Agarta
()
About this ebook
ಓದಿಗೆ ರಂಜನೆಯ ಅಂಶಗಳು ಕಡಿಮೆಯೆನಿಸಿದರೂ ಇತ್ತೀಚೆಗೆ ಅಧಿಕವಾಗಿರುವ ಭೂಕಂಪ, ಜ್ವಾಲಾಮುಖಿಗಳನ್ನು ನೋಡಿದರೆ ಸತ್ಯಕ್ಕೆ ಹತ್ತಿರವಾಗಿರುವಂತೆ ಭಾಸವಾಗುವ ಒಡಲನಾಳ ಕತೆ.
ಮೇಷ್ಟರಂತಹ ಮೇಷ್ಟ್ರೇ ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸುವ ಸಮಸ್ಯೆಯಿಂದಾಗಿ ಮೂಢನಂಬಿಕೆಯತ್ತ ವಾಲುವ ರಾಮಯ್ಯ ಮೇಷ್ಟ್ರು. ಅನಾಥವಾಗಿ ಸಿಕ್ಕ ಯಾವುದೋ ಜಾತಿಯ ಮಗುವನ್ನು ಮಕ್ಕಳಿಲ್ಲದ ಮಾನಾಚಾರ್ಯರು ಸಾಕಿ ಸಲಹಿ, ಹುಟ್ಟು ಮತ್ತು ಜಾತಿಗೆ ಅತೀತವಾಗಿ ಬೆಳೆದ ಯೋಗೇಂದ್ರನ ಕತೆ.
Read more from Gurupaada Beluru
Devarakaadu Rating: 0 out of 5 stars0 ratings4D Rating: 0 out of 5 stars0 ratings
Related to Agarta
Related ebooks
Geethantharanga Darshanam Rating: 0 out of 5 stars0 ratingsEVEREST IN MIND (KANNADA) Rating: 0 out of 5 stars0 ratingsHaddina Rekke Saadu Rating: 5 out of 5 stars5/5Tappu Maadona Banni! Rating: 4 out of 5 stars4/5ಯಶೋಃಗೀತ Rating: 0 out of 5 stars0 ratingsKempu Kalave Rating: 0 out of 5 stars0 ratingsKanamareyada Kathegalu Bhaaga 1 Rating: 0 out of 5 stars0 ratingsVaarasudhara Rating: 0 out of 5 stars0 ratingsBaduku Chithra Chittara Rating: 0 out of 5 stars0 ratingsBottom Item Rating: 5 out of 5 stars5/5Doctor Sukanya Rating: 0 out of 5 stars0 ratingsPreetiya Belaku Rating: 0 out of 5 stars0 ratingsPrashne Mathu Devaru Rating: 0 out of 5 stars0 ratingsMane Rating: 2 out of 5 stars2/5Hastakshepa Rating: 0 out of 5 stars0 ratingsKengulabi Rating: 0 out of 5 stars0 ratingsGrimm Brothers Rating: 0 out of 5 stars0 ratingsMakkala Kate Bhaaga 1 Rating: 0 out of 5 stars0 ratingsMooru Naatakagalu Rating: 0 out of 5 stars0 ratingsThe Diary of Mrs.Sharada Rating: 5 out of 5 stars5/5Makkala Kate Bhaaga 2 Rating: 0 out of 5 stars0 ratingsMrityorma Amritam Gamaya Rating: 0 out of 5 stars0 ratingsKurudu Thiruvu Rating: 0 out of 5 stars0 ratingsHei Kaapurusha Rating: 0 out of 5 stars0 ratingsOoru Suttaru Hanamappa Horaga Rating: 0 out of 5 stars0 ratingsNataka Dange Rating: 0 out of 5 stars0 ratingsAvva: The Strength Rating: 0 out of 5 stars0 ratingsParimidita Rating: 0 out of 5 stars0 ratingsParidhi Rating: 0 out of 5 stars0 ratingsHanigavithegalu Rating: 0 out of 5 stars0 ratings
Reviews for Agarta
0 ratings0 reviews
Book preview
Agarta - Gurupaada Beluru
https://www.pustaka.co.in
ಅಗರ್ತ
Agarta
Author:
ಗುರುಪಾದ ಬೇಲೂರು
Gurupaada Beluru
For more books
https://www.pustaka.co.in/home/author/gurupaada-beluru
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಅರ್ಪಣೆ
ದಾರ್ಶನಿಕರಾಗಿ, ಗುರುಗಳಾಗಿ, ಅಧ್ಯಾತ್ಮದ ಸೆಳವು ಮೂಡಿಸಿ
ಛಾಪು ಮೂಡಿಸುವ ಮುನ್ನವೇ ಮರೆಯಾದರೂ
ಜ್ಞಾನ ದೀವಿಗೆಯ ಬೆಳಕು ಸದಾ ಸೂಸುತ್ತಿರುವ
ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾಗಿದ್ದ
ಶ್ರೀ ಡಿ. ಸತ್ಯಮೂರ್ತಿಯವರಿಗೆ
ಲೇಖಕರ ಮಾತು
‘ಕಥೆ’ ತನ್ನನ್ನು ಹೇಳುವವನನ್ನು ಹುಡುಕುತ್ತದೆ. ಅಂತಹವನು ಸಿಕ್ಕ ಕೂಡಲೇ ಅವನನ್ನು ಬಡಿದೆಬ್ಬಿಸುತ್ತದೆ. ಹಾಗಾಗಿ ಕಥೆಗಾರ ಕಥೆಯನ್ನು ಸೃಷ್ಟಿ ಮಾಡಿದನೆಂಬುದು ಅಪ್ಪಟ ಸುಳ್ಳು! ಹೀಗೆ ನನ್ನಿಂದ ಹೇಳಿಸಿಕೊಳ್ಳಲು ಬಯಸಿ ಹೊರಬಂದ ನಾಲ್ಕು ಕತೆಗಳ ಸಂಕಲನ ‘ಅಗರ್ತ’. ಎಲ್ಲಾ ಕಥೆಗಳ ಮೂಲ ವಸ್ತು ಪ್ರಕೃತಿ, ಪರಿಸರವೇ ಆಗಿರುವುದಕ್ಕೆ ಕಾರಣ ಮಾತ್ರ ನನಗೆ ಗೊತ್ತಿಲ್ಲ. ಪ್ರಾಯಶಃ ಬಾಲ್ಯದಿಂದಲೂ ಪ್ರಕೃತಿ ಮಧ್ಯೆ ಬೆಳೆದ ಕಾರಣವೋ, ಏನೋ ಅಥವ ಮಾತಾ ಪ್ರಕೃತಿಯ ಆದೇಶವೋ ಏನೋ. ಒಟ್ಟಿನಲ್ಲಿ ನನಗೆ ಸ್ಫುರಿಸಿದ, ಪ್ರೇರಣೆಯಾದ, ಪ್ರಭಾವಿತನಾದ ವಿಷಯಗಳ ಬಗ್ಗೆ ಸಣ್ಣದಾಗಿ ಕಥೆ ಹೆಣೆಯಲು ಪ್ರಯತ್ನ ಮಾಡಿದ್ದೇನೆ.
