಾಗಿದ್ದರೂ, ಸಾಮಾನ್ಯ ಓದುಗರನ್ನು ತನ್ನೊಡನೆ ಕೊಂಡೊಯ್ಯುವಷ್ಟು ಆಕರ್ಷಕವಾಗಿದೆ. ಸ್ವಲ್ಪ ಸಮಯದ ಹಿಂದೆ ಮಾಧ್ಯಮಗಳಲ್ಲಿ ಡಿಸೆಂಬರ್ 21, 2012 ರಂದು ಭೂ ಪ್ರಳಯವಾಗುತ್ತದೆ. ನಮ್ಮ ಪ್ರಪಂಚ ಅಂತ್ಯಗೊಳ್ಳುತ್ತದೆ ಎಂಬ ಸುದ್ಧಿ ಮಿಂಚಿ ಮಾನವ ಕೋಟಿಯನ್ನು ತಲ್ಲಣಗೊಳಿಸಿತ್ತು. ಅದರ ಪೂರ್ವೋತ್ತರಗಳೇನು ಎಂಬುದನ್ನು ಈ ಕಥೆಯಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಕ್ರಿ.ಪೂ. 3000 ವರ್ಷಗಳ ಹಿಂದೆಯೇ `ಮಾಯನ್’ ಎಂಬ ಒಂದು ನಾಗರೀಕತೆಯ ಕ್ಯಾಲೆಂಡರ್ನ ಆಧಾರದಿಂದ 2012ರ ಕೊನೆಗೆ ಪ್ರಪಂಚ ಪ್ರಳಯವಾಗುತ್ತದೆ ಎಂಬ ಜಿಜ್ಞಾಸೆಯಿಂದ ಆರಂಭವಾಗುವ ಕಥೆ, ಭೂಮಿಯನ್ನು ವಸ್ತುನಿಷ್ಠವಾಗಿ ಓದುಗರಿಗೆ ತೋರಿಸಲು ಭೂಮಿಯಿಂದ ಬೇರೆಯಾದ ಒiಟಞಥಿ ತಿಚಿಥಿ ಗೆ ಅತಿ ಹತ್ತಿರದ ಗೆಲಾಕ್ಸಿಯಾದ ``ಆಂಡ್ರೋ ಮಿಡಾ’’ ಕ್ಕೆ ಕರೆದೊಯ್ಯುವ ಮೂಲಕ, ಈಗಾಗಲೇ ಕೇಳಿದ ಕಥೆಗೆ ಹೊಸ ಆಯಾಮವನ್ನು ಲೇಖಕರು ನೀಡುತ್ತಾರೆ.
ಜಗತ್ತಿನ ಭವಿಷ್ಯ ನುಡಿಯುತ್ತಿದ್ದ ನಾಸ್ಟ್ರಡಾಮಸ್ನಿಂದ ಹಿಡಿದು, ನಮ್ಮ ಪುರಾಣಗಳನ್ನು ಉಲ್ಲೇಖಿಸಿ, ಸೂರ್ಯನ ಸ್ಥಾನವನ್ನು ಗುರು ನಿಭಾಯಿಸುವುದರ ಮೂಲಕ ವಿಶ್ವಕ್ಕೆ ಆದಿ ಅಂತ್ಯ ಎಂಬುದಿಲ್ಲ, ಅದು ಅನಂತ ಎಂಬ ವೈಜ್ಞಾನಿಕ ವಿಷಯವನ್ನು ಕಥಾ ರೂಪದಲ್ಲಿ ನಿರೂಪಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
`ಮಿಂಚಿನ ಬಳ್ಳಿ’ ಒಂದು ನೀಳ್ಗತೆ. ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಆಧುನಿಕ ಸಂಶೋಧನೆಗಳ ಆಧಾರದ ಮೇಲೆ ಹೆಣೆಯಲಾದ ಒಂದು ಸಮಸ್ಯಾತ್ಮಕ ಕಥೆ. ಅಡಿಕೆಯ ಬೆಲೆ ಕುಸಿದಾಗ ಪರ್ಯಾಯ ಬೆಳೆಗಳನ್ನು ಬೆಳೆಯಲು ಕೃಷ್ಣೇಗೌಡರಂತಹ ರೈತ ಯುವಕರು ಯೋಜನೆ ಹಾಕತೊಡಗಿದರು. ವೆನಿಲಾ ಬಳ್ಳಿಯ ಬೆಳೆಯ ಬಗ್ಗೆ ಸಂಶೋಧನೆಯಲ್ಲಿ ನಿರತರಾದ ಡಾ. ಚನ್ನವೀರಯ್ಯ ಎಂಬ ಪಾತ್ರದ ಮೂಲಕ ಒಂದು ನಿಗೂಢ ಕಥೆಯನ್ನು ಹಂತ ಹಂತವಾಗಿ ಲೇಖಕರು ಬಿಚ್ಚಿಡುತ್ತಾ ಹೋಗುತ್ತಾರೆ.
