Bhoomigeethe
By KT Gatti
()
About this ebook
Related to Bhoomigeethe
Related ebooks
Punarapi Jananam Rating: 4 out of 5 stars4/5Ithihaasada Mogasaaleyalli Rating: 5 out of 5 stars5/5Abhramana Rating: 0 out of 5 stars0 ratingsNataka Dange Rating: 0 out of 5 stars0 ratingsTappu Maadona Banni! Rating: 4 out of 5 stars4/5Taalikoteya Kadanadalli Rating: 0 out of 5 stars0 ratingsBest of Lovelavike Rating: 5 out of 5 stars5/5Devarakaadu Rating: 0 out of 5 stars0 ratingsಯಶೋಃಗೀತ Rating: 0 out of 5 stars0 ratingsKempu Kalave Rating: 0 out of 5 stars0 ratingsParidhi Rating: 0 out of 5 stars0 ratingsParimidita Rating: 0 out of 5 stars0 ratingsOoru Suttaru Hanamappa Horaga Rating: 0 out of 5 stars0 ratingsSuruli - Manadi Suttida Kathegalu Rating: 0 out of 5 stars0 ratingsGodegala Naduve Rating: 0 out of 5 stars0 ratingsKaarmugilu Rating: 0 out of 5 stars0 ratingsNanna Saalugalu - Volume 1 Rating: 5 out of 5 stars5/5Godegala Naduve Rating: 0 out of 5 stars0 ratingsVishwam Shubham Mangalam Rating: 0 out of 5 stars0 ratingsHaddina Rekke Saadu Rating: 5 out of 5 stars5/5Doctor Sukanya Rating: 0 out of 5 stars0 ratingsDuddu Duddu Rating: 5 out of 5 stars5/5Kannada-English Book Adding 15 Years to The Wellbeing of Our Indian Community In USA and Everyone Else In USA Rating: 0 out of 5 stars0 ratingsHei Kaapurusha Rating: 0 out of 5 stars0 ratingsPreetiya Belaku Rating: 0 out of 5 stars0 ratingsO Henne Neeneshtu Olleyavalu Rating: 0 out of 5 stars0 ratingsBottom Item Rating: 5 out of 5 stars5/5Karmanye Vadhikaraste Rating: 0 out of 5 stars0 ratingsKoopa Rating: 0 out of 5 stars0 ratingsAbhilashe Rating: 0 out of 5 stars0 ratings
Reviews for Bhoomigeethe
0 ratings0 reviews
Book preview
Bhoomigeethe - KT Gatti
http://www.pustaka.co.in
ಭೂಮಿಗೀತೆ
Bhoomigeethe
Author :
ಕೆ. ಟಿ. ಗಟ್ಟಿ
K T Gatti
For more books :
http://www.pustaka.co.in/home/author/kt-gatti
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಕೆ. ಟಿ. ಗಟ್ಟಿ
ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದು, 1956ರಲ್ಲಿ `ಮುಂಗಾರ ಮುಗಿಲು' ಎಂಬ ಒಂದು ಚಿಕ್ಕ ಕತೆಯ ಮೂಲಕ. ಆಗ ಅವರಿಗೆ ಹದಿನೆಂಟು ವರ್ಷ. ಅನಂತರ ಸುಮಾರು ಹದಿನೈದು ವರ್ಷ ತನ್ನ ಓದಿನ ನಡುವೆ ಬೇರೆ ಬೇರೆ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಅವರ ಕತೆ, ಕವಿತೆ ಮತ್ತು ಲೇಖನಗಳು ಪ್ರಕಟವಾಗುತ್ತಿದ್ದವು. ಕೆ.ಟಿ.ಗಟ್ಟಿಯವರ ಮೊದಲ ಕಾದಂಬರಿ `ಶಬ್ದಗಳು' ಪ್ರಕಟವಾದದ್ದು 1973ರಲ್ಲಿ. ಕಾದಂಬರಿ ಬರವಣಿಗೆಯಲ್ಲದೆ, ಸಣ್ಣ ಕತೆ, ಕಾವ್ಯ, ಪ್ರಬಂಧ, ನಾಟಕ, ಬಾನುಲಿ ನಾಟಕ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಅನುವಾದ, ಭಾಷಾ ಶಾಸ್ತ್ರ, ಶಿಕ್ಷಣ ಮುಂತಾದ ವಿವಿಧ ಪ್ರಕಾರಗಳಲ್ಲಿ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಮತ್ತು ತುಳುಭಾಷೆಯಲ್ಲಿ ಗಟ್ಟಿಯವರ ತೊಂಬತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಅವರ `ಕತೆ ಇನ್ನೂ ಇದೆ’, `ಅನುಭವದಡಿಗೆಯ ಮಾಡಿ’ ಮತ್ತು `ತಾಳಮದ್ದಳೆ’ ಎಂಬ ಮೂರು ಬಾನುಲಿ ಸರಣಿ ನಾಟಕಗಳು ಬಹಳ ಪ್ರಸಿದ್ಧ. ಗಟ್ಟಿಯವರ ಆತ್ಮ ಕಥೆ `ತೀರ' ಒಂದು ವಿಶಿಷ್ಟ ಕೃತಿಯಾಗಿದೆ.
ಕೆ. ಟಿ. ಗಟ್ಟಿ
ಭೂಮಿಗೀತೆ
(ಕಾದಂಬರಿ)
ಮುನ್ನುಡಿ (1986)
`ಜನರಿಂದ ಜನರಿಗೋಸ್ಕರ ಜನರ ಸರಕಾರ’ ಎಂದು ಅಬ್ರಹಾಂ ಲಿಂಕನ್ ಪ್ರಜಾಪ್ರಭುತ್ವದ ಲಕ್ಷಣ ನಿರೂಪಣೆ ಮಾಡಿದ. ಇದು ಪ್ರಜಾಪ್ರಭುತ್ವದ ಅತ್ಯಂತ ಸಮರ್ಪಕವಾದ, ಸಮಗ್ರವಾದ ಲಕ್ಷಣ ನಿರೂಪಣೆ ಎಂದು ಜಗತ್ತಿನ ಎಲ್ಲಾ ಪ್ರಜಾಪ್ರಭುತ್ವಗಳೂ ಒಪ್ಪಿಕೊಂಡಿವೆ ಮತ್ತು ಎಲ್ಲಾ ಪ್ರಜಾಪ್ರಭುತ್ವಗಳ ಸರಕಾರಗಳೂ ಈ ಸಿದ್ಧಾಂತದ ಪ್ರಕಾರವೇ ಕಾರ್ಯವೆಸಗುತ್ತವೆ ಎಂಬುದು ಲೋಕವಿದಿತವಾದ ನಂಬಿಕೆಯಾಗಿದೆ.
`ಜನರಿಂದ ಜನರಿಗೋಸ್ಕರ ಜನರ ಸರಕಾರ’ ಎಂಬ ಪ್ರಜಾಪ್ರಭುತ್ವ ಸಿದ್ಧಾಂತದ ನಿಕಷದಲ್ಲಿ ಈಗ ಕೆಲಸ ಮಾಡುತ್ತಿರುವ ಪ್ರಜಾಪ್ರಭುತ್ವಗಳಿಗೆ ಸಂಬಂಧಪಟ್ಟ ಕೆಲವು ವಿಚಾರಗಳನ್ನು ಪರಿಶೀಲಿಸೋಣ.
`ಜನರಿಂದ ಸರಕಾರ’ ಎಷ್ಟರ ಮಟ್ಟಿಗೆ?
ಉದಾಹರಣೆಗೆ, ಒಂದು ಮತದಾರ ಕ್ಷೇತ್ರ. ಒಂದು ಲಕ್ಷ ಮತದಾರರು. ಐದು ಜನ ಚುನಾವಣಾ ಅಭ್ಯರ್ಥಿಗಳು. ಅವರು ಗಳಿಸಿದ ಮತಗಳು ತಲಾ 29 ಸಾವಿರ, 27 ಸಾವಿರ, 26 ಸಾವಿರ, 6 ಸಾವಿರ ಮತ್ತು 5 ಸಾವಿರ. ಸರಿ, 30 ಸಾವಿರ ಗಳಿಸಿದವನು ಆ ಕ್ಷೇತ್ರದ ಶಾಸಕನಾಗುತ್ತಾನೆ. ಅಂದರೆ ಅವನ ಪ್ರತಿನಿಧಿತ್ವವನ್ನು ಒಪ್ಪಿಕೊಂಡವರು ಕೇವಲ 29%, ಒಪ್ಪಿಕೊಳ್ಳದವರು 71%! ಅಷ್ಟು ಮಂದಿ, ಅಂದರೆ ಬಹುಸಂಖ್ಯಾತರು, ಆತನನ್ನು ಒಪ್ಪಿಕೊಳ್ಳದಿರಲು ಏನು ಕಾರಣ ಎನ್ನುವ `ವಿಚಾರ ಸಭೆ’ ಯಾವತ್ತಾದರೂ ಎಲ್ಲಿಯಾದರೂ ನಡೆಯುವುದುಂಟೆ?
ಉದಾಹರಣೆಯನ್ನು ಸ್ವಲ್ಪ ಮುಂದುವರಿಸೋಣ. 100 ಸದಸ್ಯರಿರುವ ಒಂದು ಅಸೆಂಬ್ಲಿಯಲ್ಲಿ ಇದೇ ರೀತಿ ಆಯ್ಕೆಗೊಂಡವರು ಒಂದು ರಾಜಕೀಯ ಪಕ್ಷದಲ್ಲಿ 51 ಮಂದಿಯಾದಾಗ ಆ ಪಕ್ಷದ ಸರಕಾರ ಆಗುತ್ತದೆ. ಅಂದರೆ ಒಂದು ಕೋಟಿ ಜನರಲ್ಲಿ ಬರೀ 15-16 ಲಕ್ಷ ಜನರು ಮಾತ್ರವೇ ಒಪ್ಪಿಕೊಂಡ ಸರಕಾರ! ಈ ರೀತಿ ತೀರಾ ಅಲ್ಪ ಮತದಿಂದಲೂ ಒಂದು ಪ್ರಜಾಪ್ರಭುತ್ವ ಸರಕಾರವುಂಟಾಗಲು ಸಾಧ್ಯ ಎಂದಾಯ್ತು. ಇದೊಂದು ಸೈದ್ಧಾಂತಿಕ ಉದಾಹರಣೆ ಎಂದಿಟ್ಟುಕೊಳ್ಳೋಣ. ಆದರೆ 30%-40% ಜನರ ಓಟುಗಳ ಒಪ್ಪಿಗೆಯ ಆಧಾರದಲ್ಲಿ ನಡೆಯುವ ಸರಕಾರಗಳು ಅಸ್ತಿತ್ವದಲ್ಲಿವೆ ಎಂಬುದು ವಾಸ್ತವ ತಾನೆ?
ಇಂಥ ಸರಕಾರ ಎಷ್ಟರ ಮಟ್ಟಿಗೆ `ಜನರಿಂದ’ ಸರಕಾರ? ಹೀಗೆ ಆರಿಸಿ ಬಂದ ರಾಜಕಾರಣಿಗಳು ತಮಗೆ ಮತ ನೀಡದ ಜನರನ್ನು ತಲೆಯಿಲ್ಲದವರು, ಮುಟ್ಠಾಳರು ಅಂತ ಸಾರ್ವಜನಿಕ ಸಭೆಗಳಲ್ಲಿ ನಿಂದಿಸಿದ್ದೂ ಇದೆ. ತನ್ನ ಎದುರು ಅಭ್ಯರ್ಥಿ ಶುದ್ಧ ವ್ಯಕ್ತಿತ್ವದ ಮೇಧಾವಿ ಎಂದು ಲೋಕಕ್ಕೇ ಗೊತ್ತಿದ್ದರೂ ಆತನನ್ನು ನಾನಾ ರೀತಿಯಲ್ಲಿ ನಿಂದಿಸುವುದನ್ನೇ ತನ್ನ ಚುನಾವಣಾ ಭಾಷಣ ಮಾಡಿ ಗೆದ್ದು ಬಂದವರಿದ್ದಾರೆ. ಚುನಾವಣಾ ಅಭ್ಯರ್ಥಿಯದ್ದು ಗೆಲ್ಲುವುದೊಂದೇ ಧ್ಯೇಯ ಲೋಕಹಿತ, ಜನಹಿತ ಅಲ್ಲ ಎಂದಾದರೆ ಜನಕ್ಕೆ ಎಂಥ ಆಡಳಿತ ಸಿಗುತ್ತದೆ ಎಂಬುದು ಮರಳಿ ಮರಳಿ ಸಾಬೀತಾಗಿದೆ. ತಮಗೆ ಓಟು ಹಾಕಿದವರಿಗೆ ಉಪಕಾರಗಳನ್ನು ಹಂಚುತ್ತಾ ಇತರರ ಮೇಲೆ ಪ್ರತೀಕಾರ ಸಾಧಿಸುವುದೂ ಇದೆ. ಇವರು ಎಂಥ ಪ್ರಜಾಸತ್ತೆಯ ಪ್ರತಿನಿಧಿಗಳು?
ಪ್ರತಿನಿಧಿಗಳ `ಪ್ರತಿನಿಧಿತ್ವ ಬಲ’ದ ವಿಚಾರ ಹಾಗಿರಲಿ. ಕೇವಲ 30% ಮತದಾರರ ಮತಗಳಿಂದ ಆಯ್ಕೆಯಾದ ಪ್ರತಿನಿಧಿಯನ್ನು ನಾನಾ ರೀತಿಯಲ್ಲಿ ಅಭಿನಂದಿಸುವ, ಸನ್ಮಾನಿಸುವ ಜನಗಳೆಂಥವರು? ಅವರ ದೃಷ್ಟಿಯಲ್ಲಿ ಅವರ ದುಪ್ಪಟ್ಟಿಗಿಂತಲೂ ಹೆಚ್ಚು ಇರುವ ತಮ್ಮವರೇ ಆದ ಜನರ ಕುರಿತಾಗಿ ಇರುವ ಭಾವನೆಯೆಂಥದು? ಆ ಸನ್ಮಾನವನ್ನು ಒಪ್ಪಿಕೊಂಡು ಸಂಭ್ರಮಿಸುವ ಜನಪ್ರತಿನಿಧಿ ಎಂಥ ಬುದ್ಧಿವಂತ? ಆದರಲ್ಲಿಯೂ ತನ್ನ ಜಾತಿಯವರು ಅಥವಾ ಕೋಮಿನವರು ಸನ್ಮಾನಿಸಲು ಬಂದಾಗ ಒಪ್ಪಿಕೊಳ್ಳುವವನಿಗೆ ಜನಪ್ರತಿನಿಧಿತ್ವದ ಅರ್ಥವಾದರೂ ಎಷ್ಟು ಗೊತ್ತಿದೆ?