ಇದು ನನ್ನ ಎರಡನೇ ಕೃತಿ. ಇಲ್ಲಿ ಅಳವಡಿಸಿರುವ ಕತೆಗಳಲ್ಲಿ ಪರಿಸರ ರಕ್ಷಣೆಯ ಸಂದೇಶ ಹುದುಗಿಸಿದ್ದರೂ ಅವುಗಳನ್ನು ಕಟ್ಟಿಕೊಡುವುದರಲ್ಲಿ ವಿಭಿನ್ನತೆ ತರುವ ಪ್ರಯತ್ನ ನಡೆಸಿದ್ದೇನೆ. ಮೂಲತಃ ತಾಂತ್ರಿಕ ಪದವೀಧರನಾಗಿರುವ ಕಾರಣ, ಕಥೆಯಲ್ಲಿ ತಾಂತ್ರಿಕ ಅಂಶಗಳು ಹೆಚ್ಚಾಗಿ ಸೇರಿಕೊಳ್ಳದಂತೆ ಮತ್ತು ಕಥೆಯ ಓಘಕ್ಕೆ ತೊಂದರೆಯಾಗದಂತೆ ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಆದಾಗ್ಯೂ ತಾವುಗಳು ಕಥೆಯ ಉದ್ದೇಶ ಗ್ರಹಿಸಿ, ಕಥೆಗಳನ್ನು ಆಸ್ವಾದಿಸುತ್ತೀರಾಗಿ ಭಾವಿಸುತ್ತೇನೆ. ಸಾಹಿತ್ಯ ಲೋಕದ ದಿಗ್ಗಜರಾದ ಶ್ರೀ ಕುಂ.ವೀ.ಯವರು ಹಾಗೂ ಶ್ರೀ ನಾಗತೀಹಳ್ಳಿ ಚಂದ್ರಶೇಖರ್ ರವರು ಮಾತನಾಡುತ್ತಾ ‘ಸಾಹಿತ್ಯ ಲೋಕಕ್ಕೆ, ಬರಿಯ ಶಿಕ್ಷಣ ಕ್ಷೇತ್ರದಿಂದ ಹೆಚ್ಚಿನ ಸೇವೆ ಸಿಗುತ್ತಿದೆ. ಬೇರೆ ಬೇರೆ ಕ್ಷೇತ್ರಗಳ ಅನುಭವಗಳ ಸಾಹಿತ್ಯಿಕ ರೂಪ ಪಡೆದರೆ ಅದು ಖಂಡಿತ ಸ್ವಾಗತಾರ್ಹ’ ಎಂದಿದ್ದರು. ಅದರಂತೆ ಇಂದು ಸಾಫ್ಟ್ವೇರ್ ಇಂಜಿನಿಯರುಗಳಿಂದ ಹಿಡಿದು ಕೃಷಿಯಲ್ಲಿ ತೊಡಗಿರುವ ತಜ್ಞರಾದಿಯಾಗಿ ಸಾಹಿತ್ಯ ಲೋಕ ಪ್ರವೇಶ ಮಾಡಿದ್ದಾರೆ. ಇದರಿಂದ ಕನ್ನಡದ ಸಾಹಿತ್ಯ ಪ್ರಪಂಚ ಸಮೃದ್ಧವಾಗುತ್ತಿದೆ. ಈ ಸಾಗರಕ್ಕೆ ನನ್ನ ಕಾಣಿಕೆಯಾಗಿ ಈ ಎರಡನೇ ಕೃತಿ ನಿಮ್ಮ ಮುಂದಿಡುತ್ತಿದ್ದೇನೆ.
ಈ ಕೃತಿ, ಪುಸ್ತಕ ರೂಪ ಪಡೆಯಲು ಕಾರಣರಾದ ಸ್ನೇಹಿತ ಕಂನಾಡಿಗಾ ನಾರಾಯಣ್ರವರನ್ನು ಕೃತಜ್ಞತಾಪೂರ್ವಕವಾಗಿ ನೆನಸಿಕೊಳ್ಳುತ್ತೇನೆ. ಅಂದವಾಗಿ ಮುದ್ರಿಸಿಕೊಟ್ಟ ಪ್ರಕಾಶಕರಾದ ಶ್ರೀ ಎಂ.ಆರ್.ಗಿರಿರಾಜು ಅವರಿಗೆ ನನ್ನ ಕೃತಜ್ಞತೆಗಳು. ಕಥೆಯನ್ನು ಹಸ್ತಪ್ರತಿಯ ರೂಪದಲ್ಲಿಯೇ ಓದಿ, ಸೂಕ್ತ ಸಲಹೆ ಸೂಚನೆ ನೀಡಿದ ಸ್ನೇಹಿತರಿಗೆ ವಂದನೆಗಳು. ಮುಖಪುಟವನ್ನು ಆಕರ್ಷಕವಾಗಿ ರಚಿಸಿದ ಕಲಾವಿದ ಶ್ರೀ ನಾಗರಾಜರವರಿಗೆ ಕೃತಜ್ಞತೆಗಳು.
ಇನ್ನು ಇದು ನಿಮ್ಮ ಸ್ವತ್ತು. ಓರೆ ಕೋರೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯಿಸಲು ಕೋರುತ್ತೇವೆ.
ವಂದನೆಗಳು.
ಕಂನಾಡಿಗಾ ನಾರಾಯಣ
ಬೆಂಗಳೂರು gurupadaswamybg@gmail.com
03.08.2015
ಕಥನ ಕುತೂಹಲ ಹುಟ್ಟಿಸುವ ಕಥೆಗಳು
ಹಾಗೆ ನೋಡಿದರೆ ‘ಅಗರ್ತ’ ಕಥಾಸಂಕಲನಕ್ಕೆ ಮುನ್ನುಡಿಯ ಅಗತ್ಯವೇ ಇರಲಿಲ್ಲ. ಸಣ್ಣವನಾದರೂ ಬರೆಯಬಲ್ಲೆನೆಂಬ ವಿಶ್ವಾಸದಿಂದ ಆ ಭಾರವನ್ನು ಗುರುಪಾದ ಬೇಲೂರು ಅವರು ಪ್ರೀತಿಯಿಂದ ನನ್ನ ಮೇಲೆ ಹೊರಿಸಿದ್ದಾರೆ. ಹಾಗಂತ ಅದನ್ನು ಭಾರವೆಂದು ತಿಳಿದುಕೊಳ್ಳದೆ ಅಥವ ಆ ಭಾರವನ್ನು ವಿಮರ್ಶೆಯ ಮಾನದಂಡಗಳನ್ನು ಝಳಪಿಸುತ್ತ ಕಥೆಗಳ ಮೇಲೆ ಹೇರದೆ ಸರಳವಾಗಿ ಅವುಗಳ ಮೇಲೆ ಒಂದು ಆಪ್ತವಾದ ಸಣ್ಣದೊಂದು lime light ಹಾಯಿಸಲಷ್ಟೇ ಪ್ರಯತ್ನಿಸುತ್ತೇನೆ.
ಲೇಖಕ ಗುರುಪಾದ ಬೇಲೂರು ಅವರು ತಮ್ಮ ಕಥೆಗಳನ್ನು ವೃತ್ತ ಪತ್ರಿಕೆಗಳಿಗೆ ಕಳುಹಿಸಿ ವ್ಯಾಪಕ ಪ್ರಚಾರ ಪಡೆಯಬಹುದಾದ ವಿಫುಲ ಅವಕಾಶಗಳಿದ್ದರೂ ಜನಪ್ರಿಯತೆಯ ಬೆನ್ನು ಹತ್ತದೇ, ತಾವು ಬರೆದಿರುವುದೇನೂ ಅಂತಹ ಮಹತ್ವವಾದದ್ದೇನಲ್ಲವೇನೋ ಎಂಬ ಸ್ವಘೋಷಿತ ಸಂಕೋಚ ಪ್ರವೃತ್ತಿಯಿಂದಾಗಿ ತಮ್ಮ ಆಪ್ತ ವಲಯಕ್ಕಷ್ಟೇ ಸೀಮಿತವಾಗಿದ್ದರೂ, ಅವರು ಬರೆದಿರುವುದು ನಿಜಕ್ಕೂ ಮಹತ್ವವುಳ್ಳದ್ದೇ ಎಂಬುದು ಈಗಾಗಲೇ ಅವರ ‘ದೇವರ ಕಾಡು’ ಕಥಾಸಂಕಲನ ಓದಿರುವ ಎಲ್ಲರಿಗೂ ಗೊತ್ತೇ ಇದೆ. ಮೊದಲ ಓದಿಗೆ ತನ್ನತ್ತ ಸೆಳೆದುಕೊಳ್ಳುವ ಎಲ್ಲ ಲಕ್ಷಣಗಳಿರುವ ‘ದೇವರ ಕಾಡ’ನ್ನು ಬೇರೆ ಬೇರೆ ಕಾರಣಗಳಿಗಾಗಿ ನಾನು ನಾಲ್ಕೈದು ಬಾರಿ ಓದಬೇಕಾಗಿ ಬಂದರೂ ಪ್ರತಿ ಬಾರಿಯೂ ಮೊದಲ ಓದಿನ ಕುತೂಹಲವನ್ನು, ತುಡಿತವನ್ನು, ಆಪ್ತತೆಯನ್ನು ನಿರಂತರವಾಗಿ ಉಳಿಸಿಕೊಂಡಿರುವ ಕಾರಣಕ್ಕೆ ಬೇಲೂರು ಅವರ ಕಥೆಗಳ ಬಗ್ಗೆ ತೀವ್ರ ಅಭಿಮಾನ ಮೂಡುತ್ತದೆ.