ತೋಟದಲ್ಲಿ ಕತ್ತಲ ರಾತ್ರಿಯಲ್ಲಿ ಕೇಳಿಬರುವ ಕೂಗಿನಿಂದ ಉಂಟಾಗುವ ಕುತೂಹಲ, ರಕ್ತದ ಗುರುತುಗಳ ಪತ್ತೆಯಿಂದ ಹೆಚ್ಚಾಗಿ, ಕರು ಸಾಯುವ ಪ್ರಸಂಗದಿಂದ ಹೊಸ ತಿರುವು ಪಡೆಯುತ್ತದೆ. ಜಡೆಮುನಿಯ ಕಾಟ, ಮಾಟಗಾರನ ಆಗಮನ, ಕಥೆಯ ಎಳೆಗೆ ಪೂರಕವಾಗಿ ಸಾಗಿದ್ದು, ಆಗಾಗ ಮುಗುಳ್ನಗೆ ತರುತ್ತದೆ. ವಿಜ್ಞಾನಿಯ ಸಾವು, ಕಥೆಯ ನಿಗೂಢತೆಯನ್ನು ಹೆಚ್ಚು ಮಾಡುತ್ತದೆ. ಇನ್ಸ್ಪೆಕ್ಟರ್ ನಂಜುಂಡಯ್ಯನ ಪತ್ತೆದಾರಿಕೆ, ವಿದ್ಯುಲ್ಲತಾಳ ಆಕರ್ಷಣೆ, ಕಥೆಯನ್ನು ಸಿನಿಮೀಯವನ್ನಾಗಿ ಮಾಡೀತೇನೊ ಅನ್ನುವಷ್ಟರಲ್ಲಿ, ಜಿ.ಎಂ. (ಜಿನಿಟಿಕಲ್ ಮ್ಯುಟೇಶನ್) ತಳಿಗಳ ಬಗ್ಗೆ, ಹೊಸದನ್ನು ಕಂಡು ಹಿಡಿದ ಒಬ್ಬ ವಿಜ್ಞಾನಿ ಮತ್ತು ಸಾಮಾನ್ಯ ಬಳಕೆದಾರರ ನಡುವೆ ವಾದ ವಾಗ್ವಾದಗಳನ್ನು ಮಂಡಿಸಿ, ನಮ್ಮ ಸಂಸ್ಕøತಿಗೆ ಇವು ಪೂರಕವೇ ಅಲ್ಲವೇ ಎಂಬುದನ್ನು ಓದುಗರ ವಿವೇಚನೆಗೇ ಬಿಡುತ್ತಾರೆ. ಓದಿಸಿಕೊಂಡು ಹೋಗುವ ಗುಣವುಳ್ಳ ಈ ಪರಿಸರವಾದಿ ಕಥೆಯಲ್ಲಿ, ಪ್ರೊಫೆಸರ್ ಒಬ್ಬರು ಕಂಡು ಹಿಡಿದಿದ್ದ ಅತ್ಯದ್ಭುತ ಸಂಶೋಧನೆಯು, ಪ್ರಕೃತಿಯ ವಿರುದ್ಧ ಸವಾಲು ಹಾಕಿದ್ದರಿಂದ ಪ್ರಕೃತಿಯಲ್ಲಿಯೇ ಬೂದಿಯಾಗುವುದನ್ನು ನಾವು ಕಾಣುತ್ತೇವೆ. ಈ ನಿಟ್ಟಿನಲ್ಲಿ `ಮಿಂಚಿನ ಬಳ್ಳಿ’ ಎಂಬ ಈ ನೀಳ್ಗತೆ ಅರ್ಥಪೂರ್ಣವಾಗಿದೆಯೆಂದು ಹೇಳಬಹುದು.