ಎಷ್ಟರ ಮಟ್ಟಿಗೆ `ಜನರಿಗೋಸ್ಕರ’ ಸರಕಾರ?
ಸರಕಾರ ರಾಜಧಾನಿಯಲ್ಲಿ ಬೈಠಕ್ ನಡೆಸಿ ತನಗಿಷ್ಟ ಬಂದ ಕಾನೂನುಗಳನ್ನು ಮಾಡುತ್ತದೆ. ಜನ ಬೊಬ್ಬೆ ಹಾಕ್ತಾರೆ, ಅಸಹಾಯಕರಾಗಿ ಆರ್ತನಾದ ಮಾಡ್ತಾರೆ, ಬಂದ್ ಆಚರಿಸಿ ತಣ್ಣಗಾಗ್ತಾರೆ. ಸರಕಾರ ಯಾವ್ಯಾವುದೋ ಸಾಮಾಗ್ರಿಗಳ ಮೇಲೆ ತೆರಿಗೆ ಹಾಕ್ತದೆ, ಸರಕಾರದಲ್ಲಿ ಯಾವ ಜಾತಿ ಅಥವಾ ಕೋಮಿನ ಬಲ ಇದೆಯೋ ಆ ಜಾತಿಯ ಅಥವಾ ಕೋಮಿನ `ಬಲವಂತ’ರಿಗೆ ವಿವಿಧ ರೀತಿಯ ಉಪಕಾರಗಳನ್ನು ಹಂಚುತ್ತದೆ. ಇದಲ್ಲದೆ, ಸಾಮಾನ್ಯವಾಗಿ, ಸರಕಾರ ಸಿರಿವಂತರಿಗೆ ಅನುಕೂಲವಾದ ಕಾನೂನುಗಳನ್ನು ಮಾಡ್ತದೆ. ತನಗಿಷ್ಟ ಕಂಡಲ್ಲಿ ಕಾರ್ಖಾನೆಗಳನ್ನು ಕಟ್ಟಲು ಒಪ್ಪಿಗೆ ನೀಡಿ ಜನರ ಜೀವನವನ್ನು ನರಕ ಮಾಡ್ತದೆ. ಅಣೆಕಟ್ಟು ಕಟ್ಟಿ, ಅರಣ್ಯಗಳನ್ನು ಬಂಡವಾಳಶಾಹಿಗೆ ಹಂಚಿ, ನೀರನ್ನು, ವಿದ್ಯುತ್ತನ್ನು ನಗರಕ್ಕೆ ಒಯ್ಯುತ್ತದೆ. ಲಕ್ಷ ಲಕ್ಷ ಮೆಗಾವಾಟ್ ವಿದ್ಯುತ್ ದೊಡ್ಡ ಕಾರ್ಖಾನೆಗಳಿಗೆ ಹೋಗ್ತದೆ. ಲಕ್ಷಾಧೀಶರುಗಳೆಲ್ಲ, ಕೋಟ್ಯಧೀಶರುಗಳಾಗ್ತಾರೆ, ಕೋಟ್ಯಧೀಶರುಗಳು ದಶ-ಶತ ಕೋಟ್ಯಧೀಶರುಗಳಾಗ್ತಾರೆ. ಅದರ ಬಗ್ಗೆ ಸರಕಾರ ಮಾತಾಡುವುದಿಲ್ಲ. ಸರಕಾರ-ಮಂತ್ರಿಗಳು-ಕೋಟ್ಯಧೀಶರು ವಿಷ ವಸ್ತುಗಳ ಫ್ಯಾಕ್ಟರಿ ಮಾಡ್ತಾರೆ. ವಿಷವನ್ನು ಹಳ್ಳಿಗೆ ಕಳಿಸಿ, ತಾವು ಏರ್ಕಂಡಿಶನ್ಡ್ ಬಂಗಲೆಗಳಲ್ಲಿ ಅಮೃತ ಕುಡೀತಾರೆ. ಸರಕಾರ-ಮಂತ್ರಿಗಳು-ಕೋಟ್ಯಧೀಶರು ನೆಲವನ್ನು ಮರುಭೂಮಿಯಾಗಿಸುವ ಪ್ಲಾಂಟೇಶನುಗಳನ್ನು ಮಾಡ್ತಾರೆ. ಜನ ನೀರಿಲ್ಲದೆ ಸಾಯ್ತಾರೆ. ಹಾಹಾಕಾರ ಮಾಡ್ತಾರೆ. ಜಾಥಾ ಮಾಡ್ತಾರೆ. ಧರಣಿ ಹೂಡ್ತಾರೆ. ತಣ್ಣಗಾಗ್ತಾರೆ, ಅರೆಜೀವವಾಗ್ತಾರೆ. ಒಬ್ಬ ಮಂತ್ರಿ ತನ್ನ ಸ್ವಂತ ಅಥವಾ ಆಕ್ರಮಣ ಮಾಡಿದ ಜಮೀನಿನಲ್ಲಿ ಜನರನ್ನು ಗುಂಡಿಟ್ಟು ಕೊಲ್ಲಿಸಿದರೂ ಉಳಿದ ಮಂತ್ರಿಗಳು ಚಾಚೂ ಅನ್ನುವುದಿಲ್ಲ. ಸರಕಾರ ಕೂಡ ಕಣ್ಣು ಮುಚ್ಚಿಕೊಳ್ತದೆ. ಅವನ ಉದ್ಯಮ ಉತ್ಪಾದಿಸಿದ ಬೇಳೆಯನ್ನೋ ಪುಡಿಯನ್ನೋ ತಿಂದು ಸಾವಿರಾರು ಜನಕ್ಕೆ ಪಕ್ಷವಾತ ಬಂದರೂ ಸರಕಾರ `ಇಲ್ಲ’ ಅನ್ತದೆ, ಯಾಕೆಂದರೆ, ಎಲ್ಲಾ ಮಂತ್ರಿಗಳ ನಡುವೆ ಅಪೂರ್ವ ಭಾವೈಕ್ಯವಿರುತ್ತದೆ. ಮಂತ್ರಿಯ, ಅವನ ಮಗನ, ಮಗಳ, ಅಳಿಯನ, ಸೊಸೆಯ, ನೆಂಟನ, ಸ್ನೇಹಿತನ ಫ್ಯಾಕ್ಟರಿಯಲ್ಲಿ, ಕಾರ್ಖಾನೆಗಳಲ್ಲಿ, ಎಸ್ಟೇಟಿನಲ್ಲಿ ಸ್ಟ್ರೈಕ್ ನಡೆದರೆ ಪೋಲೀಸರು ಬಂದು ಕಾರ್ಮಿಕರನ್ನು ಸೀಳ್ತಾರೆ, ಸುಡ್ತಾರೆ. ಅವರು ಸರಕಾರ ಮಂತ್ರಿ ಶ್ರೀಮಂತರ ಸೇವಕರು. ಇವರ ವಿಧೇಯತೆ ಅವರಿಗೆ, ಅವರ ಕೃಪೆ ಇವರಿಗೆ.
`ಜನರ ಸರಕಾರ ಎಷ್ಟರ ಮಟ್ಟಿಗೆ?’
ಪ್ರತಿಯೊಬ್ಬ ಶಾಸಕನೂ ಅವನ ಆಫೀಸಿನಲ್ಲಿ, ಮನೆಯಲ್ಲಿ, ನಿಂತಲ್ಲಿ, ಕುಳಿತಲ್ಲಿ ಅರಸನೇ. ಮಂತ್ರಿಯಾದರಂತೂ ಅವನು ಚಕ್ರವರ್ತಿಯೇ, ಚುನಾವಣೆಯಲ್ಲಿ ಗೆದ್ದು ಹೋದ ಎಮ್ಮೆಲ್ಲೇಗಳು, ಎಂಪೀಗಳು ತಾವು ಸ್ವತಂತ್ರರೆಂಬಂತೆ ವರ್ತಿಸುವುದನ್ನು, ತಮ್ಮನ್ನು ಆರಿಸಿ ಕಳಿಸಿದ ಜನಗಳ ಪ್ರತಿನಿಧಿಗಳಂತೆ ವರ್ತಿಸದೆ ಅವರ ಪ್ರಭುಗಳಂತೆ ವರ್ತಿಸುವುದನ್ನು ಮತ್ತು ಪ್ರಜೆ-ಪ್ರಜಾಪ್ರತಿನಿಧಿತ್ವ-ಪ್ರಜಾಪ್ರಭುತ್ವ ಇತ್ಯಾದಿಗಳ ಅರ್ಥ ಗೊತ್ತಿಲ್ಲದ ಅಜ್ಞಾನಿ ಮಂದಿ ಪ್ರಜಾಪ್ರತಿನಿಧಿಗಳನ್ನು `ದೇವರು’ಗಳನ್ನಾಗಿ ಮಾಡಿ ಇವರ ಮುಂದೆ ಅಪೂರ್ವವಾದ ಭೀತಿಯಿಂದ ನಡೆದುಕೊಳ್ಳುವುದನ್ನು ಕಾಣುತ್ತೇವೆ. ಎಮ್ಮೆಲ್ಲೇ ಎಂಪೀ ಎಂದರೆ ಒಂದು ಬಗೆಯ ಜಮೀನ್ದಾರನೋ ಅಥವಾ ಪಾಳೆಯಗಾರನೋ ಎಂಬಂತೆ ಜನ ಆತನ ಮುಂದೆ ಸಾಷ್ಟಾಂಗ ಬೀಳ್ತಾರೆ. ಕಲ್ಲುಗಳಿಗೆ, ಕಾವಿಗೆ ಮತ್ತು ಧಾರ್ಮಿಕ ಪಾಳೆಗಾರಿಕೆಗೆ ಸಾಷ್ಟಾಂಗ ಬೀಳುವಂತೆಯೇ ಮಂದಿ ಇವರ ಮುಂದೆಯೂ ಬೀಳ್ತಾರೆ. ಅಭ್ಯಾಸಬಲ, ಅದನ್ನು ತೊಡಗಿಸಲಾಗುವುದಿಲ್ಲ, ಅದು ಪ್ರಕೃತಿ ನಿಯಮದಂತೆ ನಡೆಯುತ್ತದೆ ಎಂಬಂತೆ ಪ್ರಜ್ಞಾವಂತರು ಮೌನವಾಗಿರುತ್ತಾರೆ. `ಇದು ಪ್ರಜಾಪ್ರಭುತ್ವ ನಾವೆಲ್ಲ ಸಮಾನರು’ ಎನ್ನುವ ಭಾವ ಎಲ್ಲಿದೆ? `ಜನಪ್ರತಿನಿಧಿ ಅಂದರೆ ನಾನೇ’ ಎಂದು ಮತದಾರನಿಗೆ ಯಾಕೆ ಅರ್ಥವಾಗುವುದಿಲ್ಲ! ಆದ್ದರಿಂದ ಚುನಾವಣಾ ಅಭ್ಯರ್ಥಿ ಅಥವಾ ಸರಕಾರ ಹಂಚುವ ಸೀರೆಗೆ, ಕೆಲವು ಕಿಲೋಗ್ರಾಮ್ ಅಕ್ಕಿಗೆ ಜನ ಓಟು ಹಾಕ್ತಾರೆ. ಜಾತಿ, ಮತ, ರೂಪ, ಅನುಕಂಪ ಇತ್ಯಾದಿಗಳೂ ಓಟು ಗಿಟ್ಟಿಸುತ್ತವೆ. ಹಣ ಓಟು ಕೊಂಡುಕೊಳ್ತದೆ. ಶರಾಬು ಕೂಡ ಓಟು ಸಂಪಾದಿಸ್ತದೆ. ಹಾಕ್ತದೆ. `ಇಂಥ ಕೊಳಕು ಮನುಷ್ಯನಿಗೆ ಓಟು ಹಾಕುವುದಿಲ್ಲ’ ಎಂದು ತೀರ್ಮಾನಿಸಿ ಮನೆಯಲ್ಲಿ ಕುಳಿತರೇನು ಪ್ರಯೋಜನ? ಆಯ್ಕೆಯಾದವನು ಓಟು ಹಾಕಲು ಹೋಗದವನನ್ನು ಕೂಡ ಪ್ರತಿನಿಧಿಸುತ್ತಾನಲ್ಲವೆ?