ಒಂದು ಕೋನದಿಂದ ನೋಡಿದರೆ ತೇಜಸ್ವಿಯವರ ಕಥನ ಶೈಲಿಯಂತೆ ಓದಬೇಕೆನ್ನುವ ಕುತೂಹಲವನ್ನು ಓದುಗನಲ್ಲಿ ಮೂಡಿಸುತ್ತಲೇ ಗಹನವಾದದ್ದನ್ನು ಸುಲಲಿತವಾಗಿ ಹೇಳುವ ಕಲೆಗಾರಿಕೆ ಇವರ ಕಥೆಗಳಲ್ಲಿ ಹಾಸುಹೊಕ್ಕಾಗಿದೆ. ಸಾಮಾನ್ಯವಾಗಿ ಕನ್ನಡ ಓದುಗ ಈವರೆಗೂ ಓದಿರದ ತಾಂತ್ರಿಕ ಜಗತ್ತಿನ ವಿವರಗಳನ್ನು ಕಥನ ಕುತೂಹಲಕ್ಕೆ ಒಗ್ಗಿಸಿ ಆ ತಾಂತ್ರಿಕ ಅಂಶಗಳಿಗೆ ಎಲ್ಲೂ ಕೊರತೆ ಉಂಟಾಗದಂತೆ ನೇಯುವ ಕಲೆಗಾರಿಕೆ ಗುರುಪಾದ ಬೇಲೂರು ಅವರಿಗೆ ಒಲಿದಿದೆ. ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಇಂಜಿನಿಯರಿಂಗ್ ಕ್ಷೇತ್ರದ ಅತ್ಯುನ್ನತವಾದ ಸರ್ಕಾರದ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದರೂ, ತಮ್ಮ ಕ್ಷೇತ್ರದ ಕಾರ್ಯದಕ್ಷತೆಗಾಗಿ ರಾಜ್ಯ ಸರ್ಕಾರದಿಂದ ಬಾಳೇಕುಂದ್ರಿ ಪ್ರಶಸ್ತಿಗೆ ಭಾಜನರಾಗಿದ್ದರೂ ತಾವಿನ್ನೂ ತಾಂತ್ರಿಕ ವಿದ್ಯಾರ್ಥಿಯೆಂಬಷ್ಟು ನಿಗರ್ವಿಯಾಗಿ, ಹೊಸ ಹೊಸ ಕಥಾವಸ್ತುಗಳನ್ನು ಆಯ್ದುಕೊಂಡು ಕುತೂಹಲಕರವಾದ ನಿರೂಪಣಾ ತಂತ್ರಗಳಿಂದ ಅವುಗಳ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತ ಹೋಗುವ ವಿಧಾನಕ್ಕೆ ಎಂಥವರೂ ತಲೆದೂಗಲೇಬೇಕಾಗಿದೆ.
ಲೇಖಕರು ತಮ್ಮ ಬತ್ತದ ತುಡಿತವನ್ನು ಅಭಿವ್ಯಕ್ತಿಸಲು ಯಾಕೆ ಕಥೆಯನ್ನು ಆಯ್ದುಕೊಂಡರೋ ಗೊತ್ತಿಲ್ಲ. ಆದರೆ ಆ ಮೂಲಕ ಕನ್ನಡಕ್ಕಂತೂ ಲಾಭವೇ ಆಗಿದೆ. ಕನ್ನಡ ಕಥಾ ಲೋಕ ಈಗಾಗಲೇ ‘ಸಿದ್ಧಹಸ್ತ’ರನ್ನು ಮೀರಿ ವಿವಿಧ ಕ್ಷೇತ್ರಗಳ ಬರೆಹಗಾರರನ್ನು ಸೆಳೆಯುತ್ತ ಅವರವರ ಕ್ಷೇತ್ರದ ಅಪರಿಮಿತವಾದ ಆವಿಷ್ಕಾರಗಳನ್ನು ಓದುಗರಿಗೆ ಉಣಬಡಿಸುತ್ತಿದೆ. ಹಾಗಾಗಿ ಅದೇ ನವ್ಯ, ಅದೇ ಬಂಡಾಯ, ಅದೇ ದಲಿತ ಎಂದು ನಿಂತ ನೀರಾಗಿದ್ದ ಕಥಾಹಂದರದಲ್ಲಿ ಒಂದು ಮುಕ್ತವಾದ ಹೊಸ ಸಂವೇದನೆಯನ್ನು ಉಂಟುಮಾಡಿರುವುದು ಶ್ಲಾಘನೀಯ. ಈ ಹೊಸ ಸಾಧ್ಯತೆಯು ಸುನಾಮಿ ಎಬ್ಬಿಸುವುದು ಬೇಡ, ನಿಂತ ನೀರಲ್ಲಿ ಒಂದು ಸಣ್ಣ ಕಲ್ಲು ಬಿದ್ದಾಗ ಉಂಟಾಗಬಹುದಾದಂತಹ ಸಂಚಲನವನ್ನಷ್ಟೇ ಎಬ್ಬಿಸಿದರೂ ಸಾಕು, ಸಾರ್ಥಕವಾಗುತ್ತದೆ.