`ದೇವರ ಕಾಡು’ ಈ ಸಂಗ್ರಹದ ಒಂದು ವಿನೂತನ ಸಾಹಸಯಾತ್ರೆಯ ಕಥೆ. ಪ್ಯಾರಾಗ್ಲೈಡಿಂಗ್ನ ವಿವರಣೆಯೊಂದಿಗೆ ಆರಂಭವಾಗುವ ಕಥೆ, ಕುಮಾರ ಪರ್ವತದ ಚಾರಣದ ಸಾಹಸಗಾಥೆಗೆ ತಿರುಗುತ್ತದೆ. ಅದನ್ನು ಕಥೆಯ ಮೂಲಕ ವಿವರವಾಗಿ ಓದಿಯೇ ಆನಂದಪಡಬೇಕು. ಚಾರಣದ ಅನುಭವ ಹತ್ತಿಸಿಕೊಂಡೆವು ಅನ್ನುವಾಗಲೇ, ಪಶ್ಚಿಮ ಘಟ್ಟಗಳ ದುರ್ಗಮ ಕಾಡಿನ, ಬುಡಕಟ್ಟಿನ ಜನರ ಜೀವನದ ದರ್ಶನವಾಗಿ, ಕಥೆ ವೇಗ ಪಡೆದುಕೊಳ್ಳುತ್ತದೆ. ದೇವಸ್ಥಾನದ ಜೀರ್ಣೋದ್ಧಾರದ ಪ್ರಯತ್ನವಾಗಿ ಆರಂಭವಾಗುವ ಕಥಾ ನಾಯಕರ ಸಾಹಸ, ಮೈನಿಂಗ್ ಉದ್ಯಮದ ಬಹುರೂಪಿ ಮುಖಗಳನ್ನು ಸೂಕ್ಷ್ಮವಾಗಿ ಪರಿಚಯಿಸುತ್ತಾ, ಪರಿಸರ ರಕ್ಷಣೆಯ ಸಾಧ್ಯಾಸಾಧ್ಯತೆಗಳನ್ನು ಸ್ಥೂಲವಾಗಿ ತೆರೆದಿಡುತ್ತಾ ಹೋಗುತ್ತದೆ. ಕಥೆಯಲ್ಲಿ ಬರುವ ತೋಳಗಳು ಸಾಂಕೇತಿಕವಾಗಿದ್ದು, ವನ್ಯ ಸಂಪತ್ತಿನ ಕಾವಲುಗಾರರಾಗಿ, ವನ್ಯ ಜೀವಿಗಳ ಪ್ರತಿನಿಧಿಗಳನ್ನಾಗಿ ಲೇಖಕರು ಚಿತ್ರಿಸಿದ್ದಾರೆ.
`ದೇವರ ಕಾಡು’ ಆಧುನಿಕ ಮಾನವನ ಕ್ರೀಡಾ ಹವ್ಯಾಸಗಳಾದ ಪ್ಯಾರಾಗ್ಲೈಡಿಂಗ್, ಗ್ರಾಮೀಣ ಪರಿಸರದ ದೇವರ ಗುಡಿ, ಕಾಡು, ಪರಿಸರ ಸಂರಕ್ಷಣೆ ಇತ್ಯಾದಿಗಳ ಸಂಘರ್ಷ, ಅವುಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆಯನ್ನು ಸಮನ್ವಯಗೊಳಿಸಿರುವ ಒಂದು ಕಲಾತ್ಮಕ ನೀಳ್ಗತೆಯಾಗಿದೆ.