ಬಡವನಾಗಿದ್ದ ಪ್ರಪ್ರ (ಪ್ರಜಾಪ್ರತಿನಿಧಿ) ದಿಢೀರನೆ ಕೋಟ್ಯಧೀಶನಾದುದರ ಬಗ್ಗೆ ಮೆಚ್ಚುಗೆಯಿಂದ ಮಾತಾಡುವ ಜನರು, ಬೆರಗುಗೊಂಡು ಬಾಯ್ಬಿಡುವ ಜನರು ಇದ್ದಾರೆ. ಕೆಲವರಿಗೆ ಇದೇ ಆದರ್ಶ! ಏನಾದರೂ ಮಾಡು ಹಣ ಮಾಡು! ಹೆಚ್ಚಿನ ಪ್ರಪ್ರಗಳು ಹಳ್ಳಿಯನ್ನು ತೊರೆದು ರಾಜಧಾನಿಯಲ್ಲಿ ನೆಲೆಸಿಬಿಡ್ತಾರೆ. ಅದೂ ಮೆಚ್ಚಿಗೆಯಿಂದ ಆಡಿಕೊಳ್ಳುವ ಸಂಗತಿಯಾಗ್ತದೆ ಜನಗಳಿಗೆ! ಯಾಕೆಂದರೆ ಇದೇ ಬಹುಜನರ ಕನಸು! ಪ್ರಪ್ರನನ್ನು ಜನರು ಆರಾಧಿಸುತ್ತಿರುವಾಗ, ಪಾಪ ಅವನೇನು ತಾನೇ ಮಾಡಿಯಾನು? ಅವನು ಜನರಿಂದ ತನ್ನ ಪಾದಗಳನ್ನು ಮಾಲೀಶು ಮಾಡಿಸಿಕೊಳ್ಳುವ ಬಾಬಾ ಅಥವಾ ದಾದಾ ಆಗ್ತಾನೆ. ಮದದಿಂದ ಕೊಬ್ಬಿ ನಾಲಿಗೆ ಹೊರಳಿದಂತೆ ಹೇಳಿಕೆಗಳನ್ನು ನೀಡ್ತಾನೆ. ಮೊದಲು ಬಡವನಾಗಿದ್ದ ಅವನು ಸಿರಿವಂತನಾದ ಪರಿಯಲ್ಲೇ ಮೊದಲು ಹೆಡ್ಡನಾಗಿದ್ದ ಅವನು ಈಗ ಮೇಧಾವಿ, ಮುತ್ಸದ್ದಿ, ಸರ್ವಜ್ಞ ಇತ್ಯಾದಿ ಆಗ್ತಾನೆ. ಸೂಪರ್ಮ್ಯಾನ್, ಸೂಪರ್ಮೈಂಡ್ ಆಗ್ತಾನೆ. ನಮ್ಮ ಸಮಾಜದಲ್ಲಿ ಎಲ್ಲಾ ಸಿರಿವಂತರೂ ಮೇಧಾವಿಗಳೇ! ಹೀಗಿರುವಾಗ ಸಿರಿವಂತರಲ್ಲದ ಜನಗಳಲ್ಲಿ ಕೀಳರಿಮೆ ಮಾತ್ರವೇ ಬಲಿಯುತ್ತದೆ. ಬಲಿತು ಬಲಿತು ಅವರು ಕುರಿಗಳಾಗುತ್ತಾರೆ. ಆಗ ಅವರ ಮುಂದೆ ದೇಶದ ಅಧ್ಯಕ್ಷರ, ಪ್ರಧಾನಿಗಳ ಕ್ರಮೇಣ ಸಿನಿಮಾ ತಾರೆಯರ ಹೆಣಗಳನ್ನು ಗಂಟೆಗಟ್ಟಲೆ ಟೀವಿ ಮೇಲೆ ತೋರಿಸಿ ಹಬ್ಬ ಆಚರಿಸಲಿಕ್ಕೆ ಆಗ್ತದೆ. ಸಿನಿಮಕ್ಕೂ ಕತೆ ಸಿಗ್ತದೆ. ರೇಡಿಯೋದಲ್ಲೂ ನಾಲ್ಕೈದು ದಿನ ಆಯ್ಕೆ ಮಾಡಿದ ಭಕ್ತಿ ಸಂಗೀತ ಬರ್ತದೆ. ಮಂತ್ರಿಗಳಿಗೆ ಸತ್ತವನ ಬೂದಿಯನ್ನು ಜನಗಳ ಮೇಲೆ ಸುರಿಯಲಿಕ್ಕೆ ಆಗ್ತದೆ. ಬೇರೆ ಸಮಯದಲ್ಲಿ ಟೀವಿಯಲ್ಲಿ ರೇಡಿಯೋದಲ್ಲಿ ದಿನಗಟ್ಟಲೆ ಕ್ರಿಕೆಟ್ ಕಮೆಂಟರಿ, ಮಂತ್ರಿ ಪ್ರವಾಸ ಕಮೆಂಟರಿ ಇತ್ಯಾದಿಗಳನ್ನು ಕೊಡಲಿಕ್ಕೆ ಆಗ್ತದೆ. ಎಲ್ಲವನ್ನೂ ಸಹಿಸಿಕೊಳ್ತಾರೆ ಜನ. ಸಹಿಸಿ, ಸಹಿಸಿ ಅಭ್ಯಾಸವಾಗಿ ಅದೇ ಬೇಕೆನ್ನುವಷ್ಟು ಬದಲಾಗಿಬಿಡ್ತಾರೆ ಜನ! ಒಂದೇ ಬಗೆಯ ನೂರು ಹೆಸರುಗಳ ನೂರು ರೂಪದ ಟಾಯಿಲೆಟ್ ಸೋಪು ಹಾಕಿ ಮೈಯನ್ನು ತಿಕ್ಕಿ ತಿಕ್ಕಿ ಬೆಳ್ಳಗಾಗೋ ಯತ್ನ ಮಾಡ್ತಾರೆ. ಒಂದೇ ಬಗೆಯ ನೂರು ಹೆಸರುಗಳ ನೂರು ರೂಪದ ಟೂತ್ ಪೇಸ್ಟಿನಿಂದ ಹಲ್ಲು ತಿಕ್ಕಿ ಹಲ್ಲುಗಳನ್ನು ಹೊಳೆಯಿಸೋ ಪ್ರಯತ್ನ ಮಾಡ್ತಾರೆ. ಪರಿಣಾಮವಾಗಿ, ಸೋಪು ಕಂಪೆನಿ, ಪೇಸ್ಟ್ ಕಂಪೆನಿ, ಸಿನಿಮಾ ಕಂಪೆನಿ ಇತ್ಯಾದಿಗಳು ಕೋಟಿಗಟ್ಟಲೆ ಗಳಿಸುತ್ತವೆ. ಮತ್ತಷ್ಟು ಹೊಸ ಹೆಸರುಗಳ ಸೋಪುಗಳನ್ನು, ಪೇಸ್ಟುಗಳನ್ನು, ಕ್ರೀಮುಗಳನ್ನು, ಸಿನಿಮಾಗಳನ್ನು ಬಿಡುಗಡೆ ಮಾಡ್ತಾರೆ. ಪ್ರಶ್ನೆಯಿಲ್ಲ, ಸಂದೇಹವಿಲ್ಲ, ಅನುಮಾನವಿಲ್ಲ! 69 ಕೋಟಿ ಜನಗಳಿಗೆ, ನಾಳೆ ನಾಡಿದ್ದು ಇಪ್ಪತ್ತೊಂದನೇ ಶತಮಾನದ ಹೊಸ್ತಿಲಲ್ಲಿ 106 ಕೋಟಿ ಜನಗಳಿಗೆ ಪ್ರಶ್ನೆಗಳಿಲ್ಲದಿರುವುದು, ಸಂದೇಹಗಳಿಲ್ಲದಿರುವುದು ಎಂಥ ಲಕ್ಷಣ? ಇಲ್ಲಿ ಎರಡು ಸ್ವರ್ಗಗಳಿವೆ. ಒಂದು, ಒಂದು ಕೋಟಿ ಜನ ವಿಹರಿಸುವ ನಿಜದ ಸ್ವರ್ಗ. ಮತ್ತೊಂದು 68 ಕೋಟಿ ಜನ ವಿಹರಿಸುವ ಭ್ರಮೆಯ ಸ್ವರ್ಗ! ಯಾವುದು ಸತ್ಯ?
`ಜನರ ಸರಕಾರ’ ಅದರೊಳಗೂ ಇಲ್ಲ, ಇದರೊಳಗೂ ಇಲ್ಲ. ಇದು ವಾಸ್ತವದಲ್ಲಿ, `ಸರಕಾರದಿಂದ, ಸರಕಾರಕ್ಕೋಸ್ಕರ, ಸರಕಾರದ ಸರಕಾರ!’ ಅದು ಇದೆ. ಅದಕ್ಕಾಗಿ ಇದೆ! ಜನರಿಗಾಗಿ ಅಲ್ಲ!
ಒಂದು ಮಹಾ ಪ್ರಶ್ನೆ; ಯಾಕೆ ಹೀಗೆ?
ಅನಕ್ಷರತೆ ಮತ್ತು ಅವಿದ್ಯೆಯಿಂದಾಗಿ ಹೀಗಾಗಿದೆ. ಅನಕ್ಷರತೆಯೊಂದೇ ಅಲ್ಲ, ಅವಿದ್ಯೆ ಕೂಡ. ಬರೀ ಅಕ್ಷರದ ಓದಿನಿಂದೇನು ಫಲ! ವಿದ್ಯೆಯಿಂದೇನು, ವಿಚಾರವಿಲ್ಲದಿದ್ದರೆ? ವಿದ್ಯೆಯೂ ಬೇಕು; ವಿಚಾರ ಶಕ್ತಿಯೂ; ಪರಿಸರ ಪ್ರಜ್ಞೆಯೂ ಬೇಕು. ಸಮಾಜದ ಬಗ್ಗೆ, ರಾಜಕಾರಣದ ಬಗ್ಗೆ, ನೆಲ ನೀರಿನ ಬಗ್ಗೆ, ಎಲ್ಲದರ ಬಗ್ಗೆಯೂ ತಿಳಿವಳಿಕೆ ಬೇಕು. ಈ ತಿಳಿವಳಿಕೆ ಮೊದಲು, ಸಾಕ್ಷರತೆ ಅನಂತರ. ತಿಳಿವಳಿಕೆ ನೀಡಲು ರೇಡಿಯೋ, ಟೀವಿ ಮತ್ತು ನಾಲಿಗೆ ಸಾಕು. ಬರೀ ಅಕ್ಷರ ಪರಿಚಯದ ಸಾಕ್ಷರತೆಯಿಂದ ತಿಳಿವಳಿಕೆ ಬರುವುದಿಲ್ಲ. ಸಾಕ್ಷರತೆಯ ಅಗತ್ಯವನ್ನು ಮಂದಟ್ಟುಮಾಡುವ ತಿಳಿವನ್ನು ಎಲ್ಲಕ್ಕಿಂತ ಮೊದಲು ಕೊಡಬೇಕು.
ಬರೀ 5% -10% ಸಾಕ್ಷರತೆಯಿದ್ದ ಸಮಾಜವಾದಿ ರಾಷ್ಟ್ರಗಳು ಐದು ವರ್ಷಗಳ ಅವಧಿಯಲ್ಲಿ ಅತಿ ಸಣ್ಣ ವೆಚ್ಚದಲ್ಲಿ 100% ಸಾಕ್ಷರತೆಯನ್ನು ಸಾಧಿಸಿದ ಉದಾಹರಣೆಗಳಿವೆ. ಶಾಲೆ, ಕಾಲೇಜುಗಳಲ್ಲಿ, ರೇಡಿಯೋ, ಟೀವಿಗಳಲ್ಲಿ ಜನಕ್ಕೆ ಬೇಕಾದ ವಿದ್ಯೆಯನ್ನು ನೀಡಿ ರಾಷ್ಟ್ರೀಯತೆಯೇ ಜೀವನಧರ್ಮ ಎಂಬುವುದನ್ನು ಪ್ರಮಾಣೀಕರಿಸಿದ ಉದಾಹರಣೆಗಳಿವೆ. ಆದರೆ ನಮ್ಮ ದೇಶದ ಯಾವುದೇ ರಾಜ್ಯದಿಂದ 40 ವರ್ಷಗಳಲ್ಲಿ ಕೂಡ ಇದನ್ನು ಮಾಡಲಾಗಿಲ್ಲ. ಎಂಥ ನಾಚಿಕೆಗೇಡು! ಇದೆಯೇ ನಾಚಿಕೆ ನಮ್ಮ ರಾಜಕಾರಣಿಗಳಿಗೆ? ಅಮೆರಿಕ, ಇಂಗ್ಲೆಂಡುಗಳನ್ನು ನೋಡಿ ನಮ್ಮ ಬುದ್ಧಿವಂತರುಗಳನ್ನು ಅಲ್ಲಿಗೆ ದಬ್ಬಿ, ಶಸ್ತ್ರಚಿಕಿತ್ಸೆಗೆ ಜನರ ವೆಚ್ಚದಲ್ಲಿ ಅಲ್ಲಿಗೆ ಹೋಗುತ್ತಾ, ಅಲ್ಲಿನ ವಿಷೋತ್ಪಾದಕ ಉದ್ಯಮಗಳನ್ನು ಇಲ್ಲಿಗೆ ಆಹ್ವಾನಿಸುವ ಈ ರಾಜಕಾರಣಿಗಳಿಗೆ ಇದೆಯೇ ಮಿದುಳು? ಯಾಕೆ ಬೇಕು ನಮಗೆ ಈ ಪ್ರಗತಿ? ಯಾಕೆ ಬೇಕು ನಮಗೆ ವಿದೇಶೀ ಹಣ? ಯಾಕೆ ಬೇಕು ದೇಹವನ್ನು –ಆತ್ಮವನ್ನು ಕೊಳೆಸುವ ಯಾಂತ್ರೀಕರಣ?
`ಜನರಿಗೋಸ್ಕರ’ ಎಂಬ ನೆಪದಲ್ಲಿ ಆದದ್ದೇನು, ಆಗುತ್ತಿರುವುದೇನು? ಕೆಲವನ್ನು ಗಮನಿಸೋಣ.