ಸಾಮಾನ್ಯವಾಗಿ ನೀಳ್ಗತೆಗಳ ಕಡೆ ಹೆಚ್ಚು ಒಲವಿರುವ ಗುರುಪಾದ ಬೇಲೂರು ಅವರು ಈಗಾಗಲೇ ‘ದೇವರ ಕಾಡು’ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಈ ಸಂಕಲನದ ಶೀರ್ಷಿಕೆಯ ಕಥೆ ‘ದೇವರ ಕಾಡಿ’ನ ಜೊತೆಗೆ ‘ಮಿಂಚಿನ ಬಳ್ಳಿ’ ಎಂಬೆರಡು ನೀಳ್ಗತೆಗಳನ್ನು ಪ್ರಸ್ತಾಪಿಸದೇ ಮುಂದುವರೆಯಲು ಸಾಧ್ಯವೇ ಇಲ್ಲದುದರಿಂದಷ್ಟೇ ಅವನ್ನಿಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ‘ದೇವರ ಕಾಡಿ’ನಲ್ಲಿ ಹವ್ಯಾಸಿ ಪ್ಯಾರಾಚೂಟ್ ಗ್ಲೈಡರ್ ಒಬ್ಬ, ಆಕಸ್ಮಿಕವಾಗಿ ಅಪಘಾತಕ್ಕೊಳಗಾಗಿ ದಟ್ಟಡವಿಯೊಳಗೆ ಬಿದ್ದು ಸಿಕ್ಕಿಹಾಕಿಕೊಳ್ಳುತ್ತಾನೆ. ದಟ್ಟಾರಣ್ಯದ ಭಯಾನಕ ವಿವರಗಳ ಜೊತೆಜೊತೆಗೆ ಲೇಖಕರು ನೀಡುವ ಪ್ಯಾರಾಚೂಟ್ನ ವಿವಿಧ ಭಾಗಗಳು, ಅಕ್ಷಾಂಶ-ರೇಖಾಂಶಗಳಂತಹ ಪಿನ್ ಪಾಯಿಂಟ್ ವಿವರಗಳು ಓದುಗನನ್ನು ಹುಬ್ಬೇರಿಸುವಂತೆ ಮಾಡುತ್ತವೆ. ತಮ್ಮನ್ನು ಉದ್ಧಾರ ಮಾಡಲೆಂದೇ ಮೇಲಿನಿಂದ ಇಳಿದು ಬಂದ ದೈವಾಂಶಸಂಭೂತನಂತೆ ಹಾಡಿಯ ಜನರಿಗೆ ಕಂಡುಬಂದ ಸಿದ್ಧಾರ್ಥ ಅವರ ನಂಬಿಕೆಗೆ ಅನುಗುಣವಾಗಿಯೋ, ಆಕಸ್ಮಿಕವಾಗಿಯೋ ಅವರ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿಕೊಡುತ್ತಾನೆ. ಅದೇ ವೇಳೆಗೆ ಬರಸಿಡಿಲಿನಂತೆ ಎರಗಿದ ಗಣಿಕಾರಿಕೆಯ ಯಂತ್ರಗಳಿಂದ ದಿಗ್ಮೂಢರಾದ ಕಾಡುಜನರಿಗೆ, ತನ್ನನ್ನು ಹಾರೈಕೆ ಮಾಡಿ ಬದುಕುಳಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುವವಂತೆ, ಒಕ್ಕಲೆಬ್ಬಿಸುವ ಗಣಿಗಾರಿಕೆಯವರ ವಿರುದ್ಧ ಮಾಹಿತಿ ಸಂಗ್ರಹಿಸಿ, ಜನರನ್ನು ಸಂಘಟಿಸಿ ಹೋರಾಡಿ ದಟ್ಟ ಕಾಡನ್ನು ಕಾಡನ್ನಾಗಿಯೇ ಉಳಿಸಿಕೊಡುತ್ತಾನೆ. ಸಿದ್ಧಾರ್ಥನ ಈ ಪಾರಂಪರಿಕ ಧೋರಣೆಯನ್ನು ಸಮರ್ಥಿಸುವ ಮೂಲಕ ಪರಿಸರದ ಅಗತ್ಯತೆ ಮತ್ತು ಅನಿವಾರ್ಯತೆಯ ಜಾಗೃತಿಯನ್ನು ಲೇಖಕರು ಮೂಡಿಸುತ್ತಾರೆ.
ತುದಿಗಾಲ ಮೇಲೆ ನಿಲ್ಲಿಸಿ ಓದಿಸುವಂತಹ ಇಂಥದೇ ಇನ್ನೊಂದು ಕಥೆ ‘ಮಿಂಚಿನಬಳ್ಳಿ’. ‘ಜುಗಾರಿ ಕ್ರಾಸ್’ನಲ್ಲಿ ತೇಜಸ್ವಿಯವರು ಯಾಲಕ್ಕಿ ಬೆಳೆಯ ಲಾಭ ನಷ್ಟಗಳ ವಿವರಗಳನ್ನು ಮಂಡಿಸುತ್ತಲೇ ಕುತೂಹಲಭರಿತರಾಗಿ ಓದಿಸಿಕೊಳ್ಳುವಂತೆ ಮಾಡುವ ಹಾಗೆ, ಬೇಲೂರರು ವೆನಿಲ್ಲಾ ಬೆಳೆಯ ವಿವರಗಳನ್ನೆಲ್ಲ ಚೆನ್ನಾಗಿ ಅರಿತವರಂತೆ ಮಂಡಿಸುತ್ತಾರೆ. ಶಿವಮೊಗ್ಗೆಯ ಹೊರವಲಯದಲ್ಲಿ ತೋಟ ಮಾಡುವ ಕೃಷ್ಣೇಗೌಡ ರೈತರೆಲ್ಲರ ಪ್ರತಿನಿಧಿಯಂತೆ ಕಂಡರೂ ವಿಜ್ಞಾನಿಯೊಬ್ಬರ ಪ್ರಯೋಗಗಳಿಗೆ ತನಗರಿವಿರದೇ ಒಳಗಾಗುತ್ತಾನೆ. ವಿಪರ್ಯಾಸವೆಂದರೆ ಸಸ್ಯಕ್ಕೆ ಚಿರತೆಯ ಮ್ಯಾನ್ ಈಟರ್ ಟಿಸ್ಯೂವನ್ನು ವರ್ಗಾಯಿಸುವ ತನ್ನ ಕುಲಾಂತರಿ ಪ್ರಯೋಗಕ್ಕೆ ತಾನೇ ಬಲಿಯಾಗುವ ವಿಜ್ಞಾನಿಯ ದುರಂತಕ್ಕೆ ‘ಮಿಂಚಿನ ಬಳ್ಳಿ’ ಕಥೆ ಸಾಕ್ಷಿಯಾಗುತ್ತದೆ. ಪ್ರಕೃತಿಯ ಪ್ರಕೃತಿಗೆ ವಿರುದ್ಧವಾದ ಪ್ರಯೋಗಗಳನ್ನು ಮಾಡಹೊರಟ ಪ್ರೊಫೆಸರನ ದುರಂತವನ್ನು ಚಿತ್ರಿಸುತ್ತಲೇ ಪ್ರಕೃತಿ ಸಹಜವಾದ ಮಾನವ ಪ್ರೇಮವನ್ನು ಪ್ರತಿಪಾದಿಸುವ ಮೂಲಕ ಜೀವಪರವಾದ ಧೋರಣೆಯತ್ತ ವಾಲುವುದರಿಂದಾಗಿ ಕಥೆ ಆಪ್ತವಾಗುತ್ತದೆ. ಲವಲವಿಕೆಯ ಓದಿಗೆ ಕಾರಣವಾಗುವ ಈ ಕಥೆಯನ್ನು ಓದುಗರು ಓದಿಯೇ ಸವಿಯಬೇಕು.