ಈ ಕಥಾ ಸಂಗ್ರಹದಲ್ಲಿನ ಎಲ್ಲಾ ಕಥೆಗಳಲ್ಲಿಯೂ, `ಪ್ರಕೃತಿಯೊಂದಿಗೆ ಒಂದಾಗಿ ಬದುಕಬೇಕೇ ಹೊರತೂ ಅದನ್ನು ನಮ್ಮ ಇಷ್ಟದಂತೆ ಬದಲಾಯಿಸಲು ಸಾಧ್ಯವಿಲ್ಲ’ ಎಂಬ ಲೇಖಕರ ಧೋರಣೆ, ವಿವಾದಾಸ್ಪದವಾಗುವಂತೆ ಕಂಡರೂ ಸೂಕ್ತವಾಗಿಯೆ ಇದೆ. ಆದಿ ಮಾನವರು ಕಾಡುವಾಸಿಗಳಾಗಿ ಗೆಡ್ಡೆ ಗೆಣಸು, ಹಣ್ಣುಹಂಪಲನ್ನು ತಿಂದು ಬದುಕುತ್ತಿದ್ದರು. ಅನಂತರ ಅವರು ಕೃಷಿ ಮಾಡುವುದನ್ನು ಕಲಿತು ಆಹಾರ ಧಾನ್ಯಗಳನ್ನು ಬೆಳೆದು ಬೇಯಿಸಿಕೊಂಡು ತಿಂದು ಬದುಕುತ್ತಿದ್ದಾರೆ. ಇದು ಬದಲಾವಣೆಯಲ್ಲವೇ ಎಂದು ಯಾರಾದರೂ ಪ್ರಶ್ನಿಸಬಹುದು. ಈ ಬದಲಾವಣೆಯೂ ಪ್ರಕೃತಿಯ ಸ್ವಭಾವವೇ ಆಗಿದೆ. `ಬದಲಾವಣೆ’ ಮತ್ತು `ಶಾಶ್ವತ’ ಇವೆರಡೂ ವಿರುದ್ಧ ಪದಗಳಲ್ಲ. ಒಮ್ಮೆ ಒಬ್ಬ ತತ್ವಜ್ಞಾನಿ ಇನ್ನೊಬ್ಬ ತತ್ವಜ್ಞಾನಿಯೊಡನೆ ಸಂವಾದ ಮಾಡುತ್ತಿದ್ದ, ಅವರಲ್ಲಿ ಒಬ್ಬನಿಗೆ ಒಂದು ಪ್ರಶ್ನೆ ಎದುರಾಯಿತು. `ಈ ವಿಶ್ವದಲ್ಲಿ ಯಾವುದು ಶಾಶ್ವತ?’ ಅದಕ್ಕೆ ಇನ್ನೊಬ್ಬ ತತ್ವಜ್ಞಾನಿ ಹೀಗೆ ಪ್ರತಿಕ್ರಿಯಿಸಿದ: `ಸದಾ ಬದಲಾವಣೆಯೊಂದೇ ಶಾಶ್ವತ!’
ಗುಡ್ಡ, ಕಾಡು, ನದಿ, ಸಮುದ್ರ ಎಲ್ಲವೂ ಬದಲಾವಣೆಗೊಳ್ಳುತ್ತಲೇ ಶಾಶ್ವತವಾಗಿವೆ. ಸಮುದ್ರದ ನೀರು ಆವಿಯಾಗಿ ಮೋಡವಾಗುತ್ತದೆ, ಗಾಳಿಗೆ ತೇಲುತ್ತಾ ಎಲ್ಲೆಲ್ಲೊ ಚಲಿಸಿ, ಮಳೆಯಾಗಿ ಭೂಮಿಯ ಮೇಲೆ ಸುರಿಯುತ್ತದೆ. ಭೂಮಿಯನ್ನು ತಂಪಾಗಿಸಿ ಹನಿಹನಿಯಾಗಿ ಹರಿದು, ಸಮುದ್ರವನ್ನು ಸೇರುತ್ತದೆ. ಒಂದು ದೃಷ್ಟಿಯಿಂದ ಸಮುದ್ರ ಶಾಶ್ವತ, ಇನ್ನೊಂದು ದೃಷ್ಟಿಯಿಂದ ಅದು ಸದಾ ಬದಲಾಗುತ್ತಲೇ ಇರುತ್ತದೆ.
ಮಾನವನೂ ಸೇರಿದಂತೆ ಪ್ರತಿಯೊಂದು ಜೀವಂತ ಪ್ರಾಣಿಯೂ ಅನುಕ್ಷಣವೂ ಸಾಯುತ್ತಾ ಪುನರ್ಜನ್ಮ ಪಡೆಯುತ್ತಾ ಇರುತ್ತದೆ. ನಮ್ಮ ದೇಹದ ಪ್ರತಿ ಜೀವಕಣವೂ ಸದಾ ಸಾಯುತ್ತಿರುತ್ತದೆ. ಅದರ ಸ್ಥಾನದಲ್ಲಿ ಹೊಸದು ಉತ್ಪತ್ತಿಯಾಗಿ ನಮ್ಮ ಜೀವನ ಮುನ್ನಡೆಯುತ್ತದೆ.