ಎಪ್ಪತ್ತು ಕೋಟಿಯಲ್ಲಿ ಅರುವತ್ತೊಂಭತ್ತೂವರೆ ಕೋಟಿ ಜನದ ಹಿತವನ್ನು ಕಡೆಗಣಿಸಿ, ಅವರ ಪೈಕಿ ಇರುವ ವಿಚಾರಶೀಲರ, ವಿವೇಕಶೀಲರ ಮಾತಿಗೆ ಕಿವಿಗೊಡದೆ, ಅರ್ಧಕೋಟಿಯಿರಬಹುದಾದ ರಾಜಕಾರಣಿಗಳು, ಅವರ ಕುಟುಂಬದವರು, ಅವರ ನೆಂಟರಿಷ್ಟರು, ನಾನಾ ರೀತಿಯಲ್ಲಿ ಸಿರಿವಂತರಾಗಿರೋ ಜನಗಳು, ಅವರ ಕುಟುಂಬದವರು, ಭಾರೀ ಅಧಿಕಾರಿಗಳು ಮತ್ತು ಅವರ ಕುಟುಂಬದವರು ಅವರ ಇಂದಿನ ಸುಖಕ್ಕೊಸ್ಕರ ಭಾರೀ ಉದ್ಯಮಗಳ, ಯಂತ್ರಾಗಾರಗಳ, ಕಾರ್ಖಾನೆಗಳ, ಅಂತಾರಾಷ್ಟ್ರೀಯ ನಿಗಮಗಳ ಸ್ಥಾಪನೆ, ರಾಷ್ಟ್ರೀಯ ಸಾಲ, ವಿದೇಶದಿಂದ ಸಾಲ ಸೌಲಭ್ಯ ಇತ್ಯಾದಿ. ಸರಕಾರ ಮತ್ತು ಸರಕಾರೀ ಷಡ್ಯಂತ್ರ ಕೆಲವೇ ಲಕ್ಷ ಜನರೊಂದಿಗೆ ಧರ್ಮರಾಯನಂತೆ ನಡೆದುಕೊಳ್ಳುತ್ತಾ, ಉಳಿದ ಕೋಟಿ ಜನಗಳ ಪಾಲಿಗೆ ಅನವರತ ಯಮಧರ್ಮರಾಯನಾಗಿರುವುದು.
ದುಡಿಯುವ ಮಂದಿಗೆ ವಿವಿಧ ವಿಷಾನಿಲಗಳು, ವಿವಿಧ ರೋಗಗಳು, ಸಾವುಗಳು ಮತ್ತು ನಿಕೃಷ್ಟ ಸಂಬಳ; ದುಡಿಯುವ ನಾಟಕ ಮಾಡಬಹುದಾದ ಮತ್ತು ಲಂಚ ಪಡೆಯಲು ಅನಂತ ಅವಕಾಶವುಳ್ಳ ದೊಡ್ಡ ಉದ್ಯೋಗಗಳಿಗೆ ಅಗತ್ಯವಿಲ್ಲದಷ್ಟು ದೊಡ್ಡ ಸಂಬಳ. ಆದ್ದರಿಂದ ಕೆಲವು ಕೆಲಸಗಳು ಕೀಳು ಕೆಲಸಗಳು! ಕೆಲವು ಕೆಲಸಗಳು ಮೇಲು ಕೆಲಸಗಳು! ಪೋಲೀಸು ಕೀಳು ಕೆಲಸ, ಪೋಲೀಸು ಇನ್ಸ್ಪೆಕ್ಟರನದು ಮೇಲು ಕೆಲಸ! ಪೋಲೀಸು ಸುಪರಿಂಟೆಂಡೆಂಟನಿಗೆ ಹೋಲಿಸಿದರೆ ಪೋಲೀಸು ಇನ್ಸ್ಪೆಕ್ಟರನದೂ ಕೀಳು ಕೆಲಸ! ಹೀಗಾಗಿ ಕೀಳು ಕೆಲಸದವರು ಮೇಲು ಕೆಲಸದವರಷ್ಟೇ ಮೇಲಾಗಲು ಗುಪ್ತವಾಗಿ ನಡೆಸುವ ಪ್ರಯತ್ನವೆಂದರೆ ಅನ್ಯಾಯವಾಗಿ ಹಣ ಮಾಡುವುದು! ಲಂಚ, ಗುಟ್ಟಿನಲ್ಲಿ ಬಂಡವಾಳ ಹೂಡಿಕೆ, ಸರಕಾರಿ ಉದ್ಯೋಗ ಮಾಡುತ್ತಾ ಇತರ ಲಾಭಕರ ದಂಧೆಗಳನ್ನು ನಡೆಸುವುದು ಇತ್ಯಾದಿ ಇತ್ಯಾದಿ. ಸಮಾಜವೂ ಹಾಗೇ. ನಿಷ್ಠಾವಂತ ಬಸ್ ಕಂಡಕ್ಟರನಿಗೆ, ಪೊಲೀಸರವನಿಗೆ ಗೌರವ ಕೊಡುವುದಿಲ್ಲ, ಸರಕಾರೀ ಹಣದಲ್ಲಿ ಮೂರ್ನಾಲ್ಕು ಮನೆಗಳನ್ನು ಕಟ್ಟಿಸಿಕೊಂಡ `ಗುಮಾಸ್ತ’ನ ಬಗ್ಗೆ ಕಣ್ಣರಳಿಸಿ ಮಾತಾಡ್ತದೆ. ರಾಜಕಾರಣಿಗಳಿಗೆ ಇದನ್ನೆಲ್ಲ ಸರಿಪಡಿಸುವ ಉದ್ದೇಶವಿಲ್ಲ. ಯಾಕೆಂದರೆ, ಇದೆಲ್ಲ ಅವರೇ ಹಾಕಿಕೊಟ್ಟ ಆದರ್ಶ! ಗೌರವ, ತೃಪ್ತಿ, ಸಂತೋಷ ಇತ್ಯಾದಿಗಳ ಅರ್ಥವನ್ನೇ ಬದಲು ಮಾಡಿ ತೋರಿಸುತ್ತಿದೆ ಈ ಆದರ್ಶ! ಪ್ರಜ್ಞಾವಂತರು ಕೂಡ ಸಹ ಇದೇ ಸರಿಯೇನೋ ಎಂದು, ಅಸಹಾಯಕರು ಇದೇ ಲೋಕದ ರೀತಿಯೇನೋ ಎಂದು ಭ್ರಮಿಸುಂಥ ಆದರ್ಶ!
ಈ `ಆದರ್ಶ’ದ ಅನುಸರಣೆಯ ಫಲ?
ನದಿಗಳ ನೀರು ನಗರಕ್ಕೆ. ನದಿಗಳ ವಿದ್ಯುತ್ ನಗರಕ್ಕೆ. ಹಳ್ಳಿಯಲ್ಲಿ ಬೆಳೆದುದು ನಗರಕ್ಕೆ. ಹಳ್ಳಿಯಲ್ಲಿ? ಕುಡಿಯಲು ನೀರಿಲ್ಲ, ಉರಿಸಲು ಸೌದೆಯಿಲ್ಲ, ಆಸ್ಪತ್ರೆಯಿಲ್ಲ, ಡಾಕ್ಟರ್ ಇಲ್ಲ. ನಗರದಲ್ಲಿ ಎಲ್ಲವೂ ಇದೆ. ರಾಶಿಗಟ್ಟಲೆ ಇದೆ, ಕೃತಕಗೊಬ್ಬರಗಳು, ಮಾರಕ ಕೀಟನಾಶಕಗಳು, ಸುಧಾರಿತ ತಳಿಯ ಬೀಜಗಳು, ಸಾಲಗಳು ಹಳ್ಳಿಗೆ ಹೋಗುತ್ತವೆ. ಪರಿಣಾಮ? ಹೆಚ್ಚು ಬೆಳೆ. ಆದರೆ ಇದರಿಂದ ರೈತನ ಜೀವನಮಟ್ಟ ಏರುತ್ತದೆಯೆ? ಕೃತಕ ಸಾಮಾಗ್ರಿಗಳಿಂದಾಗಿ ಅವನ ದೇಹದಲ್ಲಿ ವಿಷ ಸೇರುತ್ತಾ ಹೋಗಿ ಅವನ ಬದುಕು ಬಿಗಡಾಯಿಸಿ ಅವನ ಜೀವನಮಟ್ಟ ಕೆಳಗಿಳಿಯುತ್ತಾ ಹೋಗುತ್ತದೆ. ನಿಸರ್ಗ ಕೊಟ್ಟ ಸಾವಿರಾರು ನೈಸರ್ಗಿಕ ತಳಿಗಳು ಮಾಯವಾಗಿ, ಹೆಚ್ಚು ಬೆಳೆ ನೀಡುವ ಹತ್ತಾರು ಸುಧಾರಿತ ತಳಿಗಳು ಉಳಿಯುವ ದಿನ ಬಂದಿದೆ. ಸುಧಾರಿತ ತಳಿಗಳು ಕೃತಕಗೊಬ್ಬರ, ಕೀಟನಾಶಕಗಳಿಲ್ಲದೆ ಉಳಿಯೋಲ್ಲ, ಬೆಳೆಯೋಲ್ಲ. ಎಂದೋ ಒಂದು ದಿನ ಇದರ ಚಂಚಲ ಜೀನ್ ಕೈಗೊಡುತ್ತದೆ, ಪರಿಣಾಮ? ವಿನಾಶ ಮಾತ್ರ.
ಆದರೂ ಸಮೃದ್ಧ ದೇಶ ನಮ್ಮದು! ಜಗತ್ತಿನ ಐದನೇ ಎರಡು ಭಾಗ ಜಮೀನು. ಜಗತ್ತಿನ ಅರ್ಧದಷ್ಟು ಎಮ್ಮೆ ಕೋಣಗಳು! ಜಗತ್ತಿನ ಏಳನೇ ಒಂದರಷ್ಟು ದನ ಕುರಿಗಳು! ಜಗತ್ತಿನಲ್ಲಿ ಚೈನದ ನಂತರ ನಾವೇ ದೊಡ್ಡ ಜನ! ಜಗತ್ತಿನ ನಗರವಾಸಿಗಳ ಸಂಖ್ಯೆಯಲ್ಲಿ ನಮಗೆ ನಾಲ್ಕನೇ ಸ್ಥಾನವಿದೆ. ಜಗತ್ತಿನ ಅತಿದೊಡ್ಡ ಅದು ಇದು ಮತ್ತೊಂದು ಮಗದೊಂದು ನಾವು ಪಂಚವಾರ್ಷಿಕ ಯೋಜನೆಗಳ ಮೂಲಕ ನಿರ್ಮಿಸಿದ್ದೇವೆ. ಭೋಪಾಲದಲ್ಲಿ ವಿಷ ಕಕ್ಕಿದ ಫ್ಯಾಕ್ಟರಿಯೂ ಅದರಲ್ಲೊಂದು! ಜಗತ್ತಿನಲ್ಲಿ ಇಥಿಯೋಪಿಯಾದ ನಂತರ ಅತಿ ಹೆಚ್ಚು ಕುಷ್ಠರೋಗಿಗಳಿರುವ ಸ್ಥಾನ ಭಾರತಕ್ಕೆ. ಏಡ್ಸ್ ಭಾರತಕ್ಕೆ ಬಂದಿಲ್ಲ. ಬಂದರೆ ಅದರಲ್ಲೂ ನಾವೇ ಫಸ್ಟ್ ಆಗಬಹುದು. ಯಾಕೆಂದರೆ, ಸ್ವಾಭಾವಿಕವಾಗಿಯೇ ರೋಗ ನಿರೋಧಕ ಶಕ್ತಿಯಿಲ್ಲದ ಬಡಪಾಯಿಗಳ ಸಂಖ್ಯೆಯಲ್ಲಿ ನಾವೇನು ಕಡಿಮೆ?
ದೇಶದ ಸುಮಾರು 40% ಭೂಮಿ ಪಾಳುಭೂಮಿಯಾಗಿದೆಯೆಂದು ಘೋಷಿಸಿರುವ ಸರಕಾರವೇ ಭೂಮಿಯನ್ನು ಇನ್ನಷ್ಟು ಬರಡಾಗಿಸುವ ನೀಲಗಿರಿ ಮರಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದೆ. ಯಾರಿಗಾಗಿ? ಉದ್ಯಮ ಚಕ್ರವರ್ತಿಗಳು ಮತ್ತವರ ಹೆಂಡಿರು ಮಕ್ಕಳು ಮತ್ತು ಅವರ ಮೂಲಕ ಮಂತ್ರಿಗಳು ಮತ್ತವರ ಹೆಂಡಿರು ಮಕ್ಕಳ ಸುಖಕ್ಕಾಗಿ! ದೇಶದ 95% ಜನರೂ ಕಾಡುಗಳನ್ನು ಉಳಿಸಿ ನಮ್ಮನ್ನು ಉಳಿಸಿ ಎಂದು ಬೊಬ್ಬಿಡುತ್ತಿದ್ದರೂ ಕಾಡುಗಳನ್ನು ಕಡಿಯುವವರು, ಅಣೆಕಟ್ಟು ಅಣುಸ್ಥಾವರ ನಿರ್ಮಿಸಿ ಅರಣ್ಯ ನಾಶ ಮಾಡುವವರು, ನೀಲಗಿರಿ ನೆಡುವವರು ಯಾರು? ಈ ಲೋಕದವರೇ ಬೇರೆ ಲೋಕದವರೇ?
ಭಾರತದಲ್ಲಿ ಪ್ರತಿಯೊಬ್ಬನ ಪಾಲಿನ ಅರಣ್ಯ ಸರಾಸರಿ ಹತ್ತನೇ ಒಂದು ಹೆಕ್ಟೇರು, ಜಾಗತಿಕ ಸರಾಸರಿ 2 ಹೆಕ್ಟೇರುಗಳು, ಬಹುಶಃ ಭಾರತದಲ್ಲಿ ಒಬ್ಬನಿಗೊಂದು ಮರದಂತೆ ಕೂಡ ಇರುವುದಿಲ್ಲ.
ಜಗತ್ತಿನ ಅತಿದೊಡ್ಡ ಕೊಳೆಗೇರಿಗಳು ನಮ್ಮಲ್ಲಿವೆ. ಬಹುಶಃ ಅತಿ ಹೆಚ್ಚು (ಸುಮಾರು 50 ಸಾವಿರ ಕೋಟಿ) ಕಪ್ಪುಹಣ ಇರುವುದು ನಮ್ಮ ದೇಶದಲ್ಲೇ.