ಇವೆರಡು ಕಥೆಗಳ ಹಾಗೆಯೇ ‘ಅಗರ್ತ’ದಲ್ಲಿರುವ ಮೂರು ನೀಳ್ಗತೆಗಳು ಕೂಡ ನಿಸರ್ಗದ ಸಮತೋಲನವನ್ನು ಕಾಪಾಡಬೇಕೆನ್ನುವ ಸಿದ್ಧಾಂತಕ್ಕೆ ಬದ್ಧವಾಗಿವೆ. ಶೀರ್ಷಿಕೆ ಕಥೆಯು ಕೇವ್ ಎಕ್ಸ್ಪೆಡಿಷನ್ ಮಾಡುವ ಸಾಹಸಿ ಫೆನ್ನರ್, ಚಿತ್ರದುರ್ಗ ಬಳಿಯ ಗುಹೆಯ ರಹಸ್ಯವನ್ನು ಅನಾವರಣ ಮಾಡಲು ಹೋಗಿ ನೆಲದಾಳದ ಒಂದು ಹೊಸದಾದ ಪ್ರಪಂಚವನ್ನೇ ಕಂಡುಹಿಡಿದ ಕಥೆ ಮೈನವಿರೇಳಿಸುತ್ತದೆ. ಹಿಮಾಲಯದ ತಪ್ಪಲಲ್ಲಿ ಭೂಮಿಯ ಆಳದಲ್ಲಿ ನಿರ್ಮಿತವಾಗಿದೆ ಎನ್ನಲಾಗಿರುವ ಅಗರ್ತದ ರಾಜಧಾನಿ ಶಾಂಬಲಾ ಅಥವಾ ಶಾಂಗ್ರಿಲಾ - ಪುರಾಣಗಳಲ್ಲಿ ಉಲ್ಲೇಖವಾಗಿರುವ ಪಾತಾಳ ಲೋಕ - ಇದೇ ಏನೋ ಎಂಬ ಅನುಮಾನ ಹುಟ್ಟಿಸುತ್ತದೆ. ಬೇರೆ ಗ್ರಹಗಳಿಂದ ಬಂದ ಅತಿ ಬುದ್ಧಿಜೀವಿಗಳ ಸಂಕರಣದಿಂದಾಗಿ ನೇರ ಜೀನ್ಗಳನ್ನು ಪಡೆದು ಮಾನವನ ಉಗಮವಾಗಿದ್ದು, ಚಿಂಪಾಂಜಿಗಳದೇ ಬೇರೆ, ಮಾನವನದೇ ಬೇರೆ ವಂಶವಾಹಿಗಳು ಬೇರೆಬೇರೆಯಾಗಿಯೇ ಬೆಳೆದುದರಿಂದ ಡಾರ್ವಿನ್ ಸಿದ್ಧಾಂತದ ಮಿಸ್ಸಿಂಗ್ ಲಿಂಕ್ ಉಳಿದುಬಿಟ್ಟಿತು; ಅಂತಹ ವಿಶಿಷ್ಟ ಜೀವಿಗಳ ಗುಂಪು ಶತಮಾನಗಳ ಮೊದಲೇ ಅಂತರ್ಗತ ಲೋಕಕ್ಕೆ ವಲಸೆ ಹೋಗಿಬಿಟ್ಟವು; ಅಲ್ಲಿಯ ಸ್ವಚ್ಛಂದ ಗಾಳಿ, ನಿಷ್ಕಲ್ಮಶ ವಾತಾವರಣದಿಂದಾಗಿ ‘ಅಗರ್ತ’ದ ಯಾರಿಗೂ ವಯಸ್ಸಾಗುವುದೇ ಇಲ್ಲ, ಆ ವಾತಾವರಣವನ್ನು ಭೂಮಿ ಮೇಲೆ ಸೃಷ್ಟಿಸಿದರೆ ನಾವೂ ಐನೂರು ವರ್ಷಕ್ಕೂ ಮೀರಿ ಬದುಕಬಹುದು ಎಂಬ ವಿಶಿಷ್ಟ ಸಿದ್ಧಾಂತವನ್ನು ಮಂಡಿಸುವ ಮೂಲಕ ಈ ಕಥೆ ನಮ್ಮನ್ನು ನವಿರಾದ ಹೊಸ ಲೋಕವೊಂದರತ್ತ ಸೆಳೆದೊಯ್ಯುತ್ತದೆ. ಪರಿಸರದ ಮಾಲಿನ್ಯತೆಯನ್ನು ತಡೆದು ನಮ್ಮ ಸುತ್ತ ಹೊಸ ಪ್ರಕೃತಿಯನ್ನು ಸೃಷ್ಟಿಸಿಕೊಳ್ಳಬೇಕಾದ ಅನಿವಾರ್ಯತೆಯತ್ತ ಕಥೆ ಮುಖ ಮಾಡಿಸುತ್ತದೆ.
‘ಒಡಲಾನಲ’ ಕೂಡ ತಾಂತ್ರಿಕ ವಿವರಣೆಗಳು ದಟ್ಟೈಸಿರುವ ಕಥೆ. ಮೊದಲ ಓದಿಗೆ ರಂಜನೆಯ ಅಂಶಗಳು ಕಡಿಮೆಯೆನಿಸಿದರೂ ಇತ್ತೀಚೆಗೆ ಅಧಿಕವಾಗಿರುವ ಭೂಕಂಪ, ಜ್ವಾಲಾಮುಖಿಗಳನ್ನು ನೋಡಿದರೆ ಈ ಕಥೆ ಸತ್ಯಕ್ಕೆ ಹತ್ತಿರವಾಗಿರುವಂತೆ ಭಾಸವಾಗುತ್ತದೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳ ವಿವರಗಳನ್ನೇ ನೀಡುತ್ತ ನಮ್ಮದೇ ಅನುಭವವಾಗಿಸುವಲ್ಲಿ ಕಥೆ ಯಶಸ್ವಿಯಾಗುತ್ತದೆ. ಇಡೀ ಭೂಮಿಯ ಆಂತರಿಕ ರಚನೆಯ ಪದರ ಪದರಗಳ ವಿವರಣೆಗಳನ್ನು ನೀಡುತ್ತಲೇ ಓಡುವ ಈ ಕಥೆಯೂ ಒಳಗೊಂಡು ಎಲ್ಲ ಕಥೆಗಳೊಳಗೂ ಭಿನ್ನ ಭಿನ್ನ ವಸ್ತುವನ್ನು ಇಟ್ಟುಕೊಂಡು ಆ ತಾಂತ್ರಿಕ ವಿವರಗಳನ್ನೆಲ್ಲ ಲೇಖಕರು ಹೇಗೆ ಸಂಗ್ರಹಿಸುತ್ತಾರೆಯೋ ಎಂದು ಆಶ್ಚರ್ಯವಾಗುತ್ತದೆ. ನೆಲದಾಳದಲ್ಲಿ ಕುದಿಯತ್ತಿರುವ ಲಾವಾರಸವನ್ನು ಕೊಳವೆ ಬಾವಿಗಳನ್ನು ಕೊರೆದು ಒಂದು ಸೇಫ್ ಝೋನ್ ಮೂಲಕ ಹೊರತೆಗೆದರೆ ಯಾವ ಕಚ್ಚಾ ವಸ್ತುವಿನ ನೆರವಿಲ್ಲದೆ ನಿರಂತರವಾಗಿ ವಿದ್ಯುತ್ ಉತ್ಪಾದಿಸಬಹುದು ಎಂಬ ಲೇಖಕರ ಚಿಂತನೆ ವಿಭಿನ್ನವಾಗಿದೆ. ಅದರ ಸಾಧಕ ಭಾದಕಗಳನ್ನು ಪರಿಶೀಲಿಸುವ ಈ ಕಥೆ ಪ್ರಕೃತಿಯ ಮೇಲೆ ನಡೆದ ಈ ಅತ್ಯಾಚಾರವನ್ನು ಪ್ರತಿಭಟಿಸುವಂತೆ ಒಳಗೊಳಗೇ ಕುದಿದು, ಆ ಕುದಿತವನ್ನು ಆರಿಸಿಕೊಳ್ಳಲು ಜಲಾಶಯಗಳ ನೀರನ್ನೆಲ್ಲ ಕುಡಿಯಲಾರಂಭಿಸುತ್ತಾಳೆ. ‘ನಾವು ಬೆಂಕಿಯೊಡನೆ ಆಡುತ್ತಿದ್ದೇವೆ. ನಾವೆಷ್ಟೇ ಆಟವಾಡಿದರೂ ಕೊನೆಗೆ ಗೆಲ್ಲುವುದು ಪ್ರಕೃತಿಯೇ’ ಎಂಬ ಮಾತು ಬೇಲೂರರ ಎಲ್ಲ ಕಥೆಗಳ ಮೂಲದ್ರವ್ಯದಂತಿದೆ. ಅಂತಿಮವಾಗಿ ಭೂಮಿಯೊಳಗೇ ನಡೆದ ಒಂದು ಭೂಕಂಪನದಿಂದಾಗಿ ಎಲ್ಲವೂ ಸಮನ್ವಯಗೊಂಡು ತನ್ನ ಮಕ್ಕಳು ಮಾಡಿದ ತಪ್ಪನ್ನು ಮನ್ನಿಸಿ ಯಥಾ ಸ್ಥಿತಿ ಕಾಪಾಡುತ್ತಾಳೆ. ಅಲ್ಲದೆ ಭೂಮಿಯೊಳಗಿನ ಕುದಿಯುವ ಲಾವಾದೊಂದಿಗೆ ಈಚೆ ಬಂದ ಕಿಂಬರ್ಲೈಟ್ನಿಂದಾಗಿ ಡೈಮಂಡ್ ರಾಕ್ಗಳು ಸೃಷ್ಟಿಯಾಗಿ ಭೂಮಿ ಮೇಲೆಲ್ಲ ಹರಡಿಕೊಳ್ಳುತ್ತವೆ. ಬರೀ ಗಣಿಯೊಳಗಲ್ಲದೆ ನೆಲದ ಮೇಲೆ ಸಿಗುವ ಪ್ರತಿ ಕಲ್ಲೂ ವಜ್ರಗಳಾಗಿ ಇಡೀ ದೇಶವೇ ಶ್ರೀಮಂತವಾಗಿಬಿಡುವ ಆಶಯದೊಂದಿಗೆ ಮುಗಿಯುವ ಕಥೆ ‘ಪ್ರಕೃತಿಯೊಡನೆ ಒಂದಾದರೆ ಅನುಗ್ರಹಿಸುತ್ತಾಳೆ, ದುರಾಸೆಯಿಂದ ನಾಶ ಮಾಡ ಹೊರಟರೆ ಮುನಿಸಿಕೊಳ್ಳುತ್ತಾಳೆ’ ಎಂಬ ಸಂದೇಶ ಹೊರಡಿಸುತ್ತದೆ.