ಪ್ರಕೃತಿಯೊಡನೆ ಮಾನವ ಜೀವನದ ನಂಟನ್ನು ಕುರಿತ ಈ ಕಥೆಗಳು ಪಾತ್ರಗಳ ಮೂಲಕ ಬಿಚ್ಚಿಕೊಂಡು ಹೋಗುವುದನ್ನು ಕುತೂಹಲದಿಂದ ಎದುರು ನೋಡುವಂತಾಗುತ್ತದೆ. ಒಟ್ಟಿನಲ್ಲಿ ಕನ್ನಡದ ಆಧುನಿಕ ಕಥಾ ಸಾಹಿತ್ಯಕ್ಕೆ ಶ್ರೀ ಗುರುಪಾದ ಬೇಲೂರು ಅವರ ಕಥೆಗಳ ಸಂಗ್ರಹ ಒಂದು ಅಪೂರ್ವ ಕಾಣಿಕೆ ಎಂದು ನಾನು ಭಾವಿಸುತ್ತೇನೆ.
- ಪ್ರೊ. ಬಿ. ವಿ. ವೀರಭದ್ರಪ್ಪ
*****
ದೇವರ ಕಾಡು
ಅಧ್ಯಾಯ 1
ಚಳಿಗಾಲದ ಒಂದು ಬೆಳಗು ಅದು. ನೆಲದಲ್ಲಿ ಚುಮುಚುಮು ಚಳಿಯಾದರೆ, ನಂದಿಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ 4850 ಅಡಿ ಎತ್ತರದಲ್ಲಿ, ಆ ಹೊತ್ತಿನಲ್ಲಿ ಮೈ ಕೊರೆಯುವ ಚಳಿ. ಆ ಚಳಿಗೆ ಬೆಟ್ಟವು ಬಿಳಿಯ ಚಾದರವನ್ನು ಬೆಚ್ಚಗೆ ಹೊತ್ತು ಮಲಗಿದೆಯೇನೋ ಎಂಬಂತೆ, ಬಿಳಿ ಮೋಡದ ರಾಶಿ, ನಂದಿಬೆಟ್ಟದ ಶಿಖರವನ್ನು ಅಲೆಗಳೋಪಾದಿಯಲ್ಲಿ ಸುತ್ತುವರೆದಿತ್ತು. ಕಣ್ಣುಗಳ ದೃಷ್ಟಿಗೆ ಒಂದು ಮೀಟರ್ಗಿಂತ ಮುಂದೆ ಏನೇನೂ ಕಾಣದಂತಹ ದಟ್ಟ ಮಂಜು. ನಿದ್ರೆ ಬಿಟ್ಟೇಳಲು ಯಾವ ಪ್ರಾಣಿಯೂ ಇಷ್ಟಪಡದಂತಹ ಆ ಸಮಯದಲ್ಲಿ ಸಿದ್ಧಾರ್ಥ ಮತ್ತು ಅವನ ಸ್ನೇಹಿತರ ಗುಂಪು ಬೆಟ್ಟದ ‘ನಾರ್ಥ್ 1 ಲಾಂಚ್’ ನ ಭಾಗದಲ್ಲಿ ಪ್ಯಾರಾ ಗ್ಲೈಡಿಂಗ್ನ ಹಾರಾಟಕ್ಕೆ ಸಿದ್ಧತೆ ನಡೆಸಿತ್ತು.
ಪ್ಯಾರಾ ಗ್ಲೈಡಿಂಗ್! ಗಾಳಿಯ ಒತ್ತಡಕ್ಕೆ ಮೇಲೇರುವ ಬಟ್ಟೆಯ ಹಾಸನ್ನು ದಾರಗಳಿಂದ ತನಗೆ ಕಟ್ಟಿಕೊಂಡು ಗಾಳಿಯ ವೇಗಕ್ಕೆ ತಕ್ಕ ಹಾಗೆ ನೀಲಾಕಾಶದಲ್ಲಿ