ಒಂದೂವರೆ ಸೆಕೆಂಡಿಗೆ ಒಂದು ಮಗು! ವರ್ಷಕ್ಕೆ ಎರಡು ಕೋಟಿ! ಅಂದರೆ ಪ್ರತಿವರ್ಷ ಏರುವ ಜನಸಂಖ್ಯೆ ಆಸ್ಟ್ರೇಲಿಯ ಖಂಡದ ಸಂಖ್ಯೆಯಷ್ಟು! ಆದರೆ ಹಳ್ಳಿಗರು ನಗರಕ್ಕೆ ಹೋದುದರಿಂದಾಗಿ ಮತ್ತು ದೇಶವನ್ನು ಕೆಡಿಸುವ ಶರಾಬು, ಬೀಡಿ ಚುಟ್ಟಾಗಳಿಂದಾಗಿ ಕೃಷಿಕಾರ್ಮಿಕರ ಅಭಾವ! ಎಪ್ಪತ್ತು ಕೋಟಿಯಲ್ಲಿ ಐವತ್ತು ಕೋಟಿಯೂ ಹಳ್ಳಿಯಲ್ಲಿ ಜೀವಿಸುವವರು, ಆದರೂ ಕೃಷಿಕಾರ್ಮಿಕರ ಅಭಾವ! ಎಂಥ ವಿಪರ್ಯಾಸ!
65% ಜನರಿಗೆ ಇನ್ನೂ ಅಕ್ಷರ ಪರಿಚಯ ಆಗಿಲ್ಲ. ವಿದ್ಯಾರ್ಜನೆ ವಿಚಾರವಂತಿಕೆಯ ವಿಚಾರ ದೂರವೇ ಉಳಿಯಿತು. ಬರೀ ಅಕ್ಷರ ಕೂಡ ಬಂದಿಲ್ಲ.
ನಮ್ಮ ಹತ್ತು ದೊಡ್ಡ ನಗರಗಳಲ್ಲಿ ಸ್ವಾತಂತ್ರ್ಯದ ಬಳಿಕ ಮೂವತ್ತೆಂಟು ವರ್ಷಗಳಲ್ಲಿ ಜನಸಂಖ್ಯೆ ಏರಿದ್ದು ಮೂರುಪಟ್ಟು, ನಾಲ್ಕುಪಟ್ಟು! ಆಹಾರವನ್ನು ಉತ್ಪಾದಿಸದೆ ಭಕ್ಷಿಸಿ ಮುಗಿಸುವ ಈ ಜನಸಂಖ್ಯೆ ಈಗ 16 ಕೋಟಿ! ಉದಾಹರಣೆಗೆ ಬೆಂಗಳೂರಿನಲ್ಲಿ 1951ರಲ್ಲಿದ್ದುದು 7,79,000. ಈಗ 30,00.000ಕ್ಕೂ ಮೇಲೆ. ಎಷ್ಟು ಪಟ್ಟು ಹೆಚ್ಚು? ಹೆಚ್ಚಿನ ನಗರಗಳಲ್ಲಿ ನಗರವಾಸಿಗಳ ಸಂಖ್ಯೆಯ ಸುಮಾರು ಅರೆವಾಸಿ ಜನ ಕೊಳೆಗೇರಿ ನಿವಾಸಿಗಳು. ಉದಾಹರಣೆಗೆ ಮುಂಬಯಿಯ 82,30,000 ನಗರವಾಸಿಗಳಲ್ಲಿ 42,00,000 ಕೊಳೆಗೇರಿ ನಿವಾಸಿಗಳು. ಕೊಳೆಗೇರಿ ನಿರ್ಮೂಲನ ಬರೀ ನಾಟಕ. ಕೊಳೆಗೇರಿಯಿಲ್ಲದೆ ನಗರ ಬದುಕಲಾರದು, ನಗರವಿಲ್ಲದೆ ಕೊಳೆಗೇರಿ ಬದುಕಲಾರದು. ಕೊಳೆಗೇರಿ ನಿವಾಸಿಗಳು, ಬಡತನದ ರೇಖೆಯ ಅಕ್ಕಪಕ್ಕದಲ್ಲಿರುವವರು ಮುಂತಾದವರನ್ನು ಹೊರತುಪಡಿಸಿದರೆ ಸಿರಿತನದ ರೇಖೆಯ ಮೇಲಿರುವವರು ಪ್ರತಿಯೊಂದು ನಗರದಲ್ಲೂ ಒಂದು ಲಕ್ಷ ಅಥವಾ ಎರಡು ಲಕ್ಷ, ಅಷ್ಟೆ. ಇವರು ಇಡೀ ನಗರದ ವ್ಯವಹಾರಗಳನ್ನು ನಿಯಂತ್ರಿಸುವವರು, ಇವರು ಗಗನಚುಂಬಿ ಪಂಚತಾರಾ ಹೋಟೆಲುಗಳಲ್ಲಿ ಕುಳಿತು ಒಂದು ಊಟಕ್ಕೆ ನಾನ್ನೂರು-ಐನ್ನೂರು, ಒಂದು ಮಲಗಾಟಕ್ಕೆ ಐನ್ನೂರು-ಸಾವಿರ ಎಸೆಯುವವರು.
ಇದೆಲ್ಲ ಯಾರ ಸಾಧನೆ? ನಮ್ಮ ಸಾಧನೆ. ನಮ್ಮ ರಾಜಕಾಕಾರಣಿಗಳ ಸಾಧನೆ. ನಮ್ಮ ಸರಕಾರಗಳ 38 ವರ್ಷಗಳ ಸಾಧನೆ. ಸ್ವಾರ್ಥದ ಇಂದ್ರಿಯಲೋಲುಪತೆಯ ಅಂಧತ್ವದ ಸ್ವರ್ಗದಲ್ಲಿರುವ ಮಂದಿಗೆ ದೇಶ ಎಲ್ಲಿ ಕಾಣಿಸುತ್ತದೆ? ಈ ದುವ್ರ್ಯವಸ್ಥೆಯಲ್ಲಿ ಹಣವು ಎಲ್ಲಕ್ಕಿಂತ ಮುಖ್ಯವಾಗಿ, ಅದು ಎಷ್ಟು ಬೇಕೆಂದು ತಿಳಿಯದಾಗಿ `ಬೇಕು’ ಎನ್ನುವುದೊಂದೇ ಜೀವದ ಹಾಡಾಗಿ, ರೋಗವಾಗಿ, ದೈತ್ಯವ್ಯಾಪ್ತಿಯ ಅತೃಪ್ತಿಯಾಗಿ, ಸ್ಯಾಡಿಸಮ್ಮಾಗಿ ರೂಪಾಂತರ ಹೊಂದುತ್ತದೆ. ಈ ಸ್ಯಾಡಿಸಮ್ಮನ್ನು ನಾವು ವ್ಯಾಪಾರಿಗಳಲ್ಲಿ, ಆಫೀಸು ಬ್ಯಾಂಕ್ ಮತ್ತಿತರ ಕಾರ್ಯಾಲಯಗಳಲ್ಲಿ, ಬಸ್ಸಿನ ಚಾಲಕ ನಿರ್ವಾಹಕರಲ್ಲಿ, ಆಸ್ಪತ್ರೆ ಡಾಕ್ಟರಲ್ಲಿ ದಾದಿಯಲ್ಲಿ, ಶಾಲೆಯಲ್ಲಿ, ಕಾಲೇಜಿನಲ್ಲಿ ಎಲ್ಲೆಲ್ಲೂ ಕಾಣಬಹುದು. ಈ ಸ್ಯಾಡಿಸಮ್ಮಿನಿಂದಾಗಿ ಅದನ್ನು ತೋರುವವನೂ ಅದಕ್ಕೆ ಪಕ್ಕಾಗುವವನೂ ನೀವೂ ನಾವೂ ಎಲ್ಲರೂ ಅಸ್ವಸ್ಥ ಬದುಕನ್ನು ಬಾಳುವಂತಾಗಿದೆ.
ನಿಜವಾಗಿ ಪ್ರಜಾಸತ್ತೆ ಅಸ್ತಿತ್ವದಲ್ಲಿದೆಯೆ?
ಇದು ಪ್ರಜಾಸತ್ತೆ ಹೌದೆಂದಾದರೆ, ಸರಕಾರ ಪ್ರಜೆಗಳಿಂದ ತೆರಿಗೆ ಮತ್ತಿತರ ವಿಧಾನದಿಂದ ಸಂಗ್ರಹಿಸುವ ಹಣದಿಂದ ಜನರಿಗೆ ಕೆಲವು ಸೇವೆಗಳನ್ನು ಸೌಲಭ್ಯಗಳನ್ನು ನೀಡುವುದಕ್ಕೆ ಬದ್ಧವಾಗಿರುತ್ತದೆ. ಈ ಸೇವೆ ಸೌಲಭ್ಯಗಳಲ್ಲಿ ಶಿಕ್ಷಣ, ವೈದ್ಯಕೀಯ ಸೌಲಭ್ಯ, ವಿದ್ಯುತ್, ರೈಲ್ವೆ ರಸ್ತೆಗಳು, ಸಾರಿಗೆ, ಅಂಚೆ ಇತ್ಯಾದಿ ಮುಖ್ಯ. ಆದರೆ ಇವು ಸರಕಾರೀ ಉದ್ಯಮಗಳು ಎಂಬಂತೆ, ಸರಕಾರ ಇವುಗಳ ಮೂಲಕವೂ ಆದಾಯ ಹೆಚ್ಚಿಸುವ ಯತ್ನವನ್ನು ಮಾಡುತ್ತಾ ಬಡ ಜನರು ಉಪಯೋಗಿಸುವ ಹಾಲು, ನೀರು, ಬಸ್, ವಿದ್ಯುತ್ ಇತ್ಯಾದಿ ಎಲ್ಲವನ್ನೂ ದುಬಾರಿಯಾಗಿಸುತ್ತಾ ಹೋಗುತ್ತದೆ! ಹೀಗಾದರೆ ಜನರಿಗೆ ಸರಕಾರದ ಸೇವೆ ಏನು? ಈ ದೇಶದಲ್ಲಿ ವರ್ಷಕ್ಕೆ ಒಂದು ಸಾವಿರ ರುಪಾಯಿ ಗಳಿಕೆಯೂ ಇಲ್ಲದ ಕೋಟಿಗಟ್ಟಲೆ ಜನರಿದ್ದಾರೆ. ದೀನರು, ನಿರ್ಗತಿಕರು ಇದ್ದಾರೆ. ವರ್ಷಕ್ಕೆ ಎರಡು-ಮೂರು-ನಾಲ್ಕು-ಐದು ಸಾವಿರಗಳಲ್ಲಿ ಬದುಕುವ ಪುಣ್ಯವಂತರಿದ್ದಾರೆ. ಇವರೆಲ್ಲರಿಂದ ಸರಕಾರಕ್ಕೆ ಪರೋಕ್ಷವಾಗಿ ಒಂದಷ್ಟು ತೆರಿಗೆ ಪಾವತಿ ಆಗುತ್ತದೆ. ಇಂಥವರಿಗೆ ಸರಕಾರದ ಸೇವೆ ಏನು? ಸರಕಾರದ ವಜ್ರಾಯುಧವಾಗೇ ನೌಕರಶಾಹಿಯಿದೆ. ಇವರು ಜನಸಂಖ್ಯೆಯ ಸುಮಾರು 1% ಅಂದರೆ ಒಂದುಕೋಟಿ ಜನ ಸಂಖ್ಯೆಯಲ್ಲಿ ಒಂದುಲಕ್ಷ. ಇವರಿಗೆ ವರ್ಷದಿಂದ ವರ್ಷಕ್ಕೆ ಸಂಬಳವನ್ನು ಏರಿಸುತ್ತಾ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಾ ಜನತೆಯ ಮತ್ತು ನೌಕರಶಾಹಿಯ ನಡುವೆ ಕಂದರ ನಿರ್ಮಿಸಿದೆ. ನಿಜ. ಲೆಜ್ಜರನ್ನು ಅತ್ತಿತ್ತ ಎತ್ತಿಡುವ ಮಹಾ ಬುದ್ಧಿವಂತನೊಬ್ಬನಿಗೆ ವರ್ಷಕ್ಕೆ 20-30 ಸಾವಿರ ಸಂಬಳ ಮತ್ತಿತರ ಸವಲತ್ತುಗಳಿರುವಾಗ ವರ್ಷಕ್ಕೆ ಸಾವಿರ ರುಪಾಯಿಯನ್ನು ಕೂಡ ಗಳಿಸಲವಕಾಶವಿಲ್ಲದ ಕೋಟಿಗಟ್ಟಲೆ ಜನರಿಗೆ ಹೊಟ್ಟೆ ಉರಿಯುವುದಿಲ್ಲವೆ? ತಾರಸಿ ಮನೆಗಳ ಹಿಂದುಗಡೆಯಿರುವ ಅವರ ಹಟ್ಟಿಗಳು, ಗುಡಿಸಲುಗಳು, ಮೂರ್ಕಾಸಿನ ಜನತಾ ಮನೆಗಳು ಅವರ ಬದುಕನ್ನು ಅಣಕಿಸುವುದಿಲ್ಲವೆ? ಇದೆಲ್ಲದರ ಪರಿಣಾಮ? ಒಲಿಂಪಿಕ್ಸ್ನಲ್ಲಿ ನಮಗೆ ಮೆಡಲು ಬರಬಹುದು, ಬರದಿರಬಹುದು. ಕ್ರಿಕೆಟಿನಲ್ಲಿ ನಾವು ಜಾಗತಿಕ ಚ್ಯಾಂಪ್ಯನ್ ಆಗಬಹುದು, ಆಗದಿರಬಹುದು. ನಮ್ಮ ಸಿನಿಮಗಳಿಗೆ ಪ್ಯಾರಿಸಿನಲ್ಲಿ, ಲಂಡನ್ನಿನಲ್ಲಿ ನ್ಯೂಯಾರ್ಕಿನಲ್ಲಿ ಅವಾರ್ಡುಗಳು ಸಿಗಬಹುದು, ಸಿಗದಿರಬಹುದು. ಆದರೆ ಇಪ್ಪತ್ತೊಂದನೇ ಶತಮಾನ ನಮ್ಮ ಬಾಗಿಲಿಗೂ ಬಂದೇ ಬರುತ್ತದೆ. ಆಗ ನಾವು ಬಿಡಿಸಬೇಕಾದ ರಂಗೋಲಿ ಯಾವುದು? ಯೋಚಿಸಬೇಕು.