‘ರಾಮಯ್ಯ ಮೇಷ್ಟ್ರು’ ಕಥೆಗೆ ಇನ್ನೂ ಆಕರ್ಷಕವಾಗಿದ್ದ ಶೀರ್ಷಿಕೆಯನ್ನು ಇಡಬಹುದಿತ್ತೇನೋ. ಕಥೆ ಚಿಕ್ಕದಾದರೂ ಒಂದು ನೀಳ್ಗತೆಗಿರಬೇಕಾದ ಎಲ್ಲಾ ವೈಶಾಲ್ಯತೆಯನ್ನು ಹೊಂದಿದ್ದು ಮೂಢ ನಂಬಿಕೆಯ ಹಿಂದಿನ ವಾಸ್ತವವನ್ನು ತೆರೆದಿಡುವ ಕೆಲಸ ಮಾಡುತ್ತದೆ. ಮೇಷ್ಟರಂತಹ ಮೇಷ್ಟ್ರೇ ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸುವ ಸಮಸ್ಯೆಯಿಂದಾಗಿ ಮೂಢನಂಬಿಕೆಯತ್ತ ವಾಲುವ, ಕಾಕತಾಳೀಯವೆಂಬಂತೆ ಅಲ್ಲಿ ಪರಿಹಾರ ಕಂಡುಕೊಳ್ಳುವ ರಾಮಯ್ಯ ಮೇಷ್ಟ್ರ ಬದ್ಧತೆಯನ್ನೇ ಪ್ರಶ್ನಿಸುವಂತೆ ಕಥೆ ಕುತೂಹಲಕಾರಿಯಾಗಿ ಸಾಗುತ್ತದೆ. ಆದರೆ ಪಿಕ್ನಿಕ್ ಬಂದ ಮಕ್ಕಳು ಮಂತ್ರಿಸಿ ಹೂಳಿದ್ದ ಲಿಂಬೆಹಣ್ಣನ್ನು ಕಿತ್ತು ಹೊರತೆಗೆದದ್ದು ತಿಳಿದ ನಂತರ ಸಮಸ್ಯೆ ಮರುಕಳಿಸಿ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಮನುಷ್ಯನಿಗೆ ಸಮಸ್ಯೆ ತನ್ನ ಬುಡಕ್ಕೆ ಬಂದಾಗಲೇ ಹಾಗೂ ಏಕಾಂಗಿಯಾಗಿದ್ದಾಗಲೇ ಪರಿಸ್ಥಿತಿಯ ಪ್ರಶ್ನೆಗಳಿಗೆ ಉತ್ತರ ಹುಡುಕಲಾರದೇ ಶರಣಾಗತನಾಗುವುದು ಎಂಬುದನ್ನು ಕಥೆ ಮಾರ್ಮಿಕವಾಗಿ ಚಿತ್ರಿಸುತ್ತದೆ. ಅಂತಿಮವಾಗಿ ದೂರನಿಂತು ಅವಲೋಕಿಸುವ ಮೇಷ್ಟ್ರ ಮಗ ಮತ್ತು ಆತನ ಸ್ನೇಹಿತ ಇನ್ಸ್ಪೆಕ್ಟರ್ ಸೇರಿ ಸಮಸ್ಯೆಯ ಮೂಲವನ್ನು ಕೆದಕಿ ಬಿಡಿಸಿದಾಗಲೇ ಮೇಷ್ಟ್ರಿಗೆ ತಮ್ಮ ಮೂರ್ಖತನದ ಬಗ್ಗೆ ನಾಚಿಕೆಯೆನಿಸುವುದು. ಕಥೆಯೊಳಗೆ ಒಂದೆರಡು ಸಣ್ಣ ಅನುಮಾನಗಳು ಹಾಗೇ ಉಳಿದರೂ, ಇಷ್ಟು ಎಜುಕೇಟ್ ಮಾಡಿದ ಮೇಲೂ ಕ್ಷುಲ್ಲಕ ಪ್ರಶ್ನೆಗಳಿಗೆಲ್ಲ ಕಥೆಯೇ ಉತ್ತರಿಸಬೇಕಾಗುತ್ತದೆಯೇ ಎಂದು ಲೇಖಕರು ಕೇಳಬಹುದು. ಹಾಗೆಯೇ ‘ಅಗರ್ತ’ ಕಥೆಯಲ್ಲೂ ಒಂದೆರಡು ಮಿಸ್ಸಿಂಗ್ ಲಿಂಕ್ಗಳು ಕಂಡುಬಂದರೂ ಅವುಗಳನ್ನು ನಗಣ್ಯ ಎಂದೇ ಪರಿಭಾವಿಸಬೇಕಾಗುತ್ತದೆ.
‘ಯೋಗೇಂದ್ರ’ ಕಥೆ ಮೇಲ್ನೋಟಕ್ಕೆ ಒಂದು ಹುಟ್ಟಿನ ಜಾತೀಯತೆಯ ಬಗ್ಗೆ ಪರಿಶೀಲಿಸುವಂತೆ ಒಂದು ಮಹತ್ವದ ಆರಂಭವನ್ನು ಪಡೆಯುತ್ತದೆ. ಅನಾಥವಾಗಿ ಸಿಕ್ಕ ಯಾವುದೋ ಜಾತಿಯ ಮಗುವನ್ನು ಮಕ್ಕಳಿಲ್ಲದ ಮಾನಾಚಾರ್ಯರು ಸಾಕಿ ಸಲಹಿ, ಹುಟ್ಟು ಮತ್ತು ಜಾತಿಗೆ ಅತೀತವಾಗಿ ಯೋಗೇಂದ್ರನನ್ನು ಒಂದು ಮಠದ ಸ್ವಾಮೀಜಿಯಾಗಿ ನೇಮಿಸಿಬಿಡುವುದು ಒಂದು ವಿಶೇಷವೇ ಸರಿ. ಆದರೆ ಜೀವದ ಆತಂಕದಲ್ಲಿ ಬದುಕಬೇಕಾಗಿ ಬರುವ ಸ್ವಾಮೀಜಿಯ ಮೇಲೆ ನಿಗೂಢವಾಗಿ ಅನೇಕ ಬಾರಿ ಕೊಲೆ ಯತ್ನಗಳು ನಡೆಯುತ್ತವೆ. ಆ ಕೊಲೆ ಯತ್ನದ ಹಿಂದಿನ ಕೈವಾಡದ ಪತ್ತೇದಾರಿಕೆಯಲ್ಲಿ ತೊಡಗುವ ಪೊಲೀಸರಿಗೆ ಅಭೇದ್ಯವಾಗಿದ್ದ ಅನೇಕ ಸಾವುಗಳ ಹಿಂದಿನ ರಹಸ್ಯವನ್ನು ಭೇದಿಸಿದ ಯಶ ಸಿಗುತ್ತದೆ. ಒಂದು ಸೃಷ್ಟಿಶೀಲ ಕಥೆ ಲೇಖಕನಿಂದ ತನ್ನಂತಾನೆ ಹೇಗೆ ಬರೆಸಿಕೊಳ್ಳುತ್ತದೆ ಎಂಬುದಕ್ಕೆ ‘ಯೋಗೇಂದ್ರ’ ಕಥೆ ಒಳ್ಳೆಯ ಉದಾಹರಣೆ. ಬಹುಶಃ ಲೇಖಕರು ಮಹತ್ತರವಾದ ಯಾವುದೋ ಧ್ಯೇಯ ಇಟ್ಟುಕೊಂಡು ಅದನ್ನು ಪ್ರತಿಪಾದಿಸಲು ಹೊರಟಿದ್ದರೂ, ಅವರ ಕೈಯ್ಯನ್ನು ಮೀರಿ ಕಥೆ ತನ್ನನ್ನು ತಾನು ಹೇಗೆ ಬರೆಸಿಕೊಂಡಿದೆ ಎಂಬುದು ಕುತೂಹಲಕಾರಿಯಾಗಿದೆ.
ಲೇಖಕ ಗುರುಪಾದ ಬೇಲೂರು ಅವರು ಜನಪ್ರಿಯ ಶೈಲಿಯ ಕತ್ತಿಯ ಅಲಗಿನಿಂದ ಸ್ವಲ್ಪದರಲ್ಲೇ ಜಾರಿ ಗಂಭೀರತೆಯತ್ತ ವಾಲಿಬಿಡುತ್ತಾರೆ. ಬಹಳ ಅಪಾಯಕಾರಿಯಾದ ಈ ನಡಿಗೆಯಲ್ಲಿ ಅವರು ಗೆದ್ದುಬಿಡುತ್ತಾರೆ. ಒಟ್ಟಾರೆ ಎಲ್ಲ ಕಥೆಗಳ ಒಳದನಿಯಲ್ಲಿ, ಪ್ರಕೃತಿಯ ವಿರುದ್ಧ ಏನೇ ಪ್ರಯೋಗ ಮಾಡಲು ಹೊರಟರೂ ಆಕೆ ತನ್ನನ್ನು ತಾನು ಸರಿಪಡಿಸಿಕೊಳ್ಳುವ ಗುಣ ಹೊಂದಿರುತ್ತಾಳೆ ಎಂಬುದೇ ಪ್ರತಿಧ್ವನಿಸುತ್ತದೆ. ಸದ್ಯ, ನೀರಾವರಿ ಇಲಾಖೆಯ ಅತ್ಯುನ್ನತ ಹುದ್ದೆಯನ್ನು ನಿಭಾಯಿಸುತ್ತಿರುವ ಅವರ ಒಡಲೊಳಗೆ ಹತ್ತು ಹಲವಾರು ಯೋಜನೆಗಳ ನೂರಾರು ತಾಂತ್ರಿಕಾತ್ಮಕ, ಆಡಳಿತಾತ್ಮಕ, ರಾಜಕೀಯಾತ್ಮಕ ರಹಸ್ಯಗಳು ಅಡಗಿವೆ. ಅವು ಮುಂದಿನ ದಿನಮಾನಗಳಲ್ಲಿ ಅವರ ಅನುಭವದ ಮೂಸೆಯಿಂದ ಹೊರಹೊಮ್ಮಬಹುದೆಂಬ ವಿಶ್ವಾಸ ನನಗಿದೆ.
ಅದೇನೇ ಇರಲಿ, ಉನ್ನತ ಹುದ್ದೆಯಲ್ಲಿ ಇರುವವರಿಗೆ ಸಂಸ್ಕಾರ ಇರಬೇಕೆನ್ನುತ್ತಾರೆ. ಆ ಸಂಸ್ಕಾರ ಸಾಹಿತ್ಯದ ಮೂಲಕ ಬಂದರಂತೂ ಸಹೃದಯತೆ ಎಂಬುದು ತಾಂಡವವಾಡುತ್ತದೆ. ತಮ್ಮದು ಮಾತ್ರವಲ್ಲ, ಇಡೀ ಸಮುದಾಯದ ಬದುಕು ಹಸನಾಗುತ್ತದೆ ಎಂಬುದಕ್ಕೆ ಗುರುಪಾದ ಬೇಲೂರು ಅವರು ಅತ್ಯುತ್ತಮ ಸಾಕ್ಷಿ. ಅವರದೇ ‘ಡಾಲರ್ ಸಿಕ್ಕಿದ ಕಥೆ’ಯ ಕೊನೆಯಲ್ಲಿ ಹೊಳೆಯುವ ಡಾಲರ್ನ ಬೆಳಕನ್ನು (ಜ್ಞಾನದ ಬೆಳಕು, ಶಾಂತಿ-ನೆಮ್ಮದಿಯ ಬೆಳಕು) ಹಂಚುವಂತೆ ತಮ್ಮ ಒಳಗಿನ ಬೆಳಕನ್ನು ಕಥೆಗಳ ಮೂಲಕ ನಮಗೆಲ್ಲ ಹಂಚುತ್ತಿದ್ದಾರೆ. ವ್ಯಕ್ತಿತ್ವ ವಿಕಸನದ ಬಗ್ಗೆ, ಧ್ಯಾನದ ಬಗ್ಗೆ, ಅಧ್ಯಾತ್ಮದ ಬಗ್ಗೆ, ಉನ್ನತ ತಾಂತ್ರಿಕತೆಯ ಬಗ್ಗೆ ಹೀಗೆ ಎಲ್ಲದರಲ್ಲೂ ಔನ್ನತ್ಯ ಸಾಧಿಸಿರುವ ಗುರುಪಾದ ಬೇಲೂರು ಅವರು ಕನ್ನಡದ ಕಥಾವಲಯವನ್ನು ಇನ್ನಷ್ಟು ವಿಸ್ತರಿಸಲೆಂದು ಹಾರೈಸುತ್ತೇನೆ.-
ಕಂನಾಡಿಗಾ ನಾರಾಯಣ
ಪರಿವಿಡಿ
ಅಗರ್ತ
ಒಡಲಾನಲ
ರಾಮಯ್ಯ ಮೇಷ್ಟ್ರು
ಯೋಗೇಂದ್ರ
ಅಗರ್ತ
ಪರಿವಿಡಿ
ಅಧ್ಯಾಯ-1
ಅಧ್ಯಾಯ-2
ಅಧ್ಯಾಯ-3
ಅಧ್ಯಾಯ-4
ಅಧ್ಯಾಯ-5
ಅಧ್ಯಾಯ-6
ಅಧ್ಯಾಯ-7
ಅಧ್ಯಾಯ-8
ಶಾಂಭಲಾ ಗ್ರಾಮ ಮುಖ್ಯಸ್ಥ
ಬ್ರಾಹ್ಮಣಸ್ಯ ಮಹಾತ್ಮನಃ
ಭವನೆ ನಿಷ್ಟುಯಸಃ
ಕಲ್ಕಿಃ ಪ್ರದುರ್ ಭವಿಷ್ಯತಿ
-ಶ್ರೀಮದ್ ಭಾಗವತಮ್ ಅಧ್ಯಾಯ 2 : 18
ಅಧ್ಯಾಯ-1
ಶ್ರೀಧರ, ಕೈಯಲ್ಲಿದ್ದ ಗಡಿಯಾರದ ಕಡೆ ಮತ್ತೊಮ್ಮೆ ಕಣ್ಣು ಹಾಯಿಸಿದ. ರಾತ್ರಿ 11.40 ಗಂಟೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ದೆಹಲಿಯಿಂದ ಬರುವ ಜೆಟ್ ಏರ್ವೇಸ್ನ ವಿಮಾನ ಲ್ಯಾಂಡ್ ಆಗುವುದನ್ನ ಕಾಯುತ್ತಾ ಕುಳಿತಿದ್ದ ಶ್ರೀಧÀರ. ದೆಹಲಿಯಿಂದ ಬರಬೇಕಿದ್ದ ಕೊನೆಯ ವಿಮಾನ ಅವತ್ತು ಲೇಟು. ಮಧ್ಯರಾತ್ರಿ ಹೊತ್ತಿಗೆ ಬೆಂಗಳೂರಿಗೆ ಬಂದಿಳಿಯಲಿತ್ತು. ವಿಮಾನ ತಡವಾಗಿದೆಯೆಂದು ತಿಳಿಯದ ಶ್ರೀಧರ, ರಾತ್ರಿ ಹತ್ತೂವರೆಗೆ ವಿಮಾನ ನಿಲ್ದಾಣಕ್ಕೆ ಬಂದವನು, ಗಂಟೆಯಿಂದ ಕಾಯುತ್ತಾ ಕುಳಿತಿದ್ದ.