`ಶಿಕ್ಷಣ’ ಎಂಬ ಕೊಳೆತ ತರಕಾರಿ.
ಭಾರತದಲ್ಲಿ ಪಟ್ಟಣದಲ್ಲಿ ಒಂದು ಬಗೆಯ ಶೈಕ್ಷಣಿಕ ಪರಿಸರವಿದೆ. ಹಳ್ಳಿಯಲ್ಲಿ ಒಂದು ಬಗೆಯ ಶೈಕ್ಷಣಿಕ ಪರಿಸರವಿದೆ. ಸಿರಿವಂತರಿಗೊಂದು ಬಗೆಯ ಶಿಕ್ಷಣವಿದೆ, ಬಡವರಿಗೊಂದು ಬಗೆಯ ಶಿಕ್ಷಣವಿದೆ. ಪಾಲಕರಿಂದ ವಿದ್ಯಾರ್ಥಿಯೊಬ್ಬನಿಗೆ ತಿಂಗಳಿಗೆ ಸಾವಿರ ಎರಡು ಸಾವಿರ ಪಡೆದು ವಿಶಿಷ್ಟ ಶಿಕ್ಷಣ ಕೊಡುವ ಶಾಲೆ ಕಾಲೇಜುಗಳಿವೆ. ಹರಕು ಚಡ್ಡಿಯ ಹುಡುಗನಿಗೆ ಮುರುಕು ಬೆಂಚಿನ ಶಾಲೆಗಳು, ಅರ್ಧ ಮೇಷ್ಟರು, ಕಾಲು ಮೇಸ್ಟರ ಶಾಲೆಗಳು ಇವೆ. ಕೆಲವು ಶಾಲಾ ಕಾಲೇಜುಗಳಲ್ಲಿ ಡಾಕ್ಟರುಗಳು, ಇಂಜಿನಿಯರುಗಳು, ಐಎಎಸ್ ಅಧಿಕಾರಿಗಳು, ಕಂಪೆನಿ ಡೈರೆಕ್ಟರುಗಳು ತಯಾರಾಗ್ತಾರೆ. ಉಳಿದ ಶಾಲೆ ಕಾಲೇಜುಗಳಲ್ಲಿ ಕ್ಲಾರ್ಕುಗಳು, ಮೇಸ್ಟ್ರುಗಳು, ಪೋಲೀಸರು, ಪಿಯೋನುಗಳು ತಯಾರಾಗ್ತಾರೆ.
ಸರಿ. ಈ ಶಿಕ್ಷಣವೆಂಬ ವಸ್ತು ಎಷ್ಟು ವೈಜ್ಞಾನಿಕ?
ಸ್ವಲ್ಪ ಕಿವಿ ಕೊಡಿ :
ಕಾಲೇಜು ಹುಡುಗ ನಂಬ್ರ 001 ಮತ್ತು ಅವನಂಥ ಇನ್ನೊಬ್ಬ ಹುಡುಗನೊಡನೆ ನಡುವೆ ನಡೆದ ಸಂಭಾಷಣೆಯ ತುಣುಕುಗಳು :
`ದ್ಯಾಟ್ ಹಿಪೊಪೊಟ್ಯಾಮಸ್ ವೊಮಿಟ್ಸ್ ಜಂಕ್ ಇನ್ ದ ನೇಮ್ ಆಫ್ ಜೂಆಲಜಿ. ಈ ತಲೆನೋವು ಯಾರಿಗ್ಬೇಕು? ಟ್ಯೂಶನಿಗೆ ನಾಲ್ಕು ಕಾಸು ಬಿಸಾಕಿದ್ದಾಯ್ತು....ನಿನ್ನೆ ಟೀವೀಲಿ ಸ್ಯೂಪರ್ ಗರ್ಲ್ ತೋರಿಸಿದ್ರು, ಏಮಜವಾಗಿತ್ತು ಗೊತ್ತಾ?....ಇನ್ನು ಸ್ಯೂಪರ್ ಬಾಯ್ ಬರುತ್ತಂತೆ...ಉತ್ಸವ್ ನಾನು ಫಸ್ಟ್ಡೇನೇ ನೋಡ್ದೆ. ಹೂಂ, ಬ್ಲಾಕ್ನಲ್ಲಿ; ಇಪ್ಪತ್ತೈದು ಕಿತ್ಕೊಂಡ ನನ್ಮಗ.....ಸಂಜೆಗೆ ವೀಡಿಯೋ ಗೇಮ್ಸ್ಗೆ ಹೋಗ್ತೀನಿ ಬರ್ತೀಯ? ಹೊಸ ಗೇಮ್ಸ್ ಬಂದಿವೆ......ವ್ಹಾಟ್? ನೈಂಟಿ ಪರ್ಸೆಂಟೆ? ನೈಂಟಿಫೈವ್ ತಗೋಬೇಕು. ಇಲ್ದಿದ್ರೆ ಮೆಡ್ಸಿನಿಗೆ ಸೀಟ್ ಸಿಗೋಲ್ಲ......ನನ್ ಡ್ಯಾಡಿ ಹೇಳಿದ್ರು ಎರಡು ಲಕ್ಷ ಕೊಟ್ಟೆ ಅಂತ. ಸಕ್ಕರ್ಸ್ ಸೂಳೆಮಕ್ಳು...... ನಾನು ಒಂದು ಪೆಗ್ ಹಾಕ್ದೆ ಮಾರಾಯ ನಿನ್ನೆ ಮಜವಾಗಿತ್ತು.........’
**
ಹುಡುಗ ನಂಬರ್ 0001 ಮತ್ತು ಅವನ ಮೇಸ್ಟ್ರ ನಡುವೆ ನಡೆದ ಸಂಭಾಷಣೆಯ ತುಣುಕು :
`ಅಲ್ಲಾ ಸಾರ್, ನಮ್ಮ ಶಾಲೆ ಹತ್ರ ಶ್ಮಶಾನ ಇದೆಯಲ್ಲಾ ಸಾರ್. ರಾತ್ರಿ ಭೂತಗಳು ಪ್ರೇತಗಳು ಓಡಾಡ್ತಾ ಇರ್ತವಂತೆ ಸಾರ್’
`ಭೂತವೂ ಇಲ್ಲ, ಪ್ರೇತವೂ ಇಲ್ಲ. ಸುಮ್ನಿರು. ಕಾಲೇಜಿಗೆ ಹೋಗ್ತಾ ಇರೋ ಹುಡುಗ ನೀನು. ಯಾರಾದ್ರೂ ಕೇಳಿದ್ರೆ ನಕ್ಕಾರು’
`ಅಲ್ಲಾ ಸಾರ್, ನಮ್ಮ ನೆರೆಮನೆಯ ಗೋವಿಂದ ಭೂತದ ಪೆಟ್ಟು ತಿಂದು ಸತ್ತದ್ದು ಖಂಡಿತ ಸಾರ್. ಅವನ ಮನೆ ಹಿಂದುಗಡೆ ರಾತ್ರಿ ಬ್ರಹ್ಮರಾಕ್ಷಸ ಓಡಾಡ್ತಾ ಇರ್ತದೇಂತ ಅಮ್ಮ ಹೇಳ್ತಾಳೆ’
`ನೀನು ನೋಡಿದ್ದೀಯ ಬ್ರಹ್ಮರಾಕ್ಷಸನನ್ನ?’
`ಇಲ್ಲಾ ಸಾರ್, ಆದ್ರೆ ಭೂತಗಳ ಚೇಷ್ಟೆಗಳನ್ನು ನೋಡಿದ್ದೀನಿ. ಸೂಟೆಗಳು ಸಾರ್. ನಮ್ಮ ಊರಿನ ಗುಡ್ಡದ್ಮೇಲೆ ಮಂಗಳವಾರ ಮತ್ತು ಶುಕ್ರವಾರ ರಾತ್ರಿ ಕಾಣಿಸ್ತವೆ ಸಾರ್’
`ಅದು ಭೂಮಿಯಿಂದ ಹೊರಗೆ ಬರೋ ರಾಸಾಯನಿಕಗಳು ಗಾಳಿ ತಾಗಿದಾಗ ಉರಿಯೋದು’
`ಹಗಲು ಇರೋಲ್ವೆ ಸಾರ್?’
`ಇರ್ತದೆ. ಸೂರ್ಯನ ಬೆಳಕಿನಿಂದಾಗಿ ಕಾಣಿಸೋದಿಲ್ಲ. ಅದೂ ಅಲ್ಲದೆ ರಾತ್ರಿಯಲ್ಲಿ ಮತ್ತು ಹಗಲಲ್ಲಿ ಮಣ್ಣು ವಾತಾವರಣಕ್ಕೆ ಪ್ರತಿಕ್ರಿಯಿಸುವ ರೀತಿಯಲ್ಲಿ ವ್ಯತ್ಯಾಸವಿದೆ’
`ನೀವು ಏನೇ ಹೇಳಿ ಸಾರ್ ಪ್ರೇತಗಳು ಖಂಡಿತ ಇವೆ. ನಾನು ಕಣ್ಣಾರೆ ನೋಡಿದ್ದೀನಿ’
`ಯಾವಾಗ?’
`ನಾನು ತುಂಬಾ ಚಿಕ್ಕೋನಿದ್ದೆ ಸಾರ್. ಆಗ ಒಮ್ಮೆ.......’
**
ಹುಡುಗ ನಂಬರ್ 0001 ಮತ್ತು ಮೆಸ್ಟ್ರ ನಡುವೆ ಇನ್ನೊಂದು ಬಾರಿ :
`ಕಣ್ಣು ತಾಗಿದ್ರೆ ಗಿಡ ಸಾಯುತ್ತಾ ಸಾರ್?’
`ಹೈಸ್ಕೂಲಲ್ಲಿದ್ದಾಗ ನಮ್ಮ ಟೀಚರು ಹೇಳ್ತಿದ್ರು ಸಾರ್. ಕಣ್ಣು ತಾಗಿದ್ರೆ ಗಿಡಗಳು ಸಾಯ್ತವೆ ಮಾತ್ರ ಅಲ್ಲ, ಮನುಷ್ಯರಿಗೂ ಡ್ಯಾಮೇಜು ಆಗ್ತದೆ ಅಂತ’
`ಅದೆಲ್ಲ ಬರೀ ಬಡಾಯಿ’
`ಇಲ್ಲ ಸರ್. ಟೀಚರ್ ಹೇಳ್ತಿದ್ದರು, ಅವರ ಮಗು ಒಂದು ವರ್ಷ ತುಂಬುವುದರೊಳಗೇ ನಡೀಲಿಕ್ಕೆ ಶುರು ಮಾಡ್ತಂತೆ. ಮನೆಗೆ ಬಂದವರು ಯಾರೋ `ಮಗು ಇಷ್ಟು ಬೇಗ ನಡೀಲಿಕ್ಕೆ ಶುರು ಮಾಡಿಬಿಡ್ತಾ?’ ಅಂತಂದ್ರಂತೆ. ಮಾರನೇ ದಿವ್ಸ ಮಗುವಿನ ಒಂದು ಕಾಲು ಸೊಟ್ಟಗಾಗಿ ನಡೀಲಿಕ್ಕೆ ಆಗದ ಹಾಗೆ ಆಯ್ತಂತೆ’
`ಅದಕ್ಕೆ ಕಾರಣ ಪೋಲಿಯೋ ಕಣೊ’
`ನೀವು ಏನೇ ಹೇಳಿ ಸಾರ್ ಕಣ್ಣು ತಾಗುತ್ತೆ. ಕಣ್ಣು ತಾಗಿ ಕಲ್ಲು ಕೂಡ ಒಡಿಯುತ್ತಂತಲ್ಲ ಸಾರ್?’
`ಯಾರು ಹೇಳಿದ್ರು ಹಾಗಂತ?’
`ನಮ್ಮ ಐತಾಳ ಲೆಕ್ಚರರು ಕ್ಲಾಸಿನಲ್ಲಿ ಹೇಳಿದ್ರು ಸಾರ್. ಅವ್ರು ಒಂದು ಬಾವಿ ತೋಡಿದ್ರಂತೆ. ಮೂವತ್ತಡಿಯಲ್ಲಿ ಕಗ್ಗಲ್ಲು ಸಿಕ್ತಂತೆ. ಹೇಗೆ ಒಡಿಯೋದು ಅಂತ ಚಿಂತೆ ಅಯ್ತಂತೆ. ಅವರ ಊರಿನಲ್ಲಿ ಒಬ್ಬ ಇದ್ನಂತೆ. ಅವನ ಕಣ್ಣು ಹೇಗೆ ತಾಗ್ತಿತ್ತು ಅಂದ್ರೆ ಜನ ಅವನ ನಾಲಿಗೆಗೆ ಹೆದರಿಕೊಳ್ತಿದ್ರಂತೆ’
`ತಾಗೋದು ಕಣ್ಣಲ್ವ? ನಾಲಿಗೆನಾ?’
`ಇದೇ ಪ್ರಶ್ನೇನ ಒಬ್ಳು ಹುಡುಗಿ ಕೇಳಿದ್ಲು ಸಾರ್. `ಕಣ್ಣಿನಿಂದ ನೋಡಿ ಮನಸ್ಸಿನಲ್ಲೇ ಹೇಳಿದ್ರೆ ಕಣ್ಣು ತಾಗುತ್ತಾ’ ಅಂತ. ಅದ್ಕೆ ಐತಾಳ ಲೆಕ್ಚರರು ತಾಗುತ್ತೆ ಅಂದ್ರು ಸಾರ್. ನಾಲಿಗೆ ಉಪಯೋಗಿಸಿದ್ರೆ ಯಾರ ಕಣ್ಣು ಅಂತ ಗೊತ್ತಾಗುತ್ತೆ ಅಂತಂದ್ರು’
`ಅವರ ಬಾವಿಯಲ್ಲಿ ಸಿಕ್ಕಿದ ಕಗ್ಗಲಿಗೇನಾಯ್ತು?’