ವಿಮಾನ ನಿಲ್ದಾಣದ ಹೊರಗಡೆಯ ಅಡಿಗಾಸ್ನಲ್ಲಿ ಕಾಫಿ ಎರಡು ಬಾರಿ ಕುಡಿದು, ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸ್ವಲ್ಪ ಹೊತ್ತು ಅಡ್ಡಾಡಿ ಮತ್ತೆ ಬಂದು ಕಾರಿನಲ್ಲಿ ಕುಳಿತುಕೊಂಡಿದ್ದ ಶ್ರೀಧರ. ಮೊಬೈಲ್ನಲ್ಲಿ ನ್ಯೂಸ್ ಹಂಟ್ನ ಬ್ರೇಕಿಂಗ್ ನ್ಯೂಸ್ ಡೌನ್ ಲೋಡ್ ಆಗಿತ್ತು. ಸಹಾರಾ ಮುಖ್ಯಸ್ಥ ಸುಬ್ರತಾರಾಯ್ ಬಂಧನ ಅಂತ. ಕುತೂಹಲದಿಂದ ಪೂರ್ಣ ಸುದ್ದಿ ಡೌನಲೋಡ್ ಮಾಡಿಕೊಂಡ. ಸಹಾರಾ ಗ್ರೂಪ್ಸ್ ಕಂಪನಿಗಳ ಮುಖ್ಯಸ್ಥ ಸುಬ್ರತಾ ರಾಯ್ ರವರನ್ನು ಲಖ್ನೋ ಪೋಲಿಸರು ಬಂಧಿಸಿದ ಸುದ್ದಿ. ವಸತಿ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಹೂಡಿಕೆದಾರರಿಗೆ ವಂಚಿಸಿದ ಆರೋಪ ಹೊರಿಸಲಾಗಿತ್ತು. ಇಲ್ಲಿ ಸಾವಿರ ಕೋಟಿ ಠೇವಣಿ ಇಡಲಿಕ್ಕೆ ನ್ಯಾಯಾಲಯ ಸೂಚಿಸಿತ್ತು. ನ್ಯೂಸ್ನಲ್ಲಿದ್ದ, ಸಹಾರಾ ಗ್ರೂಪ್ಸ್ ಖರೀದಿಸಿದ ನ್ಯೂಯಾರ್ಕ್ ನ ಎರಡು ಐಶರಾಮಿ ಹೋಟೆಲ್ಗಳ ಚಿತ್ರವನ್ನೇ ನೋಡುತ್ತಾ, ಅಬ್ಬಾ ಶ್ರೀಮಂತರ ಮೋಸವೇ ಅಂದುಕೊಂಡ ಶ್ರೀಧರ. ಇವರದೇ ಏರ್ ಲೈನ್ಸ್ ಕೂಡ ಇತ್ತಲ್ಲವೇ, ಸಹರಾ ಏರಲೈನ್ಸ್. ಜೆಟ್ ಏರ್ಲೈನ್ಸ್ಗೆ ಅದನ್ನು 4,700ಕೋಟಿಗೆ ಮಾರಿದರಲ್ಲವೇ. ಈ ಸಾವಿರ ಸಾವಿರ ಕೋಟಿಗಳ ವ್ಯವಹಾರ ಶ್ರೀಧರನ ತಲೆಗೆ ಹತ್ತುವಂತಹುದಲ್ಲ, ಅವನ ಅಸೈನ್ಮೆಂಟ್ ಅಂದರೆ ತಾನು ಗಂಟೆಗಟ್ಟಳೆ ಕಾಯುತ್ತಿರುವ, ಜೆಟ್ ಏರ್ಲೈನ್ಸ್ನಲ್ಲಿ ದೆಹಲಿಯಿಂದ ಬಂದಿಳಿಯುತ್ತಿರುವ ಜಾನ್ ಫೆನ್ನರ್ನನ್ನು ರಿಸೀವ್ ಮಾಡಿಕೊಳ್ಳುವುದು ಮತ್ತು ಆತನನ್ನು ಗೋಲ್ಡನ್ ಪಾಮ್ಸ್ ರೆಸಾರ್ಟಗೆ ಕರೆದುಕೊಂಡು ಬಿಡುವುದು. ಮತ್ತು ಎರಡು ದಿನ ಬೆಂಗಳೂರಿನ ವಾಸ್ತವ್ಯದ ನಂತರ ಆತನನ್ನು ಏರ್ ಪೊರ್ಟ್ಗೆ ಕರೆದುಕೊಂಡು ಬರುವುದು. ಇಷ್ಟಾದರೆ ಶ್ರೀಧರನ ಕೆಲಸ ಮುಗಿದಂತೆ, ತನ್ನ ಕಂಪನಿ Wish well Cavers and Adventurous Club(WICAD) ನ ಎಂ.ಡಿ.ಗೆ ಈ ಫೆನ್ನರನನ್ನು ಭೇಟಿ ಮಾಡಿಸಿದರೆ ಆಯಿತು.
ಅದೆಷ್ಟನೇ ಬಾರಿಯೋ ಆತನು ಆಕಳಿಸಿದ್ದು, ಡೊಮೆಸ್ಟಿಕ್ ಏರ್ಲೈನ್ಸ್ನ ಪ್ರಯಾಣಿಕರು ಕರಗುತ್ತಾ, ಅಂತರಾಷ್ಟ್ರೀಯ ವಿಮಾನಗಳಿಗೆ ಬರುವ ಪ್ರಯಾಣಿಕರ ಜನಸಂದಣಿ ಜಾಸ್ತಿ ಆಗುತ್ತಿತ್ತು, ಸಿಂಗಾಪುರ, ಹಾಂಕಾಂಗ್, ಮಲೇಷಿಯಾ, ಆಸ್ಟ್ರೇಲಿಯಾ ಇತ್ಯಾದಿ ಪೂರ್ವಪ್ರಾಂತದ ದೇಶಗಳಿಗೆ ಒಂದರ ಹಿಂದೊಂದು ಫ್ಲೈಟ್ಗಳು ಇದ್ದು, ಅಂತರಾಷ್ಟ್ರೀಯ ವಿಭಾಗ, ಹಗಲಿನಂತೆ ಜನಜಂಗುಳಿಯಿಂದ ತುಂಬಿತ್ತು. ಈ ಜನಗಳಿಗೆ ಓಡಾಡೋದು ಬಿಟ್ಟು ಬೇರೆ ಕೆಲಸವೇ ಇಲ್ಲವೇ ಎಂದುಕೊಂಡ ಶ್ರೀಧರ. ಎಲ್ಲಿ ನೋಡಲಿ ರಷ್, ರಸ್ತೆಯಲ್ಲಿ, ಬಸ್ಸುಗಳಲ್ಲಿ, ರೈಲುಗಳಲ್ಲಿ, ವಿಮಾನದಲ್ಲಿ... ಮ್ಯಾಡ್ ರಷ್. ಹಿಂದೆ ಶನಿವಾರ, ಭಾನುವಾರಗಳಂತಹ ರಜಾ ದಿನಗಳಲ್ಲಿ ಬೆಂಗಳೂರು ತಣ್ಣಗಿರುತ್ತಿತ್ತು.