`ಅವ್ರ ಊರಿನಲ್ಲಿ ಒಬ್ಬ ಭಾರೀ ಕಣ್ಣು ತಾಗುವವ ಇದ್ನಂತೆ. ಅವನ ಹತ್ರ ಕಲ್ಲಿನ ಬಗ್ಗೆ ಹೇಳಿದಾಗ ಅವ ಇಡೀ ಕಲ್ಲಿಗೆ ಒಂದು ಬಿಳಿ ಬಟ್ಟೆ ಹೊದಿಸಿ, ನಾಳೆ ಬರ್ತೇನೆ ಅಂದ್ನಂತೆ. ಮಾರನೆಯ ದಿವ್ಸ ಬೆಳಿಗ್ಗೆ ಹತ್ತು ಗಂಟೆಗೆ ಬಂದು ಬಾವಿಯಲ್ಲಿ ಬಗ್ಗಿ ನೋಡಿ `ಏನಯ್ಯ ಹತ್ತು ಗಂಟೆ ಆದ್ರೂ ನಿಂಗೆ ಏಳ್ಳಿಕ್ಕೆ ಆಗ್ಲಿಲ್ವ?’ ಅಂತಂದ್ನಂತೆ. ತಕ್ಷಣ ಕಲ್ಲು ಡಬ್ಬಂತ ಒಡೆದು ಚೂರು ಚೂರು ಆಗಿ ಅದರಡಿಯಿಂದ ನೀರು ಮೇಲೆ ಬಂತಂತೆ’
ಇಬ್ಬರೂ ಪೀಯೂಸೀ ಎರಡನೇ ವರ್ಷದಲ್ಲಿ ಓದುವ ವಿದ್ಯಾರ್ಥಿಗಳು. ಅವರ ಬಗ್ಗೆ ಮಾತ್ರವಲ್ಲ, ಅವರಿರುವ ಕುಟುಂಬ ಮತ್ತು ಅವರು ವಾಸಿಸುವ ಮನೆಗಳ ಬಗ್ಗೆ ಕೂಡ ನೀವು ಊಹಿಸಬಹುದು. ಬಹುಶಃ ಇವರು ಹಳ್ಳಿ ಶಾಲೆ ಕಾಲೇಜು ವಿದ್ಯಾರ್ಥಿಗಳು ಎಂದು ಕೂಡ ಊಹಿಸಿರುತ್ತೀರಿ. ಹೌದು ಹಳ್ಳಿಯವರೇ. ಆದರೆ ನಗರದಲ್ಲಿ ಕೂಡ ಇಂಥವರು ಇಲ್ಲವೆ?
ಈಗ ಕೇಳಬೇಕಾದ ಪ್ರಶ್ನೆಗಳು :
ಇವರಿಗೆ ನೀಡಲಾದ ಹನ್ನೆರಡು ವರ್ಷಗಳ ಶಿಕ್ಷಣ ಎಂಥದು? ಅದರಲ್ಲಿ ವಿಜ್ಞಾನ ಎಂಬ ವಿಷಯ ಇತ್ತು ನಿಜ. ಆದರೆ ಅದು ಬರೀ ವಿಜ್ಞಾನದ ಚರಿತ್ರೆ ಮತ್ತು ವಸ್ತು ವಿವರಣೆ ಮಾತ್ರವೇ ಆಗಿತ್ತೇ ಅಥವಾ ಅದರಲ್ಲಿ ವೈಜ್ಞಾನಿಕ ಚಿಂತನೆ ಅನ್ನೋದು ಇತ್ತೆ? ಪಠ್ಯಾಧಾರಿತ ಪಾಠ ಮತ್ತು ಪರೀಕ್ಷೆಗೆ ಹೊರತಾಗಿ ಮನಸ್ಸಿನ ಬೆಳವಣಿಗೆಗೆ ಮತ್ತು ಬದುಕಿಗೆ ಬೇಕಾದ ಕಲಿಕೆ-ಚಟುವಟಿಕೆ ಏನಾದರೂ ಇತ್ತೆ?
ನಮ್ಮ ಶಾಲಾ ಕಾಲೇಜುಗಳಲ್ಲಿ ಯಾವ ಪಾಠದಲ್ಲಿ ಅಥವಾ ಪುಸ್ತಕದಲ್ಲಿ ಅಥವಾ ಬೋಧನಾ ಪರಿಮಿತಿಯಲ್ಲಿ ವೈಜ್ಞಾನಿಕ ಚಿಂತನೆಯನ್ನು, ವೈಚಾರಿಕತೆಯನ್ನು, ವಿವೇಕವನ್ನು ಮತ್ತು ಬದುಕಿಗೆ ಬೇಕಾದ ಅರಿವನ್ನು ಅನುಭವವನ್ನು ನೀಡುವ ಅಂಶಗಳು ಇವೆಯೆ? ಇವೆಯೆಂದಾದರೆ ಎಷ್ಟು? ಅದ್ಯಾಕೆ ವಿದ್ಯಾರ್ಥಿಗಳನ್ನು ತಲಪುತ್ತಿಲ್ಲ? ಈ ಪಾಠಗಳನ್ನು ತಯಾರಿಸುವವರು ವಿಚಾರಶೀಲರೆ, ಸರಕಾರದ ಹಣವನ್ನು ತಮ್ಮೊಳಗೆ ಹಂಚಿಕೊಳ್ಳುವ ಬುದ್ಧಿವಂತರೆ? ಪಠ್ಯಪುಸ್ತಕಗಳು ಯಾಕೆ, ಅವುಗಳು ಸಾಧಿಸಬೇಕಾದುದು ಏನು ಎಂಬ ಪ್ರಶ್ನೆಗಳನ್ನು ಈ ಬುದ್ಧಿವಂತರು ಎಂದಾದರೂ ಕೇಳಿಕೊಂಡಿದ್ದಾರೆಯೆ?
ನಮ್ಮ ಶಾಲೆ ಕಾಲೇಜುಗಳಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಅವರ ಓದಿನಲ್ಲಿ ವೈಜ್ಞಾನಿಕ ಶಿಕ್ಷಣ ಸಿಕ್ಕಿರುತ್ತದೆಯೆ? ಯಾಕೆ ಎಲ್ಲ ವಿಜ್ಞಾನಿಗಳೂ ಅಮೆರಿಕದಲ್ಲಿ, ಇಂಗ್ಲೆಂಡಿನಲ್ಲಿ, ಜರ್ಮನಿಯಲ್ಲಿ ಹುಟ್ಟುತ್ತಾರೆ? ನಮ್ಮ ದೇಶದ ವಿಜ್ಞಾನಿಗಳು ಮತ್ತು ವಿಜ್ಞಾನ ವಿದ್ಯಾರ್ಥಿಗಳು `ವಿಜ್ಞಾನಿಗಳು’ ಎಂದು ಅದೇಕೆ ದೇಶ ಬಿಟ್ಟು ಅಮೆರಿಕೆಗೆ ಹೋದ ಮೇಲೆ ಗುರುತಿಸಿಲ್ಪಡುತ್ತಾರೆ? ವಿಜ್ಞಾನದ ನೋಬೆಲ್ ಪಾರಿತೋಷಕಗಳೆಲ್ಲ ಪ್ರತಿ ವರ್ಷ ಅದೇಕೆ ಅಮೆರಿಕೆಗೆ ಅಥವಾ ಯುರೋಪಿಗೆ ಹೋಗ್ತವೆ? ಹೇಗೆ ಜಪಾನಿನಂಥ ಪುಟ್ಟ ದೇಶ ತಾಂತ್ರಿಕ ಪರಿಣತಿಯಲ್ಲಿ, ಉದ್ಯಮದಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ದೇಶವಾಗಿದೆ? ಇಂಥದ್ಯಾವುದೂ ನಮ್ಮ ದೇಶದಲ್ಲಿ ಯಾಕೆ ಇದುವರೆಗೆ ಸಾಧ್ಯವಾಗಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನು ತಮಗೆ ಹಾಕಿಕೊಂಡು ಶಿಕ್ಷಣ ತಜ್ಞರು ಸಿಲೆಬಸ್ ತಯಾರಿಸಿದ್ದಾರೆಯೆ? ಈ ಪ್ರಶ್ನೆಗಳಿಗೆಲ್ಲ ಉತ್ತರ ಬಹಳ ಸರಳವಾಗಿದೆ: ಇಲ್ಲ. ಯಾಕಿಲ್ಲ? ಅದಕ್ಕೆ ಉತ್ತರವಿಲ್ಲ.
`ಬಡತನದ ರೇಖೆ’ ಎಂಬ ರೇಖೆ ಇರುವುದೆಲ್ಲ?
ಲಕ್ಷಾಧೀಶನೂ, ಕೋಟ್ಯಾಧೀಶನೂ ತನ್ನಲ್ಲಿರುವುದು ಏನೇನೂ ಸಾಲದು ಎಂದುಕೊಂಡು ತನ್ನ ಆದಾಯವನ್ನು ಮತ್ತು ಅದು ಹುಟ್ಟುವ ದಾರಿಗಳನ್ನು ದುಪ್ಪಟ್ಟು, ನಾಲ್ಕು ಪಟ್ಟು, ಹತ್ತುಪಟ್ಟು, ನೂರುಪಟ್ಟು ಮಾಡಲು ಹೆಣಗಾಡುತ್ತಿರುವುದನ್ನು ನೋಡಿದರೆ ಅವರಿಗೆ ಅದಕ್ಕೆ ಸರಕಾರ ಸೃಷ್ಟಿಸುವ ಸದವಕಾಶಗಳನ್ನು ನೋಡಿದರೆ, ಮತ್ತು ಬಡವನಿಗೆ ಬಟ್ಟೆ ಬರೆ ದಾನ ನೀಡುವ ವೈಖರಿಯನ್ನು ನೋಡಿದರೆ, ಅವನಿಗೆ ಸಾಲ ನೀಡುತ್ತಾ ಅವನ ಆಸ್ತಿಯನ್ನು ಏಲಮಿಗಿರಿಸುವುದನ್ನು ನೋಡಿದರೆ ಈ ಬಡತನದ ರೇಖೆಯೆಂಬ ಕಾಲ್ಪನಿಕ ರೇಖೆ ಹೇಗೆ ಹಾವಿನ ಹಾಗೆ ಅಂಕುಡೊಂಕಾಗಿ ಕುಣಿಯುತ್ತದೆ ಎಂದರ್ಥವಾಗಬಹುದು. ದಾನಕ್ಕಾಗಿ ಉಪಯೋಗಿಸಿದ ಹಲವು ಕೋಟಿ ರುಪಾಯಿಗಳ ಈ ಬಟ್ಟೆಬರೆ, ಕಾಗದ ಪೆನ್ಸಿಲು ಇತ್ಯಾದಿಗಳ ಬೃಹತ್ ಪ್ರಮಾಣದ ಉತ್ಪಾದನೆಯಿಂದ ಲಾಭ ಬರುವುದು ಯಾರಿಗೆ ನೋಡಿ! ವಸ್ತುಗಳ ಉತ್ಪಾದನೆಯ ಹಂತದಲ್ಲಿ ನಡೆಯುವ ಸಾಂಸ್ಥಿಕ ಭ್ರಷ್ಟಾಚಾರಗಳು, ಆಮೇಲೆ ಕಳಪೆ ಮಾಲುಗಳನ್ನು ದಾಟಿಸಲು ಅಧಿಕಾರಿಗಳಿಗೆ, ನೀಡುವ ಭಕ್ಷೀಸು, ಮತ್ತು ವಿತರಣೆಯ ಹಂತದಲ್ಲಿ `ದುಡಿಯುವ’ ಅಧಿಕಾರಿಗಳು `ಗುಳುಂ’ ಮಾಡುವ ಭಾಗ ಎಷ್ಟು ಎಂದು ವಿಚಾರಿಸಿ. ಬಡವನಿಗೆ ಸಿಗುವ ಐದು ಮೊಳ ಬಟ್ಟೆ ಎರಡು ಮೂರು ತಿಂಗಳಲ್ಲಿ ಚಿಂದಿಯಾಗ್ತದೆ. ಅಕ್ಕಿ ಅದಕ್ಕಿಂತ ಬೇಗ ಜೀರ್ಣವಾಗುತ್ತದೆ. ಅದರಿಂದ ಅವನ ಬಡತನ ನಿರ್ಮೂಲವಾಗುವುದಿಲ್ಲ. ಅವನು ಒಳಗೊಳಗೇ ಹೆಚ್ಚು ಬಡವನಾಗುತ್ತಾ ತನ್ನ ಲಂಗೋಟಿಗಾಗಿ ಕೂಡ ಬೇರೆಯವರನ್ನು ಯಾಚಿಸುವವನಾಗುತ್ತಾನೆ. ಆತ್ಮಾಭಿಮಾನವನ್ನು ಕಳಕೊಂಡ ಯಾಚಕನಾಗಿ, ತಿರುಪೆಯವನಾಗಿ ತನ್ನಿಂದ ಇನ್ನೇನಾಗಲೂ ಸಾಧ್ಯವಿಲ್ಲ ಎಂದುಕೊಳ್ಳುವವನಾಗುತ್ತಾನೆ. ಒಟ್ಟಿನಲ್ಲಿ ಬಡವನಿಗೆ ಈ ಮೂಲಕ ಸಿಗುವ ದಾನದ ಮೌಲ್ಯವಾದರೂ ಎಷ್ಟು? ವರ್ಷದಲ್ಲಿ ಒಂದೆರಡು ದಿನಗಳ ದುಡಿತದಿಂದ ಬರುವಷ್ಟು! ನೀರಿಲ್ಲದ ಹಳ್ಳವನ್ನು ಹಸಿರು ಮಾಡುವ ಈ ವ್ಯವಹಾರದಲ್ಲಿ ಬಡವನಿಗೆ ತಲಪುವುದು ಹಳ್ಳದಲ್ಲಿರುವ ಮೊಸಳೆಗಳ ಕಣ್ಣೀರ ಹನಿ!
ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಿಸಬಹುದಾದ ಈ ನಾಚಿಕೆಗೇಡಿನ ವಿಧಾನದ ಬದಲು ಬಡವನಿಗೆ ಕೆಲಸ ದೊರೆಯುವಂಥ ದಾರಿಯನ್ನು ತೋರಿಸಬಾರದೆ? ಎಲ್ಲರೂ ತೆರಿಗೆ ತೆರುವವರೇ. ಎಲ್ಲರಿಗೂ ಸರಕಾರದ ಆದಾಯದಲ್ಲಿ ಪಾಲಿದೆ. ಸಂಬಳ ಎಲ್ಲರಿಗೂ ಸಿಗಬೇಕು. ದುಡಿಯಬಲ್ಲ ನಿರುದ್ಯೋಗಿಗೂ, ಅವನು ವಿದ್ಯಾವಂತನಿರಲಿ, ಅವಿದ್ಯಾವಂತನಿರಲಿ, ತಿಂಗಳಿಗಿಂತಿಷ್ಟು ಎಂದು ಸರಕಾರ ಸಂಬಳ ಕೊಡಬೇಕು. ನೌಕರಶಾಹಿಯ ಸಂಬಳವನ್ನೇ ಸಾವಿರ ಎರಡು ಸಾವಿರಗಳಿಂದ ಮೇಲಕ್ಕೆ ಏರಿಸುತ್ತಾ ಹೋದಾಗ ಸಂಪತ್ತು ಹುಟ್ಟುವುದಿಲ್ಲ. ಬ್ಯಾಂಕಿನ ಹಣದಲ್ಲಿ ಬ್ಯಾಂಕಿನ ಬಹುಮಹಡಿ ಕಟ್ಟಡ ಪೀಠೋಪಕರಣಗಳಿಗೆ ಕೋಟೆಗಟ್ಟಲೆ ವ್ಯಯಿಸುವಾಗ, ಹೆಚ್ಚು ಹೆಚ್ಚು ನೌಕರರನ್ನು ರಿಕ್ರೂಟ್ ಮಾಡುತ್ತಾ ಸಂಬಳ ಏರಿಸುತ್ತಾ ಹೋಗುವಾಗ ಸಂಪತ್ತು ಹುಟ್ಟುವುದಿಲ್ಲ. ಸಂಪತ್ತು ಕಬ್ಬಿಣದ ತಿಜೋರಿಗಳಲ್ಲಿ, ಗಗನ ಚುಂಬಿಗಳಲ್ಲಿ, ಅಸೆಂಬ್ಲಿಯಲ್ಲಿ, ಪಾರ್ಲಿಮೆಂಟಿನಲ್ಲಿ ಹುಟ್ಟುವುದಿಲ್ಲ. ಸಂಪತ್ತು ಕೆಸರಿನಲ್ಲಿ ಹುಟ್ಟುತ್ತದೆ. ಸಂಪತ್ತು ನೇಗಿಲು ಮತ್ತು ಕುಡುಗೋಲಿನ ನಡುವೆ ಹುಟ್ಟುತ್ತದೆ.
ಜಗತ್ತಿನಲ್ಲಿ ಅತಿಹೆಚ್ಚು ರಾಷ್ಟ್ರೀಯ ಆದಾಯವುಳ್ಳ ದೇಶಗಳಲ್ಲಿ (ಉದಾಹರಣೆಗೆ ಕುವೈಟ್, ಖತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಸ್ವೀಡನ್. ಸ್ವಿಜûರ್ಲೇಂಡ್ ಇತ್ಯಾದಿ) ಸರಕಾರ ತಲಾ ಆದಾಯದ ಅಸಮತೋಲನವನ್ನು ನಿವಾರಿಸಲು ರಾಷ್ಟ್ರೀಯ ಆದಾಯವನ್ನು ವಿವಿಧ ವಿಧಾನಗಳಿಂದ ಪ್ರಜೆಗಳಿಗೆ ವಿತರಣೆ ಮಾಡುತ್ತವೆ. `ತೆರಿಗೆಯ ಹೊರೆ ಸಮನಾಗಿ ವಿತರಣೆಗೊಳ್ಳಬೇಕು’ ಎಂಬ ಆಚರಣೆಯಲ್ಲಿಲ್ಲದ ನಮ್ಮ ಸರಕಾರದ ಸೈದ್ಧಾಂತಿಕ ನೀತಿಗೆ ಜನರ ಪ್ರತಿಕ್ರಿಯೆ `ತೆರಿಗೆಯ ಹೊರೆಯಿಂದ ದೊರೆಯುವ ಸಂಪತ್ತು ಸಮನಾಗಿ ವಿತರಿಸಲ್ಪಡಬೇಕು’ ಎಂಬುದಾಗಿರಬೇಕು.
ಆದರೆ ನಡೆಯುತ್ತಿರುವುದೇನು?
ದಿನಕ್ಕೆ ನೂರಿನ್ನೂರು ರುಪಾಯಿ ಬಾಡಿಗೆಯ ಕೋಣೆಗಳ ಹೋಟೆಲುಗಳು ನಾಯಿಕೊಡೆಗಳಂತೆ ಮೇಲೇರುತ್ತವೆ. ಸಿರಿತನದ ರೇಖೆಯಲ್ಲಿಲ್ಲದ ಯಾರಿಗೂ ಇದರಿಂದ ಉಪಯೋಗವಿಲ್ಲ. ಬಡವನಿಗೆ, ಹೆಚ್ಚೇಕೆ ಬಡತನದ ರೇಖೆಯ ಮೇಲ್ಗಡೆ ಇರುವವನಿಗೂ ಇವುಗಳ ಹತ್ತಿರ ಹೋಗಲು ಸಾಧ್ಯವಿಲ್ಲ. ದೇಶ ನೋಡಬೇಕೆನ್ನುವವನು ಸಿರಿವಂತನೇ ಆಗಿರಬೇಕು.
ಸರಕಾರ ಕಡಿಮೆ ಬಾಡಿಗೆಯ ಹೋಟೆಲುಗಳನ್ನು ಕಟ್ಟಿಸಬೇಕು. ನಾಲ್ಕು ಮಂದಿ ಬಡವರಿಗೆ ಮಾತ್ರವಲ್ಲ, ಎಲ್ಲೂ ಮನೆಯಿಲ್ಲದ ಮತ್ತು ಹಟ್ಟಿಯಲ್ಲಿ ವಾಸಿಸುವ ಬಡವರಿಗೂ ಮನೆ ಕಟ್ಟಿಸಿಕೊಡಬೇಕು. ಸರಕಾರ ಹೋಟೆಲುಗಳನ್ನು ನಡೆಸಿ ಕಡಿಮೆ ದರದಲ್ಲಿ ಊಟ ತಿಂಡಿ ಒದಗಿಸಬೇಕು. ಸರಕಾರ ಬಸ್ಸು, ರೈಲ್ವೇ ಸೇವೆಗಳಿಗೆ ಅತಿ ಕಡಿಮೆ ಶುಲ್ಕ ವಿಧಿಸಬೇಕು. ಇಂತಿಷ್ಟು ವಿದ್ಯುತ್, ಇಂತಿಷ್ಟು ಹಾಲು, ಇಂತಿಷ್ಟು ನೀರು ಫ್ರೀ ಅಂತ ಕೊಡ್ಬೇಕು. ಅದಕ್ಕಿಂತ ಹೆಚ್ಚಿನದಕ್ಕೆ ಶುಲ್ಕ ವಿಧಿಸಬೇಕು.
ನಗ್ತೀರಾ? ಹೇಗೆ ಸಾಧ್ಯ ಅಂತೀರಾ? ಇದು ಕುವೈಟಲ್ಲ, ಖತಾರಲ್ಲ, ನಮ್ಮಲ್ಲಿ ಪೆಟ್ರೋಲಿಲ್ಲ ಅಂತೀರಾ?
ಹೇಳಿ, ಪೆಟ್ರೋಲಿದ್ದರೆ ಆದೀತೆ ಇದು ನಮ್ಮ ಈ ಭಾರತದಲ್ಲಿ? ಒಂದು ಕೋಟಿ ಕೋಟಿ ಕಪ್ಪು ಹಣ ಸರಕಾರದ ಕೈಗೆ ಬಂದರೆ ಬರಬಹುದೆ ಈ ರಾಮರಾಜ್ಯ? ಅಮೆರಿಕ, ರಶ್ಯಾ ಅಣ್ವಸ್ತ್ರ ತಯಾರು ಮಾಡಿ ಮಾರಿ ಬಂದ ಹಣದಿಂದ ತಗೊಳ್ಳಿ ಅಂತ ಭಾರತಕ್ಕೆ ಒಂದು ಸಾವಿರ ಟ್ರಿಲಿಯನ್ ಡಾಲರ್ ಕೊಟ್ಟರೆ ಆದೀತೆ ಇದು?
ಇಲ್ಲ, ವ್ಯವಸ್ಥೆ ಹೀಗೇ ಇದ್ದರೆ, ಈಗ ಮಿಲಿಯನ್ ನುಂಗುವವರು ಆಗ ಬಿಲಿಯನ್-ಟ್ರಿಲಿಯನ್ ನುಂಗುತ್ತಾರೆ. ಅವರಿಗೆ ಸಿರಿವಂತ-ಬಡವ ಅಂತರ ಶಾಶ್ವತವಾಗಿರಬೇಕು. ಆ ಅಂತರದಲ್ಲೇ ಅವರಿಗೆ ಇರೋದು ಮಜಾ! ಅದೇ ಬದುಕಿನ ಸಾಫಲ್ಯ! ಅವರ ಒಳಗಣ್ಣುಗಳಿಗೆ ತಮ್ಮ ದಂತಗೋಪುರದ ಸೌಂದರ್ಯ ಕಾಣಿಸುತ್ತಾ ಇರಬೇಕಾದರೆ, ದಂತಗೋಪುರದಿಂದ ನೋಡುವಾಗ ಸುತ್ತಲೂ ಅಸಂಖ್ಯ ಗುಡಿಸಲುಗಳ ಕೊಳೆಗೇರಿ ಕಾಣಿಸಬೇಕು! ಅಲ್ಲವಾದರೆ ಉಪಯೋಗಕ್ಕೆ ಬೀಳದ ಕೋಟಿಗಳು ಅವರಿಗೆ ಯಾಕೆ?
ಎಲ್ಲದಕ್ಕೂ ಜನಸಂಖ್ಯೆಯನ್ನು ದೂರುವುದು ನಮ್ಮ ರಾಜಕಾರಣಿಗಳ ಒಂದು ಅಭ್ಯಾಸವಾಗಿದೆ! ಅದನ್ನು ಕೇಳಿ ಕೇಳಿ ಇತರ ಬುದ್ಧಿವಂತರೂ ಅದನ್ನು ಸತ್ಯ ಅಂತ ನಂಬ್ತಾರೆ. ಜನಸಂಖ್ಯೆ ಬೆಳವಣಿಗೆಯನ್ನು ಹತೋಟಿಯಲ್ಲಿರಿಸಬೇಕು ನಿಜ, ಆದರೆ ಈಗಿನ ಬಡತನಕ್ಕೆ ಕಾರಣ ಜನಸಂಖ್ಯೆ ಅಲ್ಲ. ಇದಕ್ಕೆ ಕಾರಣ ಸಿರಿತನದ ರೇಖೆಯ ಮೇಲೆ ಕಾಲು ಚಾಚಿ ಮಲಗಿರುವ ಜನ! ಇವರಲ್ಲೆಷ್ಟು ಮಂದಿಗೆ ಎರಡು-ಮೂರು -ನಾಲ್ಕು ಹೆಂಡಂದಿರು ಇಲ್ಲ? ಎಷ್ಟು ಮಂದಿಗೆ ಹತ್ತಿಪ್ಪತ್ತು ಮಕ್ಕಳಿಲ್ಲ? ಹೂಂ. ಅವರು ಸಾಕಬಲ್ಲರು ಅಂತೀರಾ? ಹಾಗಾದರೆ ಜನಸಂಖ್ಯೆ ಸ್ಫೋಟವಾಗುವುದು ಬಡವನ ಗರ್ಭದಲ್ಲಿ ಮಾತ್ರ!
ದಾನದಿಂದ ರಾಷ್ಟ್ರೀಯ ಆದಾಯ ಹೆಚ್ಚುವುದಿಲ್ಲ. ಪರ್ಕ್ಯಾಪಿಟಾ ಆದಾಯ ಹೆಚ್ಚುವುದಿಲ್ಲ. ದಾನದಿಂದ ಮನುಷ್ಯತ್ವ ನಾಶವಾಗ್ತದೆ!
ವೃತ್ತಿಗೌರವವೆಂಬ ಅಪೂರ್ವ ವಸ್ತು.
`ನೌಕರಶಾಹಿ’ ಎಂದೊಡನೆ ದೇಶದ ಸುಮಾರು ಒಂದು ಕೋಟಿ ನೌಕರರೂ ಉರಿದೇಳಬೇಕಾಗಿಲ್ಲ. ಇವರ ಪೈಕಿ ತಿಂಗಳಿಗೆ ನೂರೊ ಇನ್ನೂರೊ ಸಂಬಳವಿರುವವರು, ಐನ್ನೂರು-ಆರ್ನೂರಕ್ಕಿಂತ ಹೆಚ್ಚಿನ ಸಂಬಳವಿಲ್ಲದವರು ಸುಮಾರು ಅರ್ಧಕೋಟಿಯೇ ಇರಬಹುದು. ಇವರ ಪೈಕಿ ಬಡತನದ ರೇಖೆಯಿಂದ ಕೆಳಗೆ, ಬಹಳ ಕೆಳಗೆ ಇರುವ ಗ್ರಾಮೀಣ ಪ್ರದೇಶದ ಅಂಚೆಯಾಳುಗಳು, ಸರಕಾರೀ ಬಾಗಿಲುಗಳನ್ನು ಮತ್ತು ರೆಕಾರ್ಡುಗಳನ್ನು ರಾತ್ರಿ ಮತ್ತು ಹಗಲು ಕಾಯುವವರು, ಪೀಯೋನುಗಳೆಂಬ ವಿಚಿತ್ರಗಳು, ಕನಿಷ್ಟ ಸಂಬಳದ ಕ್ಲಾರ್ಕುಗಳು, ಟೈಪಿಸ್ಟುಗಳು